Advertisement

ರೈತ ಮತ್ತು ದನಗಳು

10:44 PM Sep 13, 2019 | mahesh |

ಒಂದು ಊರಿನಲ್ಲಿ ಒಬ್ಬ ರೈತ ಇದ್ದನು. ಅವನಿಗೆ ಒಬ್ಬಳು ಹೆಂಡತಿಯಿದ್ದಳು. ಅವನ ಹೆಸರು ರಂಗಪ್ಪ. ಹೆಂಡತಿಯ ಹೆಸರು ಸೀತಮ್ಮ. ಅವರು ಎರಡು ದನಗಳನ್ನು ಸಾಕಿದ್ದರು. ದಿನಾಲು ಅವರು ದನಗಳನ್ನು ಕಾಡಿಗೆ ಮೇಯಲು ಬಿಡುತ್ತಿದ್ದರು. ಒಂದು ದಿನ ಸಂಜೆ ಒಂದು ದನ ಮಾತ್ರ ಹಿಂದೆ ಬಂತು. ಇನ್ನೊಂದು ಬರಲೇ ಇಲ್ಲ. ಇದನ್ನು ನೋಡಿ ರಂಗಪ್ಪ ದುಃಖೀಸಿ, ಅಳತೊಡಗಿದ. ಅವನ ಹೆಂಡತಿ, ಯಾಕೆ ಅಳುತ್ತಿದ್ದೀರಿ? ಎಂದು ಪ್ರಶ್ನಿಸಿದಳು. ವಿಷಯ ತಿಳಿದಾಗ ಅವಳು ಅವನನ್ನು ಸಮಾಧಾನಪಡಿಸುತ್ತಾ ನಮ್ಮ ದನ ನಮಗೆ ಸಿಗುತ್ತದೆ. ನೀವು ಚಿಂತೆ ಮಾಡಬೇಡಿ ಎಂದಳು.

Advertisement

ಮರುದಿನ ಅವರಿಬ್ಬರೂ ದನವನ್ನು ಹುಡುಕಿಕೊಂಡು ಹೊರಟರು. ಸಂಜೆಯಾದರೂ ದನ ಸಿಗಲೇ ಇಲ್ಲ. ಬೇಸರದಿಂದ ಮನೆಗೆ ಹಿಂತಿರುಗಿದರು. ಮನೆಗೆ ಬಂದ ಸೀತಮ್ಮ ಸ್ವಲ್ಪ ಹಣವನ್ನು ತಂದು ರಂಗಪ್ಪನಿಗೆ ಕೊಟ್ಟು, ಈ ಹಣವನ್ನು ನಾನು ಕಷ್ಟಕಾಲಕ್ಕೆಂದು ತೆಗೆದಿಟ್ಟಿದ್ದೆ. ಇದರಿಂದ ನಾಳೆ ಹೋಗಿ ಹೊಸ ದನವನ್ನು ತರೋಣ ಎಂದಳು. ಮರುದಿವಸ ಅವರಿಬ್ಬರೂ ದನ ಮಾರುವವನಲ್ಲಿಗೆ ಬಂದು, ನಮಗೆ ಕಪ್ಪು ದನ ಬೇಕು ಎಂದು ಹಣ ಕೊಟ್ಟರು. ಮಾರಾಟಗಾರ ಹಣವನ್ನು ತೆಗೆದುಕೊಂಡು ಕಪ್ಪು ದನವನ್ನು ತೋರಿಸಿದನು. ದನವನ್ನು ನೋಡಿದ ಹೆಂಡತಿ ರಂಗಪ್ಪನಲ್ಲಿ ಇದುವೇ ನಮ್ಮ ದನ ಎಂದಳು. ಅವಳು ಆ ವ್ಯಾಪಾರಿಯನ್ನು ತೋರಿಸುತ್ತಾ ಕಳ್ಳ, ಕಳ್ಳ ಎಂದು ಕಿರುಚಿದಳು. ಆದರೆ ಅವನು ಇದು ನನ್ನದೇ ದನ ಎಂದು ಹೇಳಿದ. ಒಂದು ಉಪಾಯ ಮಾಡಿದ ಸೀತಮ್ಮ ದನದ ಕಣ್ಣುಗಳಿಗೆ ಕೈ ಅಡ್ಡಹಿಡಿದು, ದನದ ಯಾವ ಕಣ್ಣಿಗೆ ಪೆಟ್ಟಾಗಿದೆ ಎಂದು ಹೇಳಿದರೆ ದನ ನಿನ್ನದೇ ಎಂದಳು. ಆಗ ಅವನು ಎಡಗಣ್ಣಿಗೆ ಎಂದ. ಆಗ ಸೀತಮ್ಮ, ನೋಡು ಯಾವ ಕಣ್ಣಿಗೂ ಪೆಟ್ಟಾಗಿಲ್ಲ. ನೀನು ಸಾಕಿದ ದನವಾಗಿದ್ದರೆ ಅದರ ಬಗ್ಗೆ ನಿನಗೆ ತಿಳಿದಿರುತ್ತಿತ್ತು ಎಂದಳು. ಆಗ ಅಲ್ಲಿ ಸೇರಿದ ಜನರೆಲ್ಲ ಆ ವ್ಯಾಪಾರಿಗೆ ಸರಿಯಾಗಿ ಹೊಡೆದರು. ರೈತ ಮತ್ತು ಹೆಂಡತಿ ತಮ್ಮ ಹಣವನ್ನು ವಾಪಸು ಪಡೆದು, ದನವನ್ನು ತಮ್ಮ ಮನೆಗೆ ಕರೆದೊಯ್ದರು.

·  ರಕ್ಷಿತಾ ಕೆ., 9ನೇ ತರಗತಿ, ಕೆಯ್ಯೂರು ಕೆಪಿಎಸ್‌

Advertisement

Udayavani is now on Telegram. Click here to join our channel and stay updated with the latest news.

Next