Advertisement

ಅಂಗವಿಕಲರಿಗೆ ಮತ ಹಾಕಲು ಸೌಲಭ್ಯ ಕಲ್ಪಿಸಿ

11:21 AM Apr 13, 2019 | pallavi |
ಧಾರವಾಡ: ಜಿಲ್ಲೆಯಲ್ಲಿರುವ 13,159 ಅಂಗವಿಕಲರು ಏ.23ರಂದು ನಡೆಯುವ ಮತದಾನದಲ್ಲಿ ಪಾಲ್ಗೊಳ್ಳಲು ಪೂರಕವಾಗುವಂತೆ ವಾಹನ ಸೌಕರ್ಯ, ಗಾಲಿ ಕುರ್ಚಿ, ರ್‍ಯಾಂಪ್‌ ಮತ್ತಿತರ ಸೌಕರ್ಯಗಳನ್ನು ಕಲ್ಪಿಸಿ ಮತಗಟ್ಟೆಯ ಅಧಿಕಾರಿಗಳ ಮೂಲಕ ಅಂಗವಿಕಲರಿಗೆ ಮಾಹಿತಿ ತಲುಪಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ದೀಪಾ ಚೋಳನ್‌ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಅಂಗವಿಕಲರು ಹಾಗೂ ಸಖೀ ಮತಗಟ್ಟೆಗಳ ಸಿದ್ಧತೆಯ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅಂಗವಿಕಲರು ಮತಗಟ್ಟೆಗೆ ಬಂದಾಗ ಮತಗಟ್ಟೆ ಸಮೀಪದಲ್ಲಿ ಅವರ ವಾಹನ ನಿಲುಗಡೆಗೆ ಸ್ಥಳ ಗುರುತಿಸಬೇಕು.
ಜಿಲ್ಲೆಯಲ್ಲಿ ನವಲಗುಂದ ಕ್ಷೇತ್ರದಲ್ಲಿ-2482, ಕುಂದಗೋಳ- 2487, ಧಾರವಾಡ-2486, ಹುಬ್ಬಳ್ಳಿ-ಧಾರವಾಡ ಪೂರ್ವ-1090, ಹುಬ್ಬಳ್ಳಿ-ಧಾರವಾಡ ಕೇಂದ್ರ-1035, ಹುಬ್ಬಳ್ಳಿ-ಧಾರವಾಡ ಪಶ್ಚಿಮ-971 ಹಾಗೂ ಕಲಘಟಗಿಯಲ್ಲಿ-2608 ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. ಅವರಿಗೆ ಮಾಹಿತಿ ನೀಡಲು ನಕಲಿ ಮತಪತ್ರಗಳು, ಅಕ್ಷರಗಳನ್ನು ಗುರುತಿಸಲು ಭೂತಗನ್ನಡಿ (ಮ್ಯಾಗ್ನಿಫೈಯಿಂಗ್‌ ಗ್ಲಾಸ್‌)ಗಳನ್ನು ಪೂರೈಸಲಾಗುವುದು ಎಂದರು.
ಮತಗಟ್ಟೆ ವ್ಯಾಪ್ತಿಯ ಅಂಗವಿಕಲರನ್ನು ಗುರುತಿಸಿ ಅವರಿಗೆ ಕಲ್ಪಿಸಲಾಗಿರುವ ವಾಹನ ಮತ್ತು ಚಾಲಕರ ಸಂಪರ್ಕ ಸಂಖ್ಯೆ
ಒದಗಿಸಿ ಸ್ಪಷ್ಟವಾದ ಮಾಹಿತಿ ನೀಡಬೇಕು.  ಈ ಕಾರ್ಯಕ್ಕೆ ಗ್ರಾಮೀಣ ಪ್ರದೇಶದಲ್ಲಿ ಪಿಡಿಒ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ನೆರವು ಪಡೆಯಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿಲ್‌ ಕಲೆಕ್ಟರ್‌ಗಳ ಸೇವೆ ಪಡೆಯಬೇಕು. ಸಖೀ ಮತಗಟ್ಟೆಗಳನ್ನು ಸೀರೆ, ಬಲೂನುಗಳಿಂದ ಸುಂದರವಾಗಿ ಅಲಂಕರಿಸಬೇಕು. ಅಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮಹಿಳಾ ಸಿಬ್ಬಂದಿಗೆ ಉತ್ತರ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಸೀರೆ ಪೂರೈಸಬೇಕು ಎಂದರು.
ಜಿಪಂ ಸಿಇಒ ಡಾ| ಬಿ.ಸಿ. ಸತೀಶ್‌ ಮಾತನಾಡಿ, ಮತದಾರರಿಗೆ ಭಾವಚಿತ್ರವುಳ್ಳ ಗುರುತಿನ ಚೀಟಿ, ಮತದಾರರ ಮಾರ್ಗದರ್ಶಿ ಪುಸ್ತಕ, ಸಂಕಲ್ಪ ಪತ್ರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅವುಗಳನ್ನು ಸಮರ್ಪಕವಾಗಿ ಎಲ್ಲ ಮನೆಗಳಿಗೆ ತಲುಪಿಸಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಪ್ರಶಾಂತ ಮಿಶ್ರಾ, ಅಪರ ಜಿಲ್ಲಾಧಿಕಾರಿ ಡಾ| ಸುರೇಶ್‌ ಇಟ್ನಾಳ, ಅಂಗವಿಕಲರ ಮತಗಟ್ಟೆಗಳ ನೋಡಲ್‌ ಅಧಿಕಾರಿ ರಾಜಶ್ರೀ ಜೈನಾಪೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜ ವರವಟ್ಟಿ, ಹಿರಿಯ ನಾಗರಿಕರು ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಮರನಾಥ್‌ ಸೇರಿದಂತೆ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇದ್ದರು.
ಇಂದು ಪ್ಯಾರಾಗ್ಲೈಡಿಂಗ್‌ 
ಹುಬ್ಬಳ್ಳಿ: ಯುವ ಮತದಾರರ ಜಾಗೃತಿಗಾಗಿ ಜಿಲ್ಲಾ ಸ್ವೀಪ್‌ ಸಮಿತಿಯಿಂದ ಏ.13ರಂದು ಬೆಳಿಗ್ಗೆ 9:30 ಗಂಟೆಯಿಂದ ಪ್ಯಾರಾಗ್ಲೆ„ಡಿಂಗ್‌ ಇಲ್ಲಿನ ನೆಹರು ಮೈದಾನದಲ್ಲಿ ನಡೆಯಲಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಪ್ರಮುಖವಾಗಿ ಯುವ ಮತದಾರರನ್ನು
ಸೆಳೆಯುವ ಕಾರಣಕ್ಕೆ ಜಿಲ್ಲಾ ಹಾಗೂ ತಾಲೂಕು ಸ್ವೀಪ್‌ ಸಮಿತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರ ಭಾಗವಾಗಿ ಪ್ಯಾರಾಗ್ಲೆ„ಡಿಂಗ್‌ ಆಯೋಜನೆ ಮಾಡಲಾಗಿದೆ. ಬೆಂಗಳೂರಿನಿಂದ ನುರಿತ ತಂಡವನ್ನು ಕರೆಸಿಕೊಳ್ಳಲಾಗಿದೆ. ಇದಕ್ಕೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುವುದು ಎಂದು ತಿಳಿಸಿದರು.
15ಕ್ಕೆ ಬೈಕ್‌ ರ್ಯಾಲಿ: ಇಲ್ಲಿನ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಏ.15ರಂದು ಸಂಜೆ 6:00 ಗಂಟೆಗೆ ಎನ್‌ಫೀಲ್ಡ್‌ ಬೈಕ್‌ ರ್ಯಾಲಿ, ಸೈಕಲ್‌ ಜಾಥಾ ಹಾಗೂ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಣೆ ಆಯೋಜಿಸಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಸ್ವೀಪ್‌ ಸಮಿತಿಯಿಂದ ನಗರದಲ್ಲಿ ನಡೆದ ಕಾರ್ಯಕ್ರಮ ಒಳಗೊಂಡ ಕಿರುಚಿತ್ರ ಬಿಡುಗಡೆ ಮಾಡಲಾಗುವುದು. ಜಿಲ್ಲಾ
ಸ್ವೀಪ್‌ ಸಮಿತಿ ಅಧ್ಯಕ್ಷ ಡಾ| ಬಿ.ಸಿ. ಸತೀಶ, ಮಹಾನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಆಗಮಿಸುವರು ಎಂದು ತಿಳಿಸಿದರು.
18ಕ್ಕೆ ವಸ್ತುಪ್ರದರ್ಶನ: ಚುನಾವಣಾ ಆಯೋಗದ ಸೂಚನೆ ಮೇರೆಗೆ ವಾರ್ತಾ ಮತ್ತು ಸಂಪರ್ಕ ಇಲಾಖೆ ಸಹಯೋಗದಲ್ಲಿ ವಸ್ತು ಪ್ರದರ್ಶನ ಏ.18ರಿಂದ 20ರ ವರೆಗೆ ಇಲ್ಲಿನ ನಗರ ಬಸ್‌ ನಿಲ್ದಾಣ (ಸಿಬಿಟಿ)ಯಲ್ಲಿ ಆಯೋಜಿಸಲಾಗಿದೆ ಎಂದು ತಹಶೀಲ್ದಾರ್‌ ಶಶಿಧರ ಮಾಡ್ಯಾಳ ತಿಳಿಸಿದರು. ಎಆರ್‌ಒ ಅಶೋಕ ಕಲಘಟಗಿ, ಗ್ರಾಮೀಣ ತಹಶೀಲ್ದಾರ್‌ ಸಂಗಪ್ಪ ಬಾಡಗಿ, ತಾಪಂ ಇಒ ಕೆ.ಎಸ್‌ .ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next