Advertisement

ಕ್ಷೇತ್ರ ಪುನರ್‌ ವಿಂಗಡಣೆ:ತೀರ್ಪು ಕಾಯ್ದಿರಿಸಿದ ಕೋರ್ಟ್‌

07:00 AM Aug 03, 2018 | Team Udayavani |

ಬೆಂಗಳೂರು: ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳ ಕ್ಷೇತ್ರ ಪುನರ್‌ ವಿಂಗಡಣೆ ಅಧಿಸೂಚನೆ ರದ್ದು ಕೋರಿ ಸಲ್ಲಿಕೆಯಾಗಿರುವ ರಿಟ್‌ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

Advertisement

ಈ ಕುರಿತ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾ. ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ಪರ ವಕೀಲರು ಹಾಗೂ ರಾಜ್ಯಸರ್ಕಾರದ ಪರ ವಕೀಲರ ವಾದ, ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ. ರಾಜ್ಯಸರ್ಕಾರ ಕ್ಷೇತ್ರಪುನರ್‌ ವಿಂಗಡಣೆಗೆ ಸಂಬಂಧಿಸಿದಂತೆ ಅವೈಜ್ಞಾನಿಕವಾಗಿ ಪಟ್ಟಿ ತಯಾರಿಸಿ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಪೌರಾಡಳಿತ ಕಾಯ್ದೆ ಸೆಕ್ಷನ್‌ 7 ಹಾಗೂ 21ನ್ನು ಉಲ್ಲಂಘಿಸಲಾಗಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳ ಕ್ಷೇತ್ರಪುನರ್‌ ವಿಂಗಡಣೆ ಕುರಿತು 2014 ಹಾಗೂ 2016ರಲ್ಲಿ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ.

ಹೀಗಾಗಿ ರಾಜ್ಯಸರ್ಕಾರ ಹೊರಡಿಸಿರುವ ಕ್ಷೇತ್ರಪುನರ್‌ ವಿಂಗಡಣೆ ಅಧಿಸೂಚನೆ ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದಾರೆ. ಮೈಸೂರಿನ ಪಾಲಿಕೆಯ 65 ವಾರ್ಡ್‌ಗಳ ಕ್ಷೇತ್ರ ಪುನರ್‌ವಿಂಗಡಣೆ ಸಂಬಂಧ ಏಪ್ರಿಲ್‌ 23ರಂದು ರಾಜ್ಯಸರ್ಕಾರದ ಅಧಿಸೂಚನೆ ರದ್ದುಕೋರಿ ಕುಂಬಾರಕೊಪ್ಪಲುವಿನ ಶಿವಮಾದು ಸೇರಿ ಮತ್ತಿತರರು ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ತುಮಕೂರಿನ ಪಾಲಿಕೆ ಅಧಿಸೂಚನೆಗೆ ಆಕ್ಷೇಪಿಸಿ ಬಿ.ಎಸ್‌ ನಾಗೇಶ್‌ ಮತ್ತಿತರರು ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next