Advertisement

ಕೆಎಫ್ಡಿ ನಿಯಂತ್ರಣಕ್ಕೆ ತಜ್ಞರ ಶಿಫಾರಸು

11:39 PM Aug 21, 2019 | Lakshmi GovindaRaj |

ಬೆಂಗಳೂರು: ಮಂಗನ ಕಾಯಿಲೆ (ಕೆಎಫ್ಡಿ) ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕಿನ ಶೀಘ್ರ ಪತ್ತೆಗೆ ಅಗತ್ಯವಿರುವ ಪ್ರಯೋಗಾಲಯ ವಿಸ್ತರಣೆ ಹಾಗೂ ರೋಗಿಗಳಿಗೆ ನೀಡಲು ನಿರ್ದಿಷ್ಟ ಲಸಿಕೆ ಬಗ್ಗೆ ಸಂಶೋಧನೆಯಾಗಬೇಕು ಎಂದು ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ತಜ್ಞರು ಶಿಫಾರಸು ಮಾಡಿದರು.

Advertisement

ಮೊದಲು ಒಂದು ಊರಿನಲ್ಲಿ ಕಾಣಿಸಿಕೊಂಡಿದ್ದ ಮಂಗನ ಕಾಯಿಲೆ ಐದು ರಾಜ್ಯಗಳಿಗೆ ವ್ಯಾಪಿಸಿದ ಹಿನ್ನೆಲೆಯಲ್ಲಿ ಸೋಂ ಕು ನಿಯಂತ್ರಣಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ಆ.20, 21ರಂದು ರಾಷ್ಟ್ರೀಯ ಕಾರ್ಯಾಗಾರ ನಡೆಯಿತು.

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡಿನ ಆರೋಗ್ಯ, ಪಶು ಸಂಗೋಪನೆ, ಅರಣ್ಯ ಇಲಾಖೆ (ವನ್ಯಜೀವಿ ವಿಭಾಗ), ಪಶು ವೈದ್ಯಕೀಯ ಸಂಶೋಧನೆ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರಾಷ್ಟ್ರಮಟ್ಟದ ಸಂಶೋಧನಾ ಸಂಸ್ಥೆಗಳ ತಜ್ಞರು ಇದರಲ್ಲಿ ಭಾಗಹಿಸಿದ್ದರು.

ಸೋಂಕು ಪತ್ತೆ, ನಿಯಂತ್ರಣ, ರೋಗಿಗಳ ನಿರ್ವಹಣೆ, ಭವಿಷ್ಯದಲ್ಲಿ ಆಗಬೇಕಿರುವ ಸಂಶೋಧನೆಗಳು, ಸರ್ಕಾರದ ಇತರ ಇಲಾಖೆಗಳು ನೀಡಬೇಕಾದ ಸೌಲಭ್ಯಗಳು ಹಾಗೂ ಅವರ ಕಾರ್ಯ ಚಟುವಟಿಕೆ ಕುರಿತು ಚರ್ಚೆ ನಡೆಸಲಾಯಿತು.

ಪ್ರಮುಖ ಶಿಫಾರಸುಗಳು
-ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಐದು ರಾಜ್ಯಗಳು ಒಟ್ಟಾಗಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು.

Advertisement

-ಮಂಗನ ಕಾಯಿಲೆ ಹಾಗೂ ಡೆಂಘೀ ರೋಗಿಗಳ ಚೇತರಿಕೆಗೆ ನಿರ್ದಿಷ್ಟ ಹಾಗೂ ಪರಿಣಾಮಕಾರಿ ಲಸಿಕೆಯನ್ನು ಕಂಡು ಹಿಡಿಯಬೇಕು.

-ರಾಜ್ಯದಲ್ಲಿ ಸದ್ಯ ಬೆಂಗಳೂರು, ಶಿವಮೊಗ್ಗ ಹಾಗೂ ಮಣಿಪಾಲದಲ್ಲಿ ಮಾತ್ರ ಸೋಂಕು ಪತ್ತೆ ಪ್ರಯೋಗಾಲವಿದ್ದು, ಅವುಗಳ ಸಂಖ್ಯೆ ಹೆಚ್ಚಿಸಬೇಕು. ಸೋಂಕು ಪತ್ತೆಯನ್ನು ಪ್ರಾಥಮಿಕ ಹಂತದಲ್ಲಿ ಸಾಧ್ಯ ಮಾಡುವಂತಹ ತಂತ್ರಜ್ಞಾನ ಕಂಡುಕೊಳ್ಳಬೇಕು.

-ಮುಂದಿನ ವರ್ಷ 5.5 ಲಕ್ಷ ಕೆಎಫ್ಡಿ ಲಸಿಕೆಗಳು ಅಗತ್ಯವಿದ್ದು, ಉತ್ಪಾದನೆ ಹೆಚ್ಚಿಸಬೇಕು.

-ನಿರ್ದಿಷ್ಟ ಸ್ಥಳಗಳಲ್ಲಿ ಸೋಂಕು ಹೆಚ್ಚಾದಾಗ ರೋಗಿಗಳನ್ನು ನಿಭಾಯಿಸುವ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆಗಳವರೆಗೂ ಪ್ರೊಟೋಕಾಲ್‌ ಸಿದ್ಧಪಡಿಸಬೇಕು.

-ಸದ್ಯ ಸಾರ್ವಜನಿಕರಿಗೆ ನೀಡುವ ಲಸಿಕೆಯು ನೋವಿನಾಂಶ ಉಂಟು ಮಾಡುತ್ತಿದ್ದು, ನೋವು ರಹಿತ ಹಾಗೂ ಉತ್ಕೃಷ್ಟ ಮಟ್ಟದ ಲಸಿಕೆ ಕಂಡು ಹಿಡಿಯಬೇಕು.

-ಮಂಗನ ಕಾಯಿಲೆ ಕಂಡು ಬರುವ ಪ್ರದೇಶಗಳಲ್ಲಿ ಉಣ್ಣೆ ಸಂಗ್ರಹಣೆ, ಸಂಶೋಧನೆ ಹೆಚ್ಚಿಸಬೇಕು ಹಾಗೂ ಉಣ್ಣೆ ನಾಶಕ್ಕೆ ಉತ್ಕೃಷ್ಟ ರಾಸಾಯನಿಕ ಬಳಸಲು ಕ್ರಮ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next