Advertisement

ಬೇಡಿಕೆ ಈಡೇರಿಕೆಗೆ ರೈತರ ಪಟ್ಟು

11:42 AM Jan 28, 2020 | Suhan S |

ಧಾರವಾಡ: ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಜಿಲ್ಲಾ ಧಿಕಾರಿ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ಸೋಮವಾರ ಆರಂಭಗೊಂಡಿದೆ.

Advertisement

ರೈತ ಹೋರಾಟಗಾರ ವೀರೇಶ ಸೊಬರದಮಠ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟದಲ್ಲಿ ರೈತರು ಪಾಲ್ಗೊಂಡು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ರೈತರ ಕಷ್ಟವನ್ನು ಕಂಡೂಕಾಣದಂತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಅಧಿಕಾರಿ ವರ್ಗದವರು ದಲ್ಲಾಳಿಗಳೊಡನೆ ಹೊಂದಾಣಿಕೆಯಾಗಿದ್ದಾರೆ. ಹೀಗಾಗಿ ರೈತ ಬೆಳೆದ ಬೆಳೆಗಳಿಗೆ ಯೋಗ್ಯವಾದ ಬೆಲೆ ಸಿಗದಂತಾಗಿದೆ. ರೈತ ಬೆಳೆದಂತಹ ಬೆಳೆಗಳಿಗೆ ಯೋಗ್ಯವಾದ ಬೆಲೆ ಇಲ್ಲ. ಸಾಲ ಮಾಡಿ ರೈತರು ಉಳಿಮೆಮಾಡುತ್ತಿದ್ದಾರೆ. ಭೀಕರ ಬರಗಾಲ, ಅತಿವೃಷ್ಟಿ-ಅನಾವೃಷ್ಟಿಗಳಿಗೂ ರೈತರು ಒಳಗಾಗಿದ್ದಾರೆ. ಹೀಗಾಗಿ ರೈತರ ಸರ್ಕಾರ ಎಂದು ಹೇಳಿಕೊಳ್ಳು ಬಿಜೆಪಿ ಸರ್ಕಾರ ಕಣ್ಣು ತೆರೆದು ರೈತರ ಕಷ್ಟವನ್ನು ನೋಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಕೇಂದ್ರ ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆ ಬೆಳೆಗಳಿಗೆ ಯೋಗ್ಯವಾಗಿಲ್ಲ. ರಾಜ್ಯ ಸರ್ಕಾರ ತಕ್ಷಣವೇ ಕೇಂದ್ರವು ಬಿಡುಗಡೆ ಮಾಡಿದ ಬೆಂಬಲ ಬೆಳೆಗಳಿಗೆ ಹೆಚ್ಚುವರಿಯಾಗಿ ಹಣ ನೀಡಿ ಖರೀದಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿಕೊಂಡು ಹೆಸರು ಬೆಳೆಗೆ 9,925 ರೂ., ಹತ್ತಿಗೆ 7,450 ರೂ., ಉದ್ದಿಗೆ 8,600 ರೂ., ಗೋವಿನ ಜೋಳಕ್ಕೆ 2,700 ರೂ. ಹಾಗೂ ಗೋ ಧಿಗೆ 2800 ರೂ., ಕಡಲೆ ಬೆಳೆಗೆ 7,620 ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇಲ್ಲವಾದರೆ ರೈತರ ಹೋರಾಟ ರಾಜ್ಯಾದ್ಯಂತ ವಿಸ್ತರಿಸಿ ಸರ್ಕಾರ ಅಲುಗಾಡಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಸಿದರು.

ರೈತ ಮುಖಂಡರಾದ ಗಂಗಾಧರ ಪಾಟೀಲಕುಲಕರ್ಣಿ, ಚಂದ್ರಶೇಖರ ಹರವಿ, ವರುಣಗೌಡ ಪಾಟೀಲ, ಪ್ರಶಾಂತ ದುಂಡಿಗೌಡ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next