Advertisement

Private Hospital ಡೆಂಗ್ಯೂ ಪರೀಕ್ಷೆಗೆ ಶುಲ್ಕ ನಿಗದಿ: ಸಚಿವ ದಿನೇಶ್‌

10:18 PM Jul 02, 2024 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸಲು ವಿವಿಧ ಇಲಾಖೆಗಳ ಸಹಕಾರ ಕೋರಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ಸರ್ಕಾರದಿಂದಲೇ ಶುಲ್ಕ ನಿಗದಿಪಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಮಂಗಳವಾರ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿದ ಅವರು, ಡೆಂಗ್ಯೂ ನಿಯಂತ್ರಣಕ್ಕೆ ಸ್ಥಳೀಯವಾಗಿ ಸಹಕರಿಸಬೇಕೆಂದು ಕೋರಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಸಾಧಾರಣವಾಗಿ 2 ವರ್ಷಕ್ಕೊಮ್ಮೆ ಉಲ್ಬಣಿಸುತ್ತಿದ್ದ ಡೆಂಗ್ಯೂ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗಿದೆ. ನೀರು ನಿಲ್ಲದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಸಾರಿಗೆ ಡಿಪೋ, ಬಸ್‌ ನಿಲ್ದಾಣ ಇತ್ಯಾದಿ ಕಡೆಗಳಲ್ಲಿ ದಾಸ್ತಾನು ಮಾಡಿದ್ದ ಟೈರ್‌ನಲ್ಲಿ ಲಾರ್ವಾ ಪತ್ತೆಯಾಗಿದ್ದು ಈ ಬಗ್ಗೆ ಗಮನ ವಹಿಸುವಂತೆ ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿದೆ.

ಟೆಮಿಫಾಸ್‌ ಸಿಂಪಡಣೆ ಮಾಡಲಾಗುತ್ತಿದ್ದು ಕೊನೆಯ ಹಂತದಲ್ಲಿ ಫಾಗಿಂಗ್‌ ಕೂಡ ಮಾಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯಕೀಯ ಅಧಿಕಾರಿಗಳು, ಎಂಒಎಚ್‌ಗಳು ತಮ್ಮ ವ್ಯಾಪ್ತಿಯಲ್ಲಿನ 8-10 ಶಾಲೆಗಳಿಗೆ ಭೇಟಿ ಕೊಟ್ಟು ಶಿಕ್ಷಕರಿಗೆ ತರಬೇತಿ ಕೊಟ್ಟು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಈ ಸಂಬಂಧ 2 ದಿನದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪಂಚಾಯತಿಗಳ ಸಿಇಒಗಳ ಸಭೆ ಕರೆದು ಮಾರ್ಗಸೂಚಿ ನಿಗದಿಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮಾಹಿತಿ ಕೊಡದ ಖಾಸಗಿ ಆಸ್ಪತ್ರೆಗಳು:
ಕಳೆದ ಬಾರಿ ಇದೇ ಸಂದರ್ಭದಲ್ಲಿ 2,903 ಇದ್ದ ಡೆಂಗ್ಯೂ ಪ್ರಕರಣಗಳು ಈ ಬಾರಿ ಜ.1 ರಿಂದ ಜು.1 ರವರೆಗೆ 6,187 ರಷ್ಟಾಗಿವೆ. ಗ್ರಾಮೀಣ ಭಾಗದಲ್ಲಿ 3,463 ಪ್ರಕರಣಗಳು ಗುರುತಿಸಿದ್ದು, ಶೇ.56 ರಷ್ಟು ಪ್ರಕರಣಗಳು ಗ್ರಾಮೀಣ ಭಾಗದಲ್ಲೇ ಇವೆ. ಪ್ರದೇಶಗಳಲ್ಲಿ ಶೇ.44 ರಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,563 ಪ್ರಕರಣಗಳು ಪತ್ತೆಯಾಗಿವೆ. ಶೇ.42 ರಷ್ಟು ಪರೀಕ್ಷಾ ಪ್ರಮಾಣ ಹೆಚ್ಚಳ ಆಗಿರುವುದರಿಂದ ಪತ್ತೆಯಾಗುವ ಪ್ರಕರಣಗಳೂ ಹೆಚ್ಚಾಗಿವೆ.

Advertisement

ಈವರೆಗೆ ಆರು ಮಂದಿ ಮೃತಪಟ್ಟಿದ್ದು, ಈ ಪೈಕಿ ಮೂವರು ಇತರೆ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಕೇಸ್‌ ಫೆಟಾಲಿಟಿ ರೇಟ್‌ (ಸಿಎಫ್ಆರ್‌) ಶೇ.0.5ಕ್ಕಿಂತ ಕಡಿಮೆ ಇರಬೇಕು. ನಮ್ಮಲ್ಲಿ ಶೇ.0.09 ರಷ್ಟಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ವಿವರಿಸಿದರು.

ಆರೋಗ್ಯ ಇಲಾಖೆ ಅಂದಾಜು ಮಾಡಿರುವುದಕ್ಕಿಂತ ಹೆಚ್ಚಿನ ಪ್ರಕರಣಗಳು ಇರಬಹುದು. ಆದರೆ, ಅನೇಕ ಖಾಸಗಿ ಆಸ್ಪತ್ರೆಗಳು ಸರಿಯಾದ ಮಾಹಿತಿ ಕೊಟ್ಟಿಲ್ಲ. ಹೀಗಾಗಿ ವೆಬ್‌ಪೋರ್ಟಲ್‌ಗೆ ದತ್ತಾಂಶ ಅಪ್‌ಲೋಡ್‌ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದ ಸಚಿವರು, ಸರ್ಕಾರಿ ಆಸ್ಪತ್ರೆಗಳಿಗೆ ಟೆಸ್ಟಿಂಗ್‌ ಕಿಟ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿದ್ದು, ಎಲ್ಲಿಯೂ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಸದ್ಯಕ್ಕೆ ಡೆಂಗ್ಯೂ ಗೆ ಪ್ರತ್ಯೇಕ ಚಿಕಿತ್ಸಾ ಪದ್ಧತಿ ಇಲ್ಲ. ಪ್ಯಾರಾಸಿಟಮಲ್‌ ಕೊಡಲಾಗುತ್ತಿದ್ದು, ಜ್ವರ ತೀವ್ರವಾಗಿ ಬಿಳಿರಕ್ತಕಣ (ಪ್ಲೇಟ್ಲೆಟ್ಸ್‌) ಕಡಿಮೆಯಾದರೆ ರಕ್ತನಿಧಿ ಕೇಂದ್ರಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಐವಿ ಫ‌ುಯೆಡ್ಸ್‌ ಕೂಡ ಸಾಕಷ್ಟು ದಾಸ್ತಾನು ಮಾಡಲಾಗಿದೆ ಎಂದು ವಿವರಿಸಿದರು.

ಶುಲ್ಕ ನಿಗದಿ ಬಗ್ಗೆ ಚರ್ಚೆಯೇ ಇಲ್ಲ
ಡೆಂಗ್ಯೂ ಪತ್ತೆಗಾಗಿ ರ್ಯಾಪಿಡ್‌ ಆಂಟಿಜನ್‌ ಪರೀಕ್ಷೆ ಮಾಡಿ ಶಂಕಿತ ಪ್ರಕರಣಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಎಲಿಸಾ ಪರೀಕ್ಷೆ ಮಾಡಿದ ಪ್ರಕರಣಗಳನ್ನಷ್ಟೇ ಸರ್ಕಾರ ಪಾಸಿಟಿವ್‌ ಎಂದು ಪರಿಗಣಿಸುತ್ತಿದೆ. ಎನ್‌ಎಸ್‌ 1 ಟೆಸ್ಟ್‌ಗೆ ದರ ನಿಗದಿಪಡಿಸದೇ ಇರುವುದರಿಂದ ಖಾಸಗಿ ಆಸ್ಪತ್ರೆಗಳು ಮನಬಂದಂತೆ ಪರೀಕ್ಷಾ ಶುಲ್ಕ ಪಡೆಯುತ್ತಿವೆ. ಈ ಬಗ್ಗೆ ಸಚಿವರ ಸಭೆಯಲ್ಲಿ ಚರ್ಚೆಯೇ ಆಗಿಲ್ಲ. ಪರೀಕ್ಷಾ ಶುಲ್ಕದ ಬಗ್ಗೆ ಸಭೆಯಲ್ಲಿ ಏಕೆ ಚರ್ಚೆ ಮಾಡಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಎಚ್ಚೆತ್ತುಕೊಂಡ ಸಚಿವರು, ನಾಳೆಯೇ ದರ ನಿಗಿದಪಡಿಸಿ ಎಂದು ಗುಂಡೂರಾವ್‌ ಸೂಚಿಸಿದರು.

ಪ್ರತಿ ಶುಕ್ರವಾರ ಅಧಿಕಾರಿಗಳ ಖುದ್ದು ಭೇಟಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಡವರು, ಕಾರ್ಮಿಕರು, ಜನಸಂಖ್ಯೆ ಹೆಚ್ಚಿರುವ ಸೂಕ್ಷ್ಮ ಪ್ರದೇಶದಲ್ಲಿ ಮಾತ್ರ ಲಾರ್ವಾ ಸರ್ವೇ ಮಾಡಿ, ಜನಜಾಗೃತಿ ಮೂಡಿಸಲು ಸೂಚಿಸಿತ್ತು. ಈಗ ಬೆಂಗಳೂರಿನಲ್ಲಿರುವ 25-30 ಲಕ್ಷ ಮನೆಗಳಲ್ಲೂ ಲಾರ್ವಾ ಸರ್ವೇ ಮಾಡಿ, ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಸ್ಥಳೀಯ ನಿವಾಸಿಗಳ ಕಲ್ಯಾಣ ಸಂಘ, ಕಟ್ಟಡ ಕಾರ್ಮಿಕರ ಸಂಘಗಳು, ಕ್ರೆಡೈನಂತಹ ಸಂಸ್ಥೆಗಳ ನೆರವು ಪಡೆಯಬಹುದು. ಉಳಿದ ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲೂ ಪ್ರತಿ ಮನೆಯ ಲಾರ್ವಾ ಸಮೀಕ್ಷೆ ನಡೆಸಬೇಕು. ಪ್ರತಿ ಶುಕ್ರವಾರ ಅಧಿಕಾರಿಗಳು ಖುದ್ದು ಭೇಟಿ ನೀಡಿ ಮೇಲ್ವಿಚಾರಣೆ ಮಾಡಬೇಕು ಎಂದು ಆದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next