Advertisement

ರೈತರ ಬಹುದಿನದ ಬೇಡಿಕೆ ಶೀಘ್ರ ಪೂರ್ಣ: ಬೊಮ್ಮಾಯಿ

05:27 PM Apr 23, 2022 | Team Udayavani |

ಮುಧೋಳ: ಈ ಭಾಗದ ರೈತರ ಬಹುದಿನದ ಬೇಡಿಕೆಯಾಗಿರುವ ಸಸಾಲಟ್ಟಿ ಶಿವಲಿಂಗೇಶ್ವರ ಹಾಗೂ ಮಂಟೂರ ಮಹಾಲಕ್ಷ್ಮೀ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದ ಆರ್‌ಎಂಜಿ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ವಿವಿಧ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮುಧೋಳದ ಜನರ ನಾಡಿಮಿಡಿತ ಅರಿತಿರುವ ಸಚಿವ ಗೋವಿಂದ ಕಾರಜೋಳ ಅವರು ಈ ಭಾಗದ ಎಲ್ಲ ಬೇಕು ಬೇಡಿಕೆಗಳನ್ನು ಪೂರೈಸುವತ್ತ ಹೆಚ್ಚು ಗಮನ ಹರಿಸಿದ್ದಾರೆ ಎಂದರು.

ಸದಾಕಾಲ ಅಧಿಕಾರಕ್ಕಾಗಿ ಹಪಹಪಿಸುವ ಕಾಂಗ್ರೆಸ್‌ನವರು ಈ ಹಿಂದೆ ಅಧಿ ಕಾರ ಇದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಅನುಷ್ಠಾನಕ್ಕಾಗಿ ಐದು ವರ್ಷದಲ್ಲಿ ಕೇವಲ 2700ಕೋಟಿ ರೂ. ಮಾತ್ರ ಖರ್ಚು ಮಾಡಿದರು. ಇದೀಗ ಮತ್ತೆ ಅಕಾರಕ್ಕಾಗಿ ಟ್ರ್ಯಾಕ್ಟರ್ ರ್ಯಾಲಿಯಂತಹ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ನೆಲ, ಜಲ, ಭಾಷೆ ಅಭಿವೃದ್ಧಿಗಾಗಿ ನಾವು ಯಾವುದೇ ರೀತಿಯ ರಾಜಕಾರಣಕ್ಕೆ ಮುಂದಾಗುವುದಿಲ್ಲ. ಸರ್ವಜನರ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಸರ್ಕಾರದ ಅವ ಧಿಯಲ್ಲಿ ಸ್ತ್ರೀಶಕ್ತಿ ಅಭಿವೃದ್ಧಿಗೆ ಆಂಕರ್‌ ಬ್ಯಾಂಕ್‌, ಹಾಲು ಉತ್ಪಾದಕರಿಗೆ ನಂದಿನಿ ಕ್ಷೀರ ಬ್ಯಾಂಕ್‌, ಸಂಧ್ಯಾ ಸುರಕ್ಷಾ ಹಾಗೂ ಅಂಗವಿಕಲರ ಮಾಸಾಶನ ಹೆಚ್ಚಳದಂತಹ ಅನೇಕ ರೀತಿ ಅಭಿವೃದ್ಧಿಯ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ರಾಜ್ಯದ ಪರಿಶಿಷ್ಟ ಜಾತಿ-ಪಂಗಡದವರಿಗಾಗಿ 75ಯೂನಿಟ್‌ ವಿದ್ಯುತ್‌ ಉಚಿತ ವಿತರಿಸುವ ಯೋಜನೆ ಹಾಕಿಕೊಂಡಿದ್ದೇವೆ. ನಮ್ಮ ಆಡಳಿತದ ಅಭಿವೃದ್ಧಿಯನ್ನು ಕಾಂಗ್ರೆಸ್‌ ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಅದು ಐದು ರಾಜ್ಯಗಳಲ್ಲಿ ನಾಮಾವಶೇಷವಾಗಿದೆ. ಮುಂದಿನ ಗುಜರಾತ್‌ ಹಾಗೂ ಕರ್ನಾಟಕ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಸೋಲಾಗಲಿದೆ ಎಂದು ಭವಿಷ್ಯ ನುಡಿದರು.

Advertisement

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಂಡು 524ಮೀಟರ ಎತ್ತರಿಸಿ 13 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

ನಾವು ಮಾತನಾಡುವುದಕ್ಕಿಂತ ನಮ್ಮ ಕೆಲಸ ಮಾತನಾಡಬೇಕು. ನಾವು ಮಾಡಿರುವ ಅಭಿವೃದ್ಧಿ ಕಾರ್ಯದ ರಿಪೋರ್ಟ್‌ ಕಾರ್ಡ್‌ ನೊಂದಿಗೆ 2023ಕ್ಕೆ ನಿಮ್ಮ ಎದುರಿಗೆ ತಂದು ಕೂಲಿ ಕೇಳುತ್ತೇವೆ. ನಮ್ಮ ಕಾರ್ಯಕ್ಕೆ ತಕ್ಕಂತೆ ಕೂಲಿ ನೀಡಿ ನಮ್ಮ ಕೈ ಬಲಪಡಿಸಿ ಎಂದು ಮನವಿ ಮಾಡಿಕೊಂಡರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಈ ಭಾಗದ ಒಟ್ಟು 38 ಕಾಮಗಾರಿ ಹಾಗೂ ಶಿಲಾನ್ಯಾಸಕ್ಕೆ ಆಗಮಿಸಿರುವ ನೆಚ್ಚಿನ ಮುಖ್ಯಮಂತ್ರಿಗಳು ನಮ್ಮ ಬಹುದಿನದ ಸಸಾಲಟ್ಟಿ ಶಿವಲಿಂಗೇಶ್ವರ ಹಾಗೂ ಮಂಟೂರ ಮಹಾಲಕ್ಷ್ಮೀ ಯೋಜನೆಗೆ 500 ಕೋಟಿ ರೂ. ಮಂಜೂರು ಮಾಡಿರುವ ಕಾರ್ಯ ಶ್ಲಾಘನೀಯ. ಈ ನೀರಾವರಿ ಯೋಜನೆಯಿಂದ ರಬಕವಿ-ಬನಹಟ್ಟಿ, ಮುಧೋಳ, ಬೀಳಗಿ ತಾಲೂಕಿನ 106 ಹಳ್ಳಿಗಳ ಬಾತ ಪ್ರದೇಶಗಳಿಗೆ ನೀರುಣಿಸು ಯೋಜನೆ ಸಾಕಾರವಾಗಲಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಬೃಹತ್‌ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಡಾ| ವೀರಣ್ಣ ಚರಂತಿಮಠ, ಸಿದ್ದು ಸವದಿ, ದೊಡ್ಡನಗೌಡ ಪಾಟೀಲ, ವಿಧಾನಪರಿಷತ್‌ ಸದಸ್ಯರಾದ ಅರುಣ ಶಹಾಪುರ, ಹನಮಂತ ನಿರಾಣಿ, ಪಿ.ಎಚ್‌. ಪೂಜಾರ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ನಾರಾಯಣಸಾ ಭಾಂಡಗೆ, ವಿಧಾನಪರಿಷತ್‌ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ, ನಗರಸಭೆ ಸದಸ್ಯ ಗುರುಪಾದ ಕುಳಲಿ, ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಹನಮಂತ ತುಳಸಿಗೇರಿ, ಕೆ.ಆರ್‌. ಮಾಚಪ್ಪನವರ ಇತರರು ಉಪಸ್ಥಿತರಿದ್ದರು.

ಭಾವನಾತ್ಮಕ ನಂಟು ಬಿಚ್ಚಿಟ್ಟ ಬೊಮ್ಮಾಯಿ: ಮುಧೋಳ ಐತಿಹಾಸಿಕತೆಯ ಬಗ್ಗೆ ಸ್ಮರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವು 8ನೇ ತರಗತಿಯಲ್ಲಿ ಮುಧೋಳಕ್ಕೆ ಆಗಮಿಸಿದ್ದ ಬಗೆಯನ್ನು ವಿವರಿಸಿ ನಗರದೊಂದಿಗಿನ ಭಾವನಾತ್ಮಕ ಸಂಬಂಧವನ್ನು ಹಂಚಿಕೊಂಡರು.

ಬೇಡುವವರಲ್ಲ ಕೊಡುವ ಸ್ಥಾನದಲ್ಲಿದ್ದಾರೆ: ತಮ್ಮ ಅನುಭವ ಹಾಗೂ ಹಿರಿತನದಲ್ಲಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಣ್ಣವರು ಇದೀಗ ಬೇಡುವವರಲ್ಲ ಅವರು ಕೊಡುವ ಸ್ಥಾನದಲ್ಲಿ ಕುಳಿತಿದ್ದಾರೆ. ಆಡಳಿತದಲ್ಲಿ ನಮಗೆ ನಿರಂತರ ಮಾರ್ಗದರ್ಶನ ನೀಡುವ ಕಾರಜೋಳ ಅವರು ತಮ್ಮ ಆಡಳಿತಾತ್ಮಕ ಅನುಭವದಿಂದ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದಾರೆ ಎಂದು ಕಾರಜೋಳರೊಂದಿಗೆ ತಮ್ಮ ಒಡನಾಟವನ್ನು ಬಿಚ್ಚಿಟ್ಟರು.

ಉಡುಗೊರೆ ಮರಳಿ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ: ವಿವಿಧ ಕಾಮಗಾರಿ ಶಿಲಾನ್ಯಾಸ ಹಾಗೂ ಕಾಮಗಾರಿ ಉದ್ಘಾಟನೆಗಾಗಿ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುಧೋಳ ಬಿಜೆಪಿ ವತಿಯಿಂದ ನೀಡಿದ ರನ್ನನ ಗದಾಯುದ್ಧ ಪ್ರತೀಕವಾಗಿ ನೀಡಿದ ಗದೆಯುಳ್ಳ ಉಡುಗೊರೆಯನ್ನು ಮರಳಿ ನಗರದ ಮಾರುತೇಶ್ವರ ದೇವಸ್ಥಾನಕ್ಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next