Advertisement

ಬಸ್-ಬೈಕ್‌ ನಡುವೆ ಭೀಕರ ಅಪಘಾತ: ಓರ್ವ ಸಾವು

05:21 PM Apr 04, 2023 | Team Udayavani |

ಗುಂಡ್ಲುಪೇಟೆ: ಪಟ್ಟಣದ ಹೊರ ವಲಯದ ಅಸ್ಸಿಸಿ ಆಸ್ಪತ್ರೆ ಬಳಿ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಕಾಲು ತುಂಡಾಗಿರುವ ಘಟನೆ ಮಂಗಳವಾರ ನಡೆದಿದೆ.

Advertisement

ಮಾಡ್ರಹಳ್ಳಿ ಗ್ರಾಮದ ರಾಜು(45) ಮೃತ ವ್ಯಕ್ತಿ. ಕಿಲಗೆರೆ ಗ್ರಾಮದ ವೆಂಕಟಯ್ಯ(70) ಎಂಬುವವರ ಬಲಗಾಲು ತುಂಡಾಗಿದೆ. ಕೂಡಲೇ ಗುಂಡ್ಲುಪೇಟೆ ಠಾಣೆ ಸ್ಥಳಕ್ಕೆ ದೌಡಾಯಿಸಿ ಗಾಯಾಳು ಹಾಗೂ ಮೃತ ವ್ಯಕ್ತಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ಧಾರೆ.

ಘಟನೆ ವಿವರ: ಗುಂಡ್ಲುಪೇಟೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಅರುಣಾಚಲ ಪ್ರದೇಶ ಮೂಲದ ಬಸ್ ಚಾಲಕ ಅಜಾಗರೂಕತೆ ಚಾಲನೆಯಿಂದ ಅಸ್ಸಿಸಿ ಆಸ್ಪತ್ರೆ ಬಳಿ ಬೈಕ್‍ನಲ್ಲಿ ಬರುತ್ತಿದ್ದ ವೆಂಕಟಯ್ಯ ಎಂಬುವವರಿಗೆ ಗುದ್ದಿದೆ. ಇದರಿಂದ ಬೈಕ್ ಸವಾರನ ಕಾಲು ತುಂಡಾಗಿದೆ. ನಂತರ ಮಾಡ್ರಹಳ್ಳಿ ಕಡೆಯಿಂದ ಬರುತ್ತಿದ್ದ ಮತ್ತೋರ್ವ ಬೈಕ್ ಸವಾರ ರಾಜು ಎಂಬಾತನಿಗೆ ಗುದ್ದಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಿಂದ ಬಸ್ ಹಳ್ಳಿಕ್ಕೆ ಇಳಿದು ವಿದ್ಯುತ್ ಕಂಬಕ್ಕೆ ಗುದ್ದಿದೆ. ಬಸ್ ಚಾಲಕ ಹಾಗೂ ನಿರ್ವಾಹಕ ಇಬ್ಬರೂ ಕೂಡ ಪರಾರಿಯಾಗಿದ್ದಾರೆ.

ಇನ್ನೂ ಘಟನೆ ಸಂಬಂಧ ಎರಡು ಬೈಕ್ ಹಾಗು ಬಸ್ ಅನ್ನು ವಶಕ್ಕೆ ಪಡೆದ ಗುಂಡ್ಲುಪೇಟೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next