Advertisement

ಘಮ ಘಮ ದೋಸೆಯ ಮೈಸೂರು ಗಾಯತ್ರಿ ಹೋಟೆಲ್‌

01:25 PM Mar 05, 2018 | Harsha Rao |

ಮಸಾಲೆ ದೋಸೆಗೂ ಮೈಸೂರಿಗೂ ಬಿಡಿಸಲಾರದ ನಂಟು. ಮೈಸೂರಿಗೆ ಬಂದು ಹೋಗುವ ದೇಶ-ವಿದೇಶಗಳ ಪ್ರವಾಸಿಗರಿಂದ ಹಿಡಿದು, ಸ್ಥಳೀಯರೂ ಇಷ್ಟಪಡುವ ನೆಚ್ಚಿನ ತಿಂಡಿ ಕೂಡ ಮಸಾಲೆ ದೋಸೆಯೇ ಆಗಿ ಹೋಗಿದೆ.
ಬಾಯಲ್ಲಿ ನೀರೂರಿಸುವ ಗರಿಗರಿಯಾದ ಮಸಾಲೆ ದೋಸೆ ತಿನ್ನಲು ನೀವು ಬರಲೇಬೇಕಾದ ಹೋಟೆಲ್‌ ಮೈಸೂರಿನ ಗಾಯತ್ರಿ ಟಿಫಿನ್‌ ರೂಂ. ಶಾರ್ಟ್‌ ಫಾರ್ಮ್ನಲ್ಲಿ ಜಿಟಿಆರ್‌ ಎಂದೇ ಈ ಹೋಟೆಲ್‌  ಹೆಸರಾಗಿದೆ.

Advertisement

ಚಾಮುಂಡಿಪುರಂ ಮುಖ್ಯರಸ್ತೆಯಲ್ಲಿರುವ ಗಾಯತ್ರಿ ಹೋಟೆಲ್‌ಗೆ ಐದೂವರೆ ದಶಕದ ಇತಿಹಾಸವಿದೆ. 60ರ ದಶಕದಲ್ಲಿ ಮೈಸೂರು ಅಷ್ಟೇನೂ ಅಭಿವೃದ್ಧಿ ಹೊಂದಿರಲಿಲ್ಲ. ಆಗ ಮೈಲಿಗಟ್ಟಲೆ ನಡೆದು ಬಂದು ಇಲ್ಲಿ ತಿಂಡಿ ತಿಂದು, ಕಾಫಿ ಕುಡಿದು ಹೋಗುತ್ತಿದ್ದರಂತೆ.  ಈಗ ಮೈಸೂರು ಸಾಕಷ್ಟು ಬೆಳೆದು, ಕಣ್ಣು ಹಾಯಿಸಿದ್ದಲ್ಲೆಲ್ಲಾ ಹೋಟೆಲ್‌ಗ‌ಳು ಕಾಣಸಿಕ್ಕರೂ ಜಿಟಿಆರ್‌ನ ರುಚಿಗೆ ಮಾರು ಹೋಗಿರುವ ಗ್ರಾಹಕರುನಾಲಗೆ ರುಚಿ ತಣಿಸಲು ಈ ಹೋಟೆಲ್‌ಅನ್ನು ಹುಡುಕಿಕೊಂಡು ಬರುವುದುಂಟು.

ಪ್ರತಿ ಸೋಮವಾರ ಈ ಹೋಟೆಲ್‌ಗೆ ರಜೆ. ವಾರದ ಇನ್ನುಳಿದ ಆರು ದಿನಗಳ ಕಾಲ ಬೆಳಗ್ಗೆ 7 ರಿಂದ 11 ಗಂಟೆವರೆಗೆ ಹಾಗೂ ಮಧ್ಯಾಹ್ನ 3.30ರಿಂದ 8ಗಂಟೆವರೆಗೆ ತೆರೆದಿರುತ್ತದೆ.

ಈ ಹೋಟೆಲ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಎರಡೂ ಹೊತ್ತು ಘಮ ಘಮ ಮಸಾಲೆ ದೋಸೆ ಲಭ್ಯ.  ಇದರ ಜೊತೆಗೆ ಇಡ್ಲಿ-ಚಟ್ನಿ, ಇಡ್ಲಿ-ಸಾಂಬಾರು, ಮಂಗಳೂರು ಬಜ್ಜಿ, ಫಿಲ್ಟರ್‌ ಕಾಫಿ, ಟೀ ದೊರೆಯುತ್ತದೆ. ಮಸಾಲೆ ದೋಸೆಯ ಯೊಂದಿಗೆ ಸೊಪ್ಪಿನ ದೋಸೆ ಬಾಯಲ್ಲಿ ನೀರು ತರಿಸುತ್ತದೆ. ಜಿಟಿಆರ್‌ನ  ಮತ್ತೂಂದು ವಿಶೇಷ ಅಂದರೆ ಪಾಲಕ್‌, ಮೆಂತ್ಯ ಹಾಗೂ ಸಬ್ಬಸಿಗೆ ಸೊಪ್ಪಿನ ಮಿಶ್ರಣದಿಂದ ತಯಾರಿಸುವ ಸೊಪ್ಪಿನ ದೋಸೆ ಪ್ರತಿ ದಿನ ಸಂಜೆ ಮಾತ್ರ ದೊರೆಯುತ್ತದೆ.

2012ರಲ್ಲಿ ಇದೇ ಕಟ್ಟಡದ ಮೊದಲ ಮಹಡಿಯಲ್ಲಿ ಜಿಟಿಆರ್‌ ರೆಸ್ಟೋರೆಂಟ್‌ ಸಹ ಆರಂಭವಾಯಿತು. ಇಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 10ಗಂಟೆವರೆಗೆ ದಕ್ಷಿಣ ಭಾರತ, ಉತ್ತರ ಭಾರತ ಶೈಲಿಯ ಊಟ, ಚೈನೀಸ್‌ ಶೈಲಿಯ ತಿನಿಸು, ಐಸ್‌ಕ್ರೀಂ ಮತ್ತು ತಂಪು ಪಾನೀಯಗಳು ದೊರೆಯುತ್ತವೆ.

Advertisement

1960ರಲ್ಲಿ ಉಡುಪಿಯಿಂದ ಮೈಸೂರಿಗೆ ವಲಸೆ ಬಂದ ಸುಬ್ರಾಯ ಭಟ್‌ ಅವರು ಚಾಮುಂಡಿಪುರಂನಲ್ಲಿ ಸಣ್ಣದಾಗಿ ಬ್ರಾಹ್ಮಣರ ಫ‌ಲಹಾರ ಮಂದಿರ ಹೆಸರಿನಲ್ಲಿ ಈ  ಹೋಟೆಲ್‌ ಆರಂಭಿಸಿದರು. ನೆಲದ ಮೇಲೆ ಮಣೆ ಹಾಕಿ ಗ್ರಾಹಕರನ್ನು ಕೂರಿಸಿ ಬಾಳೆಎಲೆಯಲ್ಲಿ ತಿನಿಸುಗಳನ್ನು ಬಡಿಸುತ್ತಿದ್ದರು. ಗುಣಮಟ್ಟದ ಸೇವೆಗಳಿಂದಾಗಿ ಕೆಲವೇ ವರ್ಷಗಳಲ್ಲಿ ಈ ಹೋಟೆಲ್‌ ಜನಪ್ರಿಯವಾಯಿತು. ಆ ನಂತರ ಗ್ರಾಹಕರು ಹೆಚ್ಚು ಬರತೊಡಗಿದ್ದರಿಂದ ಭಟ್ಟರು, ಈ ಕಟ್ಟಡದಲ್ಲೇ 1964ರಲ್ಲಿ ಗಾಯತ್ರಿ ಟಿಫಿನ್‌ ರೂಂ ಆರಂಭಿಸಿದರು. 54 ವರ್ಷಗಳಿಂದಲೂ ಹೋಟೆಲ್‌ ಜಿಟಿಆರ್‌, ಅದೇ ಶುಚಿ-ರುಚಿಯನ್ನು ಕಾಯ್ದುಕೊಂಡು ಗ್ರಾಹಕರನ್ನು ಸೆಳೆಯುತ್ತಿದೆ.

ಸುಬ್ರಾಯಭಟ್ಟರ ನಿಧನಾನಂತರ ಅವರ ನಾಲ್ಕು ಜನ ಗಂಡು ಮಕ್ಕಳೂ ಹೋಟೆಲ್‌ ವ್ಯವಹಾರ ನೋಡಿಕೊಳ್ಳುತ್ತಿದ್ದರು. ನಾಲ್ವರು ಗಂಡು ಮಕ್ಕಳ ಪೈಕಿ ರಾಮಚಂದ್ರರಾವ್‌, ಶ್ರೀನಿವಾಸನ್‌ ಹಾಗೂ ರಾಘವೇಂದ್ರ ಅವರು ತೀರಿಕೊಂಡಿದ್ದು, ಸುಬ್ರಾಯಭಟ್ಟರ ಮೂರನೇ ಮಗ ಗುರುರಾಜ್‌ ಮತ್ತು ಶ್ರೀನಿವಾಸನ್‌ ಅವರ ಮಗ ವಿಜಯೇಂದ್ರ ಅವರು ಪ್ರಸ್ತುತ ಜಿಟಿಆರ್‌ ಹೋಟೆಲ್‌ಅನ್ನು ಮುನ್ನಡೆಸುತ್ತಿದ್ದಾರೆ.
ಮೈಸೂರಿಗೆ ಬಂದರೆ ಜಿಟಿಆರ್‌ ಮಸಾಲೆ ದೋಸೆ ಸವಿಯೋದನ್ನು ಮರೆಯಬೇಡಿ.

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next