Advertisement

ಇನ್ನಷ್ಟು ಕಡೆ ಭತ್ತದ ಕಳೆ ಪತ್ತೆ: ಮಾ. 22ರಂದು ಕೆವಿಕೆ ತಂಡ ಪರಿಶೀಲನೆ

01:00 AM Mar 21, 2019 | Harsha Rao |

ಕುಂದಾಪುರ: ಭತ್ತದ ಗದ್ದೆಯಲ್ಲಿ ಕಂಡು ಬಂದ ರಾಗಿ ತೆನೆ ಮಾದರಿಯ ಕಳೆ ಗಿಡ ಈಗ ಕುಂದಾಪುರದ ಹೊರಗೆಯೂ ಇರುವುದು ಪತ್ತೆಯಾಗಿದೆ. 

Advertisement

ಕುಂದಾಪುರದ ಹಾಲಾಡಿ, ಶಂಕರನಾರಾಯಣ, ಅಮಾಸೆಬೈಲು, ವಂಡ್ಸೆ ಹೋಬಳಿ ಮೊದಲಾದೆಡೆ ನೂರಾರು ಎಕ್ರೆ ಭತ್ತದ ಗದ್ದೆಗಳಲ್ಲಿ ಕಳೆಗಿಡಗಳು ಹುಟ್ಟಿ ಕೊಂಡು ಭತ್ತದ ಬೆಳೆಯೇ ಸಿಗದಂತೆ ವ್ಯಾಪಿಸಿರುವ ಕುರಿತು “ಉದಯವಾಣಿ” ವರದಿ ಪ್ರಕಟಿಸಿತ್ತು. ಇದೀಗ ಬ್ರಹ್ಮಾವರ ತಾಲೂಕಿನ ಆಮ್ರಕಲ್ಲು, ಹಿಲಿಯಾಣ, ಜೆಡ್ಡು ಮೊದಲಾದ ಪ್ರದೇಶಗಳಲ್ಲಿ ಕೂಡ ರೈತರ ಭತ್ತದ ಗದ್ದೆಗಳಲ್ಲಿ ಇದೇ ಮಾದರಿಯ ಕಳೆಗಿಡ ಕಾಣಿಸಿಕೊಂಡಿದೆ. ಭತ್ತದ ಗದ್ದೆಯಲ್ಲಿ ಭತ್ತಕ್ಕಿಂತ ಹೆಚ್ಚು ಈ ಕಳೆಯ ದರ್ಬಾರೇ ಆಗಿದೆ. ಇದರಿಂದಾಗಿ ಸುಗ್ಗಿ ಬೆಳೆಯ ಮೇಲೆ ಪರಿಣಾಮ ಆಗಿದ್ದು ಕಟಾವಿಗೂ ಸಮಸ್ಯೆಯಾಗಿದೆ. ಖಾತಿ ಬೆಳೆಗೂ ತೊಂದರೆ ಮುಂದುವರಿಯಲಿದೆ. 

ತಾಲೂಕಿನ ವಿವಿಧೆಡೆ ಸುಗ್ಗಿ ಭತ್ತದ ಬೆಳೆ ಗದ್ದೆಯಲ್ಲಿ ಕಟಾವಿನ ವೇಳೆ ರಾಗಿ ಚೆಂಡಿನಂತಹ ಕೋಳಿ ಆಹಾರದ ಮಾದರಿಯ ಕಳೆಗಿಡ ಕಾಣಿಸಿಕೊಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂದು ರೈತರು ಪರಿತಪಿಸುತ್ತಿದ್ದಾರೆ. ನೂರಾರು ಎಕ್ರೆ ಗದ್ದೆಯಲ್ಲಿ ಒಂದೇ ನಮೂನೆಯ ಕಳೆಗಿಡ ಇದ್ದು  ಇಲಾಖೆಗಳಿಂದ ಇದಕ್ಕೆ  ಪರಿಹಾರ ದೊರೆತಿಲ್ಲ ಎಂದು ಪತ್ರಿಕೆ ವರದಿ ಪ್ರಕಟಿಸಿತ್ತು. 

ವಿವಿಧೆಡೆ ಪರಿಶೀಲನೆ
ವರದಿ ಬೆನ್ನಿಗೇ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಕೆವಿಕೆ ವಿಜ್ಞಾನಿಗಳ ತಂಡ ಗದ್ದೆಗಿಳಿದು ಪರಿಶೀಲನೆ ನಡೆಸಿತ್ತು. ಈ ಸಂದರ್ಭ ಕಳೆ ಗಿಡ ರೈತರು ಹೊರಗಿನಿಂದ ಖರೀದಿಸಿದ ಭತ್ತದ ಬಿತ್ತನೆ ಬೀಜದ ಜತೆ ಬಂದುದು ಎಂಬ ಅನುಮಾನ ಇಲಾಖೆಗೆ ಮೂಡಿದ್ದು, ಆದರೆ ಇಲಾಖೆಯಿಂದ ಪಡೆದ ಬಿತ್ತನೆ ಬೀಜದಲ್ಲೂ ಕೆಲವೆಡೆ ಕಳೆ ಇರುವುದನ್ನು ರೈತರು ತೋರಿಸಿದ್ದರು. ಹಾಗಾಗಿ ಈ ಕುರಿತು ವಿಜ್ಞಾನಿಗಳು ಅಧ್ಯಯನ ನಡೆಸುವುದಾಗಿ ಹೇಳಿದ್ದರು. ಇದೀಗ ಇನ್ನಷ್ಟು ಕಡೆ ಕಳೆಬಾಧೆ ಇದೆ ಎಂದು ಗೊತ್ತಾಗಿದ್ದು ಕೆವಿಕೆ ವಿಜ್ಞಾನಿಗಳು ಮಾ.22ರಂದು ವಿವಿಧೆಡೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next