Advertisement

ಸ್ಪರ್ಧಿಸುವುದಾದರೆ ಮಂಡ್ಯದಿಂದ; ಅದೂ ಕಾಂಗ್ರೆಸ್‌ನಿಂದ

12:34 AM Feb 10, 2019 | Team Udayavani |

ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಯುತ್ತಾರೆ ಎಂಬ ವರದಿಗಳು ಬಂದ ಬೆನ್ನಲ್ಲೇ ಹಲವು ರಾಜಕೀಯ ಆರೋಪ- ಪ್ರತ್ಯಾರೋಪಗಳು ಆರಂಭವಾಗಿವೆ. ಅಂಬರೀಷ್‌ ಅಭಿಮಾನಿಗಳು ಸುಮಲತಾ ಪ್ರವೇಶಕ್ಕೆ ಕಾತರದಿಂದ ಕಾಯುತ್ತಿದ್ದರೆ, ‘ರಾಜಕೀಯ ವಿರೋಧಿ’ಗಳು ಹೊಸ ವರಸೆ ಆರಂಭಿಸಿವೆ. ಈ ಹಂತದಲ್ಲಿ ಸುಮಲತಾ ಏನಂತಾರೆ?

Advertisement

ನೀವಿನ್ನೂ ಸ್ಪರ್ಧೆ ಮಾಡುವುದಾಗಿ ಹೇಳಿಲ್ಲ. ಅಷ್ಟರಲ್ಲೇ ‘ಗೌಡ್ತಿ’ ವಿವಾದ ಶುರುವಾಗಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಆ ತರಹದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಅದರ ಅಗತ್ಯ ಕೂಡಾ ನನಗಿಲ್ಲ. ಎಲ್ಲದಕ್ಕೂ ಪ್ರತಿಕ್ರಿಯೆ ಕೊಡಲು ನಾನು ರಾಜಕಾರಣಿಯಲ್ಲ. ನಮಗೆ ನಮ್ಮದೇ ಆದ ಸ್ಟಾಂಡರ್ಡ್‌ ಇದೆ. ಘನತೆ, ಗೌರವ ಏನೆಂಬುದನ್ನು ನಾನು ಅಂಬರೀಶ್‌ ಅವರಿಂದ ಕಲಿತಿದ್ದೇನೆ. ದ್ವೇಷದ ರಾಜಕಾರಣವನ್ನು ಅವರು ಯಾವತ್ತೂ ಮಾಡಿಲ್ಲ. ನಮಗೆ ಅವರೇ ಸ್ಟಾಂಡರ್ಡ್‌. ಹಾಗಾಗಿ, ಆ ಬಗ್ಗೆ ನಾನು ಏನೂ ಮಾತನಾಡಲು ಇಚ್ಛೆ ಪಡೋದಿಲ್ಲ. ನನ್ನ ಪ್ರತಿಕ್ರಿಯೆಗಿಂತ ಜನಾನೇ ಸರಿಯಾದ ಪ್ರತಿಕ್ರಿಯೆ ನೀಡಿದ್ದಾರೆ.

ನಾಳೆ ಚುನಾವಣಾ ಅಖಾಡದಲ್ಲಿ ಇದೇ ವಿಚಾರ ಬರಬಹುದು. ಇದನ್ನು ಹೇಗೆ ಎದುರಿಸುತ್ತೀರಿ?
– 
ಪಾಲಿಟಿಕ್ಸ್‌ಗೆ ಬರಬೇಕೆಂದು ನಾನು ಯಾವತ್ತೂ ಕನಸು ಕಂಡವಳಲ್ಲ. ಆ ಆಸೆ ಇದ್ದಿದ್ದರೆ ಯಾವತ್ತೋ ಬರುತ್ತಿದ್ದೆ. ರಾಜಕೀಯಕ್ಕೆ ನಾನು ಬರಲೇಬೇಕೆಂಬುದು ಜನರ ಆಸೆಯೇ ಹೊರತು ನನ್ನದಲ್ಲ. ಅಂಬರೀಶ್‌ ಅವರು, ತನ್ನ ಹೆಂಡ್ತಿ, ಮಗನನ್ನು ರಾಜಕೀಯಕ್ಕೆ ಕರೆದುಕೊಂಡು ಬರಲ್ಲ ಅಂತಾನೇ ಹೇಳುತ್ತಿದ್ದರು. ಅವರು ತನ್ನ ಕುಟುಂಬದವರನ್ನು ರಾಜಕೀಯಕ್ಕೆ ತರಬೇಕೆಂದು ಯಾವತ್ತೂ ಅಂದುಕೊಂಡಿಲ್ಲ. ನಮಗೂ ಆ ತರಹದ ಆಸಕ್ತಿ ಇರಲಿಲ್ಲ. ಅವರಿಗೆ ಹಿಂದಿನಿಂದ ಪ್ರೋತ್ಸಾಹ ಕೊಡುತ್ತಿದ್ದೆವು ಅಷ್ಟೇ. ಹಾಗಾಗಿ, ನನಗೆ ಇದು ಎಫೆಕ್ಟ್ ಆಗಲ್ಲ. ರಾಜಕೀಯಕ್ಕೆ ಬಂದು 25-30 ವರ್ಷ ರಾಜಕೀಯದಲ್ಲಿದ್ದು, ಏನೇನೋ ಆಗಿಬಿಡಬೇಕು ಎಂಬ ಆಸೆ ಇದ್ದಿದ್ದರೆ, ನಾನು ಇಂತಹ ಹೇಳಿಕೆಗಳಿಗೆ ಭಯಪಡಬೇಕು. ನನಗೆ ಆ ತರಹದ ಯಾವ ಉದ್ದೇಶವೂ ಇಲ್ಲ. ಇದು ಜನರಿಗೆ ಬಿಟ್ಟ ವಿಚಾರ. ಅಂತಿಮ ಉತ್ತರವನ್ನು ಅವರೇ ಕೊಡುತ್ತಾರೆ.

ಸ್ಪರ್ಧಿಸುವುದಾದರೆ ಯಾವ ಪಕ್ಷದಿಂದ?
– 
ರಾಜಕೀಯಕ್ಕೆ ಬರೋದಾದ್ರೆ ಮಂಡ್ಯದಿಂದ. ಯಾವ ಪಕ್ಷದವರ ಜೊತೆಯೂ ಮಾತನಾಡಿಲ್ಲ. ನಾನು ಮಾನಸಿಕವಾಗಿ ಸಿದ್ಧಳಾಗೋಕೆ ಮುಂಚೆ ನಾನ್ಯಾಕೆ ಬೇರೆಯವರ ಜೊತೆ ಮಾತನಾಡಲಿ?

ನಿಮ್ಮ ಆಲೋಚನೆ, ಚಿಂತನೆ ಯಾವ ಪಕ್ಷಕ್ಕೆ ಹೊಂದುತ್ತದೆ?
– 
ಖಂಡಿತಾ ಕಾಂಗ್ರೆಸ್‌. ಆ ಪಕ್ಷದಲ್ಲೇ ನನ್ನ ಪತಿ 20 ವರ್ಷ ಇದ್ದಿದ್ದು. ಕಾಂಗ್ರೆಸ್‌ ಪಕ್ಷಕ್ಕೆ ಅವರ ಸೇವೆ ಸಾಕಷ್ಟಿದೆ. ಜೊತೆಗೆ ಅವರು ಸಚಿವರಾಗಿದ್ದು ಕೂಡಾ ಆ ಪಕ್ಷದಿಂದಲೇ. ಅವರು ನಿಷ್ಠಾವಂತ ಕಾಂಗ್ರೆಸಿಗರಾಗಿದ್ದವರು. ಹಾಗಾಗಿ, ಕಾಂಗ್ರೆಸ್‌ನಿಂದಲೇ ಎದುರು ನೋಡುತ್ತೇನೆ. •4ನೇ ಪುಟಕ್ಕೆ

Advertisement

ಮಂಡ್ಯ ಅಭಿವೃದ್ಧಿ ಬಗ್ಗೆ ಏನು ಕನಸು ಹೊಂದಿದ್ದೀರಿ?
– 
ಮಂಡ್ಯ ಬಗ್ಗೆ ಅಂಬರೀಶ್‌ ಅವರಿಗೆ ತುಂಬಾ ಕನಸಿತ್ತು. ಮಂಡ್ಯವನ್ನು ತುಂಬಾ ಅಭಿವೃದ್ಧಿ ಮಾಡಬೇಕೆಂಬ ಕನಸು ಕಂಡಿದ್ದರು. ಐಟಿಬಿಟಿ ಈಗ ಕೇವಲ ಬೆಂಗಳೂರಿನಲ್ಲಿ ಮಾತ್ರ ಇದೆ. ಅದು ಮಂಡ್ಯಕ್ಕೂ ಬರೋ ತರಹ ಆಗಬೇಕೆಂಬ ಆಸೆ ಅವರಿಗಿತ್ತು. ಮಂಡ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿದ್ದರು. ಮಂಡ್ಯ ಯುವಕರನ್ನು ಮುಂದೆ ತಂದು, ಮಂಡ್ಯ ಇಂಡಿಯಾದಲ್ಲೇ ನಂಬರ್‌ ಒನ್‌ ಆಗಬೇಕೆಂಬ ಆಸೆ ಹೊಂದಿದ್ದರು. ಅದು ಅವರ ಫೆವರಿಟ್ ಡ್ರೀಮ್‌. ಅವರ ಕನಸನ್ನು ಮುಂದೆ ತಗೊಂಡು ಹೋಗಬೇಕೆಂಬುದು ನನ್ನ ಕನಸು.

ಇಷ್ಟು ದಿನ ಕಲಾವಿದರಾಗಿದ್ದ ನಿಮಗೆ ರಾಜಕೀಯ ಹೊಂದಿಕೆಯಾಗುತ್ತಾ?
– 
ನಾನು ಸಿನಿಮಾಕ್ಕೆ ಬಂದಾಗಲೂ ನನಗೆ ಸಿನಿಮಾ ಬಗ್ಗೆ ಏನೂ ಗೊತ್ತಿರಲಿಲ್ಲ. ನೀರಿಗೆ ಬಿದ್ದ ನಂತರವೇ ಈಜು ಕಲಿಯೋದು. ಆಚೆ ನಿಂತುಕೊಂಡು ಈಜು ಕಲಿಯಲು ಆಗಲ್ಲ. ನೀರಿಗೆ ಬಿದ್ದ ಮೇಲೆ ಈಜಲು ಕಲಿಯಲೇಬೇಕು. ರಾಜಕೀಯ ಕೂಡಾ ಅದೇ ರೀತಿ. ಮುಂದೆ ನೋಡೋಣ …

ನೀವು ರಾಜಕೀಯಕ್ಕೆ ಬರುವ ಬಗ್ಗೆ ಅಂಬರೀಶ್‌ ನಿಮ್ಮಲ್ಲೇನಾದರೂ ಮಾತನಾಡಿದ್ದು ಇದೆಯಾ?
– 
ಅವರು ತಮಾಷೆಗೆ ಅಂದಿರಬಹುದು. ಗಂಭೀರವಾಗಿ ಯಾವತ್ತೂ ಹೇಳಿಲ್ಲ. ಕುಟುಂಬದ ಯಾರಾದರೂ ಒಬ್ಬರು ರಾಜಕೀಯದಲ್ಲಿರಬೇಕು. ಉಳಿದವರು ಅವರಿಗೆ ಬೆಂಬಲವಾಗಿರಬೇಕೆಂದುಕೊಂಡಿದ್ದರು. ಎಲ್ಲರೂ ರಾಜಕೀಯಕ್ಕೆ ಬಂದರೆ ಅದಕ್ಕೆ ಅರ್ಥವಿರೋದಿಲ್ಲ. ರಾಜಕೀಯ ವೃತ್ತಿಯಲ್ಲ, ಅದು ಸೇವೆ. ಆ ನಿಟ್ಟಿನಲ್ಲೇ ಕೆಲಸ ಮಾಡಬೇಕಾಗುತ್ತದೆ ಕೂಡಾ.

ನಿಮ್ಮ ರಾಜಕೀಯ ಎಂಟ್ರಿ ಬಗ್ಗೆ ಪುತ್ರ ಅಭಿಷೇಕ್‌ ಏನಂತಾರೆ?
– 
‘ಅಮ್ಮ ನಿನಗೆ ಸಾಮರ್ಥ್ಯವಿದೆ’ ಅಂತಾನೆ. ‘ನಿನಗೆ ಧೈರ್ಯವಿದ್ದರೆ ಮುಂದೆ ಹೋಗು, ನಾವೆಲ್ಲರೂ ಜೊತೆಗಿರುತ್ತೇನೆ’ ಎನ್ನುತ್ತಾನೆ.

ಮುಂದಿನ ದಿನಗಳಲ್ಲಿ ಅಭಿಷೇಕ್‌ ರಾಜಕೀಯಕ್ಕೆ ಬರುತ್ತಾರಾ?
– 
ಅದನ್ನು ಈಗಲೇ ಹೇಳ್ಳೋದು ಕಷ್ಟ. ಆದರೆ, ಅವನಿಗೆ ರಾಜಕೀಯದಲ್ಲಿ ತುಂಬಾ ಆಸಕ್ತಿ ಇದೆ. ಆತ ಲಂಡನ್‌ನಲ್ಲಿ ಓದಿರೋದು ಕೂಡಾ ಎಂಎ ಇನ್‌ ಪಾಲಿಟಿಕ್ಸ್‌. ನನ್ನ ಮೂಲಕ ಅವನಿಗೆ ಇದೊಂದು ಅನುಭವ ಆಗಬಹುದು.

ನಿಮ್ಮ ರಾಜಕೀಯ ಪ್ರವೇಶಕ್ಕೆ ಚಿತ್ರರಂಗದ ಬೆಂಬಲ ಹೇಗಿದೆ?
– 
ನಾನು ಯಾರ ಜೊತೆಯೂ ಈ ಬಗ್ಗೆ ಚರ್ಚೆ ಮಾಡಿಲ್ಲ. ‘ನಿಮ್ಮ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ’ ಎನ್ನುತ್ತಾರೆಂಬ ವಿಶ್ವಾಸವಿದೆ.

ಅಭಿಮಾನಿಗಳಿಗೆ ಏನು ಹೇಳಲು ಇಚ್ಛೆಪಡುತ್ತೀರಿ?
– 
ಅಂಬರೀಶ್‌ ಅವರ ಜೊತೆ ಇದ್ದ ಬಾಂಧವ್ಯವನ್ನು ನಮಗೂ ಮುಂದುವರೆಸಿದ್ದಾರೆ. ನಾನು ಅಂಬರೀಶ್‌ ಅವರನ್ನು ಎಷ್ಟು ಮಿಸ್‌ ಮಾಡಿಕೊಳ್ಳುತ್ತಿದ್ದೇನೋ, ಅಭಿಮಾನಿಗಳು ಕೂಡಾ ಅಷ್ಟೇ ಮಿಸ್‌ ಮಾಡ್ತಿದ್ದಾರೆ. ಅಂಬರೀಶ್‌ ಅವರ ನಂತರ ಈ ತರಹದ ಪ್ರೀತಿ ನಮಗೆ ಸಿಗುತ್ತೆ ಅನ್ನೋದನ್ನು ನಿರೀಕ್ಷಿಸಿರಲಿಲ್ಲ. ಅದು ಅವರಿಗಷ್ಟೇ ಅಂದುಕೊಂಡಿದ್ದೆ. ಆದರೆ, ಅದನ್ನು ಮುಂದುವರೆಸುತ್ತಿದ್ದಾರೆ. ಅಂಬರೀಶ್‌ ಅವರನ್ನು ನಟ, ರಾಜಕಾರಣಿಗಿಂತ ವ್ಯಕ್ತಿಯಾಗಿ ಜನ ಪ್ರೀತಿಸುತ್ತಿದ್ದರು. ವ್ಯಕ್ತಿತ್ವಕ್ಕೆ ತೋರಿಸಿದ ಪ್ರೀತಿ ಅದು. ಆ ಪ್ರೀತಿಯನ್ನು ಉಳಿಸಿಕೊಂಡು ಹೋಗುತ್ತೇನೆ.

— ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next