Advertisement

ಮೊದಲ ಸಂಬಳದ ಸಂಭ್ರಮ

06:00 AM Nov 16, 2018 | Team Udayavani |

ಇತ್ತೀಚೆಗಿನ ಪ್ರಯಾಣದ ಹೊತ್ತಿನಲ್ಲಿ ಆಪ್ತ ಗೆಳತಿಯೊಬ್ಬಳು ಸಿಕ್ಕಿಬಿಟ್ಟಳು. ಮುಖದಲ್ಲಿ ಹೊಸ ಚೈತನ್ಯದ ಹುರುಪು ಹೊತ್ತುಕೊಂಡು ಬಂದ ಆಕೆ ಪಕ್ಕದಲ್ಲೇ ಕೂತುಬಿಟ್ಟಳು. ನಾವು ಜೊತೆಗೆ ಕಳೆದ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತ ಮಾತಿಗಿಳಿದೆವು. ಮಾತನಾಡುತ್ತ ಅವಳು ಹಂಚಿಕೊಂಡ ಮೊದಲ ಸಂಬಳದ ಸಂಭ್ರಮ ನನ್ನನ್ನು ಈ ಲೇಖನಕ್ಕೆ ಲೇಖನಿ ಹಿಡಿಯುವಂತೆ ಮಾಡಿತು. ಮಹಿಳೆಯರ ಕಲ್ಪನಾಲೋಕದೊಳಗೆ ನಾಳಿನ ಸುಂದರ ಬದುಕಿನ ಕನಸುಗಳು ವಿಹರಿಸುತ್ತಿರುತ್ತದೆ. ಇಂತಹ ಭವಿಷ್ಯದ ಕನಸೇ ಇಂದಿನ ನಮ್ಮ ಕೆಲಸಗಳಿಗೆ ಸ್ಫೂರ್ತಿಯಾಗುತ್ತದೆ. ಹೌದು, ನನ್ನ ಗೆಳತಿ ಈ ರೀತಿ ಸ್ವಾಭಿಮಾನಿಯಾಗುವ ಕನಸು ಕಂಡವಳು. “ಮದುವೆಯಾಗಿ ಹೋಗುವ ಹುಡುಗಿಗೇಕೆ ವಿದ್ಯಾಭ್ಯಾಸ’ ಎಂದು ಲೇವಡಿ ಮಾಡುತ್ತಿದ್ದ ಹಳ್ಳಿ ಜನರ ಎದುರಲ್ಲೇ ವಿದ್ಯಾಭ್ಯಾಸ ಪಡೆದವಳು. ಹೀಗೆ ಮಾತನಾಡುತ್ತ, ವೃತ್ತಿ ಜೀವನಕ್ಕೆ ಕಾಲಿಟ್ಟು ಅವಳು ಪಡೆದ ಮೊದಲ ಸಂಬಳದ ಹಂಚಿಕೆಯ ಲೆಕ್ಕಾಚಾರ ನನಗೆ ಮತ್ತಷ್ಟು ಖುಷಿ ನೀಡಿತು. ಅಲ್ಪ ಸಂಬಳವನ್ನು ಆಪ್ತರಿಗೆಲ್ಲ ಹಂಚಿ ಅವರ ಸಂತಸದಲ್ಲಿ ತನ್ನ ಖುಷಿಯನ್ನು ಕಂಡವಳು. ತನ್ನ ಕಾಲಮೇಲೆ ತಾನು ನಿಲ್ಲುವಂತೆ ಮಾಡಿದ ಅಪ್ಪ-ಅಮ್ಮನಿಗೆ ಒಂದಿಷ್ಟು ಪಾಲು, ಮೊಮ್ಮಗಳ ಏಳಿಗೆಯನ್ನೇ ಬಯಸುವ ಅಜ್ಜಿಯ ಆರೋಗ್ಯಕ್ಕೆ ಒಂದಿಷ್ಟು ಪಾಲು, ಜೀವನದುದ್ದಕ್ಕೂ ಉತ್ತಮ ಒಡನಾಡಿಗಳಾಗಿರುವ ಒಡಹುಟ್ಟಿದವರಿಗೆ ಒಂದಿಷ್ಟು ಪಾಲು, ಹತ್ತಿರವೇ ಒಬ್ಬಂಟಿಯಾಗಿ ವಾಸಿಸುವ ಬಡ ಅಜ್ಜಿಗೆ ಒಂದಿಷ್ಟು ಪಾಲು ಕೊಟ್ಟೆ ಎಂದಳು. ಇದನ್ನೆಲ್ಲ ಕೇಳುತ್ತ ಆಪ್ತ ಗೆಳತಿ ಮತ್ತಷ್ಟು ಆಪ್ತವಾಗಿಬಿಟ್ಟಳು. ಬಡತನದಲ್ಲಿ ಬೆಳೆದು ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕೆ ಸೇರಿದ ನನ್ನ ಗೆಳತಿಯ ಸಂಬಳದ ಸಂಭ್ರಮದಲ್ಲಿ ನನಗೂ ಟಿಕೇಟಿನ ಪಾಲು ಸಿಕ್ಕಿತು. ಸ್ವಾಭಿಮಾನಿ ಗೆಳತಿಯ ಸಂಬಳದ ಸಂಭ್ರಮವನ್ನು ಸವಿಯುತ್ತಿದ್ದಂತೆ ಬದಲಾಗುತ್ತಿರುವ ಸಮಾಜದ ಚಿತ್ರಣ ಕಣ್ಮುಂದೆ ಬಂತು. 

Advertisement

ಹಿಂದೆ ಹೆಣ್ಣಿಗೊಂದು ಒಳ್ಳೆಯ ಮನೆತನದ ಹುಡುಗ ಸಿಕ್ಕಿದರೆ ಸಾಕು ಎಂಬ ಆಶಯ ಮನೆಯವರಲ್ಲಿತ್ತು. ಉತ್ತಮವಾಗಿ ಸಂಸಾರ ನಿಭಾಯಿಸಿಕೊಂಡು ಹೋದರೆ ಸಾಕು ಎಂಬ ಆಕಾಂಕ್ಷೆ ಅಷ್ಟೇ ಇತ್ತು. ಆದರೆ, ಇಂದು ಸ್ವಾಭಿಮಾನಿ ಹೆಣ್ಣುಮಗಳಿಗೆ ಸ್ವಾತಂತ್ರ್ಯವೇ ಶಕ್ತಿ. ಇದನ್ನು ಪಡೆಯಲು ವೃತ್ತಿಯ ಕನಸು ಕಾಣುತ್ತಾರೆ. ಯಾಕೆಂದರೆ, ಸ್ವಾಭಿಮಾನದ ಬದುಕು ಕೊಡುವ ಸಂಭ್ರಮ ತುಂಬಾ ಹಿತವಾಗಿರುತ್ತದೆ. ಇದಕ್ಕೆ ಹೆಚ್ಚುತ್ತಿರುವ ದುಡಿಯುವ ಮಹಿಳೆಯರ ಸಂಖ್ಯೆಯೇ ನಿದರ್ಶನ. ಮನೆಕೆಲಸಕ್ಕಷ್ಟೇ ಸೀಮಿತವಾಗಿರುವ ಮಹಿಳೆಯರು ಮತ್ತು ಕುಟುಂಬಕ್ಕಾಗಿ ಹೊರಗಡೆ ದುಡಿಯುವ ಪುರುಷರು ಎಂಬ ಭಿನ್ನತೆಯ ಅಡ್ಡಗೆರೆ ಅಳಿಸುತ್ತಿರುವ ಇಪ್ಪತ್ತೂಂದನೆ ಶತಮಾನ ಇದು. ಸಂಸಾರ ಮತ್ತು ಸಂಬಳದ ದುಡಿಮೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ನಿಜವಾಗಿಯೂ ಸಾಧಕಿಯರೆನಿಸಿಕೊಂಡಿರುವ ನಮ್ಮ ಹೆಂಗಳೆಯರ ಕಾಲ ಇದು. ಸ್ವಾವಲಂಬನೆಯ ಸಿಹಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸವಿಯುತ್ತಿರುವ ಮಹಿಳೆಯರಿರುವ ಜಮಾನವಿದು. ಇಲ್ಲಿ ಹಣ ಸಂಪಾದನೆಯೇ ಮಹಿಳೆಯ ಮುಖ್ಯ ಗುರಿಯಲ್ಲ. ಸಂಪಾದನೆಯ ಮುಖಾಂತರ ಸ್ವತಂತ್ರ್ಯಳಾಗಿ ಬದುಕುವುದು, ಸ್ವಾಭಿಮಾನಿಯಾಗುವುದು ಅವಳಿಚ್ಛೆಯಾಗಿರುತ್ತದೆ. ಅದು ಮಾನಸಿಕ ಸ್ಥೈರ್ಯವನ್ನು ನೀಡುತ್ತದೆ. ಅಪ್ಪನೆದುರು ಅಥವಾ ಗಂಡನೆದುರು ಹಣಕ್ಕಾಗಿ ಕೈ ಚಾಚುವುದನ್ನು ಬಿಟ್ಟು ತನ್ನ ಖರ್ಚನ್ನು ತಾನೇ ಹೊಂದಿಸಿಕೊಂಡು ಹೋದಾಗ, ಪೋಷಕರು ಹೊತ್ತುಕೊಂಡ ಮದುವೆ ಖರ್ಚನ್ನು ತನ್ನ ಮೇಲೆ ಹೊರಿಸಿಕೊಂಡಾಗ, ಸಮಾಜಭಾಂದವರ ಕಷ್ಟಕ್ಕೆ ಸ್ಪಂದನೆಯಾದಾಗ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಲ್ಪ ಸಹಾಯವಾದಾಗ, ಅನಾಥಶ್ರಮ, ವೃದ್ಧಾಶ್ರಮಕ್ಕೆ ತನ್ನಿಂದಾದ ಸಹಾಯ ಮಾಡಿದಾಗ ಎಲ್ಲಕ್ಕಿಂತ ಹೆಚ್ಚಾಗಿ ಸ್ವಾಭಿಮಾನ, ಸ್ವಾತಂತ್ರ್ಯದ ಆತ್ಮವಿಶ್ವಾಸವನ್ನು ಹೊಂದಿದಾಗ ಸಿಗುವ ಸಂಭ್ರಮ ಅನುಭವಿಸುವ ಮಹಿಳೆಯರಿಗಷ್ಟೇ ಗೊತ್ತು. ವಿದ್ಯೆ, ಉದ್ಯೋಗ, ಸಂಬಳ, ಸ್ವಾತಂತ್ರ್ಯ ಹಾಗೂ ಮಾನಸಿಕ ಸದೃಢತೆ ಇದು ಮಹಿಳೆಯರ ಭವ್ಯ ಭವಿಷ್ಯಕ್ಕೆ ಹಾದಿ ತೋರುತ್ತದೆ.

ರಶ್ಮಿತಾ ವಾಮದಪದವು
ಜ್ಞಾನಸುಧಾ ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next