Advertisement

ಜಾಗತಿಕ ತಾಪಮಾನ ಬಿಕ್ಕಟ್ಟಿಗೆ ರೈತ ತುತ್ತು

01:59 PM May 16, 2022 | Team Udayavani |

ಚಿತ್ರದುರ್ಗ: ಜಾಗತಿಕ ತಾಪಮಾನದ ಬಿಕ್ಕಟ್ಟುಗಳಿಗೆ ತುತ್ತಾಗಿ ಒದ್ದಾಡುತ್ತಿರುವ ರೈತರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಹೇಳಿದರು.

Advertisement

ನಗರದ ಕ್ರೀಡಾ ಭವನದಲ್ಲಿ ಭಾನುವಾರ ಉಳುಮೆ ಪ್ರತಿಷ್ಠಾನದಿಂದ ಆಯೋಜಿಸಿದ್ದ “ಜಾಗತಿಕ ತಾಪಮಾನ ಮತ್ತು ಕೃಷಿ’ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. ಹಿಂದೆಲ್ಲ ತಿಂಗಳಿಗೋ ವರ್ಷಕ್ಕೋ, ಉಂಟಾಗುತ್ತಿದ್ದ ಚಂಡಮಾರುತ, ಸುಂಟರಗಾಳಿ, ಮೇಘಸ್ಫೋಟ ಭೂಕುಸಿತಗಳು, ಇತ್ತೀಚೆಗೆ ದಿನಕ್ಕೊಂದಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಕೃಷಿ ಮತ್ತು ದೈನಂದಿನ ಜೀವನದ ಅನುಕೂಲಕ್ಕಾಗಿ ಪೆಟ್ರೋಲ್‌, ಡೀಸೆಲ್‌ನಂತಹ ಪಳೆಯುಳಿಕೆ ಇಂಧನಗಳನ್ನು ಅಪಾರವಾಗಿ ಬಳಸುತ್ತಿದ್ದು, ಇದರಿಂದ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್  ಮತ್ತು ಮಿಥೇನ್‌ ಅನಿಲಗಳ ಪ್ರಮಾಣ ಹೆಚ್ಚಾಗಿದೆ. ಪರಿಣಾಮ ಬಿಸಿ ಹೆಚ್ಚಾಗಿ ಭೂಮಿ ಬೆವರುತ್ತಿದೆ. ಈ ನಿಟ್ಟಿನಲ್ಲಿ ರೈತರು ಮತ್ತು ಇತರರು ಸೇರಿ ಭೂಮಿ ಎದುರಿಸುತ್ತಿರುವ ಬಿಕ್ಕಟ್ಟನ್ನು ಕಡಿಮೆ ಮಾಡಲು, ಸಾಂಘಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ನಂತರ ನಡೆದ ಸಂವಾದದಲ್ಲಿ ಸುಸ್ಥಿರ ಕೃಷಿ ಚಟುವಟಿಕೆಗಳಿಂದ ಮಾತ್ರ ಬೆಳೆ ಇಳುವರಿ ವೃದ್ಧಿಯಾಗುತ್ತದೆ ಮತ್ತು ಜಮೀನಿನಲ್ಲೇ ಬೀಳುವ ಬಿಸಿಲನ್ನೇ ಶಕ್ತಿಯನ್ನಾಗಿ ಪರಿವರ್ತಿಸಿ ಆದಾಯಗಳಿಸಬಹುದು ಎಂದು ಹೇಳಿದರು. ಕೇವಲ 50 ಮಿ.ಮೀ. ಗಿಂತ ಕಡಿಮೆ ಮಳೆ ಬೀಳುವ ಇಸ್ರೇಲ್‌ ರೈತರು ತಮ್ಮದೇ ಕೃಷಿ ವಿಧಾನಗಳ ಮೂಲಕ ಸ್ವಾವಲಂಬನೆ ಸಾಸಿದ್ದಾರೆ. ಅಂಥದ್ದೇ ಮಾದರಿಗಳನ್ಮು ಇಲ್ಲೂ ಅಳವಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಬೆಂಗಳೂರಿನ ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯ ಗುರುರಾಜ್‌ ಎಸ್‌. ದಾವಣಗೆರೆ ಮಾತನಾಡಿ, ಕೃಷಿಕರನ್ನು ಕೃಷಿಯಿಂದ ದೂರ ಮಾಡುವ ಬಹುದೊಡ್ಡ ಯೋಜನೆಗಳಿಗೆ ಸರ್ಕಾರಗಳು ಈಗಾಗಲೇ ಚಾಲನೆ ನೀಡಿವೆ. 1996 ರ ವಿಶ್ವ ಬ್ಯಾಂಕ್‌ ವರದಿ ಮತ್ತು 2008 ರ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನೀತಿಯಂತೆ ಗ್ರಾಮೀಣ ಪ್ರದೇಶದ 40 ಕೋಟಿ ಜನರನ್ನು ನಗರಗಳಿಗೆ ವರ್ಗಾಯಿಸುವ ಹುನ್ನಾರ ನಡೆದಿದೆ ಎಂದು ಹೇಳಿದರು.

ಕೃಷಿ ಸಂಬಂಧಿ ಅಂಶಗಳಾದ ಬಿತ್ತನೆ ಬೀಜ, ರಸಗೊಬ್ಬರ ಕಳೆನಾಶಕ ಎಲ್ಲವನ್ನೂ ಸರ್ಕಾರ ಕಾರ್ಪೋರೇಟ್‌ ಕಂಪನಿಗಳಿಗೆ ವಹಿಸಿದ್ದು, ಇದರಿಂದ ಕಂಪನಿಗಳು ಅಧಿಕ ಇಳುವರಿಗಾಗಿ ಅನುಸರಿಸದ ಕ್ರಮಗಳಿಂದ ಹೆಚ್ಚಿನ ಶಾಖವರ್ಧಕ ಅನಿಲಗಳು ವಾತಾವರಣಕ್ಕೆ ಸೇರ್ಪಡೆಯಾಗಿ ಜಾಗತಿಕ ತಾಪಮಾನ ಹೆಚ್ಚಲು ಕಾರಣವಾಗಿದೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನಕ್ಕೆ ಬದಲಾಗಿ, ವಿಜ್ಞಾನದ ಮೊರೆ ಹೋಗಬೇಕು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೃಷಿ ವಿಜ್ಞಾನ ಕೇಂದ್ರಗಳು ಅಹರ್ನಿಶಿ ದುಡಿಯಬೇಕು. ಸಬ್ಸಿಡಿ ಬದಲು ಕೃಷಿ ಸಂಪನ್ಮೂಲ ವೃದ್ಧಿಗೆ ಒತ್ತು ನೀಡಬೇಕು ಎಂದರು.

Advertisement

ಜಾಗತಿಕ ತಾಪಮಾನ ಮತ್ತು ಕೃಷಿ ಬಿಕ್ಕಟ್ಟು ಕುರಿತು ಸಂವಾದ ನಡೆಸಿಕೊಟ್ಟ ಪತ್ರಕರ್ತ ಗಾಣದಾಳು ಶ್ರೀಕಂಠ ಮಾತನಾಡಿ, ಜಾಗತಿಕ ತಾಪಮಾನ ಮತ್ತು ಕೃಷಿ ಬಿಕ್ಕಟ್ಟು ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚರ್ಚೆಯಾಗಬೇಕು. ಜಾಗತಿಕ ತಾಪಮಾನದ ಸಮಸ್ಯೆ ಕೇವಲ ಜಾಗತಿಕ ಮಟ್ಟದ ನಾಯಕರಿಗೆ ಮಾತ್ರ ಸಂಬಂಸಿದ್ದಲ್ಲ. ಪ್ರತಿಯೊಬ್ಬ ನಾಗರಿಕನೂ ಆ ಸಮಸ್ಯೆ ವಿರುದ್ಧ ಹೋರಾಡಲು ಅಣಿಯಾಗಬೇಕು. ಈ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಿಂದಲೇ ಚರ್ಚೆ ಮತ್ತು ಪರಿಹಾರ ಕ್ರಮ ಅನುಷ್ಠಾನವಾಗಬೇಕು ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಮಳೆ ಬೀಳುವ ಪ್ರಮಾಣದಲ್ಲಿ ತೀವ್ರ ವ್ಯತ್ಯಾಸವಾಗಿದೆ. ಅತಿವೃಷ್ಟಿ ಅನಾವೃಷ್ಟಿ ಹೆಚ್ಚಾಗಿದೆ. ಅಕಾಲಿಕ ಮಳೆಯಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ ಏಳು ವರ್ಷಗಳ ಕಾಲ ಮಾವು, ಈರುಳ್ಳಿ ಬೆಳೆದವರಿಗೆ ಉತ್ತಮ ಫಸಲು ದೊರೆತಿಲ್ಲ ಎಂದು ಹೇಳಿದರು.

ಮೈಸೂರಿನ ಉಳುಮೆ ಪ್ರತಿಷ್ಠಾನದ ಮುಖ್ಯಸ್ಥ ಅವಿನಾಶ್‌ ಮಾತನಾಡಿ, ಜಮೀನಿನಲ್ಲಿ ಗಿಡ- ಮರಗಳನ್ನು ಬೆಳೆಸುವ ಮೂಲಕ ವಾತಾವರಣದ ತಾಪವನ್ನು ತಗ್ಗಿಸಬಹುದು. ಜಮೀನಿನಲ್ಲಿ ಟ್ರಂಚ್‌ಗಳನ್ನು ನಿರ್ಮಿಸುವ ಮೂಲಕ ಮಳೆ ನೀರು ಇಂಗಿಸಬೇಕು. ಜಮೀನಿನ ಸುತ್ತ ಗಿಡ-ಮರಗಳನ್ನು ಬೆಳೆಸಿ, ಅವುಗಳ ಎಲೆಗಳನ್ನು ಜೀವದ್ರವ್ಯವಾಗಿ ಜಮೀನಿಗೆ ಬಳಸಬೇಕು. ಈ ಮೂಲಕವೂ ತಾಪಮಾನ ಕಡಿಮೆ ಮಾಡಬಹುದು ಎಂದು ಹೇಳಿದರು.

ರೈತ ನಾಯಕ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ಇಂದಿನ ಕೃಷಿ ಕ್ಷೇತ್ರಗಳ ಸಮಸ್ಯೆಗಳ ಪರಿಹಾರಕ್ಕೆ ಹಸಿರು ಕ್ರಾಂತಿಗೂ ಮುಂಚೆ ಬಳಸುತ್ತಿದ್ದ ಪರಿಹಾರಗಳನ್ನು ಮತ್ತೆ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್‌ ಬಾಬು ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ರೈತರು ಕೃಷಿಯನ್ನು ತ್ಯಜಿಸಬೇಕೋ, ಮುಂದುವರಿಸಬೇಕೋ ಎಂಬ ಗೊಂದಲದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳು ರೈತರ ನೆರವಿಗೆ ನಿಲ್ಲಬೇಕು ಎಂದರು. ಉಳುಮೆ ಸಂಘಟನೆಯ ಉಜನಿಗೌಡ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next