Advertisement

ಶರವೇಗದಲ್ಲಿ ಏರಿದ ಪ್ರವಾಹ: ಉಪ್ಪಿನಂಗಡಿಯಲ್ಲಿ ನೆರೆ ಭೀತಿ

12:01 PM Aug 17, 2018 | Team Udayavani |

ಉಪ್ಪಿನಂಗಡಿ: ಮಂಗಳವಾರ ರಾತ್ರಿ ಸಂಗಮವಾದ ಬಳಿಕ ಶಾಂತವಾಗಿದ್ದ ಮಳೆ ಬುಧವಾರ ರಾತ್ರಿಯಿಂದ ಮತ್ತೆ ಜೋರಾಗಿ ಸುರಿದು, ಇತಿಹಾಸದಲ್ಲೇ ಮೊದಲ ಬಾರಿ ಎನ್ನುವಂತೆ ಕೇವಲ ಮೂರು ದಿನಗಳ ಅವಧಿಯಲ್ಲಿ ಎರಡನೇ ಸಂಗಮಕ್ಕೆ ಉಪ್ಪಿನಂಗಡಿ ಸಾಕ್ಷಿಯಾಗಿದೆ. ಜತೆಗೆ, ನೆರೆಭೀತಿಯೂ ಆವರಿಸಿದೆ. ಬುಧವಾರ 24.2 ಮೀ. ಇದ್ದ ನದಿ ನೀರಿನ ಮಟ್ಟ ಮಳೆಯಿಂದಾಗಿ ಒಂದೇ ಸಮನೆ ಏರ ತೊಡಗಿತು. ಗುರುವಾರ ಮುಂಜಾನೆ ಅಪಾಯದ ಮಟ್ಟ ತಲುಪಿದ ನದಿ, ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ 32.6 ಮೀ.ಗೆ ಏರಿತು.

Advertisement

ಐತಿಹಾಸಿಕ ಸಂಗಮ
100 ವರ್ಷಗಳ ಇತಿಹಾಸದಲ್ಲಿ ಒಂದೇ ಮಳೆಗಾಲದಲ್ಲಿ ಎರಡು ಸಲ ಸಂಗಮ ಆಗಿರುವುದು ಇದೇ ಮೊದಲು. 2013ರ ಬಳಿಕ ಆ. 14, 2018ರಂದು ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮವಾಗಿತ್ತು. ಎರಡೇ ದಿನ ಗಳ ಅವಧಿಯಲ್ಲಿ ಮತ್ತೊಮ್ಮೆ ಸಂಗಮ ಆಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇದನ್ನು ಉಪ್ಪಿನಂಗಡಿಯ ಹಿರಿಯ ವೈದ್ಯ ಕೆ. ಶೀನಪ್ಪ ಶೆಟ್ಟಿ ಅವರೂ ದೃಢಪಡಿಸಿದ್ದಾರೆ.

ತಗ್ಗು ಪ್ರದೇಶ ಜಲಾವೃತ
ನದಿಗಳೆರಡು ಉಕ್ಕಿ ಹರಿದ ಪರಿಣಾಮ ಉಪ್ಪಿನಂಗಡಿ ಪೇಟೆಯ ತಗ್ಗು ಪ್ರದೇಶ ಜಲಾವೃತವಾಗಿ, ವ್ಯಾಪಾರಿಗಳಿಗೆ ಸಮಸ್ಯೆಯಾಯಿತು. ಹೆದ್ದಾರಿ ಬದಿಯ ಹೊಟೇಲ್‌ ಗಳಿಗೆ ನೀರು ನುಗ್ಗಿತು. ರಥ ಬೀದಿಯಲ್ಲಿರುವ ಮನೆಗಳು ಹಾಗೂ ವ್ಯಾಪಾರಿ ಕೇಂದ್ರಗಳಿಂದ ಸಾಮಾನು- ಸರಂಜಾಮುಗಳನ್ನು ಜನತೆ ಸಮರೋಪಾದಿಯಲ್ಲಿ ಸಾಗಿಸಿ, ರಕ್ಷಿಸಿಕೊಂಡರು. ಆದರೆ, ಅಂಗಡಿ – ಮನೆಗಳ ಮುಂದೆ ಸಂಗಮ ನೋಡಲು ಬಂದ ಜನರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿದ್ದರಿಂದ ತೀವ್ರ ಸಮಸ್ಯೆಯಾಯಿತು. ಒಂದು ವಾಹನವೂ ಬಾರದಂತೆ ರಸ್ತೆಯ ತುಂಬ ವಾಹನಗಳನ್ನು ನಿಲ್ಲಿಸಲಾಗಿತ್ತು. ಇದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಯಿತು.

ರಕ್ಷಣೆಗೆ ಕ್ರಮ
ನದಿಗಳಲ್ಲಿ ಸತತವಾಗಿ ನೀರು ಏರಿದ್ದರಿಂದ ಉದನೆ, ವಳಾಲು, ಪಡ್ಪು, ಪಂಜಳ ಮೊದಲಾದ ಕಡೆ ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ತಡೆಯುಂಟಾಗಿತ್ತು. ಸಕಲೇಶಪುರ ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ವರದಿ ಹಿನ್ನೆಲೆಯಲ್ಲಿ ಉಭಯ ನದಿಗಳ ಮಟ್ಟ ಅಪಾಯಕಾರಿ ರೀತಿಯಲ್ಲಿ ಹೆಚ್ಚುತ್ತಿರುವ ಪರಿಣಾಮ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ನೇತೃತ್ವದಲ್ಲಿ ವಿಪತ್ತು ನಿರ್ವಹಣ ಪಡೆ ಮತ್ತು ಅಗ್ನಿ ಶಾಮಕ ದಳ ಉಪ್ಪಿನಂಗಡಿಗೆ ಆಗಮಿಸಿತು. ಬೋಟಿನಲ್ಲಿ ಅಳವಡಿಸಲು ಹೆಚ್ಚುವರಿ ಎಂಜಿನ್‌ಗಳನ್ನು ತಂದಿರುವ ಈ ಪಡೆ, ನೆರೆ ಪೀಡಿತರನ್ನು ರಕ್ಷಿಸಲು ಸರ್ವ ಸನ್ನದ್ಧವಾಗಿದೆ.

ಹೆದ್ದಾರಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳು
ಉದನೆಯಲ್ಲಿ ಗುಂಡ್ಯ ಹೊಳೆ ಹೆದ್ದಾರಿಯನ್ನು ಆಕ್ರಮಿಸಿ ಹರಿಯತೊಡಗಿದ ಪರಿಣಾಮ, ನೆಲ್ಯಾಡಿಯ ವಿದ್ಯಾ ಸಂಸ್ಥೆಗೆ ಮಕ್ಕಳನ್ನು ಕರೆತರುತ್ತಿದ್ದ ಬಸ್ಸು ಸಂಚಾರವನ್ನು ತಡೆ ಹಿಡಿಯಲಾಯಿತು. ಮರಳಿ ಹೋಗೋಣ ಎಂದರೆ ಅಡ್ಡ ಹೊಳೆಯಲ್ಲಿ ಗುಡ್ಡ ಜರಿದು ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಮಧ್ಯಾಹ್ನ 2 ಗಂಟೆ ವರೆಗೂ ವಿದ್ಯಾರ್ಥಿಗಳು ಹೆದ್ದಾರಿಯಲ್ಲೇ ಅಸಹಾಯಕರಾಗಿ ಕಾಯಬೇಕಾಯಿತು. ಸ್ಥಳೀಯರು ಮಕ್ಕಳಿಗೆ ತಿಂಡಿ, ಹಾಲು ಕೊಟ್ಟು ಸಮಾಧಾನಿಸಿದರು. ಕಾಡು ದಾರಿಯ ಮೂಲಕ ಮಕ್ಕಳನ್ನು ಮನೆಗೆ ತಲುಪಿಸಿ, ಮಾನವೀಯತೆ ಮೆರೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next