Advertisement

ಫ‌ುಟ್ಪಾತ್‌ ಅಂಗಡಿಗಳ ತೆರವು ಕಾರ್ಯ

01:40 PM Jul 24, 2019 | Suhan S |

ಕೋಲಾರ: ತಡವಾಗಿಯಾದರೂ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ಮಿಂಚಿನ ಕಾರ್ಯಾಚ‌ರಣೆ ನಡೆಸಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಇಟ್ಟಿದ್ದ ಪೆಟ್ಟಿಗೆ ಅಂಗಡಿ ಹಾಗೂ ಫ‌ುಟ್ಪಾತ್‌ ಅಂಗಡಿಗಳನ್ನು ತೆರವುಗೊಳಿಸಿದರು.

Advertisement

ನಗರದ ಹಳೆ ಬಸ್‌ ನಿಲ್ದಾಣದಲ್ಲಿ ನಗರಸಭೆಗೆ ಸೇರಿದ ಜಾಗದಲ್ಲಿ ಹೂ, ಹಣ್ಣು ಮತ್ತು ಟೀ ಅಂಗಡಿಗಳನ್ನು ಅಕ್ರಮವಾಗಿ ಅತಿಕ್ರಮಿಸಿದ್ದ ಅಂಗಡಿಗಳನ್ನು ಪೊಲೀಸರ ಸರ್ಪಗಾವಲಿನಲ್ಲಿ ನಗರಸಭೆ ಸಿಬ್ಬಂದಿ ತೆರವು ಕಾರ್ಯ ನಡೆಸಿದರು.

ನಗರಸಭೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಜೆಸಿಬಿ ಜತೆಗೆ ಬಂದಿರುವುದನ್ನು ಅರಿತ ಕೆಲ ಹೂವಿನ ಅಂಗಡಿ, ಟೀ ಅಂಗಡಿ ಹಾಗೂ ಹೋಟೆಲ್ ಮಾಲಿಕರು ಸ್ವಯಂ ಪ್ರೇರಿತರಾಗಿ ತೆರವಿಗೆ ಮುಂದಾದರು. ತಾವು ಅಂಗಡಿಗೆ ಹಾಕಿಕೊಂಡಿದ್ದ ಶೀಟ್, ಚಪ್ಪರ, ಟಾರ್ಪಲ್, ಅಂಗಡಿ ಮುಂದೆ ಹಾಕಿದ್ದ ನಾಮಫಲಕ ಮತ್ತಿತರ ವಸ್ತುಗಳನ್ನು ತೆಗೆದುಕೊಂಡರು.

ಮೊದಲು ಸರ್ವಜ್ಞ ಉದ್ಯಾನ ಮುಂಭಾಗ ಇಟ್ಟಿದ್ದ ಪೆಟ್ಟಿಗೆ ಅಂಗಡಿಗಳು ಆನಂತರ ನಗರದ ನಚಿಕೇತ‌ ನಿಲಯದ ಮುಂಭಾಗ ಅಕ್ರಮವಾಗಿ ಅತಿಕ್ರಮಿಸಿದ್ದ ಹಣ್ಣು ಅಂಗಡಿಗಳ ತೆರವು ಗೊಳಿಸಿದ ನಂತರ ಹಳೇ ಬಸ್‌ ಬಿಲ್ದಾಣದಲ್ಲಿ ನೂರಾರು ಹೂವಿನ ಅಂಗಡಿಗಳು ತಲೆ ಎತ್ತಿದ್ದ ಅಂಗಡಿ ತೆರವುಗೊಳಿಸಿದರು.

ಜಾಗ ಅತಿಕ್ರಮಣ:ಹೂವಿನ ಅಂಗಡಿ ಮಾಲಿಕರು ವಿದ್ಯುತ್‌ ಸಂಪರ್ಕ ಪಡೆಯಬೇಕೆಂದರೆ ನಗರಸಭೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಆದರೆ, ಇಲ್ಲಿನ ಅಂಗಡಿ ಮಾಲಿಕರು ಯಾವುದನ್ನೂ ಪಡೆಯದೇ ನಗರಸಭೆ ಜಾಗವನ್ನು ಆಕ್ರಮಿಸಿಕೊಂಡಿದ್ದರು.

Advertisement

ಮಂಗಳವಾರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಒತ್ತುವರಿ ತೆರವುಗೊಳಿಸಿದ್ದು ತೆರವು ಗೊಂಡ ಜಾಗದಲ್ಲಿ ನಗರಸಭೆ ವತಿಯಿಂದ 1.35 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು 15 ದಿನಗಳೊಳಗೆ ಟೆಂಡರ್‌ ಕರೆದು ಅತಿ ಶೀಘ್ರದಲ್ಲೇ ಪೂರ್ಣಗೊಳಿಸಿ ಹೂವಿನ ಮಾರುಕಟ್ಟೆಯನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ.

2 ದಿನ ಕಾರ್ಯಾಚರಣೆ:ಮೊದಲನೇ ಹಂತವಾಗಿ ಕೋಲಾರ ನಗರದ ಹಳೆ ಬಸ್‌ ನಿಲ್ದಾಣದಲ್ಲಿ ತೆರವುಗೊಳಿಸಿದ್ದು, ಬುಧವಾರವೂ ನಗರದ ವಿವಿಧ ಕಡೆ ತೆರವು ಕಾರ್ಯ ಮುಂದುವರಿಯಲಿದೆ, ನಗರದಲ್ಲಿ ಎಲ್ಲೇ ಫ‌ುಟ್ಪಾತ್‌ ಮತ್ತು ನಗರಸಭೆಗೆ ಸೇರಿದ ಜಾಗ ಒತ್ತುವರಿಗೊಂಡವರ ವಿರುದ್ಧ ಎರಡು ದಿನಗಳ ಕಾಲ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ನಗರಸಭೆ ಆಯುಕ್ತ ಸತ್ಯನಾರಾಯಣ ತಿಳಿಸಿದರು.

ನಿರ್ಲಕ್ಷ್ಯಿಸಿದ್ದರು: ಫ‌ುಟ್ಪಾತ್‌ ಅಂಗಡಿಗಳ ತೆರವುಗೊಳಿಸುವ ಮುನ್ನಾ ದಿನವೇ ಆಟೋ ಪ್ರಚಾರದ ಮೂಲಕ ತೆರವುಗೊಳಿಸುವ ಎಚ್ಚರಿಕೆ ನೀಡಲಾಗಿತ್ತು. ಆದರೂ, ಕೆಲವು ಅಂಗಡಿ ಮಾಲಿಕರು ನಗರಸಭೆಯದು ಮಾಮೂಲಿ ಎಚ್ಚರಿಕೆ ಎನ್ನುವಂತೆ ನಿರ್ಲಕ್ಷಿಸಿದ್ದರು.

ಮಂಗಳವಾರ ಬೆಳಗ್ಗೆ ಜೆಸಿಬಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಪೆಟ್ಟಿಗೆ ಅಂಗಡಿಗಳನ್ನು ನಗರಸಭೆ ಲಾರಿಗೆ ತುಂಬುವ ಸಂದರ್ಭದಲ್ಲಿ ಮಾಲಿಕರು ಪೆಟ್ಟಿಗೆ ಉಳಿಸುವಂತೆ ನಗರಸಭೆ ಅಧಿಕಾರಿಗಳೊಂದಿಗೆ ಗೋಗೆರೆದರೂ ಅಧಿಕಾರಿಗಳು ಬಿಡಲಿಲ್ಲ.

ಕೆಲವು ದಿನಗಳ ಹಿಂದಷ್ಟೇ ಗ್ರಂಥಾಲಯ ಹಾಗೂ ಟಿ.ಚನ್ನಯ್ಯ ರಂಗಮಂದಿರದ ಮುಂಭಾಗ ಹಣ್ಣಿನ ಹಾಗೂ ತರಕಾರಿ ಅಂಗಡಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ನಗರಸಭೆ ನಡೆಸಿತ್ತು. ಆದರೆ, ಮತ್ತೇ ಮೂರೇ ದಿನಕ್ಕೆ ಮತ್ತೇ ಅಂಗಡಿಗಳನ್ನು ಇಡಲಾಗಿತ್ತು. ಈಗಲೂ ನಗರಸಭೆ ಇಂತದ್ದೇ ಕಾರ್ಯಾಚರಣೆ ನಡೆಸಿ ನಂತರ ಪೆಟ್ಟಿಗೆ ಅಂಗಡಿಗಳನ್ನು ಹಾಗೂ ಫ‌ುಟ್ಪಾತ್‌ ಅತಿಕ್ರಮಿಸಲು ಅವಕಾಶ ಕಲ್ಪಿಸುತ್ತದೆ ಎಂದು ಸಾರ್ವಜನಿಕರು ದೂರುತ್ತಿದ್ದುದು ಕೇಳಿ ಬಂತು.

Advertisement

Udayavani is now on Telegram. Click here to join our channel and stay updated with the latest news.

Next