Advertisement

ಕಾಳಗಿ ಬಳಿ ರಕ್ಕಸಗಿ-ತಂಗಡಗಿ ಕಾಳಗದ ಗುಡ್ಡಿಕಲ್ಲು ಸ್ಮಾರಕ ಪತ್ತೆ

10:30 AM Jan 29, 2019 | |

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾಳಗಿ ಬಳಿ ತಾಳಿಕೋಟೆ ಕದನ ಎಂದು ಕರೆಸಿಕೊಳ್ಳುವ ರಕ್ಕಸಗಿ-ತಂಗಡಗಿ ಕಾಳಗದ ಗುಡ್ಡಿಕಲ್ಲುಗಳ ಸ್ಮಾರಕ ಶಿಲೆಗಳು ಪತ್ತೆಯಾಗಿವೆ ಎಂದು ಇತಿಹಾಸ ಸಂಶೋಧಕ ಡಾ| ಎ.ಎಲ್‌. ನಾಗೂರ ತಿಳಿಸಿದ್ದಾರೆ.

Advertisement

ಪ್ರಾಚೀನತೆ ಸಾರುವ ದೇಗುಲಗಳು, ವೀರಗಲ್ಲುಗಳು ಮತ್ತು ಮಾಸ್ತಿಗಲ್ಲುಗಳು ಕಾಳಗಿ ಗ್ರಾಮದಲ್ಲಿ ಲಭ್ಯವಿವೆ. ಕಾಳಗಿ ಗ್ರಾಮದ ಪಕ್ಕದಲ್ಲಿರುವ ಹೊಲದಲ್ಲಿ ಪತ್ತೆಯಾಗಿರುವ ಗುಡ್ಡಿ ಕಲ್ಲುಗಳಲ್ಲಿ ನಾಲ್ಕು ಕಲ್ಲುಗಳ ಮೇಲೆ ಸುಣ್ಣದಿಂದ ತಲಾ ಎರಡೆರಡು ಕಣ್ಣು ಗುಡ್ಡೆಗಳನ್ನು ಚಿತ್ರಿಸಲಾಗಿದೆ. ಅವುಗಳಿಗೆ ಸ್ಥಳೀಕರು ಗುಡ್ಡಿಕಲ್ಲು ಅಥವಾ ಕಣ್ಣುಗುಡ್ಡೆ ಎನ್ನುತ್ತಾರೆ. ಅಪೂರ್ವ ಸ್ಮಾರಕ ಶಿಲೆಗಳು ಪತ್ತೆಯಾಗಿರುವ ಜಮೀನಿನ ಮಾಲೀಕರಾದ ಮಾಲಿಪಾಟೀಲ ಅವರ ಪ್ರಕಾರ, ಗುಡ್ಡಿಕಲ್ಲಿನ ಹಿನ್ನೆಲೆ ಕೇಳಲಾಗಿ ತಮ್ಮ ಹಿರಿಯರ ಕಾಲದಿಂದ ಈ ಕಲ್ಲುಗಳನ್ನು ನೆಟ್ಟು ಪೂಜಿಸುತ್ತ ಬಂದಿದ್ದಾರೆ. ಈ ಸ್ಥಳದಲ್ಲಿ ದೊಡ್ಡ ಯುದ್ಧ ನಡೆದಿತ್ತು. ಯುದ್ದದ ಈ ಸ್ಥಳದಲ್ಲಿ ಸಾವಿರಾರು ಕಣ್ಣು ಗುಡ್ಡೆಗಳ ರಾಶಿ ಬಿದ್ದಿತ್ತು. ಇದರ ಸ್ಮರಣೆಗಾಗಿ ಗುಡ್ಡೆಕಲ್ಲು ನೆಡುವ ಮೂಲಕ ಸ್ಮರಣೆ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಸದರಿ ಗ್ರಾಮದಲ್ಲಿ ದಂಡಿನ ದಾರಿ ಎಂಬ ಮಾರ್ಗವೂ ಇದ್ದು, ಘಟನಾ ಪ್ರಧಾನವಾದ ಈ ಐತಿಹ್ಯವನ್ನು ಚಾರಿತ್ರಿಕ ಘಟನೆಗೆ ತಾಳೆ ಹಾಕಿದಾಗ ಕ್ರಿಶ 1565ರ ರಕ್ಕಸಗಿ-ತಂಗಡಗಿ ಯುದ್ಧ ಈ ಸ್ಥಳದಲ್ಲೇ ನಡೆದಿರುವ ಸಾಧ್ಯತೆ ಕುರಿತು ಈ ಗುಡ್ಡೆಕಲ್ಲುಗಳ ಸ್ಮಾರಕಗಳು ನಮಗೆ ಪ್ರಬಲ ಸಾಕ್ಷಿ ನೀಡುತ್ತವೆ. ಇದರಲ್ಲಿ ವಾಸ್ತವಾಂಶವೂ ಇದ್ದು, ಸಾಮಾನ್ಯವಾಗಿ ಯುದ್ಧಗಳು ಹೊಳೆ ದಂಡೆಗಳ ಪ್ರದೇಶದಲ್ಲಿ ಜರುಗುತ್ತವೆ. ಸೈನಿಕರು ಮತ್ತು ಯುದ್ಧದಲ್ಲಿ ಬಳಸುತ್ತಿದ್ದ ಆನೆ, ಒಂಟೆ, ಕುದುರೆ ಸೇರಿದಂತೆ ಪ್ರಾಣಿಗಳಿಗೆ ಕುಡಿಯುವ ನೀರು, ಬಿಡಾರ, ಹೆಣ ಒಗೆಯಲು, ವೈರಿ ಕಣ್ತಪ್ಪಿಸಲು ನದಿ ಪ್ರದೇಶ ಸೂಕ್ತ ಆಯಟ್ಟಿನ ಜಾಗ, ಕಾಳಗಿ ಗ್ರಾಮ ಕೃಷ್ಣಾ ನದಿಗೆ ಸಮೀಪದಲ್ಲಿದೆ ಮತ್ತು ಕೃಷ್ಣೆ ಈ ಪಟ್ಟಿ ತಂಗಡಗಿ, ರಕ್ಕಸಗಿ ಇತ್ಯಾದಿ ಸ್ಥಳಗಳಿಗೆ ಹೋಗುತ್ತದೆ.

ವಿಜಯಪುರದ ಆದಿಲ್‌ ಶಾಹಿ-ವಿಜಯನಗರ ಸೈನ್ಯದ ಒಂದು ತುಕಡಿ ಇಲ್ಲಿ ಪರಸ್ಪರ ಎದುರಾಗಿ ತೋಪು, ಬಿಲ್ಲು-ಬಾಣಗಳನ್ನು ಉಪಯೋಗಿಸಿ ಕಾಳಗ ಮಾಡಲಾಗಿದೆ. ಕಣ್ಣು ಗುಡ್ಡೆಗಳು ಛಿದ್ರ-ಛಿದ್ರವಾಗಿ ಬಿದ್ದಿದ್ದು ಎಂದರೆ ಆಕ್ರೋಶ ಮತ್ತು ಬಳಸಿದ ಶಸ್ತ್ರಗಳ ಸಾಮರ್ಥ್ಯ ಅರಿವಾಗುತ್ತದೆ. ಇಲ್ಲವೇ ತುಕಡಿಯೊಂದರ ಸೈನಿಕರ ಕಣ್ಣುಗಳನ್ನು ಕಿತ್ತು ಹಾಕಿರಲೂಬಹುದು. ರಕ್ಕಸಗಿ-ತಂಗಡಗಿ ಯುದ್ಧದ ಜೊತೆಗೆ ತಾಳಿಕೋಟೆ-ಬನ್ನಿಹಟ್ಟಿ ಯುದ್ಧಗಳೆಂದೂ ಕರೆಯಲಾಗುತ್ತದೆ ಎಂದು ಡಾ| ನಾಗೂರ ವಿವರಿಸಿದ್ದಾರೆ.

ಆದರೆ ಯುದ್ಧದ ನಿರ್ದಿಷ್ಟ ಸ್ಥಳದ ಕುರಿತಾಗಿ ದಾಖಲೆಗಳು ಸಾಕಷ್ಟು ಇಲ್ಲ. ಹೀಗಾಗಿ ಐತಿಹ್ಯಗಳನ್ನು ಮತ್ತು ಸ್ಮಾರಕಗಳನ್ನು ಕೆಲವೊಮ್ಮೆ ಮೊರೆ ಹೋಗಬೇಕಾಗುತ್ತದೆ. ಅವು ಕಿಂಚಿತ್ತಾದ ವಾಸ್ತವಾಂಶ ನೀಡುತ್ತವೆ. ಈ ಗ್ರಾಮದಲ್ಲಿ ಯುದ್ಧಾ ನಂತರವೇ ಕಾಳಗಿ ಎನ್ನುವ ಹೆಸರು ಈ ಗ್ರಾಮಕ್ಕೆ ಬಂದಿರಬೇಕು. ಪೂರ್ವದ ಹೆಸರು ಬೇರೆ ಇದ್ದಿರಬಹುದು. ಹೀಗಾಗಿ ಈ ಗುಡ್ಡಿಕಲ್ಲು ಸ್ಮಾರಕ ಈ ಸ್ಥಳದಲ್ಲಿ ಯುದ್ಧ ನಡೆದ ಘಟನೆಗೆ ಒಂದು ಸಮರ್ಥ ಐತಿಹ್ಯ ಎಂದು ಪ್ರತಿಪಾದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next