Advertisement

ಅಲಸಂದಿ ಬೆಳೆಯುವಲ್ಲಿ ಆಸಕ್ತಿ ತೋರಿದ ರೈತರು

02:32 PM Jun 24, 2022 | Team Udayavani |

ಕುಷ್ಟಗಿ: ತಾಲೂಕಿನ ರೈತರು ಹೆಸರು ಬೆಳೆಯಂತೆ ಅಲಸಂದಿ ಬೆಳೆ ಬೆಳೆಯುವತ್ತ ಆಸಕ್ತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಅಲಸಂದಿ ಬೆಳೆಯುವ ಕ್ಷೇತ್ರ ಹೆಚ್ಚಾಗಿದೆ.

Advertisement

ಹೌದು, ಪ್ರತಿವರ್ಷ ಮುಂಗಾರು ಹಂಗಾಮಿನಲ್ಲಿ ಸಕಾಲಿಕ ಮಳೆಗೆ ಬಹುತೇಕ ರೈತರು ಹೆಸರು ಬೆಳೆ ಬೆಳೆಯುವುದು ಸಾಮಾನ್ಯ. ಆದರೆ ಈ ಬಾರಿ ಕೆಲವರು ಹೆಸರು ಬೆಳೆ ಬದಲಿಗೆ ಅಲಸಂದಿ ಬಿತ್ತನೆ ಮಾಡಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ಮಾಹಿತಿ ಪ್ರಕಾರ 6,026 ಹೆಕ್ಟೇರ್‌ ನಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಸಕಾಲಿಕ ಮಳೆಯಿಂದ ಉತ್ತಮ ಬೆಳೆ ಇದೆ. ಪ್ರತಿ ವರ್ಷ ಹೆಸರು ಬೆಳೆಯುತ್ತಿದ್ದ ರೈತರ ಪೈಕಿ ಕೆಲವರು ಅಲಸಂದಿ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ಯಾಕೆಂದರೆ ಅಲಸಂದಿಯನ್ನು ಪ್ರಮುಖ ಬೆಳೆಯನ್ನಾಗಿ ಬೆಳೆಯುವುದು ಕಡಿಮೆ ಇತ್ತು. ಅಕ್ಕಡಿ ಬೆಳೆಯಾಗಿ ಬೆಳೆಯಲಾಗುತ್ತಿತ್ತು. ಅಲಸಂದಿ ಬೆಳೆ ಕಟಾವು, ಒಕ್ಕಣೆ ಸುಲಭ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹಿನ್ನೆಲೆಯಲ್ಲಿ ರೈತರು ಅಲಸಂದಿ ಬೆಳೆಯನ್ನು ಕುಷ್ಟಗಿ, ಹನುಮಸಾಗರ ಹೋಬಳಿ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆದಿದ್ದು, ಕೃಷಿ ಇಲಾಖೆಯ ಮಾಹಿತಿ ಪ್ರಕಾರ 640 ಹೆಕ್ಟೇರ್‌ ನಲ್ಲಿ ಈ ಬೆಳೆ ಬೆಳೆಯಾಗಿದ್ದು, ಮುಂದಿನ ವರ್ಷಗಳಲ್ಲಿ ಈ ಬೆಳೆ ಕ್ಷೇತ್ರ ವಿಸ್ತರಣೆ ಸಾಧ್ಯತೆ ಇದೆ.

ಕಳೆದ ವರ್ಷ ಹೆಸರು ಬೆಳೆಗೆ ಹಳದಿ ರೋಗದ ವ್ಯಾಪಕವಾಗಿದ್ದರಿಂದ ಉತ್ತಮ ಬೆಳೆ ಇದ್ದರೂ ಕಾಳು ಕಟ್ಟಿರಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಂದಿರಲಿಲ್ಲ. ಹೆಸರು ಬೆಳೆಗೆ ಕಾಡುವ ಹಳದಿ ರೋಗ ನಿಯಂತ್ರಿಸಲು, ಅದೇ ಬೆಳೆ ಬೆಳೆದರೆ ಹಳದಿ ರೋಗ ಉಲ್ಬಣಿಸುವ ಸಾಧ್ಯತೆ ಇದೆ.ಹೀಗಾಗಿ ಬದಲಿ ಬೆಳೆಯಾಗಿ ಅಲಸಂದಿ ಬೆಳೆಯನ್ನು ರೈತರು ಆಯ್ಕೆ ಮಾಡಿಕೊಂಡಿದ್ದಾರೆ.

ಎರೆಭಾಗದಲ್ಲೂ ಅಲಸಂದಿ: ಈ ಕುರಿತು ರೈತರಾದ ಸುರೇಶ ಮಂಗಳೂರು, ರಮೇಶ ಕೊನಸಾಗರ “ಉದಯವಾಣಿ’ ಜತೆ ಮಾತನಾಡಿ, ಹೆಸರು ಮಸಾರಿ ಭಾಗದಲ್ಲಿ ಬೆಳೆಯಲಾಗುತ್ತಿತ್ತು. ಈ ಬಾರಿ ಎರೆ ಭಾಗದಲ್ಲಿ ಅಲಸಂದಿ ಬೆಳೆ ಬೆಳೆದಿರುವುದು ವಿಶೇಷ. ಅಲಸಂದಿ ಧಾರಣಿ ಯಾವತ್ತಿಗೂ ಪ್ರತಿ ಕ್ವಿಂಟಲ್‌ ಗೆ ಗರಿಷ್ಠ 6,500 ರೂ. ದಿಂದ 5 ಸಾವಿರ ರೂ. ವರೆಗೆ ಕನಿಷ್ಟ ಬೆಲೆ ಸಿಗುತ್ತಿದೆ. ದ್ವಿದಳ ಧಾನ್ಯ ಅಲಸಂದಿಗೂ ಬೇಡಿಕೆ ಇದೆ ಎಂದರು.

Advertisement

ಅಲಸಂದಿಯ ಬುಡ್ಡಿ (ಕಾಯಿ) ದೊಡ್ಡವು ಆಗಿರುವುದರಿಂದ ಕಟಾವು ಸಲೀಸು. ಈ ಬಾರಿ ಮುಂಗಾರು ಪೂರ್ವ ಮಳೆಯಾಗಿದ್ದು, 6 ಎಕರೆಯಲ್ಲಿ ಅಲಸಂದಿ ಬೆಳೆದಿರುವೆ. ಈ ಬೆಳೆ ಮೂರು ತಿಂಗಳಿನಲ್ಲಿ ಮುಗಿಯುತ್ತಿದ್ದು, ಹಿಂಗಾರು ಬೆಳೆಗೆ ಅವಕಾಶ ಸಿಗುತ್ತದೆ. ಸೂರ್ಯಕಾಂತಿ ಬೆಳೆಗಿಂತ ಅಲಸಂದಿ ಧಾನ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಜಾನುವಾರುಗಳಿಗೆ ಹೊಟ್ಟು ಸಿಗಲಿದೆ. –ಹನುಮಂತಪ್ಪ ದೊಡ್ಡಪ್ಪ ಕಂಬಳಿ, ಗುಮಗೇರಾ ರೈತ

ದ್ವಿದಳ ಧಾನ್ಯ ಬಳಕೆ ಹೆಚ್ಚಿದ್ದು, ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಸುಧಾರಿತ ಅಲಸಂದಿ ತಳಿಗಳು ಲಭ್ಯ ಇದೆ. ಅಲ್ಪಾವಧಿ ಬೆಳೆಯಾಗಿರುವ ಅಲಸಂದಿ ಬೆಳೆಯುವುದರಿಂದ ಭೂಮಿಗೆ ಹಸಿರೆಲೆ ಗೊಬ್ಬರ ಸಿಗಲಿದ್ದು, ಫಲವತ್ತತೆ ಹೆಚ್ಚಲಿದೆ. ಮಾರುಕಟ್ಟೆಯಲ್ಲಿ ಅಲಸಂದಿಗೆ ಸ್ಥಿರವಾದ ಉತ್ತಮ ಬೆಲೆ ಖಾತ್ರಿ ಹಿನ್ನೆಲೆಯಲ್ಲಿ ರೈತರು ಅಲಸಂದಿ ಬೆಳೆ ಬೆಳೆದಿದ್ದಾರೆ. -ಬಾಲಪ್ಪ ಜಲಗೇರಿ, ತಾಂತ್ರಿಕ ಕೃಷಿ ಸಹಾಯಕ ಕೃಷಿ ಇಲಾಖೆ ಕುಷ್ಟಗಿ

„ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next