Advertisement

ವಾಡಿ: ವಾರದಲ್ಲಿ ಪಹಣಿ ದೋಷ ಸರಿಪಡಿಸುವ ಡಿಸಿ ಭರವಸೆ ತಿಂಗಳು ದಾಟಿದರೂ ಈಡೇರಲಿಲ್ಲ

07:30 PM May 23, 2022 | Team Udayavani |

ವಾಡಿ: ಹಲವು ವರ್ಷಗಳಿಂದ ಹಳಕರ್ಟಿ ಗ್ರಾಮದ ಸುಮಾರು 650 ಕ್ಕೂ ಹೆಚ್ಚು ಸರ್ವೆ ನಂಬರ್  ಪಹಣಿ ದೋಷದಿಂದ ಕೂಡಿವೆ. ಇವುಗಳನ್ನು ಸರಿಪಡಿಸುವಂತೆ ಕೋರಿ ಕಳೆದ ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆದರೆ ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್)ಯ ತಾಲೂಕು ಕಾರ್ಯದರ್ಶಿ ಶಿವುಕುಮಾರ ಆಂದೋಲಾ ಆರೋಪಿಸಿದರು.

Advertisement

ಹಳಕರ್ಟಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ರೈತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಹಣಿ ದೋಷ ಸರಿಪಡಿಸಲು ತಹಸೀಲ್ದಾರರು ಆಸಕ್ತಿ ತೋರುತ್ತಿಲ್ಲ. ಮೂರು ತಿಂಗಳ ಹಿಂದೆ (ಫೆ.19) ಕೊಂಚೂರು ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೂ ಸಮಸ್ಯೆ ಹೇಳಿಕೊಳ್ಳಲಾಯಿತು. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ಕೊಟ್ಟು ಹೋದರು.  ಮೂರು ತಿಂಗಳಾದರೂ ಯಾವುದೇ ಪಹಣಿ ದೋಷ ಸರಿಪಡಿಸಲಾಗಿಲ್ಲ. ರೈತರ ಸಂಕಷ್ಟ ಮುಂದುವರೆದಿದೆ. ಚಿತ್ತಾಪುರ ತಾಲೂಕು ಆಡಳಿತ ಡಿಸಿ ಆದೇಶಕ್ಕೂ ಕಿಮ್ಮತ್ತು ನೀಡಿಲ್ಲ ಎಂದರು.

ಗ್ರಾಮದ ಪ್ರತಿಯೊಬ್ಬ ರೈತರ ಪಹಣಿ ಪತ್ರಕ್ಕೂ ಹೋಲ್ಡಿಂಗ್‌ಗೂ ಮತ್ತು ನಕಾಶೆಗಳಿಗೂ ಒಂದಕ್ಕೊಂದು ಸಂಬಂಧವೇ ಇಲ್ಲದಂತಾಗಿದೆ. ಅಲ್ಲದೆ ಕೆಲವು ರೈತರ ಪಹಣಿಗಳು ಸರ್ಕಾರಿ ಜಮೀನು ಎಂದು ತಪ್ಪಾಗಿ ತೋರಿಸುತ್ತಿವೆ. ಇದರಿಂದಾಗಿ ದಶಕದಿಂದ ರೈತರು ಜಮೀನು ಖರೀದಿ ಮತ್ತು ಮಾರಾಟ ಪ್ರಕ್ರಿಯೆಯಿಂದ ವಂಚಿತರಾಗಿದ್ದಾರೆ. ಮಾರಾಟ ಮಾಡಿದ ಜಮೀನುಗಳು ನೊಂದಣಿಯಾಗುತ್ತಿಲ್ಲ. ಇದು ರೈತರಿಗೆ ತಲೆನೋವಾಗಿ ಕಾಡುತ್ತಿದೆ. ಸರಕಾರದ ಸಾಲ ಸೌಲಭ್ಯ, ಪರಿಹಾರ ಮತ್ತು ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳದಂತಾಗಿದೆ. ಇದನ್ನು ಖಂಡಿಸಿ ಹಂತ ಹಂತವಾಗಿ ವಿವಿಧ ರೀತಿಯ ಹೋರಾಟಗಳನ್ನು ಕೈಗೊಂಡರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಗೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ ಎಂದು ದೂರಿದರು.

ರೈತರ ಈ ಗಂಭೀರ ಸಮಸ್ಯೆಯನ್ನು ಜಿಲ್ಲಾಧಿಕಾರಿಗೆ, ಸಹಾಯಕ ಆಯುಕ್ತರಿಗೆ, ತಹಶಿಲ್ದಾರರಿಗೆ ಮತ್ತು ಶಾಸಕರಿಗೆ ತಿಳಿದಿದ್ದರೂ ರೈತರ ನೆರವಿಗೆ ಯಾರೂ ನಿಲ್ಲುತ್ತಿಲ್ಲ. ಅನ್ನದಾತ ದೇಶದ ಬೆನ್ನೆಲುಬು ಎಂದು ಭಾಷಣ ಬಿಗಿಯುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಸಂಕಷ್ಟಕ್ಕೆ ಕಾರಣವಾಗಿದ್ದಾರೆ. ಸರಕಾರಿ ಕಚೇರಿಗಳಿಗೆ ಅಲೆದು ಪಾದರಕ್ಷೆಗಳು ಸವೆದರೂ ಪಹಣಿ ದೋಷ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ತಾತ್ಕಾಲಿಕವಾಗಿ ನೆಮ್ಮದಿ ಕೇಂದ್ರವೇ ಹಳಕರ್ಟಿ ಗ್ರಾಮದಲ್ಲಿ ಸ್ಥಾಪಿಸಿದರೂ ಎರಡು ತಿಂಗಳಲ್ಲಿ ಪಹಣಿ ದೋಷ ಸರಿಪಡಿಸಬಹುದು. ಆದರೆ ತಾಲೂಕು ಆಡಳಿತ ಮನಸ್ಸು ಮಾಡುತ್ತಿಲ್ಲ. ಪರಿಣಾಮ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಮೇ.೨೭ ರಂದು ಬೆಳಗ್ಗೆಯಿಂದಲೇ ಹಳಕರ್ಟಿ ಗ್ರಾಮ ಸಮೀಪದ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಬಂಧಿಸಿ ಜೈಲಿಗೆ ಕಳಿಸಿದರೂ ಹೋರಾಟ ಕೈಬಿಡಲ್ಲ. ಗ್ರಾಮದ ಸಾವಿರಾರು ರೈತರು ಬಾರ್ಕೋಲು ಮತ್ತು ಎತ್ತುಗಳೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಿವುಕುಮಾರ ಆಂದೋಲಾ ತಿಳಿಸಿದ್ದಾರೆ.

ಎಐಕೆಕೆಎಂಎಸ್ ತಾಲೂಕು ಉಪಾಧ್ಯಕ್ಷ ಗುಂಡಣ್ಣ ಕುಂಬಾರ, ಗ್ರಾಮ ಘಟಕದ ಅಧ್ಯಕ್ಷ ಚೌಡಪ್ಪ ಗಂಜಿ, ಮುಖಂಡರಾದ ಭೀಮರಾಯ ಇಸಬಾ, ವಿಠ್ಠಲ ರಾಠೋಡ, ಈರಣ್ಣ ಹಿಟ್ಟಿನ್, ಸಾಬಣ್ಣ ಇರಗೊಂಡ, ನಾನಾಸಾಹೇಬ ಕೋಲಕುಂದಿ, ಬಸಪ್ಪ ನಾಲವಾರ, ಶರಣು ಹೇರೂರ, ಮಶಾಖ ಗಂವಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next