Advertisement
ಬಿಜೆಪಿ ಬಳಿಯಲ್ಲಿ ಸರಕಾರ ರಚಿಸುವಷ್ಟು ಅಗತ್ಯ ಶಾಸಕರ ಬಲ ಇಲ್ಲ ಎಂಬುದನ್ನು ಸಾಬೀತುಪಡಿಸಲು ಹಾಗೂ ನಮ್ಮ ಮೈತ್ರಿ ಅಬಾಧಿತವಾಗಿದೆ ಎಂಬುದನ್ನು ತೋರಿಸಲು ಇಂದು ಸಂಜೆ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್.ಸಿ.ಪಿ. ಪಕ್ಷಗಳು ಇಲ್ಲಿನ ಪಂಚತಾರಾ ಹೊಟೇಲ್ ಗ್ರ್ಯಾಂಡ್ ಹೈಯಾತ್ ನಲ್ಲಿ ತಮ್ಮ ಒಟ್ಟು 162 ಶಾಸಕರನ್ನು ಮಾಧ್ಯಮಗಳ ಮುಂದೆ ಹಾಜರುಪಡಿಸುವ ಮೂಲಕ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಅಗತ್ಯವಿರುವ ಬಹುಮತ ತಮ್ಮ ಬಳಿಯಲ್ಲೇ ಇದೆ ಎಂಬುದನ್ನು ಸಾರಿ ಹೇಳಿವೆ.‘ನಾವು 162 ಮಂದಿ’ ಎಂಬ ಪೋಸ್ಟರ್ ಗಳು ಶಾಸಕರ ಬಲಪ್ರದರ್ಶನಕ್ಕೆ ಆಯ್ದುಕೊಳ್ಳಲಾಗಿದ್ದ ಕೋಣೆಯಲ್ಲಿ ರಾರಾಜಿಸುತ್ತಿತ್ತು. ಮತ್ತು ಈ ಸಭೆಯಲ್ಲಿ ಚುನಾವಣೋತ್ತರ ಮೈತ್ರಿ ನಡೆಸಿದ ಮೂರೂ ಪಕ್ಷಗಳ ಶಾಸಕರು ತಾವು ತಮ್ಮ ತಮ್ಮ ಪಕ್ಷಗಳಿಗೇ ನಿಷ್ಠರಾಗಿರುತ್ತೇವೆ ಎಂದು ಪ್ರಮಾಣ ಮಾಡಿದರು.