Advertisement

Film Chamber Election: ಗರಿಗೆದರಿದ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ

12:15 PM Sep 21, 2023 | Team Udayavani |

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2023-24ನೇ ಸಾಲಿನ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಇದೇ ಸೆ. 23ರಂದು ವಾಣಿಜ್ಯ ಮಂಡಳಿಯ ಚುನಾವಣೆ ನಡೆಯಲಿದ್ದು, ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಕ್ರಿಸೆಂಟ್‌ ರಸ್ತೆಯಲ್ಲಿರುವ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಸೆ.23ಕ್ಕೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಅಂದೇ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ರಾತ್ರಿ ವೇಳೆಗೆ ಫ‌ಲಿತಾಂಶ ಪ್ರಕಟವಾಗಲಿದೆ.

ವಿತರಕ ವಲಯಕ್ಕೆ ಅಧ್ಯಕ್ಷ ಸ್ಥಾನ: ಪ್ರತಿ ಬಾರಿಯೂ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನ ಒಂದೊಂದು ವಲಯಕ್ಕೆ ಮೀಸಲಾಗಿರುತ್ತದೆ. ಅದರಂತೆ, ಈ ಬಾರಿ ಮಂಡಳಿ ಅಧ್ಯಕ್ಷ ಸ್ಥಾನ ವಿತರಕ ವಲಯಕ್ಕೆ ಮೀಸಲಾಗಿದೆ. ವಿತರಕ ವಲಯದಿಂದ ಈ ಬಾರಿ ಹಿರಿಯ ಸಿನಿಮಾ ವಿತರಕರಾದ ಮಾರ್ ಸುರೇಶ್‌, ಎನ್‌.ಎಂ. ಸುರೇಶ್‌ (ಎಕ್ಸ್‌ಕ್ಯೂಸ್‌ ಮಿ), ಎ. ಗಣೇಶ್‌ ಮತ್ತು ಶ್ರೀನಿವಾಸ್‌ ಎಚ್‌.ಸಿ. (ಶಿಲ್ಪಾ ಶ್ರೀನಿವಾಸ್‌) ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

8 ಪದಾಧಿಕಾರಿಗಳ ಸ್ಥಾನಕ್ಕೆ 24 ಅಭ್ಯರ್ಥಿಗಳ ಪೈಪೋಟಿ: ಚಲನಚಿತ್ರ ವಾಣಿಜ್ಯ ಮಂಡಳಿಯ ಬೈಲಾದಂತೆ, ಒಬ್ಬರು ಅಧ್ಯಕ್ಷರು, ವಲಯವಾರು ಮೂವರು ಉಪಾಧ್ಯಕ್ಷರು, ವಲಯವಾರು ಮೂವರು ಗೌರವ ಕಾರ್ಯದರ್ಶಿಗಳು ಮತ್ತು ಒಬ್ಬರು ಖಜಾಂಚಿ ಸೇರಿದಂತೆ, ಒಟ್ಟು 8 ಮಂದಿಯ ಪದಾಧಿಕಾರಿಗಳ ಸಮಿತಿಯಿರುತ್ತದೆ. ಈ ಬಾರಿ 8 ಪದಾಧಿಕಾರಿಗಳ ಸ್ಥಾನಕ್ಕೆ ಬರೋಬ್ಬರಿ 24 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕಣದಲ್ಲಿರುವ ಪ್ರಮುಖರು: ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮೀಳಾ ಜೋಷಾಯ್‌, ಎಂ.ಬಿ.ಬಾಬು (ಸೂರಪ್ಪ ಬಾಬು), ಮಹದೇವ್‌ ಬಿ. (ಚಿಂಗಾರಿ), ರೂಪಾ ಅಯ್ಯರ್‌ ಸ್ಪರ್ಧಿಸಿದ್ದಾರೆ. ವಿತರಕ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಾರಾಯಣ ರೆಡ್ಡಿ ಪಿ. (ನವಯುಗ), ವೆಂಕಟೇಶ್‌ ಜಿ. ಮತ್ತು ಪ್ರದರ್ಶಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನರಸಿಂಹಲು ಎಂ., ಮುರಳಿ ವಿ., ರಂಗಪ್ಪ ಕೆ.ಒ. ಸ್ಪರ್ಧಿಸಿದ್ದಾರೆ. ನಿರ್ಮಾಪಕರ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಭಾ. ಮ.ಗಿರೀಶ್‌, ರಾಜೇಶ್‌ ಬ್ರಹ್ಮಾವರ್‌, ವೀರೇಶ್‌ ಕೆ.ಎಂ. ಕಣದಲ್ಲಿದ್ದಾರೆ. ವಿತರಕರ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಕೇಶವ ಬಿ.ಆರ್‌.ನಾಗರಾಜ್‌ ಸಿ. (ನವಶಕ್ತಿ), ಪಾರ್ಥಸಾರಥಿ ಕೆ. (ಲೀಗಲ್‌ ಪಾರ್ಥ), ಸುಬ್ರಮಣಿ ವಿ. (ಕರಿಸುಬ್ಬು) ಸ್ಪರ್ಧೆಯಲ್ಲಿದ್ದಾರೆ. ಪ್ರದರ್ಶಕರ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್‌ ರಾಜು ಆರ್‌ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

Advertisement

ಉಳಿದಂತೆ ಒಂದು ಖಜಾಂಚಿ ಸ್ಥಾನಕ್ಕೆ ಅಂಚೆಹಳ್ಳಿ ಶಿವಕುಮಾರ್‌, ಜಯಸಿಂಹ ಮುಸುರಿ ಬಿ.ಕೆ. ಮತ್ತು ದಯಾಳ್‌ ಪದ್ಮನಾಭನ್‌ ಸೇರಿದಂತೆ ಮೂವರು ನಾಮಪತ್ರ ಸಲ್ಲಿಸಿದ್ದಾರೆ.

ಕಾರ್ಯಕಾರಿ ಸಮಿತಿಯ 16 ಸ್ಥಾನಕ್ಕೆ 40 ಅಭ್ಯರ್ಥಿಗಳು: ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಸ್ಥಾನದಂತೆ, ಕಾರ್ಯಕಾರಿ ಸಮಿತಿಯ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ತೀವ್ರ ಹಣಾಹಣಿ ನಡೆಯುತ್ತಿದೆ. ಮಂಡಳಿಯ ಕಾರ್ಯಕಾರಿ ಸಮಿತಿಯ 16 ಸ್ಥಾನಕ್ಕೆ ಈಗಾಗಲೇ ಬರೋಬ್ಬರಿ 40 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿ, ಕಣದಲ್ಲಿದ್ದಾರೆ.

ಕನ್ನಡ ಸಿನಿಮಾ ನಿರ್ಮಾಪಕರು ಮತ್ತು ಪ್ರದರ್ಶಕರಿಗೆ ಯುಎಫ್ಒ/ಕ್ಯೂಬ್‌ ಗಳ ಬದಲಾಗಿ ನಮ್ಮದೇ ಆದ ಒಂದು ಪ್ರದರ್ಶನ ವ್ಯವಸ್ಥೆ ಬೇಕಾಗಿದೆ. ತುಂಬ ದುಬಾರಿಯಾಗಿರುವ ಸಿನಿಮಾಗಳ ಅಪ್‌ ಲೋಡ್‌ ಶುಲ್ಕವನ್ನು ಗಣನೀಯವಾಗಿ ಕಡಿಮೆ ಮಾಡಬೇಕಾಗಿದೆ. ಹೀಗಾಗಿ ವಾಣಿಜ್ಯ ಮಂಡಳಿಯಿಂದಲೇ ಇದಕ್ಕಾಗಿ ಒಂದು ಪ್ರತ್ಯೇಕ ಫ್ಲಾರ್ಟ್‌ಫಾರ್ಮ್ ನಿರ್ಮಿಸುವ ಯೋಚನೆಯಿದೆ. ಇದರಿಂದ ಪ್ರತಿವರ್ಷ ನಿರ್ಮಾಪಕರಿಗೆ, ಪ್ರದರ್ಶಕರಿಗೆ ಹತ್ತಾರು ಕೋಟಿ ರೂ. ಉಳಿತಾಯವಾಗುತ್ತದೆ. ಉಳಿದಂತೆ 60 ವರ್ಷ ಮೇಲ್ಪಟ್ಟು ಕಷ್ಟದಲ್ಲಿರುವ ಚಿತ್ರರಂಗದವರಿಗೆ ಪಿಂಚಣಿ ನಿಧಿ ಸೇರಿ ದಂತೆ ಹಲವು ಯೋಜ ನೆ ಗಳನ್ನು ಜಾರಿಗೊಳಿಸುವ ಕನಸಿದೆ. -ಎ. ಗಣೇಶ್‌, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ‌

ರ್ನಾಟಕದಲ್ಲೇ ಕನ್ನಡ ಸಿನಿಮಾಗಳಿಗೆ ಪ್ರಚಾರದಲ್ಲಿ ಮಲತಾಯಿ ಧೋರಣೆ ಆಗುತ್ತಿರುವುದನ್ನು ತಡೆಯಬೇಕಾಗಿದೆ. ಮಂಡಳಿ ಸದಸ್ಯರಿಗೆ ರೀ-ಕ್ರಿಯೇಶನ್ಸ್‌ ಕ್ಲಬ್‌ ಮಾಡುವ ಯೋಜನೆಯಿದೆ. ಸಹಕಾರ ಸಂಘ ರಚಿಸಿ ಸಿನಿಮಾರಂಗದವರಿಗೆ ಸೈಟ್‌ ನಿರ್ಮಿಸುವ ಆಲೋಚನೆಯಿದೆ. -ಮಾರ್ ಸುರೇಶ್‌, ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ಹೊಸ ನಿರ್ಮಾಪಕರಿಗೆ ಸಿನಿಮಾ ಮೇಕಿಂಗ್‌ ಬಗ್ಗೆ ತಿಳಿವಳಿಕೆ, ಯುಎಫ್ಓ/ಕ್ಯೂಬ್‌ ಸೌಲಭ್ಯವನ್ನು ಬೆಂಗಳೂರಿನಲ್ಲೇ ಕಲ್ಪಿಸಬೇಕಾಗಿದೆ. ಮೈಸೂರಿನಲ್ಲಿರುವ ಮಂಡಳಿ ನಿವೇಶನದಲ್ಲಿ ಆ ಭಾಗದ ಸದಸ್ಯರಿಗೆ ಅನುಕೂಲವಾಗುವಂತೆ ಸ್ವಂತ ಕಟ್ಟಡ ಕಟ್ಟುವ ಯೋಚನೆಯಿದೆ. -ಎನ್‌.ಎಂ.ಸುರೇಶ್‌, ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ಇಡೀ ಭಾರತೀಯ ಚಿತ್ರರಂಗ ನಮ್ಮ ಕಡೆಗೆ ತಿರುಗಿ ನೋಡುವಂಥ ಕೆಲಸ ನಮ್ಮ ವಾಣಿಜ್ಯ ಮಂಡಳಿ ಕಡೆಯಿಂದ ಆಗಬೇಕು. ಫಿಲಂ ಸಿಟಿ ಆದಷ್ಟು ಬೇಗ ನಿರ್ಮಾಣವಾಗಬೇಕು, ಹಲವು ವರ್ಷಗಳಿಂದ ಇರುವ ಯುಎಫ್ಒ/ ಕ್ಯೂಬ್‌ ಸಮಸ್ಯೆಗೆ ಈ ಆರಿಯಾದರೂ ಪರಿಹಾರ ಸಿಗಬೇಕು. -ಶ್ರೀನಿವಾಸ್‌ ಹೆಚ್‌. ಸಿ (ಶಿಲ್ಪಾ ಶ್ರೀನಿವಾಸ್‌), ಅಧ್ಯಕ್ಷ ಸ್ಥಾನದ ಆಕಾಂಕ್ಷಿ

Advertisement

Udayavani is now on Telegram. Click here to join our channel and stay updated with the latest news.

Next