Advertisement

ಅತಿಯಾದ ವಿಶ್ವಾಸವೂ ಅನಾಹುತಕ್ಕೆ ಕಾರಣ…

11:45 AM May 28, 2019 | Sriram |

ನಮ್ಮ ಬಳಿ 500 ರುಪಾಯಿ ಇದೆ ಅಂದುಕೊಳ್ಳಿ. ಅದನ್ನು ಖರ್ಚು ಮಾಡುವ ಮುನ್ನ, ಈ ಮೊತ್ತವನ್ನು ಡಬಲ್‌ ಮಾಡಿಕೊಂಡರೆ ಚೆಂದ ಎಂದು ಮನಸ್ಸು ಲೆಕ್ಕ ಹಾಕುತ್ತದೆ. ತೀರಾ ಆಕಸ್ಮಿಕವಾಗಿ ಏನೋ ಜಾದೂ ನಡೆದು, 500 ರುಪಾಯಿ ಡಬಲ್‌ ಆಗಿಬಿಟ್ಟರೆ, ಸಂತೃಪ್ತಿ ಮತ್ತು ಸಮಾಧಾನ ಜೊತೆಯಾಗುವುದಿಲ್ಲ. ಬದಲಾಗಿ, 1000ರುಪಾಯಿಗಳನ್ನು 2000 ರುಪಾಯಿಗಳಾಗಿ ಪರಿವರ್ತಿಸಲು ಯಾವುದಾದರೂ ದಾರಿಯಿದೆಯಾ ಎಂದು ಹುಡುಕಲು ಮುಂದಾಗುತ್ತದೆ ಅಥವಾ 1000 ರುಪಾಯಿಗಳನ್ನೇ ಹತ್ತು ಸಾವಿರ ರುಪಾಯಿಗಳನ್ನಾಗಿ ಪರಿವರ್ತಿಸುವ ದಾರಿ ಯಾವುದಾದರೂ ಇದೆಯಾ ಎಂಬ ತಲಾಷೆಗೆ ಮುಂದಾಗುತ್ತದೆ. ದುಡ್ಡು- ಎಷ್ಟು ಜಾಸ್ತಿಯಿರುತ್ತೋ ಅಷ್ಟೂ ಒಳ್ಳೆಯದು ಎಂದು ನಾವು-ನೀವೆಲ್ಲಾ ನಂಬಿರುವುದೇ ಇಂಥದೊಂದು ಅತಿಯಾಸೆಗೆ, ಅತಿಯಾದ ನಿರೀಕ್ಷೆಗೆ ಕಾರಣ.

Advertisement

ಹಾಗಂತ, ತುಂಬಾ ಸುಲಭವಾಗಿ ದುಡ್ಡನ್ನು ಡಬಲ್‌ ಮಾಡುವ ಸುಲಭದ ದಾರಿಗಳಿಲ್ಲ. ಜಾದೂ ಮಾಡುವ ರೀತಿಯಲ್ಲಿ ದುಡ್ಡನ್ನು ಗಳಿಸಲು ಸಾಧ್ಯವೇ ಇಲ್ಲ. ಹಣ ಉಳಿಸಬೇಕು ಅಂದರೆ ಅದಕ್ಕೆ ಇರುವ ಒಂದೇ ದಾರಿಯೆಂದರೆ ಹೆಚ್ಚಿನ ಕೆಲಸವನ್ನು ನಾವೇ ಮಾಡುವುದು. ಆ ಮೂಲಕ ಹೆಚ್ಚುವರಿ ಖರ್ಚಿನ ಉಳಿತಾಯ ಮಾಡುವುದು. ಇಂಗ್ಲೀಷಿನಲ್ಲಿ ಇದಕ್ಕೆ Cost cutting ಅನ್ನುತ್ತಾರೆ. ಹಣ ಉಳಿಸಲು ಆ ಮೂಲಕ ಸಂಪತ್ತು ಸಂಗ್ರಹಿಸಲು ಇರುವ ಮತ್ತೂಂದು ದಾರಿ ಯಾವುದು? ಅದನ್ನು ನಮ್ಮ ನಡುವೆಯೇ ಇರುವ ಜನ ಹೇಗೆ ಸದುಪಯೋಗ ಮಾಡಿಕೊಳ್ಳುತ್ತಾರೆ ಹಾಗೂ ಒದಗಿಬಂದ ಅವಕಾಶವನ್ನು ಹೇಗೆ ಕೈ ಚೆಲ್ಲುತ್ತಾರೆ ಎಂಬುದನ್ನು ನೋಡೋಣ.

ಲಾಭವಿದ್ದಲ್ಲೇ ನಷ್ಟವೂ ಇತ್ತು !
ನಮ್ಮ ನಿಮ್ಮ ಪರಿಚಯದ ಇಬ್ಬರು ವ್ಯಕ್ತಿಗಳು ಅಂದುಕೊಳ್ಳಿ. ಕ್ರಮವಾಗಿ ಅವರ ಹೆಸರು ರಾಮಣ್ಣ-ಶಾಮಣ್ಣ. ಇಬ್ಬರಿಗೂ ಹೊಸದೊಂದು ಬ್ಯುಸಿನೆಸ್‌ ಆರಂಭಿಸುವ ಹಂಬಲ. ಏನೇ ಕೆಲಸ ಮಾಡಿದರೂ ಹತ್ತು ಜನರ ಕಣ್ಣು ಕುಕ್ಕುವಂತೆ, ಗ್ರ್ಯಾಂಡ್‌ ಆಗಿಯೇ ಮಾಡಬೇಕು ಎಂಬುದು ರಾಮಣ್ಣನ ವಾದ. ಶಾಮಣ್ಣ, ಇದಕ್ಕೆ ತದ್ವಿರುದ್ಧ. ಹೇಳಕೇಳಿ ಬ್ಯುಸಿನೆಸ್‌. ಇಲ್ಲಿ ಪ್ರತಿಯೊಂದು ಪೈಸೆಯನ್ನೂ ಲೆಕ್ಕ ಹಾಕಿಯೇ ಖರ್ಚು ಮಾಡಬೇಕು. ಆದಷ್ಟೂ ಕಡಿಮೆ ಖರ್ಚು ಮಾಡಬೇಕು ಎಂಬುದು ಅವನ ಮಾತು. ಈ ಇಬ್ಬರೂ ಒಂದು ಪ್ರಾವಿಷನ್‌ ಸ್ಟೋರ್‌ ಆರಂಭಿಸಿದರು. ರಾಮಣ್ಣ, ತನ್ನ ಅವನು ಅಂಗಡಿಯ ಉದ್ಘಾಟನೆಯ ನ್ನು ಬಹಳ ಅದ್ದೂರಿಯಿಂದ ಮಾಡಿದ. ನಾಲ್ಕು ಮಂದಿ ಸಹಾಯಕರೊಂದಿಗೆ ಅಂಗಡಿ ಆರಂಭಿಸಿದ. ಬ್ಯುಸಿನೆಸ್‌ ಕೂಡ ಚೆನ್ನಾಗಿಯೇ ಆಯಿತು.

ಈ ಕಡೆ ಶಾಮಣ್ಣ ಇದ್ದನಲ್ಲ; ಅವನೂ ಒಂದು ಜನರಲ್‌ ಸ್ಟೋರ್ ಆರಂಭಿಸಿದ. ಅಲ್ಲಿ ವಿಪರೀತ ರಶ್‌ ಇಲ್ಲದಿದ್ದರೂ ಸಾಕಷ್ಟು ಮಾರಾಟ ಆಗುತ್ತಿತ್ತು. ಒಂದು ವರ್ಷ ಕಳೆಯುತ್ತಿದ್ದಂತೆ, ರಾಮಣ್ಣನ ಅಂಗಡಿಯಲ್ಲಿ ಕೆಲಸದ ಹುಡುಗರ ಪೈಕಿ ಇಬ್ಬರನ್ನು ಮನೆಗೆ ಕಳುಹಿಸಲಾಯಿತು. ಮಾಲೀಕನಾದ ರಾಮಣ್ಣ ಕೂಡ ಸೊರಗಿದಂತೆ ಕಂಡು ಬಂದ. ಕೇಳಿದರೆ, ವ್ಯವಹಾರ ಕೈ ಹಿಡಿದಂತೆ ಕಾಣುತ್ತಿಲ್ಲ. ಇಲ್ಲಿ ಬಂದದ್ದು ಅಲ್ಲಿ ಹೋಗಿಬಿಡ್ತಾ ಇದೆ. ದಿನವಿಡೀ ವ್ಯಾಪಾರ ಆಗುತ್ತೆ ನಿಜ. ಖರ್ಚೂ ಅಷ್ಟೇ ಬರ್ತಿದೆ… ಅನ್ನ ತೊಡಗಿದ. ಈ ಮಾತಿನಲ್ಲಿ ನಿಜವೂ ಇತ್ತು. ಕಂಡವರ ಕಣ್ಣು ಕುಕ್ಕುವಂತೆ ಬ್ಯುಸಿನೆಸ್‌ ಮಾಡಬೇಕೆಂದು ಹೊರಟು ಅಂಗಡಿಯನ್ನು ಝಗಮಗ ಲೈಟು, ನಾಲ್ಕು ಫ್ಯಾನ್‌ಗಳಿಂದ ರಾಮಣ್ಣ ಅಲಂಕರಿಸಿದ್ದ. ಸಾಲದೆಂಬಂತೆ, ಕೆಲಸಕ್ಕೆ ನಾಲ್ಕು ಹುಡುಗರನ್ನು ಇಟ್ಟುಕೊಂಡಿದ್ದ. ಅವರ ಸಂಬಳ, ಕರೆಂಟ್‌ ಬಿಲ್‌ ಎಂದು ಸಾಕಷ್ಟು ಹಣ ಕೈಬಿಡುತ್ತಿತ್ತು.

ಈ ಕಡೆ ಶಾಮಣ್ಣ ಇದ್ದನಲ್ಲ; ಅವನಿಗೆ ಈ ಯಾವ ಖರ್ಚೂ ಇರಲಿಲ್ಲ. ಅಂಗಡಿಗೆ, ಸೇವಕನೂ ನಾನೇ. ಮಾಲೀಕನೂ ನಾನೇ ಎಂಬ ರೀತಿಯಲ್ಲಿ ಅವನಿದ್ದ. ಒಬ್ಬನೇ ಇದ್ದುದರಿಂದ ಬಿಜಿನೆಸ್‌ ಸ್ವಲ್ಪ ಕಡಿಮೆಯಾಯಿತು ನಿಜ. ಆದರೆ, ಅವನಿಗೆ ಯಾವ ರೀತಿಯಲ್ಲೂ ಲಾಸ್‌ ಆಗಲಿಲ್ಲ. ಬದಲಿಗೆ, ವರ್ಷ ಕಳೆಯುತ್ತಿದ್ದಂತೆಯೇ, ಇನ್ನೊಂದು ಏರಿಯಾದಲ್ಲಿ ಮತ್ತೂಂದು ಅಂಗಡಿ ಆರಂಭಿಸಲು ಆತನಿಗೆ ಸಾಧ್ಯವಾಯಿತು. ಹೊಸ ಅಂಗಡಿಗೆ ಮಾಲೀಕ ಕಂ ಸೇವಕನಾಗಿ ಸ್ವಂತ ಮಗನನ್ನೇ ಕಳುಹಿಸಿದ. ಶಾಮಣ್ಣನ ಎರಡನೇ ಅಂಗಡಿಯೂ ಯಶಸ್ವಿಯಾಗಿ ನಡೆಯಿತು ಎಂದು ಬಿಡಿಸಿ ಹೇಳಬೇಕಾಗಿಲ್ಲ ತಾನೇ.

Advertisement

ಎಲ್ಲ ವ್ಯವಹಾರಕ್ಕೂ ಅನ್ವಯ
ಪ್ರಾವಿಜನ್‌ ಸ್ಟೋರ್‌ ಆರಂಭಿಸಿದ ಕಥೆ ಎಂದು ಹೇಳಿದರೆ, ಅದು ಹೆಚ್ಚಾಗಿ ಎಲ್ಲ ನಗರಗಳ, ಹೆಚ್ಚಿನ ಬ್ಯುಸಿನೆಸ್‌ ಮನ್‌ಗಳ ಕಥೆಗೆ ಹತ್ತಿರದ್ದು ಆಗಬಹುದು ಎಂಬ ಲೆಕ್ಕಾಚಾರದಿಂದಲೇ ಈ ಉದಾಹರಣೆ ನೀಡಿದ್ದು. ಚೆನ್ನಾಗಿ ಬ್ಯುಸಿನೆಸ್‌ ಮಾಡಬೇಕು ಎಂಬು ಸದಾಶಯದಿಂದ ಆರಂಭವಾಗುವ ಹೋಟೆಲ್‌, ಪ್ರಿಂಟಿಂಗ್‌ ಪ್ರಸ್‌, ಟೈಲರಿಂಗ್‌ ಶಾಪ್‌, ಹೋಂ ಅಪ್ಲಯನ್ಸಸ್‌ ಮಳಿಗೆ, ಅಕ್ಕಿ ವ್ಯಾಪಾರದ ಅಂಗಡಿಗಳು, ಬೇಕರಿಗಳು- ಆರಂಭವಾದ ಆರೇ ತಿಂಗಳಲ್ಲಿ ನಷ್ಟದ ಸುಳಿಗೆ ಯಾಕೆ ಸಿಗುತ್ತವೆ ಎಂದರೆ- ಲಾಭದಷ್ಟೇ ಪ್ರಮಾಣದ ಖರ್ಚನ್ನೂ ಒಳಗೊಳ್ಳುವ ಕಾರಣಕ್ಕೆ.

ಅತೀ ವಿಶ್ವಾಸ ಬೇಡ
ಮತ್ತೆ ಕೆಲವರಿರುತ್ತಾರೆ. ಅವರಿಗೆ ನಾನೇ ಕಿಂಗ್‌ ಎಂಬ ಹಮ್ಮು. ನಾನು ಕೈ ಹಾಕಿದ ಮೇಲೆ ಗೆಲ್ಲಲೇ ಬೇಕು. ಗೆದ್ದೇ ಗೆಲ್ತಿàನಿ ಎಂದು ಅವರು ಬ್ಯುಸಿನೆಸ್‌ ಆರಂಭಿಸುವ ಮೊದಲೇ ಘೋಷಿಸಿಬಿಡುತ್ತಾರೆ. ಗೆಲುವಿನ ಕುರಿತು ಅದೆಂಥ “ಭ್ರಮೆ’ ಇರುತ್ತದೆಂದರೆ, ಆರೇ ತಿಂಗಳಲ್ಲಿ ಎಲ್ಲ ಸಾಲವನ್ನೂ ಚುಕ್ತಾ ಮಾಡುವುದಾಗಿ ಘಂಟಾ ಘೋಷವಾಗಿ ಹೇಳಿ, ಸಾಲ ಪಡೆಯುತ್ತಾರೆ. ಗೆದ್ದೇ ಗೆಲೆ¤àನೆ. ನನಗೆ ಯಾರೂ ಎದುರಾಳಿಗಳೇ ಇರುವುದಿಲ್ಲ ಎಂಬ ಹಮ್ಮಿನಿಂದ ಬ್ಯುಸಿನೆಸ್‌ನ ಕಡೆಗೆ ಸ್ವಲ್ಪ ನಿರಾಸಕ್ತಿ ತೋರಲು ಆರಂಭಿಸುತ್ತಾರೆ. ಅದರ ಪರಿಣಾಮ ಆರೆಂಟು ತಿಂಗಳ ನಂತರ ಗೊತ್ತಾಗುತ್ತದೆ. ನಿರೀಕ್ಷಿಸಿದಷ್ಟು ಲಾಭ ಸಿಗದ ಕಾರಣ, ಬ್ಯುಸಿನೆಸ್‌ ಕುಂಟ ತೊಡಗುತ್ತದೆ.

ಅದರರ್ಥ; ಮನುಷ್ಯನಿಗೆ ವಿಶ್ವಾಸವಿರಬೇಕೇ ಹೊರತು ಅತಿಯಾದ ಆತ್ಮವಿಶ್ವಾಸ ಇರಬಾರದು. ರನ್ನಿಂಗ್‌ ರೇಸ್‌ನಲ್ಲಿ ಜಿಂಕೆಯಂತೆ ಓಡುವುದು ಮುಖ್ಯವಲ್ಲ, ದಾರಿ ನೋಡಿಕೊಂಡು ಓಡುವುದು ಮುಖ್ಯ. ಗುಂಡಿಗಳು ಬಂದಾಗ ಜಿಗಿಯಲು, ಮುಳ್ಳು ಕಂಡಾಗ ಅದರಿಂದಾಚೆಗೆ ನೆಗೆಯಲು ಅವನಿಗೆ ಗೊತ್ತಿರಬೇಕು. ಆಗ ಮಾತ್ರ ಗೆಲುವಿನ ಹಾರವೂ, ಅದರೊಂದಿಗೇ ಬಹುಮಾನವೂ ಜೊತೆಯಾಗುತ್ತದೆ.

ಈಗ ಮತ್ತೆ ಆರಂಭದ ವಿಷಯಕ್ಕೆ ಹೋಗೋಣ. ಬ್ಯುಸಿನೆಸ್‌ ಎಂಬ ರನ್ನಿಂಗ್‌ ರೇಸ್‌ ಸ್ಪರ್ಧೆಯನ್ನು ರಾಮಣ್ಣ-ಶಾಮಣ್ಣರಿಗೆ ಅನ್ವಯಿಸಿ ನೋಡೋಣ. ಈ ಇಬ್ಬರೂ ಗೆಲ್ಲಬೇಕೆಂಬ ಆಸೆಯಿಂದಲೇ ಅಂಗಳಕ್ಕೆ ಬಂದರು. ರಾಮಣ್ಣನಿಗೆ ಗೆಲುವಿನ ಕುರಿತು ಪ್ರಚಂಡ ವಿಶ್ವಾಸವಿತ್ತು. ಹಾಗಾಗಿ ಅವನು ಹಿಂದೆ ಮುಂದೆ ನೋಡದೆ ನುಗ್ಗಿಬಿಟ್ಟ. ಕಣ್ಮುಚ್ಚಿ ಓಡುವಾಗ ಜಾರಿ ಬಿದ್ದೂಬಿಟ್ಟ. ಆದರೆ, ಶಾಮಣ್ಣನ ಕಥೆ ಹಾಗಾಗಲಿಲ್ಲ. ಅವನು ಏಳೆಂಟು ಬಾರಿ ಲೆಕ್ಕಾಚಾರ ಮಾಡಿಯೇ ಹೆಜ್ಜೆ ಹಾಕಿದ. ನಿಧಾನವಾಗಿಯಾದರೂ ಗುರಿ ತಲುಪಿದ !

ನೆನಪಿರಲಿ
-ಗೆಲುವಿನ ವಿಶ್ವಾಸವಿರಲಿ, ಅತಿಯಾದ ಆತ್ಮವಿಶ್ವಾಸ ಬೇಡ
– ಬ್ಯುಸಿನೆಸ್‌ ಅಂದರೆ ಸೋಲು-ಗೆಲುವು ಎರಡೂ.
ಹಾಗಾಗಿ ಸದಾ ಗೆಲೆ¤àನೆ ಎಂಬ ಭ್ರಮೆ ಬೇಡ
– ಬ್ಯುಸಿನೆಸ್‌ನಲ್ಲಿ, ಖರ್ಚು ಕಡಿಮೆ ಆದಷ್ಟೂ ಲಾಭ ಜಾಸ್ತಿ ಆಗುತ್ತೆ
– ಜಾಸ್ತಿ ಖರ್ಚು ಮಾಡಿದ್ರೆ, ಜಾಸ್ತಿ ಲಾಭ ಸಿಗಲ್ಲ

-ನೀಲೀಮಾ

Advertisement

Udayavani is now on Telegram. Click here to join our channel and stay updated with the latest news.

Next