Advertisement

ಕೊಡಿಮರ ಸಾಗಿಸುವ ವಾಹನ ಸಾರಥಿ ಸಾಹಸ ವೈರಲ್‌

03:50 AM Dec 11, 2018 | Team Udayavani |

ನಗರ: ಅಗಲ ಕಿರಿದಾದ ರಸ್ತೆ, ಬಲ ಭಾಗದಲ್ಲಿ ಕೆರೆ, ಎಡ ಭಾಗದಲ್ಲಿ ಹೊಳೆ, ಜತೆಗೆ ದೊಡ್ಡ ತಿರುವು. ಇಂತಹ ರಸ್ತೆಯಲ್ಲಿ ದೊಡ್ಡ ಭಾರದ ಮರವನ್ನು ತುಂಬಿಕೊಂಡ 18 ಚಕ್ರದ ಟ್ರೈಲರ್‌ ಅನ್ನು ಅದರ ಚಾಲಕ ಯಶಸ್ವಿಯಾಗಿ ಮುನ್ನಡೆಸುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಶೇಷ ನಡೆದಿರುವುದು ಬಡಗನ್ನೂರು ಗ್ರಾಮದ ಪಟ್ಟೆಯಲ್ಲಿ. ಅವಳಿ ವೀರ ಪುರುಷರಾದ ಕೋಟಿ – ಚೆನ್ನಯರು ಹಾಗೂ ತಾಯಿ ದೇಯಿ ಬೈದ್ಯೆತಿಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಕ್ಕೆ ಬಿಂಬಮರ ಮತ್ತು ಕೊಡಿ ಮರವನ್ನು ಮೆರವಣಿಗೆಯ ಮೂಲಕ ಸಾಗಿಸುವಾಗ ನಡೆದ ಘಟನೆಯಿದು. ಟ್ರೈಲರನ್ನು ಚಾಲನೆ ಮಾಡಿರುವುದು ನುರಿತ ಚಾಲಕ ಮಂಗಳೂರು ಪಣಂಬೂರು ನಿವಾಸಿ ದಿವಾಕರ ಪೂಜಾರಿ.

Advertisement

289ನೇ ಅನುಭವ
ದಿವಾಕರ ಪೂಜಾರಿ ಅವರು ರಾಜ್ಯ, ಹೊರ ರಾಜ್ಯಗಳಲ್ಲಿ 289 ದೈವ, ದೇವಸ್ಥಾನಗಳಿಗೆ ಕೊಡಿಮರ ಸಾಗಿಸಿ ಅನುಭವ ಇರುವ ಚಾಲಕ. ಈ ಸೇವೆಯನ್ನು ಭಕ್ತಿಯಿಂದ ಮಾಡಿರುವ ಅವರು ಕೋಟಿ – ಚೆನ್ನಯ ಮೂಲಸ್ಥಾನಕ್ಕೆ 28ನೇ ಕೊಡಿಮರ ಸಾಗಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎನ್ನುತ್ತಾರೆ. ದೈವಸ್ಥಾನ, ದೇವಸ್ಥಾನಗಳಿಗೆ ಉಚಿತವಾಗಿ ಟ್ರೈಲರ್‌ ಒದಗಿಸುವ ಮಾಲಕ ಮಾಜಿ ಸಚಿವ ನಾಗರಾಜ ಶೆಟ್ಟಿ ಅವರ ಭಕ್ತಿಯ ಸೇವೆಯನ್ನು ನೆನೆಯುತ್ತಾರೆ. ರಾಜ್ಯದೊಳಗೆ ದೇವಾಲಯಗಳಿಗೆ ಕೊಡಿಮರ ಕೊಂಡೊಯ್ಯುವ ಸಂದರ್ಭ ಉಚಿತ ವಾಹನದ ವ್ಯವಸ್ಥೆ ಮಾಡುವ ಇವರು ಹೊರರಾಜ್ಯಗಳಿಗೆ ಮಾತ್ರ ಲೋಡ್‌ ಆದ ಬಳಿಕದ ಖರ್ಚು ತೆಗೆದುಕೊಳ್ಳುತ್ತಾರೆ.

ಯಶಸ್ವಿ ಪಯಣ
ಪೊಳಲಿ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಶರವು ಮಹಾಗಣಪತಿ ದೇವಸ್ಥಾನ ಸಹಿತ ಜಿಲ್ಲೆಯ-ಹೊರಜಿಲ್ಲೆಗಳ ದೇವಾಲಯದ ಕೊಡಿಮರ, ಮೈಸೂರು ಚಾಮುಂಡಿ ಬೆಟ್ಟ, ಆಂಧ್ರಪ್ರದೇಶದ ಶ್ರೀ ಶೈಲಂ ಮಹಾನಂದಿ ದೇವಾಲಯ, ಮಹಾರಾಷ್ಟ್ರ  ಜಿ.ಎಸ್‌.ಬಿ. ದೇವಾಲಯಗಳಿಗೆ ಕೊಡಿಮರ, ದೊಡ್ಡ ಗಾತ್ರದ ಶಿಲೆಗಳನ್ನು ಸಾಗಿಸಿದ ಹೆಗ್ಗಳಿಕೆ ದಿವಾಕರ ಪೂಜಾರಿ ಅವರದ್ದು. ಕಾರ್ಕಳದಿಂದ ಸಾವಿರ ಕಂಬ ಬಸದಿಗೆ ಗೊಮಟೇಶ್ವರ ಮೂರ್ತಿ ಕೊಂಡೊಯ್ದಿರುವುದು, ವಿವಿಧ ಕಡೆಗಳಿಗೆ ಸುಮಾರು 5 ರಥಗಳನ್ನು ವಾಹನದ ಸಾರಥಿಯಾಗಿ ಇವರು ಯಶಸ್ವಿಯಾಗಿ ಸಾಗಿಸಿದ್ದಾರೆ.

ರಿಸ್ಕ್ ಇದೆ
ಈ ಜವಾಬ್ದಾರಿಯಲ್ಲಿ ಸಾಕಷ್ಟು ರಿಸ್ಕ್ ಇದೆ. ವರ್ಷದಲ್ಲಿ 10 -20 ಕ್ಷೇತ್ರಗಳಿಗೆ ಕೊಡಿಮರಗಳನ್ನು ಸಾಗಿಸುತ್ತೇನೆ. ಎಷ್ಟೇ ಅನುಭವ ಇದ್ದರೂ ಟ್ರೇಲರ್‌ಗೆ ಲೋಡ್‌ ಮಾಡಿದ ಬಳಿಕ ದೈವ, ದೇವರ ಕಾರಣಿಕದಿಂದ ಯಶಸ್ಸು ಲಭಿಸುತ್ತದೆ. ಶ್ರದ್ಧೆ, ನಿಷ್ಠೆಯ ಜತೆಗೆ ಶುದ್ಧತೆಯ ವ್ರತವನ್ನು ಕೊಡಿಮರ ಸಾಗಿಸುವ ಸಂದರ್ಭ ಪಾಲಿಸುತ್ತೇನೆ. 
– ದಿವಾಕರ ಪೂಜಾರಿ, ಟ್ರೇಲರ್‌ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next