Advertisement

ಕುಟುಂಬ ರಾಜಕಾರಣ ಬಲು ದೂರ

02:30 AM Mar 22, 2019 | |

ಮಂಗಳೂರು: ರಾಜ್ಯದಲ್ಲಿ ಕುಟುಂಬ ರಾಜಕಾರಣದ್ದೇ ಈಗ ದೊಡ್ಡಮಟ್ಟದ ಚರ್ಚೆ, ಟ್ರೋಲ್‌ ಟ್ರೆಂಡ್‌. ಅಪ್ಪ-ಮಗ, ಅಣ್ಣ-ತಮ್ಮ, ಅಜ್ಜ-ಮೊಮ್ಮಗ, ಗಂಡ-ಹೆಂಡತಿ… ಹೀಗೆ ಬೇರೆ, ಬೇರೆ ಕೋನಗಳಲ್ಲಿ ಇದು ರಂಗೇರುತ್ತಿದೆ. ಆದರೆ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಇಲ್ಲ ಎನ್ನುವುದು ವಿಶೇಷ.

Advertisement

ದಕ್ಷಿಣ ಕನ್ನಡದ ರಾಜಕೀಯ ಇತಿ ಹಾಸವನ್ನು ಅವಲೋಕಿಸಿದಾಗ, ಈ ಹಿಂದಿನ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ 1951ರಲ್ಲಿ ಬೆನಗಲ್‌ ಶಿವರಾವ್‌ ಗೆಲುವು ಪಡೆದಿದ್ದರು. 1957ರ ಕೆ.ಆರ್‌.ಆಚಾರ್‌, 1962ರ ಎ. ಶಂಕರ್‌ ಆಳ್ವ, 1967ರ ಸಿ.ಎಂ.ಪೂಣಚ್ಚ, 1971ರ ಕೆ.ಕೆ.ಶೆಟ್ಟಿ, 1977ರಿಂದ 1989ರವರೆಗೆ ಜನಾರ್ದನ ಪೂಜಾರಿ, 1991ರಿಂದ 1999ರವರೆಗೆ ಧನಂಜಯ ಕುಮಾರ್‌, 2004ರಲ್ಲಿ ಸದಾನಂದ ಗೌಡ, 2009 ಹಾಗೂ 2014ರಲ್ಲಿ ನಳಿನ್‌ ಕುಮಾರ್‌ ಕಟೀಲು ಆಯ್ಕೆಯಾಗಿದ್ದರು. ವಿಶೇಷವೆಂದರೆ, ಇವರಾರೂ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದವರಲ್ಲ. ಸಂಸದರಾಗಿ ಆಯ್ಕೆಯಾದ ಇವರಲ್ಲಿ ಯಾರೂ ಕೂಡ ರಾಜಕೀಯದ ಹಿನ್ನೆಲೆಯಿದ್ದವರಲ್ಲ. ಸಂಸದರಾದ ಬಳಿಕ ಕುಟುಂಬದವರನ್ನು ರಾಜಕೀಯಕ್ಕೆ ಕರೆ ತರುವ ಬಗ್ಗೆಯೂ ಪ್ರಯತ್ನಿಸಲಿಲ್ಲ. ಇದು ಸ್ವಲ್ಪ ಮಟ್ಟಿಗೆ ಉಡುಪಿ ಭಾಗಕ್ಕೂ ಅನ್ವಯವಾಗುತ್ತದೆ.

ದಕ್ಷಿಣ ಕನ್ನಡದ ರಾಜಕಾರಣದಲ್ಲಿ ಮಾಜಿ ಸಚಿವ ಜನಾರ್ದನ ಪೂಜಾರಿ ಒಬ್ಬ ಪ್ರಭಾವಿ ರಾಜಕಾರಣಿ. ನಾಲ್ಕು ಬಾರಿ ಸಂಸದರಾಗಿ, ಸಚಿವರಾಗಿದ್ದರೂ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಕರೆತರುವುದಕ್ಕೆ ಸುತಾರಾಂ ಒಪ್ಪಿಲ್ಲ. ಹಾಗೆಯೆ, ಆರು ಬಾರಿ ಶಾಸಕರಾಗಿ, ಹಲವು ಅವಧಿಯಲ್ಲಿ ಸಚಿವರಾಗಿದ್ದ ರಮಾನಾಥ ರೈ ಅವರ ಮಕ್ಕಳೂ ರಾಜಕೀಯದತ್ತ ಸುಳಿದೇ ಇಲ್ಲ. ಕೇಂದ್ರ ಸಚಿವರಾಗಿದ್ದ ಆಸ್ಕರ್‌ ಫರ್ನಾಂಡಿಸ್‌, ಕೇಂದ್ರ ಸಚಿವ ಸದಾನಂದ ಗೌಡ, ಮಾಜಿ ಸಚಿವ ಅಮರನಾಥ ಶೆಟ್ಟಿ, ದಿ| ವಿ.ಎಸ್‌. ಆಚಾರ್ಯ, ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ ಕೂಡ ಮಕ್ಕಳನ್ನು ರಾಜಕೀಯಕ್ಕೆ ಇಳಿಸಿಲ್ಲ. ಹಲವು ಬಾರಿ ಶಾಸಕರಾಗಿದ್ದ ಅಭಯಚಂದ್ರ ಜೈನ್‌, ಮಾಜಿ ಶಾಸಕ ಯೋಗೀಶ್‌ ಭಟ್‌ ಸಹಿತ ಇನ್ನೂ ಕೆಲವು ನಾಯಕರು ಇದೇ ಸಾಲಿಗೆ ಸೇರಿದ್ದಾರೆ.

ಉಡುಪಿಯದ್ದು ಭಿನ್ನ ರಾಗ

ಉಡುಪಿಯ ಮಧ್ವರಾಜ್‌ ಕುಟುಂಬ ಮಾತ್ರ ಇದರಿಂದ ಹೊರತಾಗಿದೆ. 1962ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಉದ್ಯಮಿ ಎಂ.ಮಧ್ವರಾಜ್‌ ಅವರು ವಿಧಾನಸಭೆ ಪ್ರವೇಶಿಸಿದ್ದರು. 1972ರಲ್ಲಿ ಅವರ ಪತ್ನಿ ಮನೋರಮಾ ಮಧ್ವರಾಜ್‌ ಗೆದ್ದು, ನಂತರದ ಏಳು ಚುನಾವಣೆಗಳಲ್ಲಿ
ಸ್ಪರ್ಧಿಸಿ 4 ಬಾರಿ ಶಾಸಕರಾಗಿ, 2004ರಲ್ಲಿ ಸಂಸದೆಯಾಗಿ ಚುನಾಯಿತ ರಾಗಿದ್ದರು. 2013ರಲ್ಲಿ ಅವರ ಪುತ್ರ ಪ್ರಮೋದ್‌ ಮಧ್ವರಾಜ್‌ ಉಡುಪಿಯಿಂದ ಚುನಾಯಿತರಾದರು. ಉಳಿದಂತೆ, ಕರಾವಳಿಯ ಕುಟುಂಬ ರಾಜಕಾರಣದ ಬಗ್ಗೆ ಅವಲೋಕಿಸಿದಾಗ, 1957ರ ವಿಧಾನಸಭಾ ಚುನಾವಣೆಯಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಗಜೀವನ್‌ ದಾಸ್‌ ಶೆಟ್ಟಿ ಗೆಲುವು ಸಾಧಿಸಿದ್ದರು. 1983ರಲ್ಲಿ ಅವರ ಸಹೋದರ, ಬಿಜೆಪಿಯ ಡಾ|ಬಿ.ಬಿ.ಶೆಟ್ಟಿ ಗೆದ್ದು ಶಾಸಕರಾಗಿದ್ದರು. ವೈದ್ಯರಾಗಿ, ಸಚಿವರಾಗಿ, ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಬಂಟ್ವಾಳದ ಡಾ| ನಾಗಪ್ಪ ಆಳ್ವ ಅವರ ಪುತ್ರ ಡಾ|ಜೀವರಾಜ ಆಳ್ವ ಸತತ ಐದು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬೆಳ್ತಂಗಡಿಯ ಕೇದೆ ಕುಟುಂಬದ ಮೂವರು ಶಾಸಕರಾದ ಇತಿಹಾಸ ಬೆಳ್ತಂಗಡಿಯದ್ದು. ಇವರು ಚಿದಾನಂದ ಬಂಗೇರ, ವಸಂತ ಬಂಗೇರ ಮತ್ತು ಪ್ರಭಾಕರ ಬಂಗೇರ. ಈ ಮನೆಯವರಿಗೆ ಒಟ್ಟು 7 ಅವಧಿಯ ಶಾಸಕತ್ವ ದೊರೆತಿದೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಗಂಗಾಧರ ಗೌಡ ಬಳಿಕ ಬಿಜೆಪಿ ಸೇರಿ ಸ್ಪರ್ಧಿಸಿದ್ದು, ಅವರ ಪುತ್ರ ರಂಜನ್‌ ಗೌಡ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು.

Advertisement

ಹರ್ಷ ಮೊಯ್ಲಿ ಎಂಟ್ರಿ ಫಲಿಸಲಿಲ್ಲ

ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಅವರು ಪುತ್ರ ಹರ್ಷ ಮೊಯ್ಲಿ ಅವರನ್ನು ಲೋಕಸಭೆಗೆ ಕರೆ ತರಲು ಒಂದು ಸುತ್ತಿನ ಪ್ರಯತ್ನ ನಡೆಸಿದ್ದರು. 2014ರ ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯಿಂದ ಹರ್ಷ ಮೊಯ್ಲಿ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿಸಲು ದಿಢೀರ್‌ ಪ್ರಯತ್ನ ನಡೆಸಿದ್ದರೂ ಫ‌ಲಿಸಿರಲಿಲ್ಲ.

ತಲಾ 4 ಬಾರಿ ತಂದೆ-ಮಗ ಎಂಎಲ್‌ಎ

ತಂದೆ ಪ್ರತಿನಿಧಿಸಿದ ಕ್ಷೇತ್ರವನ್ನು ಬಳಿಕ ಪುತ್ರ ಕೂಡ ಪ್ರತಿನಿಧಿಸುತ್ತಿರುವ ಅಪರೂ ಪದ ಕ್ಷೇತ್ರ ಕೂಡ ದ.ಕ.ಜಿಲ್ಲೆಯಲ್ಲಿದೆ ಎಂಬುದು ವಿಶೇಷ. ಹಿಂದಿನ “ಉಳ್ಳಾಲ’ ಹಾಗೂ ಈಗಿನ “ಮಂಗಳೂರು’ ವಿಧಾನಸಭಾ ಕ್ಷೇತ್ರವನ್ನು ಯು.ಟಿ. ಫರೀದ್‌ ಅವರು 1972-1978- 1999-2004ರಲ್ಲಿ ಜಯಿಸಿದ್ದರು. ಅವರ ನಿಧನಾನಂತರ ಅವರ ಪುತ್ರ ಯು.ಟಿ.ಖಾದರ್‌ ಈ ಕ್ಷೇತ್ರವನ್ನು 2007, 2008, 2013ಹಾಗೂ 2018ರಲ್ಲಿ ಗೆದ್ದಿದ್ದಾರೆ. ಹೀಗೆ, ಇಲ್ಲಿ ಕಳೆದ 14 ಚುನಾವಣೆಗಳಲ್ಲಿ ತಂದೆ-ಮಗ ಒಟ್ಟು 8 ಬಾರಿ ಇಲ್ಲಿ ಗೆದ್ದಿ ದ್ದಾರೆ. ಈ ಬಾರಿ, ಖಾದರ್‌ ಸಹೋದರ ಯು.ಟಿ.ಇಫ್ತಿಕಾರ್‌ ಕಾಸರಗೋಡು ಲೋಕಸಭಾ ಸೀಟಿನ ಮೇಲೆ ಕಣ್ಣಿಟ್ಟಿದ್ದಾರೆ.

ದಿನೇಶ್‌ ಇರಾ 

Advertisement

Udayavani is now on Telegram. Click here to join our channel and stay updated with the latest news.

Next