Advertisement

ನಾಡದೊರೆ ನೆರವಿನ ನಿರೀಕ್ಷೆಯಲ್ಲಿ ಸಂತ್ರಸ್ತರು

11:32 AM Aug 31, 2019 | Suhan S |

ಹಾವೇರಿ: ಪ್ರಸಕ್ತ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆ. 31ರಂದು ಆಗಮಿಸುತ್ತಿರುವ ಬಿ.ಎಸ್‌. ಯಡಿಯೂರಪ್ಪ ಭೇಟಿಯಿಂದ ಜಿಲ್ಲೆಯ ನೆರೆ ನಿರ್ವಹಣೆಗೆ ಹೆಚ್ಚಿನ ಅನುದಾನ, ಹೆಚ್ಚಿನ ಸೌಲಭ್ಯ ಸಿಗಬಹುದೇ ಎಂಬ ನಿರೀಕ್ಷೆ ಗರಿಗೆದರಿದೆ.

Advertisement

ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ನೂರಾರು ಕೋಟಿ ರೂ.ಗಳಷ್ಟು ಆಸ್ತಿಪಾಸ್ತಿ ಹಾನಿಯಾಗಿದ್ದು, ನಷ್ಟ ಪರಿಹಾರ ಒದಗಿಸುವುದು, ಮೂಲಸೌಲಭ್ಯ ಕಲ್ಪಿಸುವುದು ಮತ್ತು ಮನೆ ಕಳೆದುಕೊಂಡವರಿಗೆ ಸೂರಿನ ವ್ಯವಸ್ಥೆ ಕಲ್ಪಿಸುವುದೇ ದೊಡ್ಡ ಸವಾಲಾಗಿದೆ. ಸರ್ಕಾರ ಪ್ರಥಮ ಹಂತವಾಗಿ ಜಿಲ್ಲೆಗೆ 20 ಕೋಟಿ ರೂ. ಬಿಡುಗಡೆಯಾಗಿದ್ದು, ನೆರೆಪೀಡಿತ ಗ್ರಾಮಗಳು ಇನ್ನಷ್ಟು ಅನುದಾನದ ನಿರೀಕ್ಷೆಯಲ್ಲಿವೆ.

ಜಿಲ್ಲೆಯಲ್ಲಿ ಹರಿದ ತುಂಗಭದ್ರಾ, ವರದಾ ನದಿಗಳ ಭೀಕರ ಪ್ರವಾಹದ ಪರಿಣಾಮ ಹಲವು ಗ್ರಾಮಗಳ ಜನರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ನದಿ ದಂಡೆಯಲ್ಲಿರುವ ಗ್ರಾಮಗಳನ್ನು ಸ್ಥಳಾಂತರಿಸಿ ನವಗ್ರಾಮ ನಿರ್ಮಿಸುವಂತೆ ನೆರೆ ಸಂತ್ರಸ್ತರಿಂದ ಒತ್ತಾಯ ಕೇಳಿಬರುತ್ತಿದೆ. ನೆರೆ ಹಾವಳಿಯಿಂದ ಹಾವೇರಿ, ಹಾನಗಲ್ಲ, ಸವಣೂರು ತಾಲೂಕಿನ ವರದಾ ಹಾಗೂ ಧರ್ಮಾ ನದಿ ದಂಡೆಯ ಬಹುತೇಕ ಗ್ರಾಮಗಳು ಜಲಾವೃತದಿಂದ ಸಂಪರ್ಕ ಕಳೆದುಕೊಂಡು ನಡುಗಡ್ಡೆಗಳಾಗಿದ್ದವು. ಇಲ್ಲಿ ಅಪಾರ ಪ್ರಮಾಣದಲ್ಲಿ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಪ್ರವಾಹದ ರೌದ್ರ ನರ್ತನದಿಂದ ಮನೆಗಳು, ರಸ್ತೆ, ಶಾಲೆ, ದೇವಸ್ಥಾನ ಕುಸಿದು ಪ್ರವಾಹ ಪೀಡಿತ ಗ್ರಾಮಗಳು ಪರಿಹಾರ ಕಾರ್ಯದ ನಿರೀಕ್ಷೆಯಲ್ಲಿವೆ. ಈ ಕಾರಣದಿಂದಾಗಿ ಮುಖ್ಯಮಂತ್ರಿಯವರ ಈ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಅಪಾರ ಹಾನಿ: ಅತಿವೃಷ್ಟಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ 22 ಗ್ರಾಮಗಳು ಜಲಾವೃತಗೊಂಡಿದ್ದವು. ರೈತನೊಬ್ಬ ನದಿಯಲ್ಲಿ ಕೊಚ್ಚಿ ಹೋದರೆ, 134 ಜಾನುವಾರುಗಳ ಜೀವ ಹಾನಿಯಾಗಿದೆ. ಒಟ್ಟು 15387 ಮನೆಗಳು ಹಾನಿಯಾಗಿವೆ. 123065 ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗಿ ಅಂದಾಜು 75092 ಲಕ್ಷ ರೂ.ಗಳಷ್ಟು ನಷ್ಟವಾಗಿದೆ. 13039 ಹೆಕ್ಟೇರ್‌ ಮಣ್ಣು ಹಾನಿಯಾಗಿದ್ದು 3592ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ. 13649 ಹೆಕ್ಟೇರ್‌ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಯಾಗಿದ್ದು 1719 ಲಕ್ಷ ರೂ.ಗಷ್ಟು ನಷ್ಟವಾಗಿದೆ. 228 ಹೆಕ್ಟೇರ್‌ ತೋಟಗಾರಿಕೆ ಕೃಷಿ ಭೂಮಿಗೆ ಹಾನಿಯಾಗಿದ್ದು ಅಂದಾಜು 45.53ಲಕ್ಷ ರೂ.ಗಳಷ್ಟು ನಷ್ಟವಾಗಿದೆ.

ಇನ್ನು ಮೂಲಭೂತ ಸೌಕರ್ಯಗಳಿಗೆ ಸಂಬಂಸಿ 39285 ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಇದರಲ್ಲಿ 1444 ಪ್ರಾಥಮಿಕ ಶಾಲಾ ಕೊಠಡಿಗಳು, 275 ಅಂಗನವಾಡಿ ಕಟ್ಟಡಗಳು, 49 ಕಿಮೀ ರಾಜ್ಯ ಹೆದ್ದಾರಿ ರಸ್ತೆ, 466ಕಿಮೀ ಮುಖ್ಯ ಜಿಲ್ಲಾ ರಸ್ತೆಗಳು, 65 ಸೇತುವೆಗಳು, 32 ಸರ್ಕಾರಿ ಕಟ್ಟಡಗಳು, 875 ಕಿಮೀ ಗ್ರಾಮೀಣ ರಸ್ತೆಗಳು, 69 ಸಣ್ಣ ಸೇತುವೆಗಳು, 150 ಕುಡಿಯುವ ನೀರಿನ ಯೋಜನೆಗಳು, 39 ಕೆರೆ ಮತ್ತು ಕುಡಿಯುವ ನೀರಿನ ಮೂಲಸೌಲಭ್ಯಗಳು, 24 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 111 ಸಣ್ಣ ನೀರಾವರಿ ಯೋಜನೆಗಳು, 139 ಬೃಹತ್‌ ನೀರಾವರಿ ಯೋಜನೆಗಳು, 47 ಖಾಸಗಿ ಕಟ್ಟಡಗಳು ಹಾಗೂ 375 ಲಕ್ಷ ರೂ.ಗಳ ವಿದ್ಯುತ್‌ ಉಪಕರಣಗಳು ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಯಾಗಿದೆ. ಹೀಗೆ ನೆರೆ ಹಾಗೂ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದ್ದು ಮುಖ್ಯ ಮಂತ್ರಿಯವರ ಭೇಟಿಯಿಂದ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಜಿಲ್ಲೆಗೆ ಸಿಗಬಹುದು ಎಂದು ಜನತೆ ನಿರೀಕ್ಷಿಸಿದೆ.

Advertisement

ಮನೆಗಾಗಿ ಒತ್ತಡ: ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಬರೋಬರಿ 15387 ಮನೆಗಳಿಗೆ ಹಾನಿಯಾಗಿದ್ದು, ಎಲ್ಲ ನೆರೆಪೀಡಿತ ಗ್ರಾಮಗಳ ಜನರು ಮೊದಲ ಆದ್ಯತೆಯಾಗಿ ಮನೆಯ ಬೇಡಿಕೆ ಮುಂದಿಡುತ್ತಿದ್ದಾರೆ. ಮನೆಗಾಗಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನು ಕೆಲವು ಕಡೆ ಶಾಶ್ವತ ಪರಿಹಾರಕ್ಕಾಗಿ ನವಗ್ರಾಮ ನಿರ್ಮಾಣದ ಬೇಡಿಕೆ ಇಡುತ್ತಿದ್ದಾರೆ.

ಅಧಿಕಾರದಲ್ಲಿದ್ದವರು ನೆರೆ ಹಾಗೂ ಅತಿವೃಷ್ಟಿಯ ಪರಿಣಾಮವನ್ನು ಸಮರ್ಥವಾಗಿ ಎದುರಿಸಿ, ಜನರನ್ನು ಸಂತೈಸಲೇಬೇಕಾಗಿದ್ದು ಇದಕ್ಕಾಗಿ ನೂರಾರು ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. ನೂತನ ಸಚಿವ ಬಸವರಾಜ ಬೊಮ್ಮಾಯಿಯವರು ಜಿಲ್ಲೆಯಲ್ಲಿ ಆಗಿರುವ ನೆರೆ ನಷ್ಟವನ್ನು ಮುಖ್ಯಮಂತ್ರಿಯವರಿಗೆ ಯಾವ ರೀತಿ ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಅನುದಾನಗಿಟ್ಟಿಸಿಕೊಳ್ಳುತ್ತಾರೆ, ಅದಕ್ಕೆ ಮುಖ್ಯಮಂತ್ರಿಯವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಸಹ ಕುತೂಹಲ ಕೆರಳಿಸಿದೆ.

 

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next