Advertisement

ನೆರೆ; ರೈತನಿಗೆ ಮತ್ತೂಂದು ಬರೆ

11:39 AM Aug 13, 2019 | Team Udayavani |

ಬಾದಾಮಿ: ಐತಿಹಾಸಿಕ ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲು ವರುಣನ ಆರ್ಭಟಕ್ಕೆ ನಲುಗಿದೆ. ಪಟ್ಟದಕಲ್ಲಿನ ಎರಡು ಕಡೆಯ ಸೇತುವೆ ಮಲಪ್ರಭಾ ನದಿಯ ಹಿನ್ನೀರಿನಿಂದ ಮುಳುಗಡೆಯಾಗಿ ಗ್ರಾಮಕ್ಕೆ ಗ್ರಾಮವೇ ನಡುಗಡ್ಡೆಯಾಗಿದೆ.

Advertisement

ಇಲ್ಲಿನ ಸ್ಮಾರಕಗಳು, ದೇವಾಲಯಗಳಿಗೆ ನೀರು ನುಗ್ಗಿದ್ದು ಅಲ್ಲಿನ ನಿರಾಶ್ರಿತರಿಗೆ ಸೂರಿಲ್ಲದೆ ವಿವಿಧ ಸ್ಥಳಗಳಲ್ಲಿ ಬಿಡಾರ ಹೂಡಿ ಕಣ್ಣೀರಿಡುತ್ತಾ ಆಸರೆಗೆ ಹಂಬಲಿಸುತ್ತಿದ್ದಾರೆ. ಜನರು ಸಂಕಷ್ಟಕ್ಕೆ ಸಿಲುಕಿ, ಪ್ರಕೃತಿ ತಾಯಿ ಇನ್ನಾದರೂ ಕೃಪೆ ತೋರು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಬೇಡಿಕೊಳ್ಳುತ್ತಿದ್ದಾರೆ.

ದಾನಿಗಳಿಂದ ಜಾನುವಾರುಗಳಿಗೆ ಮೇವು: ವಿವಿಧ ಗ್ರಾಮದ ರೈತರು ತಮ್ಮ ಸ್ವಂತ ಬೆಳೆಯನ್ನು ಕಟಾವು ಮಾಡಿ ಟ್ರಾಕ್ಟರ್‌ ಮೂಲಕ ನಿರಾಶ್ರಿತರ ಬಿಡಾರದಲ್ಲಿರುವ ಜಾನುವಾರುಗಳಿಗೆ ಮೇವನ್ನು ತಂದು ನೀಡುತ್ತಿದ್ದಾರೆ. ಇದರಿಂದ ರೈತರ ದನಗಳಿಗೆ ಆಹಾರ ದೊರಕುತ್ತಿದೆ. ಇದರಿಂದ ಜಾನುವಾರುಗಳಿಗೆ ಆಸರೆಯಾಗಿದೆ. ಸರಕಾರದಿಂದಲೇ ಹೆಚ್ಚಿನ ಮೇವು ವಿತರಣೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಜಲಪ್ರವಾಹದಿಂದ ನೆಲಕಚ್ಚಿದ ಫಸಲು: ನವಿಲುತೀರ್ಥದಿಂದ ಮಲಪ್ರಭಾ ನದಿಗೆ ನೀರು ಬಿಟ್ಟಿರುವ ಕಾರಣ ನದಿಯ ದಂಡೆಯ ಮೇಲಿರುವ ಗ್ರಾಮಗಳು ನೀರಿನಲ್ಲಿ ಮುಳುಗಿದೆ. ಗ್ರಾಮಸ್ಥರು ವಿಧಿಯಿಲ್ಲದೆ ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ. ಬೆಳೆದ ಫಸಲು ಕೈಗೊಡುವ ಮುನ್ನವೇ ಪ್ರವಾಹದಿಂದ ನೆಲಕಚ್ಚಿ ರೈತ ತಲೆ ಮೇಲೆ ಕೈಹೊತ್ತು ಕೂಡುವಂತಾಗಿದೆ. ಒಂದು ಕಡೆ ಆಶ್ರಯವಿಲ್ಲ, ಇನ್ನೊಂದು ಕಡೆ ಬೆಳೆದ ಬೆಳೆಯಿಲ್ಲ. ಚಿಂತಾಕ್ರಾಂತರಾಗಿರುವ ರೈತರು ಅಕ್ಷರಶ ಬೀದಿಗೆ ಬಿದ್ದಿದ್ದಾರೆ. ನೀರಿನಿಂದ ಹಾಳಾದ ಫಸಲಿಗೆ ಸರಕಾರದಿಂದ ನೆರವು ನೀಡಬೇಕು ಎಂದು ರೈತರು ಮನವಿ ಮಾಡಿದರು.

ನಂದಿಕೇಶ್ವರ ಪ್ಲಾಟ್‌ನಲ್ಲಿಯೆ ತಾತ್ಕಾಲಿಕ ಆಸ್ಪತ್ರೆ ಟೆಂಟ್: ನಿರಾಶ್ರಿತರು ಗ್ರಾಮಗಳನ್ನು ಬಿಟ್ಟು ಸರ್ಕಾರ ನೀಡಿರುವ ಸುಮಾರು 300 ಆಶ್ರಯ ಮನೆಗಳಲ್ಲಿ ಸ್ಥಳಾಂತಗೊಂಡಿದ್ದಾರೆ. ಇವರ ಯೋಗ ಕ್ಷೇಮ, ಆರೋಗ್ಯದ ಹಿತದೃಷ್ಟಿಯಿಂದ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳು ನಂದಿಕೇಶ್ವರ ಪ್ಲಾಟ್‌ನಲ್ಲಿಯೆ ತಾತ್ಕಾಲಿಕ ಆಸ್ಪತ್ರೆ ಟೆಂಟ್ ವ್ಯವಸ್ಥೆ ಮಾಡಿಸಿದ್ದು ದಿನಂಪ್ರತಿ 150 ರಿಂದ 170 ವರೆಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next