Advertisement

ಬೇಡಿಕೆಯಷ್ಟು ಸಿಗುತ್ತಿಲ್ಲ ಮೀನು; ದರವೂ ಏರಿಕೆ

10:00 PM May 16, 2020 | Sriram |

ಕುಂದಾಪುರ: ನಾಡದೋಣಿಯೊಂದಿಗೆ ಈಗ ಗಂಗೊಳ್ಳಿ, ಮಲ್ಪೆ, ಕೋಡಿ ಕನ್ಯಾಣದಲ್ಲಿ ಸೀಮಿತ ಸಂಖ್ಯೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದರೂ ಬೇಡಿಕೆಯಷ್ಟು ಮೀನು ಸಿಗದ ಹಿನ್ನೆಲೆಯಲ್ಲಿ ಮತ್ಸ್ಯ ಪ್ರಿಯರಿಗೆ ಮೀನು ಕೈಗೆಟುಕದಂತಾಗಿದೆ. ಲಾಕ್‌ಡೌನ್‌ನಿಂದಾಗಿ ಮೀನಿಗೆ ಭಾರೀ ಬೇಡಿಕೆಯಿದ್ದು, ಆದರೆ ದರ ಏರಿಕೆ ಮಾತ್ರ ದುಬಾರಿಯಾಗಿ ಪರಿಣಮಿಸಿದೆ.

Advertisement

ಪರ್ಸಿನ್‌, ಮೀನುಗಾರಿಕಾ ಬೋಟ್‌ಗಳು ಮೀನುಗಾರಿಕೆಗೆ ತೆರಳಿದರೂ ಕೂಡ ಸಮುದ್ರದಲ್ಲಿ ಉತ್ತಮ ಮೀನುಗಳು ಸಿಗದ ಹಿನ್ನೆಲೆಯಲ್ಲಿ ಸಿಕ್ಕ ಅಲ್ಪ ಮೀನುಗಳಿಗೆ ಭಾರೀ ಬೇಡಿಕೆಯಿದ್ದು, ದರವೂ ದುಬಾರಿಯಾಗಿದೆ. ಗಂಗೊಳ್ಳಿಯಲ್ಲಿ ಶನಿವಾರ ಮೀನುಗಾರಿಕೆಗೆ ತೆರಳಿದ ಕೆಲ ಪರ್ಸಿನ್‌ ಬೋಟುಗಳು ಬರಿಗೈಯಲ್ಲಿ ವಾಪಸು ಬಂದಿವೆ.

ಲಾಕ್‌ಡೌನ್‌ನಿಂದಾಗಿ ಬಹುತೇಕ ಮಂದಿ ಊರಿಗೆ ಬಂದಿದ್ದು, ಮನೆಗಳಲ್ಲಿ ಇರುವ ಜನಸಂಖ್ಯೆಯೂ ಜಾಸ್ತಿಯಿದೆ. ಹೀಗಾಗಿ ಎಲ್ಲೆಡೆ ಮೀನಿನ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಹಾಗಾಗಿ ಬೇಡಿಕೆಯಷ್ಟು ಮೀನು ಸಿಗದ ಕಾರಣ ಬೆಲೆ ಏರಿಕೆಯಾಗುತ್ತಿದೆ ಎನ್ನುತ್ತಾರೆ ಮೀನುಗಾರರು.

ಹೇಗಿದೆ ದರ?
ಬೋಟ್‌ಗಳಿಗೆ ಹೆಚ್ಚಾಗಿ ಗೇದರ್‌ (ಟ್ಯೂನಾ) ಮೀನು ಮಾತ್ರ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ಕೆ.ಜಿ.ಗೆ 130ರಿಂದ 140 ರೂ.ವರೆಗೆ ಮಾರಾಟವಾಗುತ್ತಿದೆ. ಬಂಗುಡೆ ಅಲ್ಪ ಸ್ವಲ್ಪ ಸಿಗುತ್ತಿದ್ದು, 230 -250 ರೂ. ವರೆಗೆ ಮಾರಾಟವಾಗುತ್ತಿದೆ. ಬೈಗೆ (ಬೂತಾಯಿ), ಅಂಜಲ್‌ ಮೀನು ಸಿಗುತ್ತಿಲ್ಲ. ಕೊಡ್ಡಾಯಿ ಕೆ.ಜಿ.ಗೆ 150ರಿಂದ 170 ರೂ.ವರೆಗೆ ಮಾರಾಟವಾಗುತ್ತಿದೆ. ಅಡವು ಮೀನಿಗೆ ಕೆ.ಜಿ.ಗೆ 250 ರೂ. ಇದೆ. ಸಿಗಡಿಗೆ ಬೇರೆ ಬೇರೆ ದರಗಳಿದ್ದು 250 ರಿಂದ ಆರಂಭಗೊಂಡು 450-500 ರೂ.ವರೆಗೂ ಮಾರಾಟವಾಗುತ್ತಿದೆ. ಸಾಮಾನ್ಯ ಏಡಿಗೆ ಕೆ.ಜಿ.ಗೆ 50-60 ರೂ. ಇದ್ದರೆ, ಹಸುರು ಏಡಿಗೆ 250 ರೂ. ಇದೆ.

Advertisement

Udayavani is now on Telegram. Click here to join our channel and stay updated with the latest news.

Next