Advertisement

ರಸ್ತೆ ದುರಸ್ತಿಪಡಿಸುವಲ್ಲಿ ವಿಫ‌ಲ

01:08 PM Sep 15, 2019 | Team Udayavani |

ಕೋಲಾರ: ನಗರದ ರಸ್ತೆ ದುರಸ್ತಿ ಪಡಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫ‌ಲವಾಗಿರುವ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡರ ಜನ ವಿರೋಧಿ ಧೋರಣೆ ಖಂಡಿಸಿ ರೈತ ಸಂಘದಿಂದ ಶಾಸಕರ ಮನೆ ಮುಂದೆ ಪ್ರತಿಭಟಿಸಲಾಯಿತು.

Advertisement

ಹೋರಾಟದ ನೇತೃತ್ವ ವಹಿಸಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜನರಿಂದ ಆಯ್ಕೆಯಾಗಿ ಜನರ ಮಧ್ಯೆಯಿದ್ದು, ಜ್ವಲಂತ ಸಮಸ್ಯೆ ಬಗೆಹರಿಸಬೇಕಾದ ಶಾಸಕರು ಕಾಣೆಯಾಗಿದ್ದಾರೆ. ಹುಡುಕಿಕೊಡಿ ಇಲ್ಲವೇ ಶಾಸಕರೇ ಎಲ್ಲೀದ್ದೀರಾ ಎಂದು ಮತ ಹಾಕಿದ ಕ್ಷೇತ್ರದ ಜನರು, ಕೇಳುವಂತಹ ಪರಿಸ್ಥಿತಿ ಇದೆ. ತಮ್ಮ ನಿವಾಸದ ರಸ್ತೆಗಳೇ ಸಂಪೂ ರ್ಣವಾಗಿ ಹದಗೆಡುವ ಜೊತೆಗೆ ನಗರ ಧೂಳಿನ ನಗರವಾಗಿದೆ. ಜೊತೆಗೆ ನಗರದ ರಸ್ತೆಗಳು ವಾಹನ ಸವಾರರಿಗೆ ಮೃತ್ಯು ಕೂಪಗ ಳಾಗುವ ಜೊತೆಗೆ ಅಪಘಾತಗಳಾಗಿ ಕೈಕಾಲು ಮುರಿದುಕೊಂಡು ಶಾಶ್ವತವಾಗಿ ಅಂಗವಿಕಲರಾಗುತ್ತಿದ್ದಾರೆಂದು ದೂರಿದರು.

ಕ್ಷೇತ್ರಾದ್ಯಂತ ನಡೆಯುತ್ತಿರುವ ಚೆಕ್‌ಡ್ಯಾಂ, ರಸ್ತೆಗಳ ಗುಣಮಟ್ಟವನ್ನು ಪ್ರಶ್ನೆ ಮಾಡುವಂತಿಲ್ಲದಾಗಿದೆ. ಇನ್ನೂ ಬೇರೆ ಇಲಾಖೆಗಳನ್ನು ಶಾಸಕರ ಹಿಂಬಾಲಕರು ವಿಭಾಗ ಮಾಡಿಕೊಂಡಿದ್ದಾರೆಂದು ಆರೋಪ ಮಾಡಿದರು.

ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ ಮಾತನಾಡಿ, ನಗರದ ಕುಡಿಯುವ ನೀರಿನ ಕೆರೆಯಾದ ಅಮ್ಮೇರಹಳ್ಳಿ ಕೆರೆ ಹಾಗೂ ಕ್ಷೇತ್ರಾದ್ಯಂತ ಶಾಸಕರ ಹೆಸರೇಳಿಕೊಂಡು ರಾಜಾರೋಷವಾಗಿ ಆಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇಷ್ಟೆಲ್ಲಾ ಅವ್ಯವಸ್ಥೆ ಕ್ಷೇತ್ರದಲ್ಲಿದ್ದರೂ ಮತ ಪಡೆದು ಅಧಿಕಾರ ಹಿಡಿದಿರುವ ಶಾಸಕರು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಶ್ರೀನಿವಾಸಗೌಡ, ಕ್ಷೇತ್ರವನ್ನು ನಾನು ಮರೆತಿಲ್ಲ, ಹತ್ತು ವರ್ಷ ನನ್ನನ್ನು ಹಿಂದಕ್ಕೆ ಹಾಕಿದ್ದೀರಿ, ಆದರೆ, ಈಗ ಅವಕಾಶ ಸಿಕ್ಕಿದೆ. ಆಡಳಿತ ಪಕ್ಷ ನಮಗೆ ಸ್ಪಂದಿಸುತ್ತಿಲ್ಲ. ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ಜೊತೆಗೆ ಸರ್ಕಾರಿ ಇಲಾಖೆಗಳಲ್ಲಿ ಜನ ಸಾಮಾನ್ಯರ ಕೆಲಸ ಮಾಡಲು ಅಧಿಕಾರಿಗಳು ಹಣ ಹಾಗೂ ದಲ್ಲಾಳಿಗಳ ಹಾವಳಿಯಿರುವುದು ನನ್ನ ಗಮನಕ್ಕೂ ಬಂದಿದೆ ಎಂದರು. ಮಾರುಕಟ್ಟೆ ಜಾಗದ ಸಮಸ್ಯೆ ಒಂದು ತಿಂಗಳಲ್ಲಿ ಬಗೆಹರಿಸುವ ಜೊತೆಗೆ ಕಾಮಗಾರಿಗಳಲ್ಲಿನ ಕಳಪೆ ಗುಣಮಟ್ಟದ ಬಗ್ಗೆ ಸೂಕ್ತ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳುವ ಜೊತೆಗೆ ನಾನೇ ಖುದ್ದಾಗಿ ಪರಿಶೀಲನೆ ಮಾಡುತ್ತೇನೆ. ನಗರದ ರಸ್ತೆಗಳ ಅವ್ಯವಸ್ಥೆ ಸರಿಪಡಿಸುವ ಭರವಸೆಯನ್ನು ನೀಡಿದರು.

Advertisement

ಹೋರಾಟದಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ್‌, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್‌, ಮಂಗಸಂದ್ರ ನಾಗೇಶ್‌, ತಿಮ್ಮಣ್ಣ, ವೆಂಕಟೇಶಪ್ಪ, ಸಹದೇವಪ್ಪ, ಮೂರ್ತಿ, ಪುರುಷೋತ್ತಮ್‌, ಕೊಮ್ಮರಹಳ್ಳಿ ನವೀನ್‌, ಸುಪ್ರೀಂಚಲ, ನಲ್ಲಾಂಡಹಳ್ಳಿ ಕೇಶವ, ಶಿವು, ಸಾಗರ್‌, ನವೀನ್‌, ಮೀಸೆ ವೆಂಕಟೇಶಪ್ಪ, ತೆರ್ನಹಳ್ಳಿ ಆಂಜಿನಪ್ಪ, ಚಂದ್ರಪ್ಪ, ಕ್ಯಾಸಂಬಳ್ಳಿ ಪ್ರತಾಪ್‌, ಪ್ರಕಾಶ್‌, ಪುತ್ತೇರಿ ರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next