Advertisement

ಭತ್ತದ ಕೃಷಿಯಲ್ಲಿ ಖುಷಿ ಕಂಡ ಚೇಳ್ಯಾರಿನ ಪ್ರಗತಿಪರ ಕೃಷಿಕ

10:00 AM Dec 30, 2019 | mahesh |

ಹೆಸರು: ದಯಾನಂದ ಶೆಟ್ಟಿ
ಏನೇನು ಕೃಷಿ: ಭತ್ತ, ಅಡಿಕೆ ಕರಿಮೆಣಸು
ವಯಸ್ಸು: 58
ಕೃಷಿ ಪ್ರದೇಶ: 3 ಎಕ್ರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತ್ವದ ಸ್ಥಾನವಿದೆ. ಇದೇ ಹಿನ್ನೆಲೆ ಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಸುರತ್ಕಲ್‌: ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ ಮಾಡಿ ಹಿಂದೆ ಸರಿದು ಬೇರೆ ಉದ್ಯೋಗವನ್ನು ನೋಡಿಕೊಳ್ಳುವವರ ಮಧ್ಯೆ ಕೃಷಿಯನ್ನೇ ಒಂದು ಉದ್ಯೋಗವನ್ನಾಗಿಸಿಕೊಂಡು ಬೇರೆ ಉದ್ಯೋಗದ ಲಾಭಕ್ಕಿಂತ ಹೆಚ್ಚಿನ ಲಾಭ ಪಡೆದು ಇತರರಿಗೆ ಮಾದರಿಯಾಗಿರುವ ಪ್ರಗತಿಪರ ಕೃಷಿಕ ಚೇಳಾçರು ಖಂಡಿಗೆ ದಯಾನಂದ ಶೆಟ್ಟಿ.

ಚೇಳ್ಯಾರಿನ ಬೂಬ ಶೆಟ್ಟಿ ಮತ್ತು ನಾಗವೇಣಿ ದಂಪತಿಯ ಪುತ್ರನಾದ ದಯಾನಂದ ಶೆಟ್ಟಿ ಇವರು ತಮ್ಮ ಮೆಟ್ರಿಕ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ತಮ್ಮ ಸಹೋದರರಂತೆ ಜೀವನವನ್ನು ರೂಪಿಸಿಕೊಳ್ಳಲು ಮುಂಬಯಿಗೆ ತೆರಳಿದರು. ಆದರೆ ದೈವ-ದೇವರ ಆರಾಧನೆಯ ಕೆಲಸ ಮತ್ತು ಕೃಷಿಯ ಒಲವು ಅವರನ್ನು ಮತ್ತೆ ಗ್ರಾಮಕ್ಕೆ ಕರೆತಂದಿತು. ಬಳಿಕ ಭತ್ತದ ನಾಟಿಗೆ ಜಮೀನನ್ನು ಹದಗೊಳಿಸಿ ಉತ್ತಮ ಇಳುವರಿ ಪಡೆಯುವ ಸಾಹಸಕ್ಕೆ ಮುಂದಾದರು. ಮೊದ ಮೊದಲು ಹಿಂಗಾರು ಮತ್ತು ಮುಂಗಾರು ಎರಡೂ ಬೆಳೆಯನ್ನು ತೆಗೆಯುತ್ತಿದ್ದ ಇವರು ಇತ್ತೀಚೆಗೆ ನೀರಿನ ಕೊರತೆಯಿಂದ ಒಂದೇ ಬೆಳೆ ಮಾತ್ರ ಸಾಕು ಮಾಡಿಕೊಂಡಿದ್ದಾರೆ. ಅಡಿಕೆಗೆ ಹೆಚ್ಚಿನ ನೀರು ಬೇಕಾಗುವುದರಿಂದ ಸಮಾನವಾಗಿ ನೀರನ್ನು ಜಾಣ್ಮೆಯಿಂದ ಬಳಸುತ್ತಾರೆ.

ಸಾವಯವ ಗೊಬ್ಬರ ಬಳಕೆ
ಸಮೀಪದಲ್ಲೇ ನಂದಿನಿ ನದಿಯಿದ್ದರೂ ಉಪ್ಪು ನೀರಿನ ಸಮಸ್ಯೆಯೂ ಇವರ ಜಮೀನಿಗೆ ಬಲವಾಗಿ ಕಾಡುತ್ತಿದೆ. ಹೀಗಾಗಿ ದಯಾನಂದ ಶೆಟ್ಟಿ ಅವರು ತಮ್ಮ ಕೃಷಿಗೆ ಸಾವಯವ ಗೊಬ್ಬರವನ್ನೇ ಬಳಸುತ್ತಾರೆ. ಹಟ್ಟಿ ಗೊಬ್ಬರದ ಜತೆಗೆ ಸುಡುಮಣ್ಣು ಬಳಸಿ ಗೊಬ್ಬರವನ್ನು ತಯಾರಿಸುತ್ತಾರೆ.
ಬೆಳೆಗಳಿಗೆ ಬೇಕಾದ ಸಾವಯವ ಗೊಬ್ಬರವನ್ನು ತನ್ನಲ್ಲಿಯೇ ತಯಾರಿಸಿಕೊಂಡು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮುಂಚಿತವಾಗಿ ಮಾಡಿಕೊಂಡಿರುತ್ತಾರೆ. ಇದರಿಂದ ಗೊಬ್ಬರಕ್ಕೆ ಹಣ ವೆಚ್ಚವಾಗುವುದು ಉಳಿತಾಯವಾಗುತ್ತದೆ.

Advertisement

ಮಂಗಳ ಅಡಿಕೆ
ದಯಾನಂದ ಶೆಟ್ಟಿ ಅವರ ತೋಟದಲ್ಲಿ ಮಂಗಳ ಅಡಿಕೆ ನೆಟ್ಟಿದ್ದು ಫಲ ನೀಡಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತಿದೆಯಾದರೂ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಸಾವಯವ ಮಾದರಿಯಲ್ಲಿ ಕೃಷಿ ನಡೆಸಿ ಅದರಲ್ಲಿ ಯಶಸ್ಸು ಗಳಿಸಿದ್ದಾರೆ. ಅವರ ಸಾಧನೆಯ ಹಿಂದೆ ಪತ್ನಿಯವರ ಸಹಕಾರ ಇದೆ. ಅಲ್ಲದೆ ತಮ್ಮ ಗದ್ದೆಯಲ್ಲಿ ಕೆಲವರಿಗೆ ಕೆಲಸ ನೀಡಿದ ತೃಪ್ತಿಯೂ ಇವರಿಗಿದೆ. ತೋಟದ ಮದ್ಯದಲ್ಲಿ ಮನೆ ರಚನೆ ಮಾಡಿ ಅವರು ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಅವರ ಸಾಧನೆಗೆ ಅನೇಕ ಸಂಘ-ಸಂಸ್ಥೆಯವರು ಅವರನ್ನು ಗುರುತಿಸಿ ಗೌರವಿಸಿದ್ದಾರೆ.ಅವರ ಸಾಧನೆ ಹಿಂದೆ ಬಹಳಷ್ಟು ಶ್ರಮವಿದೆ. ಮಧ್ಯಮ ವರ್ಗದಲ್ಲಿ ಬೆಳೆದು ಇಂದು ಕೃಷಿಯ ಜತೆ ಪೂರಕವಾದ ಇತರ ಉಪ ಕೆಲಸಗಳನ್ನು ನಿರ್ವಹಿಸುತ್ತಾ ಸಂತೃಪ್ತ ಜೀವನ ಸಾಗಿಸುತ್ತಿರುವ ದಯಾನಂದ ಶೆಟ್ಟಿ ಆದರ್ಶರಾಗಿದ್ದಾರೆ.

ಜಿಲ್ಲಾ ಮಟ್ಟದ ಕೃಷಿಕ
ಸಾಲು ನಾಟಿಯ ಮೂಲಕ ಭತ್ತದ ಕೃಷಿ ಮಾಡುವ ಇವರು ಈ ವಿಧಾನದಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂಬುದನ್ನು ಅರಿತುಕೊಂಡಿದ್ದಾರೆ. ತಮ್ಮ ಮೂರು ಎಕ್ರೆ ಭೂಮಿಯಲ್ಲಿ ಬಹುಪಾಲು ಭತ್ತ ನಾಟಿ ಮಾಡಿ 2016-17ರಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಕೃಷಿ ಪ್ರಶಸ್ತಿ ಪಡೆದ ಸಾಧನೆ ಇವರದು. ಈಗ ನೇಜಿ ನಾಟಿ ಮಾಡುವ ಯಂತ್ರವನ್ನು ಖರೀದಿಸಿ ಇತರ ಕೃಷಿಕರಿಗೂ ಇದರ ಸದುಪಯೋಗ ನೀಡಿ ಕೃಷಿಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ನೆರವಾಗಿದ್ದಾರೆ. ಅಲ್ಲದೆ ಕೃಷಿ ಇಲಾಖೆಯು ಆಯೋಜಿಸುವ ಸಂವಾದ, ವಿಚಾರ ಸಂಕಿರಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕೃಷಿ ಅನುಭವವನ್ನೂ ಇತರರಿಗೆ ತಿಳಿಸಿ ಮಾರ್ಗದರ್ಶನ ಮಾಡುತ್ತಾರೆ.
ಮೊಬೈಲ್‌ ಸಂಖ್ಯೆ: 9343342582

ಸರಿಯಾದ ಮಾಹಿತಿ ಅಗತ್ಯ
ಭತ್ತದ ಕೆಲಸ ಹುಡುಕಿಕೊಂಡು ಹೋಗಿದ್ದೆ. ಆದರೆ ದೈವೇಚ್ಛೆಯಂತೆ ಊರಿಗೆ ಮರಳಿ ಬಂದು ಕೃಷಿಯಲ್ಲಿ ತೊಡಗಿಸಿಕೊಂಡೆ. ಕುಟುಂಬದ ಪ್ರೋತ್ಸಾಹವೂ ಸಿಕ್ಕಿತು. ಇರುವ ಮೂರು ಎಕ್ರೆಯಲ್ಲಿ ಸಾವಯವ ಗೊಬ್ಬರದ ಬಳಕೆಯೊಂದಿಗೆ ಸಾಲು ನಾಟಿ ಮಾಡುತ್ತೇನೆ. ಇದರಲ್ಲಿ ಹೆಚ್ಚು ಇಳುವರಿಯೂ ಸಿಗುತ್ತದೆ. ಮುಖ್ಯವಾಗಿ ರೈತರು ಬೆಳೆ ಬೆಳೆಯುವ ಮೊದಲು ಸರಿಯಾದ ಮಾಹಿತಿಯನ್ನು ಪಡೆಯಬೇಕು. ಈ ರೀತಿಯಲ್ಲಿ ನಡೆಸಿದರೆ ಕೃಷಿಯು ಅತ್ಯಂತ ಲಾಭದಾಯಕವಾಗಲು ಸಾಧ್ಯ. ಕೃಷಿಯಲ್ಲಿ ನಷ್ಟವೆಂಬುದು ಇಲ್ಲ. ಮಕ್ಕಳಂತೆ ನಾವೇ ಉಸ್ತುವಾರಿ ನೋಡಿಕೊಂಡು ಕಾಲ ಕಾಲಕ್ಕೆ ಆರೈಕೆ ಮಾಡಿಕೊಂಡಿದ್ದರೆ ನಷ್ಟವಿಲ್ಲದೆ ಬೆಳೆಯಬಹುದು. ಕಜಜಯ ನಾಟಿ ಮಾಡಿ ಇಳುವರಿ ಪಡೆಯುತ್ತಿದ್ದು ಮನೆಗೆ, ಹೆಚ್ಚುವರಿಯನ್ನು ಮಾರಾಟ ಮಾಡುತ್ತೇನೆ. ಈಗ ನಾಟಿ ಮಾಡುವ ಯಂತ್ರವನ್ನು ಖರೀದಿಸಿ ಇತರರ ಕೃಷಿ ಭೂಮಿಯಲ್ಲಿ ಬೇಡಿಕೆ ಮೇರೆಗೆ ಹೋಗಿ ಉಳುಮೆ ಮಾಡುವ ಯೋಜನೆಯಿದೆ.
-ದಯಾನಂದ ಶೆಟ್ಟಿ ಕೃಷಿಕರು

ಲಕ್ಷ್ಮೀ ನಾರಾಯಣರಾವ್‌

Advertisement

Udayavani is now on Telegram. Click here to join our channel and stay updated with the latest news.

Next