Advertisement

ತಾಜಾ ಮೀನು ರಫ್ತಿಗೆ ವಿಮಾನದ್ದೇ ತೊಡಕು!

01:52 AM Oct 28, 2021 | Team Udayavani |

ಮಂಗಳೂರು: ಕರಾವಳಿಯಲ್ಲಿ ಸದ್ಯ ಭರಪೂರ ಮೀನುಗಾರಿಕೆ ನಡೆಯುತ್ತಿದ್ದು ವಿದೇಶದಲ್ಲಿಯೂ ಇಲ್ಲಿನ ಮೀನಿಗೆ ಬಹು ಬೇಡಿಕೆ ಇದೆ. ಆದರೆ ತಾಜಾ ಮೀನನ್ನು ವಿದೇಶಗಳಿಗೆ ರಫ್ತು ಮಾಡುವಲ್ಲಿ ಎದುರಾಗಿರುವ ತೊಡಕು ಇನ್ನೂ ಇತ್ಯರ್ಥವಾಗಿಲ್ಲ.

Advertisement

ಮೀನನ್ನು ಹಿಡಿದ ದಿನದಂದೇ ಅಥವಾ ಒಂದೆರಡು ದಿನ ದೊಳಗೆ ಸಂಸ್ಕರಿಸಿ ಗಲ್ಫ್ ರಾಷ್ಟ್ರಗಳಿಗೆ ಕಳುಹಿಸಲು ಬಹು ಬೇಡಿಕೆಯಿದೆ. ಆದರೆ ಮಂಗಳೂರಿನಿಂದ ವಿಮಾನದ ಮೂಲಕ ಸಾಗಾಟಕ್ಕೆ ಅವಕಾಶ ಇಲ್ಲದ್ದರಿಂದ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದ ವಾರ್ಷಿಕ 69 ಸಾವಿರ ಮೆಟ್ರಿಕ್‌ ಟನ್‌ ಮೀನು ರಫ್ತಾಗುತ್ತದೆ. ಈ ಪೈಕಿ ಶೀತಲೀಕೃತ ವ್ಯವಸ್ಥೆಯ ಮೀನು ರಫ¤ನ್ನು ನವಮಂಗಳೂರು ಬಂದರಿನಿಂದ ಹಡಗಿನ ಮೂಲಕ ಮಾಡಲಾಗುತ್ತದೆ. ಶೀತಲೀಕೃತ ಮೀನನ್ನು 9 ತಿಂಗಳ ವರೆಗೂ ಕಾಪಿಡಲು ಸಾಧ್ಯ. ಆದರೆ ತಾಜಾ ಮೀನನ್ನು ಕನಿಷ್ಠ 3-4 ದಿನಗಳ ವರೆಗೆ ಮಾತ್ರ ಇಡಬಹುದು. ಆದ್ದರಿಂದ ವಿಮಾನದಲ್ಲೇ ರಫ್ತು ಮಾಡಬೇಕಾಗುತ್ತದೆ. ಆದರೆ ಮಂಗಳೂರಿನಲ್ಲಿ ಈ ವ್ಯವಸ್ಥೆ ಇಲ್ಲದ್ದರಿಂದ ತಾಜಾ ಮೀನನ್ನು ಬೆಂಗಳೂರು, ಗೋವಾ ಅಥವಾ ಕೇರಳದ ಕೋಯಿಕ್ಕೋಡ್‌, ತಿರುವನಂತಪುರ ವರೆಗೆ ರಸ್ತೆ ಮೂಲಕ ವಾಹನದಲ್ಲಿ ಸಾಗಿಸಿ ಅಲ್ಲಿಂದ ವಿಮಾನದಲ್ಲಿ ಹೊರದೇಶಕ್ಕೆ ಕಳುಹಿಸಲಾಗುತ್ತಿದೆ. ಇದು ವೆಚ್ಚದಾಯಕ ಹಾಗೂ ಸಮಯ ಕೂಡ ಅಧಿಕ ತಗಲುವುದರಿಂದ ತಾಜಾ ಮೀನು ರಫ್ತು ಸಮಸ್ಯೆಗೆ ಪರಿಹಾರವೇ ದೊರಕಿಲ್ಲ.

ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಿಂದ ಏರ್‌ ಇಂಡಿಯಾ ವಿಮಾನದ ಮೂಲಕ ತಾಜಾ ಮೀನು ರಫ್ತಾಗುತ್ತಿತ್ತು. ಆದರೆ ಪ್ಯಾಕಿಂಗ್‌ನಲ್ಲಿ ಸೋರಿಕೆ (ಲೀಕೇಜ್‌) ಆಗುತ್ತಿದೆ ಎಂಬ ಕಾರಣ ನೀಡಿ ತಾಜಾ ಮೀನು ರಫ್ತು ವಹಿವಾಟನ್ನು ವಿಮಾನ ಸಂಸ್ಥೆ ಸ್ಥಗಿತ ಮಾಡಿತ್ತು. ಇನ್ನೊಂದು ಖಾಸಗಿ ವಿಮಾನ ಸಂಸ್ಥೆಯೂ ಇದೇ ನೆಪದಿಂದ ಸಾಗಾಟ ಕೈಬಿಟ್ಟಿತು. ಹೊರಗಿನ ವಿಮಾನ ನಿಲ್ದಾಣದ ಮೂಲಕ ಸಾಗಾಟ ಸಾಧ್ಯವಾಗುತ್ತದೆ ಎಂದಾದರೆ ಮಂಗಳೂರಿನ ವಿಮಾನಕ್ಕೆ ಮಾತ್ರ “ಲೀಕೇಜ್‌’ ಸಮಸ್ಯೆಯೇ? ಎಂಬುದು ರಫ್ತುದಾರರ ಪ್ರಶ್ನೆ.

ಇದನ್ನೂ ಓದಿ:5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

Advertisement

ಈ ಬಗ್ಗೆ ನಿಲ್ದಾಣದ ಅಧಿಕಾರಿಗಳನ್ನು ಕೇಳಿದರೆ, “ಮೀನು ರಫ್ತಿಗೆ ಸಹಕರಿಸಲು ನಾವು ಸಿದ್ಧ; ಆದರೆ ಏರ್‌ಲೈನ್ಸ್‌ನವರು ತೀರ್ಮಾನ ಕೈಗೊಳ್ಳಬೇಕು’ ಎನ್ನುತ್ತಾರೆ. ಇದೇ ವೇಳೆ ಮೀನು ರಫ್ತುದಾರರು, “ಅಂತಾರಾಷ್ಟ್ರೀಯ ದರ್ಜೆಯಲ್ಲಿ ಮೀನು ಪ್ಯಾಕಿಂಗ್‌ ಮಾಡುತ್ತೇವೆ. ಆದರೆ ಒಮ್ಮೆ ಆದ ಸಣ್ಣ ಸಂಗತಿಯನ್ನೇ ನೆಪವಾಗಿಸಿ ಸಮಸ್ಯೆ ತಂದಿರುವುದು ಸರಿಯಲ್ಲ. ಮಂಗಳೂರಿನಲ್ಲಿ ಏರ್‌ಕಾರ್ಗೊ ಆರಂಭವಾದರೆ ಹೆಚ್ಚು ಲಾಭವಾಗಬಹುದು’ ಎನ್ನುತ್ತಾರೆ.

ಸಾಗಾಟ ವೆಚ್ಚ ಶೇ.30ರಷ್ಟು ಏರಿಕೆ!
ಪ್ರಯಾಣಿಕರ ವಿಮಾನದಲ್ಲಿ 3.5 ಟನ್‌ ಸರಕು ಕೊಂಡೊಯ್ಯಲಾಗುತ್ತದೆ. ಇದರಲ್ಲಿ 4 ವರ್ಷದ ಹಿಂದೆ ಸುಮಾರು 1 ಟನ್‌ನಷ್ಟು ವಿವಿಧ ಬಗೆಯಮೀನು ವಿದೇಶಕ್ಕೆ ವಿಮಾನದಲ್ಲಿ ನಿತ್ಯ ತೆರಳುತ್ತಿತ್ತು.

ವಿದೇಶೀ ಮಾರುಕಟ್ಟೆಗೆ ಅನುಗುಣವಾಗಿ ಮೀನಿನ ಮೌಲ್ಯ ನಿಗದಿಯಾಗುತ್ತಿತ್ತು. ಆದರೆ ಈಗ ತಾಜಾ ಮೀನನ್ನು ಬೆಂಗಳೂರು, ಗೋವಾ ಅಥವಾ ಕೋಯಿಕ್ಕೋಡ್‌, ತಿರುವನಂತಪುರಕ್ಕೆ ವಾಹನದಲ್ಲಿ ಕೊಂಡೊಯ್ದು ವಿಮಾನದಲ್ಲಿ ಕಳುಹಿಸಬೇಕಾಗಿದೆ. ಇದರಿಂದಾಗಿ ಪ್ರತೀ ಲೋಡ್‌ಗೆ ಡೀಸೆಲ್‌, ಕಾರ್ಮಿಕರುಸೇರಿದಂತೆ ಸಾವಿರಾರು ರೂ. ವೆಚ್ಚವಾಗುತ್ತಿದೆ. ಈ ಹಿಂದೆ ಮೀನು ಸಾಗಾಟಕ್ಕೆ ಆಗುತ್ತಿದ್ದ ವೆಚ್ಚಕ್ಕಿಂತ ಶೇ. 20ರಿಂದ ಶೇ. 30ರಷ್ಟು ಹೆಚ್ಚುವರಿ ವೆಚ್ಚದ ಹೊರೆ ಎದುರಾಗಿದೆ!

ಚೀನದಲ್ಲಿ “ನಿಷೇಧ’ ನಿಯಮ!
ಕೊರೊನಾದಿಂದಾಗಿ ಜಗತ್ತಿನಾದ್ಯಂತ ಸುದ್ದಿಯಾದ ಚೀನ ಈಗ ಕರ್ನಾಟಕ ಕರಾವಳಿಯ ಮೀನು ವಹಿವಾಟಿನ ಮೇಲೆ ನಿಯಮಾವಳಿಯ ಬರೆ ಎಳೆದಿದೆ. ಕೊರೊನಾ ನೆಪ ಮುಂದಿಟ್ಟು ಕರ್ನಾಟಕದಿಂದ ರಫ್ತಾಗುವ ಪ್ರತೀ ಹಡಗಿನ ಕಂಟೈನರ್‌ ಮೀನನ್ನು ಕೂಡ ಬಹು ಆಯಾಮಗಳಿಂದ ತಪಾಸಣೆ ನಡೆಸಲಾಗುತ್ತಿದೆ. ಯಾವುದಾದರೂ ಕಂಟೈನರ್‌ನಲ್ಲಿರುವ ವ್ಯಕ್ತಿಗೆ ಕೊರೊನಾ ಪಾಸಿಟಿವ್‌ ಇದ್ದರೆ ಆ ಕಂಟೈನರನ್ನು ಮರಳಿಸಲಾಗುತ್ತಿದೆ. ಜತೆಗೆ ಆ ಕಂಪೆನಿಯಿಂದ ಮೀನು ವ್ಯಾಪಾರವನ್ನೇ ನಿಷೇಧಿಸುವ ನಿಯಮವನ್ನು ಚೀನ ರೂಪಿಸಿದೆ. ರಾಜ್ಯದ 5 ಕಂಪೆನಿಯವರಿಗೆ ಈ ಬಿಸಿ ತಟ್ಟಿದೆ.

ರಾಜ್ಯದಿಂದ ಪ್ರತೀ ವರ್ಷ ಸುಮಾರು 1,000 ಕಂಟೈನರ್‌ ಮೂಲಕ ಚೀನಕ್ಕೆ ಮೀನು ರಫ್ತಾಗುತ್ತದೆ. ಒಂದು ಕಂಟೈನರ್‌ನಲ್ಲಿ ಸುಮಾರು 25 ಟನ್‌ ಮೀನುಗಳಿರುತ್ತವೆ.

ಮಾಹಿತಿ ಪಡೆದು ಕ್ರಮ
ಕರಾವಳಿಯ ತಾಜಾ ಮೀನನ್ನು ಮಂಗಳೂರು ವಿಮಾನ ನಿಲ್ದಾಣದ ಮೂಲಕ ರಫ್ತು ಮಾಡಲು ಎದುರಾಗಿರುವ ತೊಡಕಿನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ವಾರದೊಳಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು.
– ಎಸ್‌. ಅಂಗಾರ,
ಮೀನುಗಾರಿಕೆ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next