Advertisement

ವಿದೇಶೀ ಬಟ್ಟೆ ಧಗಧಗ ಉರಿದಾಗ…

10:58 PM Sep 30, 2022 | Team Udayavani |

ನಾಳೆ (ಅ. 2) ಗಾಂಧೀ ಜಯಂತಿ. ಸ್ವಾತಂತ್ರ್ಯಪೂರ್ವದಲ್ಲಿ ಇವರ ಕರೆಗೆ ಓಗೊಟ್ಟು ದೇಶಾದ್ಯಂತ ರಾಷ್ಟ್ರಕಾರ್ಯದಲ್ಲಿ ತೊಡಗಿದವರೆಷ್ಟು ಜನ? ಇವರು ಪಟ್ಟ ಕಷ್ಟ ಎಂಥದ್ದು? ಇದಕ್ಕೊಂದು ಉದಾಹರಣೆಗೆ ಈ ಕಥಾನಕ. ಸ್ವಾತಂತ್ರ್ಯೋತ್ತರದಲ್ಲಿ ವಿಶೇಷವಾಗಿ ತುರ್ತುಪರಿಸ್ಥಿತಿ ಅವಧಿಯಲ್ಲಿ ಇದೇ ತೆರನಾಗಿ ಹೋರಾಟ ನಡೆಸಿ ವೈಯಕ್ತಿಕ ಬದುಕಿನ ಕಷ್ಟನಷ್ಟಗಳನ್ನು ಅನುಭವಿಸಿದವರೂ ಅದೆಷ್ಟೋ ಮಂದಿ. ಅಧಿಕಾರವಿಲ್ಲದಾಗ ತ್ಯಾಗ, ಹೋರಾಟ, ಬದುಕು ದುರ್ಭರದ ಅನುಭವ, ಅಧಿಕಾರ ಬಂದಾಗ ಇವೆಲ್ಲದರ ಮರೆಯುವಿಕೆ ನಿಸರ್ಗದತ್ತವೋ? ಮಾನವ ನಿರ್ಮಿತವೋ?

Advertisement

ತೀರ್ಥಹಳ್ಳಿ ತಾಲೂಕಿನ ಬಸವಾನಿ ಸಮೀಪದ ಅಂಡೆಕುಳಿ ಮಂಜಯ್ಯ (1902-36) ಮುಂಚೂಣಿ ಜವುಳಿ ವ್ಯಾಪಾರಸ್ಥರು, ಭೂಮಾಲಕರು. ಎಂತಹ ಕೆಲಸ ಮಾಡಿದರೂ ಶ್ರದ್ಧೆಯಿಂದ ಮಾಡುವುದು ಇವರ ಹುಟ್ಟುಗುಣ. ಊರಿನವರಿಗೆ ಧಾರಾಳವಾಗಿ ಸಾಲರೂಪದಲ್ಲಿ ದಿನಸಿ, ಬಟ್ಟೆಗಳನ್ನು ಒದಗಿಸಿ ಜನಾನುರಾಗಿಯೂ ಆಗಿದ್ದರು.

1925ರಲ್ಲಿ ಗಾಂಧೀಜಿಯವರು ಚಕ್ರವರ್ತಿ ರಾಜಗೋಪಾಲಾಚಾರಿಯವರೊಂದಿಗೆ ತೀರ್ಥಹಳ್ಳಿಗೆ ಬಂದಾಗ ಗಾಂಧೀಜಿ ಪ್ರಭಾವಕ್ಕೆ ಒಳಗಾದ ಮಂಜಯ್ಯ ಪತ್ನಿ ಸರಸ್ವತಿಯವರ ಒಡವೆಗಳನ್ನು ಸ್ವಾತಂತ್ರ್ಯ ಮತ್ತು ದಲಿತೋದ್ಧಾರದ ಕೆಲಸಗಳಿಗಾಗಿ ಅರ್ಪಿಸಿದರು. 1928ರಲ್ಲಿ ತೀರ್ಥಹಳ್ಳಿ ರಾಮಚಂದ್ರಾಪುರ ಮಠ, ಬಸವಾನಿ ಸೋಮೇಶ್ವರ ದೇವಸ್ಥಾನ, ಹುಂಚ ಮಠ, ಕವಳೆದುರ್ಗದ ಮಠದ ಬಳಿ ಕೊಪ್ಪಳ ಜಯರಾಮಾಚಾರ್ಯರೆಂಬ ಸ್ವಾತಂತ್ರ್ಯ ಹೋರಾಟಗಾರರ ಹರಿದಾಸರ ಹರಿಕಥೆ ಏರ್ಪಾಟಾಗಿತ್ತು. ಆ ಕಾಲದಲ್ಲಿ ಹರಿಕಥೆಯಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವುದು ರೂಢಿ. ರಾಮನನ್ನು ಭಾರತೀಯರಿಗೂ, ರಾವಣನನ್ನು ಬ್ರಿಟಿಷರಿಗೂ ಹೋಲಿಸಿ ವರ್ಣಿಸಿದರು. ಅಸಹಕಾರ ಆಂದೋಲನ, ಸ್ವದೇಶೀ ವ್ರತದಂತೆ ವಿದೇಶಿ ಬಟ್ಟೆಗಳನ್ನು ದಹಿಸಬೇಕೆಂದು ಕರೆ ಕೊಟ್ಟರು. ಮಂಜಯ್ಯ ತಮ್ಮ ಅಂಗಡಿಯಲ್ಲಿದ್ದ ವಿದೇಶಿ ವಸ್ತ್ರಗಳನ್ನು ತಂದು ಬಸವಾನಿಯ ಸೋಮೇಶ್ವರ ದೇವಸ್ಥಾನದ ಬಯಲಿನಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಕೊಟ್ಟರು. ಸುಮಾರು ಒಂದೆರಡು ಲ.ರೂ. ಮೌಲ್ಯದ ವಿದೇಶಿ ವಸ್ತ್ರಗಳು ಧಗ ಧಗ ಉರಿದು ಹೋದವು. ಇದು ಆ ಕಾಲದ ಮೌಲ್ಯ. ಈಗ…?

ಶಿವಮೊಗ್ಗಕ್ಕೆ ಹೋಗಿ ನಾಗಪ್ಪ ಶೆಟ್ಟರಿಂದ ಖಾದಿ ವಸ್ತ್ರ ತಂದು ಖಾದಿ ವಸ್ತ್ರದ ವ್ಯಾಪಾರ ಆರಂಭಿಸಿದರು. ತಮಗೂ ಖಾದಿ, ಮನೆಯವರಿಗೂ ಖಾದಿ, ಎಲ್ಲೆಲ್ಲೂ ಖಾದಿ…

ಜಯರಾಮಾಚಾರ್ಯರನ್ನು ಹರಿಕಥೆಗೆ ಕರೆಸಿದ ಭೀಮನಕಟ್ಟೆ ಮಠದ ಶ್ರೀರಘುತಿಲಕತೀರ್ಥ ಶ್ರೀಪಾದರು ಮಂಜಯ್ಯನವರ ಸಮರ್ಪಣ ಮನೋಭಾವ ಕಂಡು “ತ್ಯಾಗವೀರ’ ಎಂದು ಬಿರುದು ನೀಡಿ ಹರಿಸಿದರು. ಭೀಮನಕಟ್ಟೆ ಮತ್ತು ಕವಳೆದುರ್ಗದ ಮಠದಲ್ಲಿ ಆ ಕಾಲದಲ್ಲಿ ಅನ್ನಪ್ರಸಾದ ನಡೆಯುತ್ತಿದ್ದುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾತ್ರ.

Advertisement

ಸ್ವಾತಂತ್ರ್ಯ ಹೋರಾಟಕ್ಕೆ ಸ್ವಯಂಸೇವಕರು ಬೇಕಾಗಿದ್ದಾರೆ ಎಂಬ ಕರೆ ಪತ್ರಿಕೆಯೊಂದರಲ್ಲಿ ಬಂದಾಗ ಮಂಜಯ್ಯ ಹರ್ಡೇಕರ್ ಮಂಜಪ್ಪನವರ ಗರೋಡಿಯಲ್ಲಿ ತರಬೇತಿ ಪಡೆದರು. ಊರಿಗೆ ಬಂದು ಮೂರೂವರೆ ಎಕ್ರೆ ಜಮೀನಿನಲ್ಲಿ ಸಾಬರಮತಿ ಆಶ್ರಮದ ಮಾದರಿಯಲ್ಲಿ ಆಶ್ರಮ ನಿರ್ಮಿಸಿ ಸ್ವಯಂಸೇವಕರಿಗೆ ಆಶ್ರಯ ನೀಡಿದರು. ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಾಗ ಮೊದಲ ಬಾರಿ ಆರು ತಿಂಗಳು ಜೈಲುವಾಸ ಅನುಭವಿಸಿದರು. ವಾಪಸು ಬರುವಾಗ ಆಶ್ರಮವೆಲ್ಲ ಅಸ್ತವ್ಯಸ್ತವಾಗಿ ಸಾಲ ಏರಿತ್ತು. ಮನೆಯ ಗಿಂಡಿಯಲ್ಲಿದ್ದ ಪುಡಿಕಾಸೂ ಖಾಲಿಯಾಗಿತ್ತು. ತಾಯಿ “ಮನೆ ಕಡೆ ಗಮನ ಕೊಡು’ ಎಂದಾಗ “ದೇಶವೇ ಹೊತ್ತಿ ಉರಿಯುವಾಗ ನಮ್ಮ ಮನೆ ಏನು ಲೆಕ್ಕ?’ ಎಂದವರು ಮಂಜಯ್ಯ. ಹಲವು ಬಾರಿ ಜೈಲಿಗೆ ಹೋಗಿ ಬಂದಾಗ ಮನೆಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು  ಹದಗೆಡುತ್ತಿತ್ತು. ಕರನಿರಾಕರಣೆ ಚಳವಳಿಯಲ್ಲಿ ಪೊಲೀಸರು ಬೆಂಬತ್ತಿದಾಗ ಗಡ್ಡಬಿಟ್ಟು, ಖಾದಿಯ ಕಾವಿ ಬಟ್ಟೆ ತೊಟ್ಟು ಸನ್ಯಾಸಿ ವೇಷದಲ್ಲಿ ಊರೂರು ತಿರುಗಿ ಜನರನ್ನು ಎಚ್ಚರಿಸಿದರು. ಸ್ವಯಂಸೇವಕರಲ್ಲೇ ಒಬ್ಬನ ಇಬ್ಬಗೆ ನೀತಿಯಿಂದ ಜೈಲು ಸೇರುವಂತಾಯಿತು. ಈ ಬಾರಿಯ ಜೈಲು ಕಣ್ಣೂರಿನಲ್ಲಿ. ಅಲ್ಲಿನ ಕೆಟ್ಟ ಊಟ, ಹವಾಮಾನದಿಂದ ಆರೋಗ್ಯ ಹದಗೆಟ್ಟು ಕ್ಷಯರೋಗ ಅಂಟಿತು. ಜೈಲಿನಿಂದ ಬಿಡುಗಡೆಯಾಗಿ ಬಂದರೂ 1936ರಲ್ಲಿ ಎಳೆ ವಯಸ್ಸಿನಲ್ಲಿಯೇ ಕೊನೆಯುಸಿರೆಳೆದರು. ಅದೇ ದಿನ ಅವರ ಕೊನೆಯ ಮಗಳು ವಿಶಾಲಾಕ್ಷಿ ಜನಿಸಿದ್ದು ತಿಳಿಯದೆ ಹೋಯಿತು.

ಮಕ್ಕಳ ಹೆಸರಿಗೆ “ದಾಸ’ ಸೇರ್ಪಡೆ
ಮಂಜಯ್ಯ ಎಷ್ಟರಮಟ್ಟಿಗೆ ಗಾಂಧೀ ಅನುಯಾಯಿ ಅಂದರೆ ಮಕ್ಕಳಿಗೆಲ್ಲ ದಾಸ (ಮೋಹನದಾಸರ ಪ್ರತೀಕ) ಎಂದು ಹೆಸರಿಟ್ಟರು. ರಾಮದಾಸ, ದೇವಿದಾಸ, ಚಂದ್ರದಾಸ, ಕೃಷ್ಣ ದಾಸ, ಹಿರಿಯಣ್ಣದಾಸ, ಅನಂತದಾಸ. ಶಾರದಮ್ಮ ಮತ್ತು ವಿಶಾಲಾಕ್ಷಿ ಇಬ್ಬರು ಹೆಣ್ಣು ಮಕ್ಕಳು. ಈಗ ಇರುವುದು ವಿಶಾಲಾಕ್ಷಿ ಮಾತ್ರ. ಅವರಿಗೆ 86 ವರ್ಷ. ಮಂಜಯ್ಯ ನಿಧನ ಹೊಂದುವಾಗ ಹಿರಿಯ ಮಗ ರಾಮದಾಸನಿಗೆ 13 ವರ್ಷ. ಈ ಮಗನೂ, ತಮ್ಮ ದೇವಿದಾಸನೂ ಮುಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಮನೆಯ ಮಹಿಳೆಯರೂ ಕಸ್ತೂರ್ಬಾ ಗಾಂಧಿ ಮಾದರಿಯಲ್ಲಿ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ದುಡಿದರು.

ಮಂಜಯ್ಯನವರ ತ್ಯಾಗದ ಇನ್ನೊಂದು ಪರಿಣಾಮವೆಂದರೆ ಸಾಯುವಾಗ ಬಿಡಿಕಾಸೂ ಇರಲಿಲ್ಲ. ಪಕ್ಕದ ಊರಿನ ಬಂಧುಗಳು ಹಣ ಸಂಗ್ರಹಿಸಿ ವೈಕುಂಠ ಸಮಾರಾಧನೆ ನಡೆಸಿದರು. ಮಂಜಯ್ಯನವರ ಚಿತ್ರ ಕೂಡ ಮನೆಯಲ್ಲಿರಲಿಲ್ಲ. ಈಗಲೂ ಅಲಭ್ಯ. “ನಮ್ಮ ಅಜ್ಜನ ಮನೆಯಲ್ಲಿ ಗಾಂಧೀಜಿ, ಮೈಸೂರು ರಾಜ ಒಡೆಯರ್‌ ರಂತಹವರ ಫೋಟೋ ಇತ್ತೇ ವಿನಾ ನಮಗೆ ಅಜ್ಜನ ಫೋಟೋ ಸಿಗಲೇ ಇಲ್ಲ’ ಎನ್ನುತ್ತಾರೆ ವಿಶಾಲಾಕ್ಷಿಯವರ ಮಗ, ಪ್ರಸ್ತುತ ಉಜಿರೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್‌.ಎಚ್‌. ಮಂಜುನಾಥ್‌. ಈಗ ಇವರ ಜತೆ ವಿಶಾಲಾಕ್ಷಿ ಇದ್ದಾರೆ.

ಕಾರ್ನಾಡು ನೆನಪು
ಮಂಜಯ್ಯನವರ ಬದುಕಿನ ಕೊನೆಯನ್ನು ಯೋಚಿಸಿದಾಗ, ಕರಾವಳಿಯ ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡು ಸದಾಶಿವ ರಾಯರ ನೆನಪಾಗುತ್ತದೆ. ಆಗರ್ಭ ಶ್ರೀಮಂತರಾಗಿದ್ದ ಸದಾಶಿವ ರಾಯರು ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲವನ್ನು ಕಳೆದುಕೊಂಡು “ಲೋ ಶಿವರಾಮ ಒಂದ್‌ 20 ರೂ. ಕೊಡೋ’ ಎಂದು ಮೂಲ್ಕಿ ಬಸ್‌ ನಿಲ್ದಾಣದಲ್ಲಿ ಯುವ ಸಾಹಿತಿಯಾಗಿದ್ದ ಕೋಟ ಶಿವರಾಮ ಕಾರಂತರ ಬಳಿ ಹೇಳಿದ್ದನ್ನು ಕಾರಂತರು ದಾಖಲಿಸಿದ್ದಾರೆ. ಇಂತಹವರ ತ್ಯಾಗ ವ್ಯರ್ಥವಾಗಲಿಲ್ಲ ನಿಜ- ಅದರ ಫ‌ಲ ಸಮಾಜ, ರಾಷ್ಟ್ರಕ್ಕೆ ಸಿಕ್ಕಿದೆ ಎನ್ನಬಹುದು. ಆದರೆ ಯಾರಿಗೆ ಸಿಕ್ಕಿದೆಯೋ ಅವರಿಗೆ ತ್ಯಾಗಿಗಳ ಕುರಿತು ಕೃತಜ್ಞತೆ ಇದೆಯೋ? ಇದ್ದಿದ್ದರೆ ಅನಂತರದ ಕಾಲಘಟ್ಟಗಳ‌ಲ್ಲಿ ಕಂಡುಬಂದ ವಿದ್ಯಮಾನ ಘಟಿಸುತ್ತಿತ್ತೆ?

ಆಗೇನು? ಈಗೇನು?
ಮಂಜಯ್ಯನಂತಹವರು ವಿದೇಶಿ ಬಟ್ಟೆಗಳನ್ನು ಸುಟ್ಟು ಸ್ವದೇಶಿವ್ರತಧಾರಿಗಳಾದರು. ಆಗ ಬ್ರಿಟಿಷರನ್ನು ಹೊರಗಟ್ಟಬೇಕೆಂದು ಲಕ್ಷಾಂತರ ಜನರು ಪಣ ತೊಟ್ಟರು. ಈಗೇನು? ಸ್ವಾತಂತ್ರ್ಯ ಗಳಿಸಿ ಕೇವಲ 75 ವರ್ಷಗಳಲ್ಲಿ ಅವರ ವಾರಸುದಾರರು ವಿದೇಶಿ ಬಟ್ಟೆ ಧರಿಸು

ವುದರಲ್ಲಿ, ವಿದೇಶೀ ಸಂಸ್ಕೃತಿಯನ್ನು ಅನುಕರಿಸುವುದರಲ್ಲಿ, ವಿದೇಶಗಳಿಗೆ ಹೋಗಿ ಸೇವೆ ಸಲ್ಲಿಸುವುದರಲ್ಲಿ, ಜಾತೀಯ (ದುರ್‌)ಅಭಿಮಾನವಿದ್ದರೂ ಸಂಸ್ಕೃತಿಯ ವಿಸ್ಮತಿಯಿಂದ ನೆಂಟಸ್ತಿಕೆಯಲ್ಲೂ ದೇಶವಾಸಿಗಳಿಗಿಂತ ವಿದೇಶವಾಸಿಗಳಿಗೆ ಮನ್ನಣೆ ಕಾಣುತ್ತಿದೆ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next