ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿ ಪೂರ್ಣಗೊಳ್ಳುವವರೆಗೂ ಮುಂದುವರಿಸಲು ಸಿದ್ಧ ಎಂದು ರೈತ ಸಂಘಟನೆ ಮುಖಂಡ ನರೇಂದ್ರ ಟಿಕಾಯತ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಸರ್ಕಾರದ ಅವಧಿ ಇನ್ನೂ ಮೂರುವರೆ ವರ್ಷ ಇದ್ದು, ಅಲ್ಲಿಯವರೆಗೂ ರೈತರು ಹೋರಾಟ ಮುಂದುವರೆಸಲು ಸಿದ್ಧವಾಗಿದ್ದಾರೆ ಎಂದು ಹೇಳಿದರು. ಕೇಂದ್ರ ಸರ್ಕಾರ ಯಾವುದೇ ತಪ್ಪು ಗ್ರಹಿಕೆಯಿಂದ ವಿವಿಧ ತಂತ್ರ ಬಳಸಿಕೊಂಡು ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಟಿಕಾಯತ್ ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರ ತಪ್ಪು ಗ್ರಹಿಕೆಯಿಂದ ವರ್ತಿಸುತ್ತಿದೆ. ಬಹುಶಃ ಅವರು ಯಾವತ್ತೂ ಇಂತಹ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಎದುರಿಸಿರಲಿಲ್ಲ. ಆದರೆ ನಾವು ಪ್ರತಿಭಟನೆಯನ್ನು ನೋಡಿದ್ದೇವೆ, ಕಳೆದ 35 ವರ್ಷಗಳ ಕಾಲ ಅದರ ಭಾಗವಾಗಿದ್ದೇವೆ. ಈ ಸರ್ಕಾರ ಸಣ್ಣ ಪ್ರಮಾಣದ ಪ್ರತಿಭಟನೆಯನ್ನು ಎದುರಿಸುತ್ತಿದೆ. ಅಷ್ಟೇ ಅಲ್ಲ ವಿವಿಧ ತಂತ್ರಗಾರಿಕೆಯಿಂದ ಹೋರಾಟ ಹತ್ತಿಕ್ಕಲು ಯತ್ನಿಸಿರುವುದಾಗಿ ಟಿಕಾಯತ್ ಆರೋಪಿಸಿದರು.
ಯಾವುದೇ ರೀತಿಯಿಂದಲೂ ನಮ್ಮ ಹೋರಾಟ ಮೊಟಕುಗೊಳಿಸಲು ಸಾಧ್ಯವಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಈ ಸರ್ಕಾರ ಇನ್ನೂ ಮೂರುವರೆ ವರ್ಷಗಳ ಕಾಲ ಇದ್ದು, ಈ ಅವಧಿ ಪೂರ್ಣಗೊಳ್ಳುವವರೆಗೂ ಚಳವಳಿ ಮುಂದುವರಿಸಲು ಸಿದ್ಧ ಎಂದು ಹೇಳಿದರು.
ಟಿಕಾಯತ್ ಕುಟುಂಬ ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, ಭಾರತೀಯ ಕಿಸಾನ್ ಸಂಘ ಗೂಂಡಾಗಿರಿ ನಡೆಸುತ್ತಿದೆ ಎಂಬ ಪ್ರಶ್ನೆಗೆ ಪಿಟಿಐ ಜತೆ ಮಾತನಾಡುತ್ತ ಉತ್ತರಿಸಿದ ಅವರು, ಒಂದು ವೇಳೆ ನಮ್ಮ ಕುಟುಂಬದ ಒಬ್ಬನೇ ಒಬ್ಬ ಸದಸ್ಯನ ಒಂದು ಆರೋಪ ಕಂಡುಹಿಡಿದಲ್ಲಿ ನಾವು ದೆಹಲಿ ಗಡಿ ಬಿಟ್ಟು ತೆರಳುವುದಾಗಿ ತಿಳಿಸಿದರು. ಭಾರತೀಯ ಕಿಸಾನ್ ಸಂಘ ಗೂಂಡಾಗಿರಿ ಮಾಡುತ್ತದೆ ಎಂಬ ಆರೋಪವನ್ನು ತಳ್ಳಿಹಾಕಿದರು.