Advertisement

ಹೋರಾಟ ಅಭಿವೃದ್ಧಿಗಿರಲಿ ಇಬ್ಭಾಗಕ್ಕಲ್ಲ

02:50 PM Aug 03, 2018 | |

ದಾವಣಗೆರೆ: ಪ್ರತ್ಯೇಕ ರಾಜ್ಯ ರಚನೆ ಒತ್ತಾಯ ವಿರೋಧಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ) ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿ ಕಚೇರಿ ಬಳಿ ಧರಣಿ ನಡೆಯಿತು.

Advertisement

ಈಗಿನ ಕರ್ನಾಟಕ ಏಳೂವರೆ ಶತಮಾನಗಳ ಕಾಲ ಹರಿದು ಹಂಚಿಹೋಗಿತ್ತು. ಅನೇಕ ಮಹಾನೀಯರ ತ್ಯಾಗ, ಬಲಿದಾನದ ಪರಿಣಾಮ 1956ರಲ್ಲಿ ಏಕೀಕರಣಗೊಂಡಿತು. ಆ ನಂತರದ 62 ವರ್ಷಗಲ್ಲಿ ರಾಜ್ಯ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಉತ್ತರ ಕರ್ನಾಟಕದ ಹಲವಾರು ಭಾಗ ಅಭಿವೃದ್ಧಿಗೊಂಡಿಲ್ಲ ಎಂಬ ಆರೋಪ ನಿಜ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷéದ ಪರಿಣಾಮ ಉತ್ತರ ಕರ್ನಾಟಕ ಹಿಂದುಳಿದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಭಿವೃದ್ಧಿ ಆಗಿಲ್ಲ ಎಂಬ ಕಾರಣಕ್ಕೆ ರಾಜ್ಯವನ್ನೇ ಪ್ರತ್ಯೇಕಿಸುವ ಮಾತುಗಳಾಡುವುದು, ಹೋರಾಟಕ್ಕೆ ಮುಂದಾಗುವುದು ಅಕ್ಷಮ್ಯ ಅಪರಾಧ. ಕರ್ನಾಟಕ ರಕ್ಷಣಾ ವೇದಿಕೆ ಯಾವ ಕಾರಣಕ್ಕೂ ರಾಜ್ಯ ಇಬ್ಭಾಗಕ್ಕೆ ಬಿಡುವುದೇ ಇಲ್ಲ ಎಂದು ಧರಣಿ ನಿರತರು ತಿಳಿಸಿದರು.

ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ ಎಂಬುದು ಬಹಿರಂಗ ಸತ್ಯ. ಅಭಿವೃದ್ಧಿಗೆ ಒತ್ತಾಯಿಸಿ ಹೋರಾಟ ನಡೆಸುವುದು ನ್ಯಾಯ ಸಮ್ಮತ. ಆದರೆ, ಅಭಿವೃದ್ಧಿ ಆಗಿಲ್ಲ ಎಂಬ ವಿಚಾರ ಮುಂದಿಟ್ಟುಕೊಂಡು ಅಖಂಡ ಕರ್ನಾಟಕವನ್ನು ಎರಡು ಭಾಗ ಮಾಡಬೇಕು ಎಂಬುದಾಗಿ ಒತ್ತಾಯಿಸುವುದು ಸರಿ ಅಲ್ಲ. ನಮ್ಮನ್ನಾಳಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷéದ ಕಾರಣದಿಂದಾಗಿಯೇ ಅಭಿವೃದ್ಧಿ ಆಗಿಲ್ಲ. ಸ್ಥಳೀಯ ಸಮಸ್ಯೆಗಳ ಪರಿಹಾರ, ಸಮಗ್ರ ಅಭಿವೃದ್ಧಿಗೆ ಸಂಬಂಧಿತ ಜನಪ್ರತಿನಿಧಿಗಳ ವಿರುದ್ಧ ಹೋರಾಟ ಮಾಡಬೇಕೇ ಹೊರತು ಕರ್ನಾಟಕವನ್ನ ತುಂಡು ತುಂಡಾಗಿ ಮಾಡುವ ಯತ್ನ ಇರಲಿ, ಮಾತುಗಳೂ ಯಾವ ಕಾರಣಕ್ಕೆ ಒಪ್ಪುವಂತವಲ್ಲ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹಿಂದಿನಿಂದಲೂ ಹೋರಾಟ ನಡೆಸುತ್ತಿರುವ ವೇದಿಕೆ ಮುಂದೆಯೂ ಆ ವಿಚಾರವಾಗಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಬೆಂಬಲದ ಮಾತುಗಳಾಡಿರುವ ಉತ್ತರ ಕರ್ನಾಟಕದ ಕೆಲವು ಜನಪ್ರತಿನಿಧಿಗಳು, ಮಠಾಧೀಶರರು, ರೈತ ಸಂಘದ ಪದಾಧಿಕಾರಿಗಳು ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ ಕೆಂಗಲ್‌ ಹನುಮಂತಯ್ಯ, ಆಲೂರು ವೆಂಕಟರಾವ್‌, ಬಳ್ಳಾರಿ ರಂಜಾನ್‌ಸಾಬ್‌, ಕೆ.ಸಿ. ರೆಡ್ಡಿ, ರಾ.ರ. ದೇಶಪಾಂಡೆ, ಎಸ್‌. ನಿಜಲಿಂಗಪ್ಪ, ದ.ರಾ. ಬೇಂದ್ರೆ, ಪಾಟೀಲ್‌ ಪುಟ್ಟಪ್ಪ ಅವರಂಥ ಮಹಾನ್‌ ನಾಯಕರನ್ನು ಮರೆತಂತೆ ಕಾಣುತ್ತದೆ. ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸುವುದು ಹೇಯ ಕೃತ್ಯ ಎಂದು ಖಂಡಿಸಿದರು.

ಉತ್ತರ ಕರ್ನಾಟಕದ ಪ್ರತ್ಯೇಕತೆಯ ಕೂಗು ಮೂಲ ಕಾರಣ ಮುಖ್ಯಮಂತ್ರಿ ಕುಮಾರಸ್ವಾಮಿ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವವವರು ಇಡೀ ನಾಡಿನ ಬಗ್ಗೆ ಮಾತನಾಡಬೇಕು. ಮತ ನೀಡಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕದ ಮಾತುಗಳಾಡುವುದು ಸಹ ಖಂಡನೀಯ. ಅಖಂಡ ಕರ್ನಾಟಕ ಇಬ್ಭಾಗಿಸುವ ಮಾತುಗಳಾಡುವುದು ಸರಿಯಲ್ಲ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಮಹದಾಯಿ ವಿಚಾರವಾಗಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ
ಮುಖ್ಯಮಂತ್ರಿಗಳ ಸಭೆ ನಡೆಸಿ, ಪರಿಹರಿಸಬೇಕು.

Advertisement

ದೆಹಲಿಯ ಏಮ್ಸ್‌ ಮಾದರಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಲಬುರುಗಿ, ಬೆಳಗಾವಿ ಕಂದಾಯ ವಿಭಾಗದಲ್ಲಿ ಪ್ರಾರಂಭ ಒಳಗೊಂಡಂತೆ ಇತರೆ ಬೇಡಿಕೆಗಳ ಈಡೇರಿಸುವ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ. ನಾರಾಯಣಗೌಡ) ಜಿಲ್ಲಾ ಅಧ್ಯಕ್ಷ ಎಂ.ಎಸ್‌. ರಾಮೇಗೌಡ, ಜಾನಪದ ತಜ್ಞ ಡಾ| ಎಂ.ಜಿ. ಈಶ್ವರಪ್ಪ, ಸರ್ಕಾರಿ ನೌಕರರ ಸಂಘದ ಡಿ. ಮಲ್ಲಿಕಾರ್ಜುನ್‌, ಕೆ.ಜಿ. ಶಿವಕುಮಾರ್‌, ಟಿ. ಶಿವಕುಮಾರ್‌, ಬಿ.ದಿಳೆಪ್ಪ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಬಸಮ್ಮ, ಹನುಮಂತಪ್ಪ, ಸಂತೋಷ್‌, ಧರ್ಮರಾಜ್‌, ಮಂಜುಳಾ, ಶಾಂತಮ್ಮ, ಸಲ್ಮಾಬಾನು, ನಿರ್ಮಲ, ವೀರೇಶ್‌, ಮಲ್ಲಿಕಾರ್ಜುನ್‌, ಪರಮೇಶ್‌, ಎನ್‌.ಟಿ. ಹನುಮಂತಪ್ಪ, ತಿಮ್ಮೇಶ್‌ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next