Advertisement
ಕುಂದಾಪುರದ ಹಾಲಾಡಿ, ಶಂಕರನಾರಾಯಣ, ಅಮಾಸೆಬೈಲು, ವಂಡ್ಸೆ ಹೋಬಳಿ ಮೊದಲಾದೆಡೆ ನೂರಾರು ಎಕ್ರೆ ಭತ್ತದ ಗದ್ದೆಗಳಲ್ಲಿ ಕಳೆಗಿಡಗಳು ಹುಟ್ಟಿ ಕೊಂಡು ಭತ್ತದ ಬೆಳೆಯೇ ಸಿಗದಂತೆ ವ್ಯಾಪಿಸಿರುವ ಕುರಿತು “ಉದಯವಾಣಿ” ವರದಿ ಪ್ರಕಟಿಸಿತ್ತು. ಇದೀಗ ಬ್ರಹ್ಮಾವರ ತಾಲೂಕಿನ ಆಮ್ರಕಲ್ಲು, ಹಿಲಿಯಾಣ, ಜೆಡ್ಡು ಮೊದಲಾದ ಪ್ರದೇಶಗಳಲ್ಲಿ ಕೂಡ ರೈತರ ಭತ್ತದ ಗದ್ದೆಗಳಲ್ಲಿ ಇದೇ ಮಾದರಿಯ ಕಳೆಗಿಡ ಕಾಣಿಸಿಕೊಂಡಿದೆ. ಭತ್ತದ ಗದ್ದೆಯಲ್ಲಿ ಭತ್ತಕ್ಕಿಂತ ಹೆಚ್ಚು ಈ ಕಳೆಯ ದರ್ಬಾರೇ ಆಗಿದೆ. ಇದರಿಂದಾಗಿ ಸುಗ್ಗಿ ಬೆಳೆಯ ಮೇಲೆ ಪರಿಣಾಮ ಆಗಿದ್ದು ಕಟಾವಿಗೂ ಸಮಸ್ಯೆಯಾಗಿದೆ. ಖಾತಿ ಬೆಳೆಗೂ ತೊಂದರೆ ಮುಂದುವರಿಯಲಿದೆ.
ವರದಿ ಬೆನ್ನಿಗೇ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಕೆವಿಕೆ ವಿಜ್ಞಾನಿಗಳ ತಂಡ ಗದ್ದೆಗಿಳಿದು ಪರಿಶೀಲನೆ ನಡೆಸಿತ್ತು. ಈ ಸಂದರ್ಭ ಕಳೆ ಗಿಡ ರೈತರು ಹೊರಗಿನಿಂದ ಖರೀದಿಸಿದ ಭತ್ತದ ಬಿತ್ತನೆ ಬೀಜದ ಜತೆ ಬಂದುದು ಎಂಬ ಅನುಮಾನ ಇಲಾಖೆಗೆ ಮೂಡಿದ್ದು, ಆದರೆ ಇಲಾಖೆಯಿಂದ ಪಡೆದ ಬಿತ್ತನೆ ಬೀಜದಲ್ಲೂ ಕೆಲವೆಡೆ ಕಳೆ ಇರುವುದನ್ನು ರೈತರು ತೋರಿಸಿದ್ದರು. ಹಾಗಾಗಿ ಈ ಕುರಿತು ವಿಜ್ಞಾನಿಗಳು ಅಧ್ಯಯನ ನಡೆಸುವುದಾಗಿ ಹೇಳಿದ್ದರು. ಇದೀಗ ಇನ್ನಷ್ಟು ಕಡೆ ಕಳೆಬಾಧೆ ಇದೆ ಎಂದು ಗೊತ್ತಾಗಿದ್ದು ಕೆವಿಕೆ ವಿಜ್ಞಾನಿಗಳು ಮಾ.22ರಂದು ವಿವಿಧೆಡೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.