Advertisement

ಪ್ರೀತಿ ನಿರಾಕರಿಸಿದ್ದಕ್ಕೆ ನಡುರಸ್ತೆಯಲ್ಲೇ ಯುವತಿಗೆ ಮಾರಣಾಂತಿಕ ಹಲ್ಲೆ

11:10 AM Jun 10, 2022 | Team Udayavani |

ಮಂಡ್ಯ: ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಆ್ಯಸಿಡ್‌ ದಾಳಿ ಪ್ರಕರಣ ಮಾಸುವ ಮುನ್ನವೇ ಸಕ್ಕರೆ ನಾಡು ಮಂಡ್ಯದಲ್ಲೂ ಪ್ರೀತಿ ನಿರಾಕರಿಸಿದ ಯುವತಿ ಮೇಲೆ ನಡು ರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಿರುವುದು ನಗರದ ಜನರನ್ನು ಬೆಚ್ಚಿ ಬೀಳಿಸಿದೆ.

Advertisement

ಪ್ರೀತಿ ನಿರಾಕರಿಸಿದ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಯುವಕ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಮಿಮ್ಸ್‌ ಆವರಣದಲ್ಲಿ ಗುರುವಾರ ಸಂಜೆ ನಡೆದಿದೆ.

ಘಟನೆ ವಿವರ: ಮಂಡ್ಯ ತಾಲೂಕಿನ ವೈ.ಯರಹಳ್ಳಿ ಗ್ರಾಮದ ಸಂಪತ್‌ ಅದೇ ಗ್ರಾಮದ ತನ್ನ ಸಂಬಂಧಿಯೇ ಆದ ನವ್ಯಾಳನ್ನು ಕಳೆದ 2 ವರ್ಷಗಳ ಹಿಂದೆಯಿಂದ ಪ್ರೀತಿಸುತ್ತಿದ್ದ. ಆದರೆ ಸರಿಯಾಗಿ ಓದದೇ ಕೆಲಸಕ್ಕೂ ಹೋಗದೇ ಇದ್ದ ಸಂಪತ್‌ಗೆ ಮಗಳನ್ನು ಕೊಟ್ಟು ಮದುವೆ ಮಾಡಲು ಕುಟುಂಬಸ್ಥರು ವಿರೋಧಿಸಿದ್ದಾರೆ. ಜತೆಗೆ ನವ್ಯಾ ಸಹ ಈತನನ್ನು ಪ್ರೀತಿಸಲು ನಿರಾಕರಿಸಿದ್ದಾಳೆ.

ಎಚ್ಚರಿಕೆ ಕೊಟ್ಟಿದ್ದರು: ಸಂಪತ್‌, ನವ್ಯಾ ಳನ್ನು ಗ್ರಾಮದಲ್ಲಿ ಹಿಂಬಾಲಿಸುವುದು, ಕಾಲೇಜು ಬಳಿ ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಇದನ್ನು ತನ್ನ ತಂದೆ- ತಾಯಿ ಬಳಿ ಹೇಳಿಕೊಂಡಾಗ ಗ್ರಾಮದಲ್ಲಿ ಪಂಚಾಯ್ತಿ ನಡೆಸಿ, ನವ್ಯಾ ತಂಟೆಗೆ ಹೋಗದಂತೆ ಸಂಪತ್‌ಗೆ ಎಚ್ಚರಿಸಿದ್ದಾರೆ. ಆದರೂ, ಆತ ತನ್ನ ಚಾಳಿ ಬಿಡದೇ ಹಿಂಬಾಲಿಸುತ್ತಿದ್ದನಂತೆ. ಜತೆಗೆ ನವ್ಯಾ ಸ್ನೇಹಿತೆಯರಿಗೂ ಲವ್‌ ಮಾಡುವಂತೆ ಹೇಳಿ ಎಂದು ಪೀಡಿಸುತ್ತಿದ್ದ. ಈ ಬಗ್ಗೆ ಇತ್ತೀಚೆಗೂ ನವ್ಯಾ ಕುಟುಂಬಸ್ಥರು ಸಂಪತ್‌ಗೆ ಎಚ್ಚರಿಕೆ ಕೊಟ್ಟಿದ್ದರು.

ಯುವತಿಯನ್ನು ಅಡ್ಡಗಟ್ಟಿದ್ದ ಆರೋಪಿ

Advertisement

ಬುಧವಾರ, ಮಂಗಳವಾರ ನವ್ಯಾ ತಂದೆಗೆ ಮಗಳನ್ನು ಕೊಟ್ಟು ಮದುವೆ ಮಾಡಿ ಎಂದು ಪೀಡಿಸುತ್ತಿದ್ದ ಎನ್ನಲಾಗಿದ್ದು, ನವ್ಯಾ ಹುಟ್ಟುಹಬ್ಬವಿದ್ದ ದಿನ ತನ್ನ ಜತೆಯೇ ಹುಟ್ಟುಹಬ್ಬ ಆಚರಿಸಿಕೊಳ್ಳುವಂತೆ ಪೀಡಿಸಿದ್ದನಂತೆ. ಮಿಮ್ಸ್‌ ಕಾಲೇಜಿನಲ್ಲಿ 2ನೇ ವರ್ಷದ ಪ್ಯಾರಾ ಮೆಡಿಕಲ್‌ ಓದುತ್ತಿದ್ದ ನವ್ಯಾ ಇಂಟರ್ನಲ್‌ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಾಗ, ಆಕೆಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಮತ್ತೆ ಪೀಡಿಸಿದ್ದಾನೆ. ಜತೆಗೆ ಸಂಜೆ ಒಳಗೆ ತನಗೆ ತಿಳಿಸಬೇಕೆಂದು ಎಚ್ಚರಿಕೆ ನೀಡಿದ್ದಾನೆ. ಆದರೆ, ಸಂಜೆ ಕಾಲೇಜು ಮುಗಿಸಿ ಬಂದಾಗ ಸಂಪತ್‌ ಯುವತಿಯನ್ನು ಅಡ್ಡಗಟ್ಟಿದನು. ಈ ವೇಳೆ ಬೈದು ಅಲ್ಲಿಂದ ತೆರಳಲು ಪ್ರಯತ್ನಿಸಿದಾಗ ಅಲ್ಲೇ ಬಿದ್ದಿದ್ದ ಚೂಪಾದ ರಿಪೀಸ್‌ ಪಟ್ಟಿಯಿಂದ ನವ್ಯಾ ತಲೆ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಬಿಡಿಸಿಕೊಳ್ಳಲಾಗದೇ ಚೀರಾಡಿದಾಗ ಪಕ್ಕದಲ್ಲಿದ್ದ ಸಹಪಾಠಿಗಳು ಅಲ್ಲಿಗೆ ಆಗಮಿಸಿ, ಸಂಪತ್‌ನಿಂದ ನವ್ಯಾಳನ್ನು ಬಿಡಿಸಿದ್ದಾರೆ. ಬಳಿಕ ಆತನಿಗೆ ಸ್ಥಳೀಯರು ಥಳಿಸಿದ್ದಾರೆ. ನಂತರ ಪೂರ್ವ ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋದರು.

ಇನ್ನು ರಕ್ತದ ಮಡುವಿನಲ್ಲಿದ್ದ ಯುವತಿಯನ್ನು ಮಿಮ್ಸ್‌ ಆಸ್ಪತ್ರೆಗೆ ಸೇರಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ನವ್ಯಾಗೆ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಆರೋಪಿ ಸಂಪತ್‌ನನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಂಡ್ಯ ನಗರದ ಪೂರ್ವ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next