Advertisement

ಅಂತೂ ಇಂತೂ ವಿಜಯನಗರ ಬಡಾವಣೆಗೆ ನೀರು ಬಂತು

03:41 PM May 14, 2019 | Team Udayavani |

ಕೊಪ್ಪಳ: ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಇಲ್ಲಿನ 26ನೇ ವಾರ್ಡ್‌ನ ವಿಜಯನಗರ ಬಡಾವಣೆಗೆ ಕೊನೆಗೂ ನೀರು ಪೂರೈಕೆ ಪ್ರಾರಂಭವಾಗಿದೆ. ವಾರ್ಡ್‌ ಸದಸ್ಯೆ ದೇವಕ್ಕ ಕಂದಾರಿ ಅವರ ಸತತ ಪ್ರಯತ್ನದಿಂದ ವಾರ್ಡ್‌ಗೆ ನೀರು ಪೂರೈಕೆಯಾಗಿದ್ದು, ಸೋಮವಾರ ಓಣಿಯಲ್ಲಿ ಸಂಭ್ರಮ ಮನೆ ಮಾಡಿತ್ತು.

Advertisement

ಹೌದು.. ತುಂಗಭದ್ರಾ ಜಲಾಶಯ ಪಕ್ಕದಲ್ಲೇ ಇದ್ದರೂ ಕೊಪ್ಪಳದ ಜನತೆ ಕುಡಿಯುವ ನೀರಿಗೆ ಎಲ್ಲೆಡೆ ಅಲೆದಾಡುವಂತ ಪರಿಸ್ಥಿತಿ ಇದೆ. ಹೊಲ, ಗದ್ದೆಗಳಿಗೆ, ಹಳ್ಳದ ತಟದಲ್ಲಿನ ಬೋರ್‌ವೆಲ್ಗೆ ತೆರಳಿ ನೀರು ತರುವಂತ ಸ್ಥಿತಿಯಿದೆ. ಅಲ್ಲದೇ, 26ನೇ ವಾರ್ಡಿನಲ್ಲಂತೂ ಅತೀವ ನೀರಿನ ಸಮಸ್ಯೆ. ವಾರ್ಡ್‌ ಸದಸ್ಯರ ಪರಿಶ್ರಮದಿಂದ ಕೊನೆಗೂ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಇಲ್ಲಿನ ಜನತೆ ಹಬ್ಬದಂತೆ ನೀರಿಗೆ ಪೂಜೆ ಮಾಡಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ನೀರಿನ ಸಮಸ್ಯೆಯಿಂದಾಗಿ ವಾರ್ಡ್‌ನಲ್ಲಿನ ಹಾಸ್ಟೆಲ್ಗೆ ವಿದ್ಯಾರ್ಥಿನಿಯರು ಆಗಮಿಸಲು ಹಿಂದೇಟು ಹಾಕುವಂತ ಸ್ಥಿತಿಯಿತ್ತು. ಅಂತೂ ವಿಜಯನಗರದ ಬಡಾವಣೆಯ ಜನರ ಬಹುದಿನದ ಬೇಡಿಕೆ ಈಡೇರಿದೆ. ತುಂಗಭದ್ರಾ ನೀರನ್ನು ಓಣಿಗೆ ತಂದಿದ್ದಕ್ಕೆ ಬಡಾವಣೆಯ ಜನರ ಮನಸ್ಸಿನಲ್ಲಿ ಉಲ್ಲಾಸ ತುಂಬಿ ತುಳುಕುತ್ತಿತ್ತು.

ಈ ಸಂಭ್ರಮದಲ್ಲಿ ನಗರಸಭೆ ಸದಸ್ಯೆ ದೇವಕ್ಕ ಕಂದಾರಿ, ಮುಖಂಡರಾದ ಹಾಲೇಶ ಕಂದಾರಿ ಬಸವರಾಜ ಬನ್ನಿಕೊಪ್ಪ, ರಾಘವೇಂದ್ರ ನರಗುಂದ, ಶರಣಯ್ಯ ಹಿರೇಮಠ, ಶಿವಣ್ಣ ಹಟ್ಟಿ, ನಿವಾಸಿಗಳಾದ ಕಾಸೀಂ, ಸಂಜೀವ, ಪಾಪಣ್ಣ ನಾಯಕ, ಸಿದ್ದು ಭಾಗ್ಯನಗರ, ಕುಮಾರ, ಜೀಲಾನಸಾಬ್‌, ನಜೀರಸಾಬ್‌ ಚಿಲವಾಡ್ಗಿ, ಮುರುಳೀಧರ ಭಜಂತ್ರಿ, ರಾಯನಗೌಡ, ಮಂಜುನಾಥ ಗುಗ್ರಿ, ಮೈಲಾರಪ್ಪ ವಕೀಲರು, ಯಾಕುಬ್‌ ಸಾಬ್‌, ಗೈಬು ಮೇಸ್ತ್ರಿ, ನಾಗಪ್ಪ ಚಳ್ಳಾರಿ ಸೇರಿ ಇತರರು ಇದ್ದರು.

ಎಲ್ಲದಕ್ಕೂ ನೀರು ಬಹಳ ಮುಖ್ಯ. ವಿಜಯನಗರ ಬಡಾವಣೆಯ ಜನರು ಕೊಳವೆಬಾಯಿಯನ್ನೇ ಅವಲಂಬಿಸಿದ್ದರು. ಈಗ ತುಂಗಭದ್ರಾ ನದಿಯ ಸಿಹಿ ನೀರುನ್ನು ಪೂರೈಸಿದ್ದು ಖುಷಿಯಾಗಿದೆ. ನೀರು ಒದಗಿಸುವ ಪ್ರಕ್ರಿಯಲ್ಲಿ ಭಾಗವಹಿಸಿದ ಎಲ್ಲ ನಗರಸಭೆಯ ಅಧಿಕಾರಿ ವರ್ಗಕ್ಕೆ ಮತ್ತು ಸಿಬ್ಬಂದಿಗೆ ಧನ್ಯವಾದ ಸಲ್ಲಿಸುತ್ತೇನೆ.
•ದೇವಕ್ಕ ಲಕ್ಷ್ಮಣ ಕಂದಾರಿ,ವಾರ್ಡ್‌ ಸದಸ್ಯೆ
ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾ ಇತ್ತು. ಬಹಳ ದಿನಗಳ ನಮ್ಮ ಬೇಡಿಕೆ ಈಡೇರಿದಂತಾಗಿದೆ. ವಾರ್ಡ್‌ ಸದಸ್ಯೆ ದೇವಕ್ಕ ಕಂದಾರಿ ಅವರ ಶ್ರಮದಿಂದ ನಮಗೆ ಸಿಹಿ ನೀರು ಲಭಿಸಿದೆ. ಅದಕ್ಕೆ ತುಂಬ ಖುಷಿಯಾಗಿದೆ.
•ಪಾಪಣ್ಣ ನಾಯಕ, ಸ್ಥಳೀಯ
Advertisement

Udayavani is now on Telegram. Click here to join our channel and stay updated with the latest news.

Next