ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕ್ಷೇತ್ರದ ಮಸೂದೆ ವಿರೋಧಿಸಿ ಸೆಪ್ಟೆಂಬರ್ 24ರಿಂದ 26ರವರೆಗೆ ರೈಲು ತಡೆ ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆ ತಿಳಿಸಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದೆ.
ಕೃಷಿ ಕ್ಷೇತ್ರದ 3 ಮಸೂದೆ ವಿರುದ್ಧ ಸೆಪ್ಟೆಂಬರ್ 24ರಿಂದ 26ರವರೆಗೆ ರೈಲು ತಡೆದು ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಥೇರ್ ತಿಳಿಸಿದ್ದಾರೆ.
ಈ ಮಸೂದೆ ವಿರುದ್ಧ ಈಗಾಗಲೇ ಕಿಸಾನ್ ಸಂಘ ಅಮೃತ್ ಸರದಲ್ಲಿ ಪ್ರತಿಭಟನೆ ನಡೆಸಿತ್ತು. ಈ ಮಸೂದೆ ರೈತರಿಗೆ ಸಹಾಯಕವಾಗಲಿದೆ ಎಂಬುದು ಸುಳ್ಳು. ಮಸೂದೆ ಜಾರಿಯಾದರೆ ಮುಂದೆ ನಾವು ಕಾರ್ಪೋರೇಟ್ ಗಳ ಕೈಗೊಂಬೆಯಾಗಬೇಕಾಗುತ್ತದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:NDA ವಿರುದ್ಧ ಅಕಾಲಿದಳ ಮುನಿಸಿಗೆ ಕಾರಣವೇನು?; ಮೋದಿ ಸಂಪುಟದ ಸಚಿವೆ ಕೌರ್ ರಾಜೀನಾಮೆ
ನಾವು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ, ದಯವಿಟ್ಟು ನಮ್ಮ ಅಹವಾಲು ಆಲಿಸಿ. ಅಷ್ಟೇ ಅಲ್ಲ ದೇಶಾದ್ಯಂತ ಇರುವ ಎಲ್ಲಾ ರೈತರು ಹೊರಬಂದು ಮೂರು ಮಸೂದೆಗಳ ವಿರುದ್ಧ ವಿರೋಧ ವ್ಯಕ್ತಪಡಿಸಬೇಕೆಂದು ಪಂಥೇರ್ ತಿಳಿಸಿದ್ದಾರೆ.
ರೈತ ವಿರೋಧಿ ಮಸೂದೆ ವಿರೋಧಿಸಿ ಸೆಪ್ಟೆಂಬರ್ 25ರಂದು ವಿವಿಧ ರೈತಪರ ಸಂಘಟನೆಗಳು ಪಂಜಾಬ್ ಬಂದ್ ಗೆ ಕರೆ ನೀಡಿವೆ. ಕೃಷಿ ಸೇವೆಗಳು ಮತ್ತು ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡುವ ಮಸೂದೆ ಮತ್ತು ರೈತರು ಉತ್ಪಾದಿಸಿದ ವಸ್ತುಗಳು ಮತ್ತು ಮಾರಾಟ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾದ ನಂತರ ಈ ಪ್ರತಿಭಟನೆ ಇನ್ನಷ್ಟು ಕಾವು ಪಡೆದುಕೊಳ್ಳತೊಡಗಿದೆ.