Advertisement

ಶೋಆಫ್ ವಿವಾದಕ್ಕೆ ಕೊನೆಗೂ ತೆರೆ!

10:28 AM Jun 27, 2017 | |

ಚರ್ಚಿಸುವಂತಹದ್ದು ಏನೂ ಇಲ್ಲ: ಯಶ್‌
ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ವಿವಾದ ಸೃಷ್ಟಿಯಾಗಿದೆ. ಅದು ರಶ್ಮಿಕಾ ಹಾಗೂ ಯಶ್‌ ಅಭಿಮಾನಿಗಳ ಮಧ್ಯೆ. ಈ ವಿವಾದಕ್ಕೆ ಕಾರಣವಾಗಿರೋದು ಟಾಕ್‌ ಶೋ. ಟಾಕ್‌ ಶೋವೊಂದರಲ್ಲಿ ಭಾಗವಹಿಸಿದ್ದ ರಶ್ಮಿಕಾ, ನಿರೂಪಕ ಕೇಳಿದ “ಮಿಸ್ಟರ್‌ ಶೋಆಪ್‌’ ಬಿರುದನ್ನು ಯಾರಿಗೆ ಕೊಡುತ್ತೀರಿ ಎಂದಾಗ ರಶ್ಮಿಕಾ “ಯಶ್‌ ಸಾರ್‌’ಗೆ ಎಂದು ಉತ್ತರಿಸಿದ್ದಾರೆ. ರಶ್ಮಿಕಾ ಆ ರೀತಿ ಉತ್ತರಿಸಿದ ಮರುಕ್ಷಣದಿಂದಲೇ ಯಶ್‌ ಅಭಿಮಾನಿಗಳು ಸಿಟ್ಟಾಗಿದ್ದಾರೆ.

Advertisement

ಆ ಸಿಟ್ಟು ಸೋಶಿಯಲ್‌ ಮೀಡಿಯಾಗಳ ಯಶ್‌ ಫ್ಯಾನ್‌ ಪೇಜ್‌ನಲ್ಲಿ ಪ್ರತಿಧ್ವನಿಸಿದೆ. “ನಮ್‌ ಬಾಸ್‌ಗೆ ಶೋಆಪ್‌ ಅಂದಿದ್ದು ಯಾಕೆ?’, “ಮೊನ್ನೆ ಮೊನ್ನೆ ಚಿತ್ರರಂಗಕ್ಕೆ ಬಂದ ರಶ್ಮಿಕಾಗೆ ಯಶ್‌ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ’ ಎಂಬಂತಹ ಕಾಮೆಂಟ್‌ಗಳ ಜೊತೆಗೆ ರಶ್ಮಿಕಾ ನಟಿಸಿದ “ಕಿರಿಕ್‌ ಪಾರ್ಟಿ’ ಚಿತ್ರದ ಕೆಲವು ಫೋಟೋಗಳನ್ನು ಬಳಸಿ ಅದಕ್ಕೂ ಟ್ರಾಲ್‌ಗ‌ಳನ್ನು ಮಾಡಿದ್ದಾರೆ.

“ವಾಂಟೆಡ್‌- ಡೆಡ್‌ ಔರ್‌ ಅಲೈವ್‌’ ಸೇರಿದಂತೆ ರಶ್ಮಿಕಾ ವಿರುದ್ಧ ಸಾಕಷ್ಟು ಟ್ರಾಲ್‌ಗ‌ಳನ್ನು ಮಾಡಿ ಯಶ್‌ ಅಭಿಮಾನಿಗಳು ತಮ್ಮ ಸಿಟ್ಟು ಪ್ರದರ್ಶಿಸುತ್ತಿದ್ದಾರೆ. ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿರುವ ಕಾಮೆಂಟ್ಸ್‌, ಟ್ರಾಲ್‌ಗ‌ಳನ್ನು ಗಮನಿಸಿದ ಯಶ್‌, ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಅದು ಫೇಸ್‌ಬುಕ್‌ನಲ್ಲಿ ಸ್ಟೇಟಸ್‌ ಹಾಕುವ ಮೂಲಕ.

 “ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ. ಇಲ್ಲಿ ಚರ್ಚಿಸುವಂತಹದ್ದು ಏನೂ ಇಲ್ಲ!’ ಎಂದು ಬರೆದುಕೊಳ್ಳುವ ಮೂಲಕ ಅಭಿಮಾನಿಗಳನ್ನು ವಿವಾದ ದೊಡ್ಡದು ಮಾಡದಂತೆ ಕೇಳಿಕೊಂಡಿದ್ದಾರೆ.

Advertisement

ಯಶ್‌ ಫೇಸ್‌ಬುಕ್‌ ಸ್ಟೇಟಸ್‌ನ ಪೂರ್ಣಪಾಠ ಇಲ್ಲಿದೆ: ಒಬ್ಬ ನಟನಾಗಿ ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನವನ್ನು ಸಂಪಾದಿಸುವುದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುವವನು ನಾನು. ಕೆಲವೊಮ್ಮೆ ಎದುರಾಗುವ ಅನಗತ್ಯ ಎನಿಸುವ ವಿಷಯಗಳನ್ನು ನಿರ್ಲಕ್ಷಿಸುವ ಸ್ವಭಾವವನ್ನು ರೂಢಿಸಿಕೊಂಡಿದ್ದೇನೆ. ಆದರೆ, ನನ್ನನ್ನು ಪ್ರೀತಿಸುವ ನಿಮ್ಮ ಮನಸಿಗೆ ನೋವಾದಾಗ ಪ್ರತಿಕ್ರಿಯೆ ನೀಡದೆ ಇರಲು ನನ್ನಿಂದ ಸಾಧ್ಯವಿಲ್ಲ.

ನಿಮ್ಮ ಅಭಿಮಾನ, ಪ್ರೀತಿಗೆ ಬೆಲೆಕಟ್ಟಲಾಗುವುದಿಲ್ಲ. ಅದಕ್ಕೆ ನಾನೆಂದು ಚಿರಋಣಿ. ರಶ್ಮಿಕಾ ಅವರು ವೈಯಕ್ತಿಕವಾಗಿ ನನಗೆ ಪರಿಚಿತರಲ್ಲ. ಇದುವರೆಗೂ ಭೇಟಿಯೂ ಮಾಡಿಲ್ಲ, ಮಾತು ಸಹ ಆಡಿಲ್ಲ. ಹಾಗೆಂದು ಅವರಿಗೆ ನನ್ನ ಬಗ್ಗೆ ಯಾವುದೇ ರೀತಿಯ ಅಭಿಪ್ರಾಯ ಇರಬಾರದೆಂದೇನಿಲ್ಲ. ಅವರ ಅಭಿಪ್ರಾಯ ಅವರದು. ಅದನ್ನು ಹೀಗಳೆಯುವ ಕೆಲಸ ಯಾರೂ ಮಾಡಬಾರದು. ಎಲ್ಲರ ಅಭಿಪ್ರಾಯವನ್ನು ಗೌರವಿಸೋಣ.

ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ. ಇಲ್ಲಿ ಚರ್ಚಿಸುವಂತಹದ್ದು ಏನೂ ಇಲ್ಲ! ಎಂದು ಯಶ್‌ ಬರೆದಿದ್ದಾರೆ. ಯಶ್‌ ಅವರ ಮನವಿಯ ಮೇರೆಗೆ ಅವರ ಅಭಿಮಾನಿಗಳು, ಈ ವಿಷಯವನ್ನು ಮುಂದುವರೆಸುವುದನ್ನು ನಿಲ್ಲಿಸಿದ್ದಾರೆ. ಆದರೂ ಅಲ್ಲಲ್ಲಿ ಹೊಗೆಯಾಡುತ್ತಲೇ ಇದೆ.

ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ: ರಶ್ಮಿಕಾ
ಕ್ಷಮೆಯಾಚಿಸಿದ ರಶ್ಮಿಕಾ: ಟಾಕ್‌ ಶೋನಲ್ಲಿ ಮಾತನಾಡಿದ ವಿಷಯ ಏಕಾಏಕಿ ಇಷ್ಟು ದೊಡ್ಡ ವಿವಾದವಾಗಿರೋದು ನನಗೆ ತುಂಬಾ ನೋವುಂಟು ಮಾಡಿದೆ. ಈ ಟಾಕ್‌ ಶೋ ಚಿತ್ರೀಕರಣವಾಗಿರೋದು ಏಳು ತಿಂಗಳ ಹಿಂದೆ. ಆಗ ಇನ್ನೂ ನಮ್ಮ “ಕಿರಿಕ್‌ ಪಾರ್ಟಿ’ ಚಿತ್ರ ಬಿಡುಗಡೆಯಾಗಿರಲಿಲ್ಲ. ಈಗ ಆ ಶೋನ ಮರುಪ್ರಸಾರ ಮಾಡಲಾಗಿದೆ.

ನನಗೆ ಯಶ್‌ ಸಾರ್‌ ಬಗ್ಗೆ ಅಪಾರ ಗೌರವವಿದೆ. ಸಾಕಷ್ಟು ಸಂದರ್ಭಗಳಲ್ಲಿ ಅವರ ಮೇಲಿನ ಗೌರವವನ್ನು ನಾನು ವ್ಯಕ್ತಪಡಿಸಿದ್ದೇನೆ ಕೂಡಾ. ನಮ್ಮಂತಹ ಹೊಸಬರಿಗೆ ಅವರು ಸ್ಫೂರ್ತಿ. ಅವರ “ಸಂತು ಸ್ಟ್ರೇಟ್‌ ಫಾರ್ವಡ್‌’ ಚಿತ್ರವನ್ನು ಅನೇಕ ಬಾರಿ ನೋಡಿ ಖುಷಿಪಟ್ಟಿದ್ದೇನೆಂಬುದನ್ನು ನಾನು ಹೇಳಿದ್ದೇನೆ.

ಆದರೆ, ಅವೆಲ್ಲವನ್ನು ಎಡಿಟ್‌ ಮಾಡಿ, ವಿವಾದವಾಗುವಂತಹ ಅಂಶವನ್ನಷ್ಟೇ ಹೈಲೈಟ್‌ ಮಾಡಿರೋದು ನನಗೆ ನೋವು ತಂದಿದೆ. ಅಷ್ಟಕ್ಕೂ ಅದು ನಾನು ನೀಡಿದ ಬಿರುದಲ್ಲ. ಆ ಗೇಮ್‌ ಶೋನಲ್ಲಿ ಬರುವ ರ್ಯಾಪಿಡ್‌ ಫೈರ್‌ ರೌಂಡ್‌. ಯಶ್‌ ಸಾರ್‌ ಮೇಲೆ ನಾನಿಟ್ಟಿರುವ ಅಪಾರ ಗೌರವವನ್ನೆಲ್ಲಾ ಬದಿಗೆ ಸರಿಸಿ, ಅದು ಇಷ್ಟು ದೊಡ್ಡ ವಿವಾದವಾಗುತ್ತದೆ ಎಂದು ನಾನು ಕನಸಿನಲ್ಲೂ ಭಾವಿಸಿರಲಿಲ್ಲ.

ನನ್ನ ಈ ಹಿಂದಿನ ಸಂದರ್ಶನ ಹಾಗೂ ಫೇಸ್‌ಬುಕ್‌ ಲೈವ್‌ಗಳನ್ನು ನೀವು ಗಮನಿಸಿದರೆ ಅಲ್ಲಿ ನಾನು ಯಶ್‌ ಸಾರ್‌ ಅವರು ಮಾಡುತ್ತಿರುವ ಕೆಲಸಗಳನ್ನು ಮೆಚ್ಚಿರೋದು, ಗೌರವಿಸಿರೋದು ಹಾಗೂ ಅವರ ಜೊತೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿರೋದು ಗೊತ್ತಾಗುತ್ತದೆ.  ಇದು ಉದ್ದೇಶಪೂರ್ವಕವಾಗಿದ್ದಲ್ಲ. ನನ್ನ ಹೇಳಿಕೆಯಿಂದ ನಿಮ್ಮ ಭಾವನೆಗಳಿಗೆ ಬೇಸರವಾಗಿದ್ದರೆ ಅದಕ್ಕೆ ಕ್ಷಮೆಯಾಚಿಸುತ್ತಿದ್ದೇನೆ. ದಯವಿಟ್ಟು ಇದನ್ನು ಬೆಳೆಸಬೇಡಿ. 
-ನಿಮ್ಮ ಆಶೀರ್ವಾದ ಸದಾ ಇರಲಿ ರಶ್ಮಿಕಾ ಮಂದಣ್ಣ

Advertisement

Udayavani is now on Telegram. Click here to join our channel and stay updated with the latest news.

Next