Advertisement

ಮರೆಯಾದ ಮನಗೂಳಿ ಮುತ್ಯಾ; ನೀರಾವರಿಗೆ ಚಪ್ಪಲಿ ತ್ಯಜಿಸಿದ್ದ ನಾಯಕ

05:56 PM Jan 29, 2021 | Nagendra Trasi |

ವಿಜಯಪುರ: ಸಭ್ಯತೆಯ ರಾಜಕೀಯದಿಂದಲೇ ಗುರುತಿಸಿಕೊಂಡಿದ್ದ ಮುತ್ಸದ್ಧಿ ರಾಜಕೀಯ ನಾಯಕ ಎಂ.ಸಿ. ಮನಗೂಳಿ ಅಭಿವೃದ್ಧಿ ವಿಷಯ ಬಂದರೆ ಹಠವಾದಿಯೂ ಆಗುತ್ತಿದ್ದರು. ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರರೂ ಆಗಿದ್ದರು. ಇದಕ್ಕೆ ನಿದರ್ಶನ ಎಂಬಂತೆ ನೀರಾವರಿ ಯೋಜನೆಗಾಗಿ ಚಪ್ಪಲಿ ಹಾಕದ ಶಪಥ ಮಾಡಿದ್ದರು. ಅಂದು ಪ್ರಧಾನಿ ಆಗಿದ್ದ ದೇವೇಗೌಡರನ್ನೇ ಕರೆಸಿ ಗುತ್ತಿ ಬಸವಣ್ಣ ಯೋಜನೆಗೆ ಅಡಿಗಲ್ಲು ಹಾಕಿಸಿ, ಚಪ್ಪಲಿ ಮೆಟ್ಟಿದ್ದು ಜಿಲ್ಲೆಯ ರಾಜಕೀಯದಲ್ಲಿ ಇತಿಹಾಸವಾಗಿ ದಾಖಲಾಗಿದೆ.

Advertisement

1994ರಲ್ಲಿ ಸಿಂದಗಿ ಕ್ಷೇತ್ರದಿಂದ ಮನಗೂಳಿ ಅವರು ಶಾಸಕರಾಗಿ ಆಯ್ಕೆ ಆದ ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಿತು. ರಾಜ್ಯದಲ್ಲಿ ಜನತಾದಳ ಅದ್ಭುತ ಸಾಧನೆ ಮೆರೆದಿದ್ದರಿಂದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ದೇವೇಗೌಡರಿಗೆ ದೇಶದ ಪ್ರಧಾನಿ ಗದ್ದುಗೆ ಏರುವ ಅವಕಾಶ ಸಿಕ್ಕಿತ್ತು. ಈ ಹಂತದಲ್ಲಿ ಮನಗೂಳಿ ಅವರು ಜಿಲ್ಲೆಯ ನೀರಾವರಿ ವಿಷಯದಲ್ಲಿ ಸಿದ್ಧೇಶ್ವರ ಶ್ರೀಗಳು ಹೇಳುತ್ತಿದ್ದ ಮಾತುಗಳಿಂದ ಪ್ರಭಾವಿತರಾಗಿದ್ದರು. ಹೀಗಾಗಿ ಆಗ ಮುಖ್ಯಮಂತ್ರಿ ಆಗಿದ್ದ ಜೆ.ಎಚ್‌. ಪಟೇಲ್‌ ಅವರ ಮೇಲೆ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಇದರಲ್ಲಿ ಪ್ರಮುಖ ಏತ ನೀರಾವರಿ ಯೋಜನೆಯಾದ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಒತ್ತಡ ಹೇರಿದ್ದರು.

ಮುಖ್ಯಮಂತ್ರಿ ಪಟೇಲರು ತಕ್ಷಣ ಸ್ಪಂದಿಸದಿದ್ದಾಗ “ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬಾರ¨ ಹೊರತು ನಾನು ಚಪ್ಪಲಿ ಹಾಕುವುದಿಲ್ಲ’ ಎಂದು ಶಪಥ ಮಾಡಿ ವಿಧಾನಸೌಧದಿಂದ ಕೆಳಗಿಳಿದು ಬಂದಿದ್ದರು. ಇದಾದ ಬಳಿಕ ಪ್ರಧಾನಿ ದೇವೇಗೌಡ ಅವರ ಮೇಲೆ ನಿರಂತರ ಒತ್ತಡ ಹೇರತೊಡಗಿದರು. “ನೀವು ನನ್ನ ಕ್ಷೇತ್ರ ಮಾತ್ರವಲ್ಲ ಸಮಗ್ರ ವಿಜಯಪುರ ಜಿಲ್ಲೆಯನ್ನು ನೀರಾವರಿ ಮಾಡುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅವಕಾಶ ನೀಡಿದರೆ ನಿಮ್ಮ ಮೂರ್ತಿ
ಸ್ಥಾಪಿಸಿ, ನಿಮ್ಮಿಂದಲೇ ಉದ್ಘಾಟಿಸುತ್ತೇನೆ. ಇದು ಬಾಯಿ ಮಾತಲ್ಲ, ನಾನು ಕೊಡುವ ವಚನ’ ಎಂದು ಹಠ ಹಿಡಿದಿದ್ದರು.

ಚಪ್ಪಲಿ ರಹಿತವಾಗಿ ಮನಗೂಳಿ ಅವರ ಸುಮಾರು 9 ತಿಂಗಳ ಕಾಲ ಓಡಾಟ ಕಂಡ ಪ್ರಧಾನಿ ದೇವೇಗೌಡರು, ಅವರಲ್ಲಿರುವ ಸಾತ್ವಿಕ ಹಠವನ್ನು, ರಾಜಕೀಯ ಇಚ್ಛಾಶಕ್ತಿಯ ಬದ್ಧತೆಯನ್ನು ಗುರುತಿಸಿದರು. ಪರಿಣಾಮ ಕೇಂದ್ರ ಸರ್ಕಾರದ ಯೋಜನೆಯಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಅನುದಾನ ಬಿಡುಗಡೆಗೆ ಮುಂದಾದರು. ಪರಿಣಾಮ ಸಿಂದಗಿ ತಾಲೂಕಿನ 42 ಹಳ್ಳಿಗಳ ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗೆ ಕೊನೆಗೂ ಚಾಲನೆ ದೊರೆಯಿತು.

480 ಕೋಟಿ ವೆಚ್ಚದ ಸುಮಾರು 96 ಕಿಮೀ ಉದ್ದದ ಕಾಲುವೆ ನಿರ್ಮಾಣಕ್ಕೆ 1997ರಲ್ಲಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಜೆ.ಎಚ್‌.ಪಟೇಲ, ಡಿಸಿಎಂ ಸಿದ್ಧರಾಮಯ್ಯ ಅವರೇ ಖುದ್ದು ಜಿಲ್ಲೆಗೆ ಆಗಮಿಸಿ ಅಡಿಗಲ್ಲು ಹಾಕಿದ್ದರು. ಬಳಿಕವೇ ಅವರು ಪ್ರಧಾನಿ ದೊಡ್ಡಗೌಡರ ಕೋರಿಕೆ ಮೇರೆಗೆ
ಚಪ್ಪಲಿ ಧರಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಮನಗೂಳಿ ತಾವು ಸೋತರೂ ನೀರಾವರಿ ಯೋಜನೆ ಅನುಷ್ಠಾನಕ್ಕೆ ಇನ್ನಿಲ್ಲದ ಪರಿಶ್ರಮ ಹಾಕುತ್ತಲೇ ಇದ್ದರು. ಅಂತಿಮವಾಗಿ ನೀರಾವರಿ ಯೋಜನೆ ಚಾಲನೆ ಪಡೆದು, ಕಾಲುವೆಗೆ ನೀರು ಹರಿದಾಗ ದೇವೇಗೌಡರಿಗೆ ಕೊಟ್ಟ ಪುತ್ಥಳಿ ನಿರ್ಮಾಣದ ವಚನ ಪಾಲಿಸಲು ಮುಂದಾದರು.

Advertisement

ಇದಕ್ಕಾಗಿ ರೈತರ ಸಹಕಾರದಿಂದಲೇ 12-2-2014ರಲ್ಲಿ ದೇವೇಗೌಡರು ತಮ್ಮ ಹೆಗಲಮೇಲೆ ಕೈ ಇರಿಸಿಕೊಂಡು ನಿಂತ ಭಂಗಿಯ ಕಂಚಿನ ಪುತ್ಥಳಿಯನ್ನು ಗೋಲಗೇರಿ ಬಳಿ ಸ್ಥಾಪಿಸಿದರು. ದೇವೇಗೌಡರ ಗೈರುಹಾಜರಿಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ಲೋಕಾರ್ಪಣೆ ಮಾಡಿಸಿ ವಚನ ಪಾಲಿಸಿದ್ದರು.

ಇದಾದ ಬಳಿಕ ಇದೇ ಯೋಜನೆಗೆ ಇಂಡಿ ಶಾಖಾ ಕಾಲುವೆ ಯೋಜನೆ ರೂಪಿಸಿ, ಇಂಡಿ ತಾಲೂಕಿನ ಸುಮಾರು 35 ಹಳ್ಳಿಗಳ ರೈತರ ಜಮೀನಿಗೆ ನೀರು ಹರಿಸುವಂತಾಯಿತು. ಇವರಲ್ಲಿನ ರಾಜಕೀಯ ಇಚ್ಛಾಶಕ್ತಿ ಹಾಗೂ ನೀರಾವರಿ ವಿಷಯದಲ್ಲಿನ ಬದ್ಧತೆಯಿಂದಾಗಿ ಜಿಲ್ಲೆಯ ಜನರು ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ರೂವಾರಿ ಎಂದು ಕರೆಯುವ ಜೊತೆಗೆ ಆಧುನಿಕ ಭಗೀರಥ ಎಂದು ಅಭಿಮಾನದ ಬಿರುದನ್ನು ನೀಡಿದ್ದರು.

ಅಧಿಕಾರಕಾಗಿ ದ್ರೋಹ ಬಗೆಯದ ನಾಯಕ
ವಿಜಯಪುರ: ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಅಧಿಕಾರ ಸಿಕ್ಕಾಗ ಎಂದೂ ಹಮ್ಮಿನಿಂದ ಬದುಕಿದವರಲ್ಲ. ಅಧಿ ಕಾರಕ್ಕಾಗಿ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸವನ್ನೂ ಮಾಡಿದವರಲ್ಲ. ಆದರೆ ಕ್ಷೇತ್ರದ ಜನರಿಗೆ ಕೊಟ್ಟ ಮಾತು ಈಡೇರಿಸುವಲ್ಲಿ ಎಂದೂ ಹಿಂದೆ ಬೀಳುತ್ತಿರಲಿಲ್ಲ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಕೊಟ್ಟಿದ್ದ ಭರವಸೆ ಈಡೇರಿಸುವುದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದರು. ಇದರ ಪರಿಣಾಮ ಸಿಂದಗಿ ಪಟ್ಟಣಕ್ಕೆ 24×7 ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತಂದರು.

ಆಲಮೇಲ ತಾಲೂಕು ಮಾಡಿಯೇ ತೀರುತ್ತೇನೆ ಎಂದು ಕ್ಷೇತ್ರದ ಜನರಿಗೆ ವಚನ ನೀಡಿದಂತೆ ಆಲಮೇಲ ತಾಲೂಕು ಕೇಂದ್ರವಾಗಿ ಘೋಷಣೆಯಾಗಿ, ವಾರದ ಹಿಂದಷ್ಟೇ ತಹಶೀಲ್ದಾರರ ನೇಮಕವೂ ಆಗಿದೆ. ಇದಲ್ಲದೇ ತೋಟಗಾರಿಕೆ ಸಚಿವರಾಗಿದ್ದಾಗಿನ ತಮ್ಮ ಅಧಿಕಾರ ಬಳಸಿ ಆಲಮೇಲ ಪಟ್ಟಣದಲ್ಲಿ ತೋಟಗಾರಿಕೆ ಕಾಲೇಜನ್ನೂ ಮಂಜೂರು ಮಾಡಿಸಿದ್ದರು.

ತಮ್ಮ ಪಕ್ಷದ ಮೈತ್ರಿ ಸರ್ಕಾರ ಪತನವಾಗಿ ಸಚಿವ ಸ್ಥಾನ ಕಳೆದುಕೊಂಡರೂ ಪುರಸಭೆಗೆ ಅಗತ್ಯ ಇರುವ ಅನುದಾನ ತರುವುದಕ್ಕಾಗಿ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಬಾಗಿಲಿಗೂ ಹೋಗಿ ಬಂದರು. ಇದಕ್ಕಾಗಿ ಪಕ್ಷಾಂತರ ಮಾಡುತ್ತಾರೆ, ಆಪರೇಷನ್‌ ಕಮಲಕ್ಕೆ ಬಲಿಯಾಗುತ್ತಾರೆ ಎಂದೆಲ್ಲ ಹುಯಿಲೆದ್ದರೂ ಅವರು ಧೃತಿಗೆಡಲಿಲ್ಲ.

ಸಂಘಟನೆಗೆ ಬದುಕು ಮೀಸಲು: ಇವರಲ್ಲಿನ ಪ್ರಾಮಾಣಿಕತೆ, ಪಕ್ಷದ ಮೇಲಿನ ನಿಷ್ಠೆ, ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಕುಟುಂಬದ ಮೇಲೆ ಇರಿಸಿರುವ ವಿಶ್ವಾಸಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಕುಟುಂಬವೂ ಮನಗೂಳಿ ಅವರನ್ನು ಎಂದಿಗೂ ನಿರ್ಲಕ್ಷಿಸಿಲ್ಲ. ಅಧಿ ಕಾರ ಇಲ್ಲದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಪಕ್ಷ ದುರ್ಬಲಗೊಂಡ ಸಂದರ್ಭದಲ್ಲಿ ದಶಕಗಳ ಕಾಲ ಜೆಡಿಎಸ್‌ ಪಕ್ಷವನ್ನು ಮುನ್ನಡೆಸಿ, ಸಂಘಟಿಸಿದವರೇ ಎಂ.ಸಿ. ಮನಗೂಳಿ ಅವರು. ವಯೋ ಸಹಜವಾಗಿ ತಮಗಿನ್ನು ಪಕ್ಷದ ಸಂಘಟನೆ ಸಾಧ್ಯವಿಲ್ಲ, ಹೀಗಾಗಿ ಬೇರೆಯವರಿಗೆ ಜಿಲ್ಲಾಧ್ಯಕ್ಷ ಸ್ಥಾನದ ಪಟ್ಟಗಟ್ಟಿ ಎಂದು ಹಲವು ಬಾರಿ ಸ್ವಯಂ ಮನಗೂಳಿ
ಅವರೇ ಗೋಗರೆದರೂ ಜೆಡಿಎಸ್‌ ವರಿಷ್ಠರು ಮನಗೂಳಿ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ವಿಮುಕ್ತಿಗೊಳಿಸಲಿಲ್ಲ.

ಜೆಡಿಎಸ್‌ ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಹಲವರು ಕಣ್ಣಿಟ್ಟು ಲಾಬಿ ಮಾಡಿದರೂ ದೇವೇಗೌಡರು, ಕುಮಾರಸ್ವಾಮಿ ಅವರು ಮನಗೂಳಿ ಅವರನ್ನೇ ಮುಂದುವರಿಸಿದ್ದರು. ಇವರ ನಾಯಕತ್ವದಲ್ಲೇ ಕಳೆದ ವಿಧಾನಸಭೆ ಚುನಾವಣೆ ಎದುರಿಸಿ, ಜಿಲ್ಲೆಯಲ್ಲಿ ಎರಡು ಕ್ಷೇತ್ರ ಗೆಲ್ಲುವಂತೆ ಮಾಡಿದ್ದರು. ಇತರೆ ಆರು ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸೋತರೂ ಪಕ್ಷದಲ್ಲಿ ತಮ್ಮ ಸಂಘಟನಾ ಸಾಮರ್ಥ್ಯವನ್ನು ವರಿಷ್ಠರು ಮನಗಾಣುವಂತೆ ಮಾಡಿದ್ದರು.

ಕೇವಲ ರಾಜಕೀಯ ಮಾತ್ರವಲ್ಲದೇ ಶಿಕ್ಷಣ ಪ್ರೇಮಿಯೂ ಆಗಿದ್ದ ಎಂ.ಸಿ. ಮನಗೂಳಿ ಅವರು ಸಿಂದಗಿ ಪಟ್ಟಣದಲ್ಲಿ ಅದಾಗಲೇ ಅಸ್ತಿತ್ವದಲ್ಲಿದ್ದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ನಿರ್ದೇಶಕರಾಗಿ ಪ್ರವೇಶ ಮಾಡಿ, ಹಲವು ದಶಕಗಳ ಕಾಲ ಅಧ್ಯಕ್ಷರಾಗಿ ದಕ್ಷತೆಯಿಂದ ಆಡಳಿತ ನಡೆಸಿದರು. ವೃದ್ಧಾಪ್ಯದಲ್ಲೂ ಅವರೇ ಶಿಕ್ಷಣ ಸಂಸ್ಥೆಯ ಸಾರಥ್ಯ ವಹಿಸಿದ್ದು, ಈಗಲೂ ಅವರೇ ಸದರಿ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿದ್ದರು.

ಎಲ್‌ಕೆಜಿ-ಯುಕೆಜಿ, ಪ್ರಾಥಮಿಕ ಹಂತದಿಂದ ಪದವಿ ಹಂತದ ವರೆಗೆ ವಿವಿಧ ವಿಷಯಗಳ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ಭಾಗ ಸಾವಿರಾರು ವಿದ್ಯಾರ್ಥಿಗಳಿಗೆ
ಅಕ್ಷರ ದಾಸೋಹ ಮಾಡಿ, ಶಿಕ್ಷಣ ಪ್ರೇಮಿ ಎಂದೂ ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.

ಜನತಾದಳದಲ್ಲೇ ಜೀವಿತದ ಕೊನೆ
ರಾಜಕೀಯವಾಗಿ ನಾನು ಎಂದಿಗೂ ಜೆಡಿಎಸ್‌ ತೊರೆಯುವುದಿಲ್ಲ. ಪಕ್ಷದ ವರಿಷ್ಠ ದೇವೇಗೌಡರು ನನ್ನ ಮೇಲೆ ಇರಿಸಿರುವ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ. ಅ ಧಿಕಾರಕ್ಕಾಗಿ, ಹಣದ ಆಸೆಗಾಗಿ ಎಂದಿಗೂ ನಾನು ನಂಬಿದ ರಾಜಕೀಯ ಸಿದ್ಧಾಂತಕ್ಕೆ ತಿಲಾಂಜಲಿ ಇಡುವುದಿಲ್ಲ. ಕೊನೆ ಉಸಿರು ಇರುವ ವರೆಗೂ ಜೆಡಿಎಸ್‌ ಪಕ್ಷದಲ್ಲೇ ಇರುತ್ತೇನೆ ಎಂದು ಶಾಸಕ ಮನಗೂಳಿ ತಮ್ಮನ್ನು ಆಹ್ವಾನಿಸಿದ ಬಿಜೆಪಿ ನಾಯಕರಿಗೆ ಖಡಕ್ಕಾಗಿ ಉತ್ತರಿಸಿದ್ದರು.

ಪುತ್ರ ವ್ಯಾಮೋಹಿ
ತಮ್ಮ ಪಕ್ಷದ ವರಿಷ್ಠ ದೇವೇಗೌಡ ಅವರಂತೆ ಮನಗೂಳಿ ಮುತ್ಯಾ ಕೂಡ ಪುತ್ರ ವ್ಯಾಮೋಹಿ. ಹೀಗಾಗಿ ಇವರ ನಾಲ್ವರು ಪುತ್ರರಲ್ಲಿ ಮೂವರು ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಮಗ ಅಶೋಕ ಹಾಗೂ ನಾಲ್ಕನೇ ಪುತ್ರ ಶಾಂತವೀರ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಾಗ ಸ್ವಯಂ ತಾವೇ ಕಣಕ್ಕೆ ಇಳಿದರು. ಆದರೆ ಪುತ್ರರನ್ನು ರಾಜಕೀಯವಾಗಿ ಬೆಳೆಸುವ ಕನಸನ್ನು ಮಾತ್ರ ಕೈಬಿಟ್ಟಿರಲೇ ಇಲ್ಲ. ನಾಲ್ಕನೇ ಮಗ ಡಾ| ಶಾಂತವೀರರನ್ನು ಪುರಸಭೆಯಲ್ಲಿ ಗೆಲ್ಲಿಸಿ ತರುವಲ್ಲಿ ಯಶಸ್ವಿಯಾಗಿದ್ದರು.

ಸಿಂದಗಿ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರ ಹಿಡಿಯುವಷ್ಟು ಸದಸ್ಯ ಬಲ ಇಲ್ಲದಿದ್ದರೂ ತಮ್ಮ ರಾಜಕೀಯ ಚಾಣಾಕ್ಷತನ ಬಳಸಿ ಪುತ್ರ ಡಾ| ಶಾಂತವೀರ ಅವರನ್ನು ಪುರಸಭೆ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು.ಎರಡನೇ ಮಗ ಅಶೋಕ ಅವರಿಗೆ ಜಿಪಂ ಟಿಕೆಟ್‌ ಕೊಡಿಸಿದರೂ ಸೋಲಾಯಿತು. ಆದರೆ ಅವರನ್ನು ಸಹಕಾರಿ ರಂಗದಲ್ಲಿ ಬೆಳೆಸಲು ಪ್ರೋತ್ಸಾಹ ನೀಡುತ್ತಿದ್ದರು. ಆದರೆ ಇನ್ನೊಬ್ಬ ಪುತ್ರ ಪ್ರೊ| ಅರವಿಂದ, ಪುತ್ರಿ ಅನಿತಾ, ಡಾ| ಚನ್ನವೀರ ಅವರು ಮಾತ್ರ ರಾಜಕೀಯ ಜಂಜಡದಿಂದ ದೂರ ಇದ್ದಾರೆ. ಪತ್ನಿ ಸಿದ್ದಮ್ಮ ಗೌಡತಿ ಕೂಡ ರಾಜಕೀಯದಿಂದ ದೂರವೇ ಇದ್ದರು.

*ಜಿಎಸ್. ಕಮತರ

Advertisement

Udayavani is now on Telegram. Click here to join our channel and stay updated with the latest news.

Next