Advertisement

ರೈತರು -ಸರಕಾರ ಪರಸ್ಪರ ವಿಶ್ವಾಸದಿಂದ ಹೆಜ್ಜೆ ಇಡಲಿ 

10:35 PM Dec 09, 2021 | Team Udayavani |

ಮೂರು ಕೃಷಿ ಕಾಯಿದೆಗಳ ರದ್ದು, ರೈತರ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರೀದಿ ಸಹಿತ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಕಳೆದೊಂದು ವರ್ಷದಿಂದ ರೈತರು ನಡೆಸುತ್ತ ಬಂದಿರುವ ಮುಷ್ಕರಕ್ಕೆ ಕೊನೆಗೂ ತೆರೆ ಬಿದ್ದಿದೆ. ರೈತರ ಬಹುತೇಕ ಬೇಡಿಕೆ ಈಡೇರಿಸುವ ಲಿಖೀತ ಪತ್ರವನ್ನು ಕೇಂದ್ರ ಸರಕಾರ ರೈತ ಸಂಘಟನೆಗಳ ನಾಯಕರಿಗೆ ಹಸ್ತಾಂತರಿಸಿದ ಬಳಿಕ ಪ್ರತಿಭಟನೆಯನ್ನು ವಾಪಸ್‌ ಪಡೆದುಕೊಳ್ಳುವುದಾಗಿ ಘೋಷಿಸಿದ್ದಾರೆ.

Advertisement

ಕೇಂದ್ರವು ಜಾರಿಗೆ ತಂದ 3 ಕೃಷಿ ಕಾಯಿದೆಗಳನ್ನು ಬಲವಾಗಿ ವಿರೋಧಿಸಿ ಕಳೆದ ವರ್ಷದ ನ.25ರಿಂದ ಪಂಜಾಬ್‌, ಹರಿಯಾಣ, ಉತ್ತರಪ್ರದೇಶ,ದಿಲ್ಲಿ ಸುತ್ತಮುತ್ತಲಿನ ರೈತರು ಸಂಯುಕ್ತ ಕಿಸಾನ್‌ ಮೋರ್ಚಾದ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳ ಬೆಂಬಲದೊಂದಿಗೆ ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತ ಬಂದಿದ್ದರು. ಪ್ರತಿಭಟನೆ ಕೆಲವು ಬಾರಿ ಹಿಂಸಾರೂಪಕ್ಕೆ ತಿರುಗಿ ಸಾವು-ನೋವಿಗೂ ಕಾರಣವಾಗಿತ್ತು. ಆದರೆ ಕೇಂದ್ರ ಸರಕಾರ ಮಾತ್ರ ರೈತರ ಹಿತದೃಷ್ಟಿಯಿಂದ ಜಾರಿಗೆ ತರಲಾಗಿರುವ ಕಾಯಿದೆಗಳನ್ನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಪುನರುತ್ಛರಿಸುತ್ತಲೇ ಬಂದಿತ್ತು. ರೈತರು ಮತ್ತು ಸರ ಕಾರದ ಈ ಬಿಗಿಪಟ್ಟಿನಿಂದಾಗಿ ಪ್ರತಿಭಟನೆ ಮುಂದುವರಿದಿತ್ತು. ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಈ ವಿಷಯವಾಗಿ ರೈತ ಸಂಘಟನೆಗಳು ಮತ್ತು ಕೇಂದ್ರ ಸರಕಾರಕ್ಕೆ ತಿಳಿ ಹೇಳಿದರೂ ಇತ್ತಂಡಗಳ ನಡುವೆ ಸಹಮತ ಮೂಡಿರಲಿಲ್ಲ.

ಕಳೆದ ನ.19ರಂದು ಪ್ರಧಾನಿ ಮೋದಿ ಅವರು ಮೂರೂ ಕೃಷಿ ಕಾಯಿದೆಗಳನ್ನು ವಾಪಸ್‌ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಇದರ ಹೊರತಾಗಿಯೂ ರೈತ ನಾಯಕರು ತಮ್ಮ ಇತರ ಬೇಡಿಕೆಗಳನ್ನು ಈಡೇರಿಸುವವರೆಗೆ ದಿಲ್ಲಿ ಗಡಿ ಬಿಟ್ಟು ಹೋಗಲಾರೆವು ಎಂದಿದ್ದರು. ಸರಕಾರ ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆದ ಬಳಿಕ ಬುಧವಾರದಂದು ಕೇಂದ್ರವು ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಪರಿಷ್ಕೃತ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಗುರುವಾರ ಈ ಸಂಬಂಧ ರೈತ ಮುಖಂಡರಿಗೆ ಲಿಖೀತವಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಸದ್ಯ ಅಮಾನತಿನಲ್ಲಿರಿಸಿ ಡಿ. 11ರಂದು ಪ್ರತಿಭಟನ ಸ್ಥಳಗಳಲ್ಲಿ ವಿಜಯೋತ್ಸವ ಆಚರಿಸಿ ಪ್ರತಿಭಟನೆಯನ್ನು ಸ್ಥಗಿತಗೊಳಿಸುವುದಾಗಿ ನಾಯಕರು ತಿಳಿಸಿದ್ದಾರೆ.

ಮುಂದಿನ ಉತ್ತರಪ್ರದೇಶ, ಪಂಜಾಬ್‌ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಕೃಷಿ ಕಾಯಿದೆಗಳ ರದ್ದತಿ ಮತ್ತು ರೈತರ ಬೇಡಿಕೆಗಳಿಗೆ ಕೇಂದ್ರ ಸರಕಾರ ಸಮ್ಮತಿಸಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಆದರೆ ಎಲ್ಲ ಆರೋಪ, ಟೀಕೆಗಳ ಹೊರತಾಗಿಯೂ ರೈತ ಸಂಘಟನೆಗಳು ಅದರಲ್ಲೂ ಮುಖ್ಯವಾಗಿ ರೈತರು ಸಾಂ ಕ ಶಕ್ತಿಯಿಂದ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಸಫ‌ಲರಾಗಿದ್ದಾರೆ. ಕೇಂದ್ರ ನೀಡಿರುವ ಭರವಸೆಗಳ ಈಡೇರಿಕೆಯ ಪ್ರಗತಿ ಪರಿಶೀಲಿಸಲು ಜ| 15ರಂದು ಮತ್ತೆ ಸಭೆ ಸೇರಿ ಚರ್ಚಿ ಸುವುದಾಗಿ ರೈತ ನಾಯಕರು ತಿಳಿಸಿದ್ದಾರೆ. ಸರಕಾರ ನೀಡಿರುವ ಭರವಸೆ ಯ ನ್ನು ಈಡೇರಿಸದಿದ್ದಲ್ಲಿ ಮತ್ತೆ ಪ್ರತಿಭಟನೆ ಹಾದಿ ತುಳಿಯುವುದಾಗಿ ಸರಕಾರಕ್ಕೆ ಪರೋಕ್ಷ ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಮೂಲಕ ಚೆಂಡನ್ನು ನೇರ ವಾಗಿ ಕೇಂದ್ರ ಸರಕಾರದ ಅಂಗಳಕ್ಕೆ ಎಸೆದಿದ್ದಾರೆ. ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇರಲಿ ಪ್ರಜಾಪ್ರಭುತ್ವದಲ್ಲಿ ಹೇರಿಕೆಯ ಬದಲಾಗಿ ಸರ್ವಸಮ್ಮತ ನಿರ್ಧಾರಕ್ಕೆ ಪ್ರಾಶಸ್ತ್ಯ ಎಂಬುದನ್ನು ಈ ಇಡೀ ಘಟನಾವಳಿಗಳು ಸಾಬೀತುಪಡಿಸಿವೆ. ಎಲ್ಲ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕಾಯಿದೆಗಳನ್ನು ಜಾರಿಗೊಳಿಸಬಹುದಾಗಿದೆ. ಅಂತಹ ಪೂರಕ ವಾತಾವರಣ, ವೇದಿಕೆ ಸಿದ್ಧಪಡಿಸುವ ಗುರುತರ ಹೊಣೆಗಾರಿಕೆ ಕೇಂದ್ರ ಸರಕಾರದ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next