Advertisement

ದೆಹಲಿ ತಲುಪಿದ ರೈತ: ಎಲ್ಲರಿಗೂ ಇದೆ ಜವಾಬ್ದಾರಿ

06:00 AM Dec 01, 2018 | |

ದೇಶಾದ್ಯಂತ ರೈತರು ಆಕ್ರೋಶಗೊಂಡಿದ್ದಾರೆ. ತಮ್ಮ ಕಷ್ಟಗಳಿಗೆ ಸ್ಪಂದಿಸುವಂತೆ ಕೋರಿ ಈಗ ಅನೇಕ ರಾಜ್ಯಗಳ ರೈತರು ದೆಹಲಿಯ ಬಾಗಿಲು ತಟ್ಟಿದ್ದಾರೆ. ಕಳೆದ ಒಂದೆರಡು ವರ್ಷಗಳಿಂದ ದೇಶದ ಒಂದಲ್ಲಾ ಒಂದು ಭಾಗದಿಂದ ರೈತರ ಆಂದೋಲನದ ಸುದ್ದಿಗಳೂ ಹೊರಬರುತ್ತಲೇ ಇರುತ್ತವೆ. ರಾಜ್ಯದಲ್ಲಂತೂ ಕೆಲ ದಿನಗಳಿಂದ ಕಬ್ಬಿಗೆ ಬೆಂಬಲ ಬೆಲೆ ಮತ್ತು ಬಾಕಿ ಪಾವತಿಗೆ ಆಗ್ರಹಿಸಿ ರೈತರ ಹೋರಾಟ ನಡೆದಿದೆ. ರಾಜ್ಯವಾಳುವವರು ರೈತ ಮಹಿಳೆಯೊಬ್ಬಳನ್ನು ಅವಮಾನಿಸಿದ ವಿವಾದವೂ ಈ ಸಮಯದಲ್ಲಿ ಭುಗಿಲೆದ್ದಿತು. ಆರೋಪ-ಪ್ರತ್ಯಾರೋಪಗಳು, ಚರ್ಚೆಗಳು ನಡೆದವು. ಆದರೆ ಪರಿಹಾರ ಸಿಗುವ ಲಕ್ಷಣಗಳಿಲ್ಲ. ಅತ್ತ, ರಾಷ್ಟ್ರ ರಾಜಧಾನಿ ದೆಹಲಿಯ ವಿಷಯಕ್ಕೇ ಬರುವುದಾದರೆ ಕೆಲವೇ ತಿಂಗಳಲ್ಲಿ ಅಲ್ಲಿ ಈಗ ಮೂರನೇ ಬಾರಿ ರೈತರಿಂದ ಪ್ರತಿಭಟನೆಗಳು ನಡೆದಿವೆ. ಸೆಪ್ಟೆಂಬರ್‌ ತಿಂಗಳಲ್ಲಿ ಅಖೀಲ ಭಾರತೀಯ ಕಿಸಾನ ಸಭೆಯ ಆಹ್ವಾನದ ಮೇರೆಗೆ ರೈತರೆಲ್ಲ ಒಂದಾಗಿದ್ದರು, ತದನಂತರ ಅಕ್ಟೋಬರ್‌ನಲ್ಲಿ ಭಾರತೀಯ ರೈತ ಒಕ್ಕೂಟ ಪ್ರತಿಭಟನಾ ರ್ಯಾಲಿ ನಡೆಸಿತ್ತು. ಇನ್ನು ಕೆಲವೇ ದಿನಗಳ ಹಿಂದೆ ಮಹಾರಾಷ್ಟ್ರದ ರೈತರು ನಾಸಿಕ್‌ನಿಂದ ಮುಂಬೈವರೆಗೆ ಪಾದಯಾತ್ರೆ ನಡೆಸಿದ್ದರು. 

Advertisement

ದೆಹಲಿಯಲ್ಲಿ ರೈತರು ಪ್ರತಿಭಟಿಸಿದ ವೇಳೆಯಲ್ಲೇ, ಅತ್ತ ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲೂ ಒಂದು ರ್ಯಾಲಿ ನಡೆದಿದೆ. ಅಲ್ಲಿ ಒಂದಾಗಿರುವ ರೈತರು ಕೋಲ್ಕತ್ತಾದವರೆಗೂ ಪಾದಯಾತ್ರೆ ನಡೆಸಲಿದ್ದಾರೆ. ಈಗ ಯಾವ ಐದು ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆಗಳು ಸಾಗಿವೆಯೋ ಅಲ್ಲೂ ಕೂಡ ಪ್ರತಿಯೊಂದು ರಾಜಕೀಯ ಪಕ್ಷವೂ ರೈತರ ಗಾಯಕ್ಕೆ ಮುಲಾಮು ಹಚ್ಚುವ ಪ್ರಯತ್ನ ನಡೆಸಿವೆ(ಅಥವಾ ಹಚ್ಚಿದಂತೆ ನಟಿಸುತ್ತಿವೆ). ಅಂದರೆ, ಇಡೀ ದೇಶಾದ್ಯಂತ ಈಗ ರೈತರ ಅಸಮಾಧಾನ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರರ್ಥವಿಷ್ಟೆ, ಕೃಷಿ ಸಂಕಟವೆನ್ನುವುದು ಯಾವುದೋ ಒಂದು ಪಕ್ಷ ಆಡಳಿತದಲ್ಲಿರುವ ರಾಜ್ಯದಲ್ಲೋ ಅಥವಾ ಭೂಭಾಗದಲ್ಲೋ ಎದುರಾಗಿಲ್ಲ, ಬದಲಾಗಿ ದೇಶಾದ್ಯಂತ ರೈತರು ನಿರಾಶರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಡೆದಿರುವ ರೈತರ ಆತ್ಮಹತ್ಯೆ ಪ್ರಮಾಣವನ್ನು ಗಮನಿಸಿದಾಗ, ಪ್ರತಿಯೊಂದು ಪಕ್ಷ/ಸರ್ಕಾರವೂ ರೈತರ ಸಮಸ್ಯೆಗಳನ್ನು ಪರಿಹರಿಸಲು ವಿಫ‌ಲವಾಗಿದೆ ಎನ್ನುವುದು ಸ್ಪಷ್ಟ. 

ಹೀಗಾಗಿ, ಪರಿಣಾಮಕಾರಿ ಫ‌ಲಿತಾಂಶ ನೀಡದೇ ಬರೀ ನೈತಿಕ ಹಿರಿಮೆಯನ್ನು ಪ್ರದರ್ಶಿಸುವ, ಸಂವೇದನೆಯ ಮಾತನಾಡುವ ರಾಜಕಾರಣಿಗಳೆಲ್ಲ ನಕಲಿ ಎಂದೆನಿಸುತ್ತಾರೆ. ದೆಹಲಿ ಪ್ರತಿಭಟನೆಯಲ್ಲಿ ರಾಹುಲ್‌ ಗಾಂಧಿ, ಅರವಿಂದ್‌ ಕೇಜ್ರಿವಾಲ್‌ ಮತ್ತು ಫಾರೂಕ್‌ ಅಬ್ದುಲ್ಲಾರಂಥ ನಾಯಕರು ಈ ವಿಷಯದಲ್ಲಿ ಸ್ಪಷ್ಟವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಗೋಚರಿಸುತ್ತಿದೆ.  ದೇಶದ ರೈತರ ಸಮಸ್ಯೆಗಳಿಗೆಲ್ಲ ಕೇಂದ್ರ ಸರ್ಕಾರ ಮತ್ತದರ ನೀತಿಗಳೇ ಕಾರಣ ಎಂಬರ್ಥದಲ್ಲಿ ಈ ರಾಜಕಾರಣಿಗಳು ಮಾತನಾಡುತ್ತಿರುವುದು ತೀರಾ ಬಾಲಿಶವಾಗಿದೆ. ಅಲ್ಲದೇ, ಈ ಪ್ರತಿಭಟನೆಯಲ್ಲಿ “ನಮಗೆ ಅಯೋಧ್ಯೆಯಲ್ಲಿ ರಾಮಮಂದಿರ ಬೇಡ, ಸಾಲ ಮನ್ನಾ ಮಾಡಿ’ ಎಂಬ ಘೋಷಣೆಯಲ್ಲೂ ಕೂಡ ಅನವಶ್ಯಕ ರಾಜಕೀಯ ಬೆರಕೆಯಾಗಿದೆ. ಪ್ರತಿಪಕ್ಷಗಳ ನಾಯಕರು ರೈತರ ಸಮಸ್ಯೆಗಳಿಗೆಲ್ಲ ಕೇಂದ್ರ ಸರ್ಕಾರವೇ ಕಾರಣ ಎಂಬಂತೆ ಮಾತನಾಡುತ್ತಿರುವುದನ್ನು ಗಮನಿಸಿದಾಗ, ಅದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವಷ್ಟೇ ಹೊರತು ಬೇರೇನೂ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. 

ಅನ್ನದಾತ ಯಾವ ಊರಿನವನಾದರೇನು, ರಾಜ್ಯದವನಾದರೇನು? ಆತ ಇಂದು ಒಂದೂರಲ್ಲಿ ಬೆಳೆಸುವ ಬೆಳೆ ಇನ್ಯಾವುದೋ ರಾಜ್ಯದಲ್ಲಿ ಯಾರಧ್ದೋ ಹೊಟ್ಟೆ ತುಂಬಿಸುತ್ತಿರುತ್ತದೆ. ಹೀಗಾಗಿ ಆತನ ಸಮಸ್ಯೆಗಳನ್ನು ಒಂದು ರಾಜಕೀಯ ಪಕ್ಷದ ವೈಫ‌ಲ್ಯಕ್ಕೆ ಸೀಮಿತಗೊಳಿಸದೇ, ಇದು ಎಲ್ಲಾ ಪಕ್ಷಗಳ ವೈಫ‌ಲ್ಯ ಎಂಬುದನ್ನು ಮನಗಾಣಬೇಕು. ರೈತರ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಮುಖಂಡರು, ಆರ್ಥಿಕ ತಜ್ಞರು, ಕೃಷಿ ತಜ್ಞರು ಒಟ್ಟಾಗಿ ಕುಳಿತು ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ರೈತರು ಆಗ್ರಹಿಸುವಂತೆ, ವಿಶೇಷ ಅಧಿವೇಶನ ಕರೆಯುವುದರಲ್ಲೂ ತಪ್ಪಿಲ್ಲ. 

ಆದಾಗ್ಯೂ ರೈತರ ಬೇಡಿಕೆಗಳಿಗೆಲ್ಲ ಒಪ್ಪಿಕೊಂಡಾಕ್ಷಣ ಕೃಷಿ ಮತ್ತು ಗ್ರಾಮೀಣ ಸಮಸ್ಯೆಗಳೆಲ್ಲ ಬಗೆಹರಿಯುತ್ತವೆ ಎನ್ನುವುದಕ್ಕೆ ಖಾತ್ರಿಯೇನೂ ಇಲ್ಲ. ಈಗಿನ ಬೇಡಿಕೆಗಳನ್ನು ಈಡೇರಿಸಿದರೆ ರೈತರಿಕೆ ತಾತ್ಕಾಲಿಕ ಸಮಾಧಾನವೇನೋ ಸಿಗುತ್ತದೆ. ಆದರೆ ಕೃಷಿ ಸಂಕಷ್ಟಗಳನ್ನು ಬೇರು ಸಮೇತ ಸರಿಪಡಿಸುವುದು ಇಂದಿನ ಬಹುದೊಡ್ಡ ಸವಾಲಾಗಿದೆ. ಪ್ರಪಂಚದ ಅರ್ಥವ್ಯವಸ್ಥೆ ಬದಲಾಗುತ್ತಿದೆ. ಇದರ ನಡುವೆ ಕೃಷಿ ಕ್ಷೇತ್ರವನ್ನೂ ಈ ಬದಲಾವಣೆಗೆ ತಕ್ಕಂತೆ ಸಜ್ಜುಗೊಳಿಸುವುದು ಕಠಿಣ ಕೆಲಸ. ಈಗಲೇ ಈ ಬಗ್ಗೆ ಯೋಚಿಸದಿದ್ದರೆ, ಪರಿಸ್ಥಿತಿ ಕೈಮೀರಲಿರುವುದು ನಿಶ್ಚಿತ. 

Advertisement
Advertisement

Udayavani is now on Telegram. Click here to join our channel and stay updated with the latest news.

Next