Advertisement

ವಿನಾಶಕಾಲೇ ವಿಪರೀತ ಬುದ್ಧಿ: ಯತ್ನಾಳ

12:34 PM May 13, 2019 | Team Udayavani |

ಬನಹಟ್ಟಿ: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ ಸರ್ವಾಧಿಕಾರ ಧೋರಣೆ ತೋರುತ್ತಿರುವುದು ಇಂದು ನಿನ್ನೆಯದಲ್ಲ. ರಾಜ್ಯವನ್ನೇ ಕೊಳ್ಳೆ ಹೊಡೆದು ಅಕ್ರಮ ಆಸ್ತಿ ಮಾಡುವ ಮೂಲಕ ರಾಜ್ಯದಲ್ಲಿ ದುರಹಂಕಾರದಿಂದ ಮೆರೆಯುತ್ತಿದ್ದಾರೆ. ಸದ್ಯ ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ, ಶಾಸಕ ಬಸನಗೌಡ ಯತ್ನಾಳ ಡಿಕೆಶಿ ವಿರುದ್ಧ ಟಾಂಗ್‌ ಕೊಟ್ಟರು.

Advertisement

ಶನಿವಾರ ರಾತ್ರಿ ನಗರದಲ್ಲಿ ಸಿದ್ಧಸಿರಿ ಮಾರುಕಟ್ಟೆ ಉದ್ಘಾಟನೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೀಪ ಆರುವ ಮುನ್ನ ಎಣ್ಣೆಯಿಲ್ಲದೆ ಹೇಗೆ ದೊಡ್ಡದಾಗಿ ಉರಿಯುತ್ತದೆಯೋ. ಸದ್ಯದಲ್ಲಿಯೇ ಕಾಂಗ್ರೆಸ್‌ ಅಧೋಗತಿಯತ್ತ ಸಾಗಿ, ಅಧಿಕಾರ ಕಳೆದುಕೊಳ್ಳುವ ಎಲ್ಲ ಲಕ್ಷಣಗಳನ್ನೂ ಅರಿತಿರುವ ಡಿಕೆಶಿ ಹತಾಶೆ ಭಾವನೆಯಲ್ಲಿ ಏನೇಲ್ಲ ಹೇಳಿಕೆ ನೀಡುತ್ತಿದ್ದಾರೆಂದು ಯತ್ನಾಳ ಹೇಳಿದರು.

ಈ ಭೂಮಿಯಲ್ಲಿ ನಿಜಾಮ, ಸುಲ್ತಾನರೇ ಮಣ್ಣು ಮುಕ್ಕಿ ಹೋಗಿದ್ದಾರೆ. ಅಹ: ಭಾವನೆಯಿಂದ ನಡೆಯುತ್ತಿರುವ ಇಂಥವರಿಗೆ ಸದ್ಯವೇ ಕೊನೆಗಾಲವಿದೆ ಎಂದರು. ರಾಜ್ಯದಲ್ಲಿ ಮೈತ್ರಿ ಸರ್ಕಾರದಿಂದ ಬೃಹತ್‌ ಕಾಮಗಾರಿಗಳು ನಡೆಯುತ್ತಿಲ್ಲ. ಗುತ್ತಿಗೆದಾರರು ಕಮಿಶನ್‌ ಹಾವಳಿಯಿಂದ ಕೆಲಸವನ್ನೇ ಪಡೆಯುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗ ಸರ್ಕಾರ ನಡೆಸುತ್ತಿರುವ ಅಪವಿತ್ರ ಮೈತ್ರಿ ಸರ್ಕಾರ ಕಮಿಷನ್‌ ಎಂಬ ಭೂತದ ಸುಳಿಯಲ್ಲಿ ಗುತ್ತಿಗೆದಾರರ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆಂದು ಯತ್ನಾಳ ಆರೋಪಿಸಿದರು.

ಜನರ ಸೇವೆಗೆ ಮಾರುಕಟ್ಟೆ: ರಬಕವಿ-ಬನಹಟ್ಟಿ ತಾಲೂಕಿನ ಜನತೆಗೆ ಅಗ್ಗದ ದರದಲ್ಲಿ ಗುಣಮಟ್ಟದ ವಸ್ತುಗಳು ದೊರಕುವ ಮೂಲಕ ಹಾಗು ಕಲಬೆರಕೆ ರಹಿತವಾಗಿ ಸಾವಯವ ವಸ್ತುಗಳ ಬಳಕೆಯಿಂದ ದೀರ್ಘಾಯುಷ್ಯದ ದೃಷ್ಟಿಯಿಂದ ಮಾರುಕಟ್ಟೆಯನ್ನು ನಿರ್ಮಿಸಲು ಸನ್ನದ್ದರಾಗಿದ್ದೇವೆ ಎಂದು ಯತ್ನಾಳ ಹೇಳಿದರು.

ಶಾಸಕ ಸಿದ್ದು ಸವದಿ ಸಿದ್ಧಸಿರಿ ಮಾರುಕಟ್ಟೆಯನ್ನು ಉದ್ಘಾಟಿಸಿದರು. ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಬಾಣಕಾರ, ನಿರಾಣಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ, ಬಸವರಾಜ ದಲಾಲ, ಭೀಮಶಿ ಮಗದುಮ್‌, ಶೇಖರ ಕೊಟ್ರಶೆಟ್ಟಿ, ರಾಜು ಅಂಬಲಿ, ಶಿವಾನಂದ ಗಾಯಕವಾಡ, ಸುರೇಶ ಅಕ್ಕಿವಾಟ ಸೇರಿದಂತೆ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next