Advertisement

ಕೊಡಗು ರೈಲ್ವೆ ಮಾರ್ಗ ತಡೆಗೆ ಪ್ರಧಾನಿಗೆ ಒತ್ತಾಯ

12:45 PM Feb 19, 2018 | Team Udayavani |

ಮೈಸೂರು: ಉದ್ದೇಶಿತ ಕೊಡಗು ರೈಲ್ವೆ ಮಾರ್ಗ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಶಾಶ್ವತವಾಗಿ ತಡೆಹಿಡಿಯುವ ಕುರಿತು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯನ್ನು ಒತ್ತಾಯಿಸುವ ಬಗ್ಗೆ ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ವೇದಿಕೆ ವತಿಯಿಂದ ಭಾನುವಾರ ನಗರದಲ್ಲಿ ನಡೆಸಲಾದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ವೇದಿಕೆ ನೇತೃತ್ವದಲ್ಲಿ ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಯುನೈಟೆಡ್‌ ಕೂರ್ಗ್‌ ಆರ್ಗನೈಜೇಷನ್‌ ಸಂಚಾಲಕ ಮಂಜು ಚಿಣ್ಣಪ್ಪ, ಕೊಡಗಿಗೆ ಮಾರಕವಾದ ಯೋಜನೆ ಬರುತ್ತಿರುವಾಗ ನಾವು ವಿರೋಧಿಸಬೇಕಿದೆ.

ಈ ಹಿಂದೆ ಡೋಂಗಿ ರಾಜಕಾರಣಿಗಳ ಭರವಸೆಯನ್ನು ನಂಬಿದ ಪರಿಣಾಮ 400ಕೆವಿ ವಿದ್ಯುತ್‌ ಲೈನ್‌ ಹಾದು ಹೋಗುವಂತಾಯಿತು. ಇದಕ್ಕಾಗಿ ಜಿಲ್ಲೆಯಾದ್ಯಂತ 56 ಸಾವಿರ ಮರಗಳ ಹನನ ಮಾಡಲಾಗಿದ್ದು, ಇದರಿಂದ ರೈಲ್ವೆ ಹಳಿಗಳ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವ ಅನಿವಾರ್ಯತೆ ಎದುರಾಗಿದೆ.

ರೈಲ್ವೆ ಹಳಿ ನಿರ್ಮಾಣ ಯೋಜನೆ ಪ್ರಾರಂಭಿಕ ಹಂತದಲ್ಲಿರುವ ಸಂದರ್ಭದಲ್ಲೇ ಇದನ್ನು ವಿರೋಧಿಸಿ ಹೋರಾಟ ನಡೆಸಬೇಕಿದ್ದು, ಈ ಯೋಜನೆ ಅನುಷ್ಠಾನಗೊಂಡಲ್ಲಿ ಸಾಮಾಜಿಕ ಅಸಮತೋಲನ ಉಂಟಾಗಿ, ಜನಜೀವನ ಹಾಗೂ ಪ್ರಾಣಿಸಂಕುಲಗಳಿಗೆ ಮಾರಕವಾಗಲಿದೆ. ಹೀಗಾಗಿ ಉದ್ದೇಶಿತ ರೈಲು ಯೋಜನೆ ವಿರುದ್ಧ ಹೋರಾಟ ಆರಂಭಗೊಂಡಿದ್ದು, ಈ ವಿಷಯವಾಗಿ ಜೀವ ಇರುವವರೆಗೂ ಹಿರಿಯರ ಮಾರ್ಗದರ್ಶನ ಪಡೆದು ಹೋರಾಟ ಮುಂದುವರೆಸುತ್ತೇವೆ ಎಂದರು.

ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶ: ಪರಿಸರ ಹೋರಾಟಗಾರ ಡಾ.ಸುರೇಶ್‌ ಹೆಬ್ಳೀಕರ್‌ ಮಾತನಾಡಿ, ಕೊಡಗು ಕರ್ನಾಟಕದ ವಾಟರ್‌ ಟವರ್‌ ಇದ್ದಂತೆ, ಬೆಂಗಳೂರು ಸೇರಿ ಕಾವೇರಿ ಕಣಿವೆ ಜನರಿಗೆ ಜೀವನದಿ. ಅಭಿವೃದ್ಧಿ ಹೆಸರಿನಲ್ಲಿ ಕಾಡನ್ನು ಕಡಿಯುತ್ತಾ ಹೋದರೆ ಪರಿಸರ ನಾಶವಾಗಲಿದ್ದು, ಈಗಾಗಲೇ ಹವಾಮಾನ ವೈಪರೀತ್ಯದಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ರೈಲು ಯೋಜನೆ ಹೆಸರಿನಲ್ಲಿ ಕಾಡು ನಾಶ ಮಾಡಿದರೆ ಪರಿಸರ ನಾಶಕ್ಕೆ ನಾವೇ ನಾಂದಿ ಹಾಡಿದಂತಾಗಲಿದ್ದು, ಹೀಗಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

Advertisement

ಸಾವಿರಾರು ಮರ ಹನನ: ಕಾಂಗ್ರೆಸ್‌ ಮುಖಂಡ ಬ್ರಿಜೇಶ್‌ ಕಾಳಪ್ಪ ಮಾತನಾಡಿ, ಕೊಡಗಿನ ಮೂಲಕ ಮೈಸೂರು-ತಲಚೇರಿ ನಡುವಿನ ರೈಲ್ವೆ ಮಾರ್ಗವಲ್ಲದೆ, ಮೈಸೂರು-ಕುಶಾಲನಗರಕ್ಕೂ ರೈಲ್ವೆ ನಿರ್ಮಾಣ ಮಾಡದಂತೆ ನಾವು ಒಕ್ಕೊರಲಿನಿಂದ ಒತ್ತಾಯಿಸಬೇಕಾಗಿದೆ. ಯಾವುದೇ ಕಾರಣಕ್ಕೂ ನಮ್ಮ ಜಿಲ್ಲೆಗೆ ರೈಲು ಬರುವುದು, ಬೇಡ. ಉದ್ದೇಶಿತ ಯೋಜನೆಗೆ ರಾಜ್ಯ ಸರ್ಕಾರವೂ ಸಹಕಾರ ನೀಡುವುದಿಲ್ಲ.

ಮೈಸೂರು-ತಲಚೇರಿ ರೈಲು ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ವಾಕಥಾನ್‌ ಮಾಡುವ ಮೂಲಕ ಪ್ರತಿ ಜಿಲ್ಲೆಯ ಜನರಿಗೆ ಮಾಹಿತಿ ನೀಡಬೇಕಿದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಸತತ ಬರಗಾಲವಿದ್ದು, ಜನರಿಗೆ ಕುಡಿಯುವುದಕ್ಕೂ ನೀರು ಪೂರೈಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ರೈಲ್ವೆ ಹಳಿ ಬಂದರೆ ಸಾವಿರಾರು ಮರಗಳ ಹನನವಾಗಿ ಮಳೆ ಪ್ರಮಾಣ ಕುಸಿಯಲಿದ್ದು, ಇದರಿಂದ ಜೀವನಕ್ಕೆ ತೊಂದರೆಯಾಗುತ್ತದೆ ಎಂದರು.

ಸಭೆಯಲ್ಲಿ ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ವೇದಿಕೆ ಸಂಚಾಲಕರಾದ ಕರ್ನಲ್‌ ಮುತ್ತಣ್ಣ, ವಿಧಾನಪರಿಷತ್‌ ಮಾಜಿ ಸದಸ್ಯ ಅರುಣ್‌ ಮಾಚಯ್ಯ, ತಮಿಳುನಾಡಿನ ಯುಕ್ತಾನಂದ ಸ್ವಾಮೀಜಿ, ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಸೇಪ್‌ ವ್ಹೀಲ್‌ ಮಾಲೀಕ ಬಿ.ಎಸ್‌.ಪ್ರಶಾಂತ್‌, ವಿಶ್ರಾಂತ ಕುಲಪತಿ ಪೊ›.ಕೆ.ಎಸ್‌.ರಂಗಪ್ಪ, ರಾಜೀವ್‌ ಬೋಪಣ್ಣ, ಅರ್ಜುನ್‌ ದೇವಯ್ಯ, ಟ್ರಾವೆಲ್‌ ಮಾರ್ಟ್‌ ಸಂಸ್ಥೆಯ ಸಿ.ಎ. ಜಯಕುಮಾರ್‌ ಇನ್ನಿತರರು ಭಾಗವಹಿಸಿದ್ದರು.

ಸಭೆಯ ನಿರ್ಣಯಗಳು: ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ವೇದಿಕೆಯಿಂದ ನಡೆಸಲಾದ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅದರಂತೆ ಕಾವೇರಿ ನದಿ ಹಾಗೂ ಕೊಡಗು ಜಿಲ್ಲೆಗೆ ಮಾರಕವಾಗುವ ಯೋಜನೆಗಳ ವಿರುದ್ಧ ಹಾಗೂ ರೈಲ್ವೆ ಮಾರ್ಗ ಮತ್ತು ಬಹುಪಥ ರಸ್ತೆ ನಿರ್ಮಾಣ ಕಾರ್ಯವನ್ನು ವಿರೋಧಿಸುತ್ತೇವೆ, ಕೊಡಗು ಜಿಲ್ಲೆಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿರುತ್ತೇವೆ,

ಕೊಡಗು ಜಿಲ್ಲೆ ವಿಶೇಷವಾದ ಭೌಗೋಳಿಕ ಪ್ರದೇಶ ಹಾಗೂ ಉತ್ತಮ ಪರಿಸರವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ, ಮತ್ತು ಇಲ್ಲಿನ ಮೂಲ ನಿವಾಸಿಗಳ ಜೀವನ ಪದ್ಧತಿಗೆ ಅನುಗುಣವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಕೃಷಿಯೇತರ ಚಟುವಟಿಕೆಗೆ ಭೂ ಪರಿವರ್ತನೆ ಮಾಡುವುದಕ್ಕೆ ಕಡಿವಾಣ ಹಾಕಬೇಕು ಹಾಗೂ ಕಾವೇರಿ ನದಿ, ಅದರ ಉಪ ನದಿಗಳನ್ನು ಉಳಿಸುವಲ್ಲಿ ಪೂರ್ಣ ಮಲೆನಾಡು ಪ್ರದೇಶವನ್ನು ಸಂರಕ್ಷಿಸಲು ಪ್ರಬಲ ಹೋರಾಟ ನಡೆಸಬೇಕೆಂಬ ಬಗ್ಗೆ ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next