Advertisement

ಹೂಗಳಿಂದ ಅರಳಿದ ಕೆಂಗಲ್‌ ಆಂಜನೇಯ ದೇಗುಲ

10:23 AM Jan 26, 2019 | |

ರಾಮನಗರ: ಜ.26ರಿಂದ ಮೂರು ದಿನಗಳ ಕಾಲ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಫ‌ಲಪುಷ್ಪ ಪ್ರದರ್ಶನ ಮತ್ತು ಸುಗ್ಗಿ ಉತ್ಸವವನ್ನು ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಸೇವಂತಿಗೆ ಮತ್ತು ಗುಲಾಬಿ ಹೂಗಳಿಂದ ಕೆಂಗಲ್‌ ಆಂಜನೇಯಸ್ವಾಮಿ ದೇವಾಲಯ ಅರಳಿದೆ.

Advertisement

ಗಣರಾಜ್ಯೋತ್ಸವದ ಅಂಗವಾಗಿ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘಗಳು ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜನವರಿ 26ರಿಂದ 28ರವರೆಗೆ ಪ್ರದರ್ಶನ ನಡೆಯಲಿದೆ.

20 ಅಡಿ ಅಗಲ, 20 ಅಡಿ ಉದ್ದ ಮತ್ತು 23 ಅಡಿ ಎತ್ತರದ ಕೆಂಗಲ್‌ ಆಂಜನೇಯಸ್ವಾಮಿ ದೇವಾಲಯದ ಪ್ರತಿಕೃತಿ ಪ್ರದರ್ಶನದ ಪ್ರಮುಖ ಆಕರ್ಷಣೆ. ಕೆಂಗಲ್‌ ಆಂಜನೇಯ ಸ್ವಾಮಿ ದೇಗುಲ ಪುಷ್ಪಗಳಿಂದ ಅರಳಿದರೆ, ಆಂಜನೇಯ ಸ್ವಾಮಿ ಸಿರಿಧಾನ್ಯಗಳಿಂದ ರಚನೆಯಾಗಲಿದೆ.

ಹೂ, ತರಕಾರಿಗಳಿಂದ ಕಾಲಕೃತಿ: ಹೂ ಮತ್ತು ತರಕಾರಿಗಳಿಂದ ತಯಾರಾದ ತಬಲ, ಗಿಟಾರ್‌ ಸೇರಿದಂತೆ ವಿವಿಧ ಸಂಗೀತ ಪರಿಕರಗಳ ಕಲಾಕೃತಿಗಳು, ಹಿಪ್ಪುನೇರಳೆ ಸೊಪ್ಪಿನ ಮೇಲೆ ರೇಷ್ಮೆ ಹುಳು ಮೇಯುತ್ತಿರುವ ದೃಶ್ಯ ಹೀಗೆ 20ಕ್ಕೂ ಹೆಚ್ಚು ಕಲಾಕೃತಿಗಳು ಹೂ ಮತ್ತು ತರಕಾರಿಗಳಿಂದ ಅರಳಲಿದ್ದು, ಇವು ಸಹ ಪ್ರದರ್ಶನದ ಆಕರ್ಷಣೆಯಾಗಲಿದೆ.

ಆಂಜನೇಯ ಸ್ವಾಮಿ ಮತ್ತು ಡಾ.ಎಂ.ಎಚ್.ಮರಿಗೌಡರ ಪ್ರತಿಕೃತಿಗಳು ಸಿರಿಧಾನ್ಯಗಳಿಗೆ ರಚನೆಯಾಗಲಿವೆ. ಬಾಳೆ ದಿಂಡಿನಿಂದ ಅಯ್ಯಪ್ಪ ಸ್ವಾಮಿ ಪಡಿ (ಮೆಟ್ಟಿಲು) ಮೂಡಿಬರಲಿದೆ. ವಿವಿಧ ವಿನ್ಯಾಸಗಳಿಗೆ ತರಕಾರಿ ಮತ್ತು ಹೂ ಜೋಡಣೆ ಪ್ರತಿಕೃತಿಗಳ ಇಲ್ಲಿ ಕಾಣಸಿಗಲಿವೆ. ಪುಷ್ಪ ರಂಗೋಲಿ, ವಿವಿಧ ತರಕಾರಿಗಳ ಕೆತ್ತನೆಯ ಮೂಲಕ ಚನ್ನಪಟ್ಟಣದ ಗೊಂಬೆಗಳು ನೋಡುಗರನ್ನು ಆಕರ್ಷಿಸಲಿದೆ. ಫ‌ಲಪುಷ್ಪ ಪ್ರದರ್ಶನದ ಮಧುಮೇಳ, ಸಿರಿಧಾನ್ಯ ಮೇಳದ ಜೊತೆಗೆ ಸುಗ್ಗಿ ಹಬ್ಬವನ್ನು ಹಮ್ಮಿಕೊಳ್ಳಲಾಗುತ್ತಿದೆ.

Advertisement

ಪ್ರದರ್ಶನ ಮಾಹಿತಿಯ ಕಣಜ: ಫ‌ಲಪುಷ್ಪ ಪ್ರದರ್ಶನ ಕೇವಲ ಆಕರ್ಷಣೆಯ ಕೇಂದ್ರವಾಗದೇ ಮಾಹಿತಿಯ ಕಣಜವೂ ಆಗಲಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನಾ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಿ, ರೈತರಿಗೆ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ದೊರಯುವ ಯೋಜನೆಗಳ ಬಗ್ಗೆ ಮತ್ತು ಹಲವು ಪ್ರಾತ್ಯಕ್ಷಿಕೆಗಳ ಮೂಲಕ ತಾಂತ್ರಿಕ ಮಾಹಿತಿಯನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.

ವಿವಿಧ ಮಾದರಿ ಪ್ರಾತ್ಯಕ್ಷಿಕೆ: ಅಣಬೆ ಕೃಷಿ ಹಾಗೂ ಜೇನು ಸಾಕಾಣಿಕೆ ಪ್ರಾತ್ಯಕ್ಷಿಕೆ, ತೋಟಗಾರಿಕೆ ಕಸಿಗಿಡಗಳ ಮಾರಾಟ ಮಾಡಲು ಸಸ್ಯ ಸಂತೆ, ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನ, ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಗಳ ಪ್ರದರ್ಶನ, ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ ಹಾಗೂ ಕೃಷಿ ವಿವಿ ಮಳಿಗೆ ಸ್ಥಾಪಿಸಿ ರೈತರಿಗೆ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ತಾಂತ್ರಿಕ ಮಾಹಿತಿ, ತೋಟಗಾರಿಕೆಯಲ್ಲಿ ಬಳಕೆಯಲ್ಲಿರುವ ವಿವಿಧ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ದ್ರಾಕ್ಷಾರಸ ಮಂಡಳಿಯಿಂದ ವಿವಿಧ ವೈನ್‌ ಮಾದರಿಯ ಪ್ರದರ್ಶನ, ಮಾವು ಅಭಿವೃದ್ಧಿ ಮಂಡಳಿಯಿಂದ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಮೂರು ದಿನಗಳ ಕಾಲ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭರತನಾಟ್ಯ ಕಲಾವಿದರಾದ ಶುಭ ಧನಂಜಯ ಮತ್ತು ತಂಡ ಮತ್ತು ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಗಣರಾಜ್ಯೋತ್ಸವದ ಅಂಗವಾಗಿ ಜ.26ರಿಂದ ಮೂರು ದಿನಗಳ ಕಾಲ ನಡೆಯುವ ಫ‌ಲಪುಷ್ಪ ಪ್ರದರ್ಶನ ಮತ್ತು ಸುಗ್ಗಿ ಉತ್ಸವವನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಜಿಪಂ ಸಿಇಒ ಮುಲ್ಲೆ„ ಮುಹಿಲನ್‌ ತಿಳಿಸಿದರು. ನಗರದ ಜಿಲ್ಲಾ ಪಂಚಾಯ್ತಿ ಭವನದ ಮಿನಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜ.26ರ ಬೆಳಗ್ಗೆ 11 ಗಂಟೆಗೆ ಪ್ರದರ್ಶನ ಉದ್ಘಾಟನೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಾಕುಮಾರ್‌ ಮತ್ತು ತೋಟಗಾರಿಕೆ ಸಚಿವ ಎಂ.ಸಿ.ಮನಗುಳಿ ತೋಟಗಾರಿಕೆ ತಾಂತ್ರಿಕ ಕ್ಯಾಲೆಂಡರ್‌ ಬಿಡುಗಡೆ ಮಾಡಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮನಗರ ಕ್ಷೇತ್ರದ ಶಾಸಕಿ ಅನಿತಾ ವಹಿಸಲಿದ್ದಾರೆ. ಸುಗ್ಗಿ ಉತ್ಸವವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ಎನ್‌.ನಾಗರಾಜು ಉದ್ಘಾಟಿಸಲಿದ್ದಾರೆ. ಇಲಾಖೆ ಮಳಿಗೆಗಳನ್ನು ಸಂಸದ ಡಿ.ಕೆ.ಸುರೇಶ್‌ ಉದ್ಘಾಟಿಸುವರು. ಜಿಲ್ಲೆಯ ಶಾಸಕರು, ಎಂಎಲ್‌ಸಿ, ಜಿಪಂ, ತಾಪಂ ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಜಯ್‌ ಸೇs್, ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು, ಜಿಲ್ಲೆಯ ಅಧಿಕಾರಿಗಳು, ಜಿಲ್ಲಾ ತೋಟಗಾರಿಕೆ ಸಂಘದ ನಿರ್ದೇಶಕರು ಭಾಗವಹಿಸಲಿದ್ದಾರೆ. ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ಬದಲಾವಣೆಯ ಬಗ್ಗೆ ಆಸಕ್ತಿವಹಿಸಿ, ಸಾಧನೆ ತೋರಿದ ಪ್ರಗತಿ ಪರ ರೈತರಿಂದ ಮಾಹಿತಿ ಮತ್ತು ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಉಪನಿರ್ದೇಶಕ ಜೆ.ಗುಣವಂತ, ಜಿಪಂ ಉಪಕಾರ್ಯದರ್ಶಿ ಉಮೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next