Advertisement

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

07:47 AM Oct 29, 2020 | keerthan |

ಬಂಟ್ವಾಳ: ಇಲ್ಲಿನ ಫರಂಗಿಪೇಟೆಯಲ್ಲಿನ ಫೋಟೋಗ್ರಾಫರ್ ಒಬ್ಬರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಸವಾದ್ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

Advertisement

ಆರೋಪಿಗಳಾದ ಅಮ್ಮೆಮ್ಮಾರು ನಿವಾಸಿ ಮಹಮ್ಮದ್  ಅರ್ಷದ್ (19), ಅಬ್ದುಲ್ ರೆಹಮಾನ್ (22) ಮತ್ತು ಮಹಮ್ಮದ್ ಸೈಪುದ್ದೀನ್ (22) ರನ್ನು ಬಂಧಿಸಲಾಗಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಫ‌ರಂಗಿಪೇಟೆಯಲ್ಲಿ ಬುಧವಾರ ರಾತ್ರಿ 7.45ರ ಸುಮಾರಿಗೆ ಪುದು ಗ್ರಾಮದ ಕೊಟ್ಟಿಂಜ ನಿವಾಸಿ ದಿನೇಶ್‌ ಶೆಟ್ಟಿ ಎಂಬವರ ಸ್ಟುಡಿಯೋಕ್ಕೆ ನುಗ್ಗಿ ಅವರ ಮೇಲೆ ಚೂರಿಯಿಂದ ಹಲ್ಲೆ ನಡೆಸಲಾಗಿತ್ತು.

ದಿನೇಶ್ ಶೆಟ್ಟಿ ಬುಧವಾರ ರಾತ್ರಿ 7.45ರ ಸುಮಾರಿಗೆ ಸ್ಟುಡಿಯೋದಲ್ಲಿದ್ದ ವೇಳೆ ನಾಲ್ಕು ಮಂದಿ ದುಷ್ಕರ್ಮಿಗಳ ತಂಡ ಏಕಾಏಕಿ ನುಗ್ಗಿ ದಾಳಿ ನಡೆಸಿದೆ. ಕಟ್ಟಡದ ಬಹುತೇಕ ಮಳಿಗೆಗಳು ಮುಚ್ಚಿದ ಬಳಿಕ ಈ ದಾಳಿ ನಡೆದಿದೆ. ಘಟನೆಯಲ್ಲಿ ದಿನೇಶ್‌ ಅವರ ತಲೆ ಹಾಗೂ ಹೊಟ್ಟೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಮಾರ್ಕೆಟಿಂಗ್‌ ಯುವಕನೀಗ ಭತ್ತ ಬೆಳೆಯುವ ಕೃಷಿಕ

Advertisement

ಹಳೇಯ ದ್ವೇಷದ ಕಾರಣ

ಇತ್ತೀಚೆಗೆ ಕುಂಪನಮಜಲು ಎಂಬಲ್ಲಿ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ದಿನೇಶ್ ಶೆಟ್ಟಿ ಹೆಣ್ಣು ಮಗುವಿನ ಕಡೆಯವರಿಗೆ ಬೆಂಬಲ ನೀಡಿದ್ದರು. ಈ ದ್ವೇಷದಿಂದ ಲೈಂಗಿನ ದೌರ್ಜನ್ಯ ಪ್ರಕರಣದಲ್ಲಿದ್ದ ಒಬ್ಬ, ದಿನೇಶ ಶೆಟ್ಟಿಯನ್ನು ಕೊಲ್ಲುವ ಉದ್ದೇಶದಿಂದ ದಾಳಿ ನಡೆಸಿದ್ದಾನೆ.

ನಾಲ್ಕು ಮಂದಿಯ ತಂಡ ದಾಳಿ ನಡೆಸಿದ್ದು, ಕತ್ತಿಯಿಂದ ದಿನೇಶ್ ಶೆಟ್ಟಿಯವರ ತಲೆಗೆ, ಬಲ ಕೈಗೆ ಹಾಗೂ ಎಡ ಕಿಬ್ಬೊಟ್ಟೆಗೆ ಹಲ್ಲೆ ನಡೆಸಿದ್ದಾರೆ. ಆ ವೇಳೆಯಲ್ಲಿ ಅಲ್ಲಿದ್ದ ಶೇಖರ ಪೂಜಾರಿ ರವರು ಹಲ್ಲೆಯಾಗುವುದನ್ನು ತಪ್ಪಿಸಲು ಅಲ್ಲೇ ಇದ್ದ ಕುರ್ಚಿಯಿಂದ ಜೋರಾಗಿ ಇಬ್ಬರು ಆರೋಪಿಗಳಿಗೆ ಹೊಡೆದಿದ್ದಾರೆ. ಈ ವೇಳೆ ಆರೋಪಿಗಳ ಕೈಗೆ ಗಾಯವಾಗಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next