Advertisement

ಅಡಿಕೆ, ತೆಂಗು, ಭತ್ತದ ಸಮಗ್ರ ಕೃಷಿಯಲ್ಲಿ ಖುಷಿ ಕಂಡ ಚಂದ್ರಶೇಖರ ಶೆಟ್ಟಿ

09:53 AM Jan 01, 2020 | mahesh |

ಹೆಸರು: ಚಂದ್ರಶೇಖರ ಶೆಟ್ಟಿ
ಏನೇನು ಕೃಷಿ: ಅಡಿಕೆ, ತೆಂಗು, ಭತ್ತ, ಕರಿಮೆಣಸು, ತರಕಾರಿ
ಎಷ್ಟು ವರ್ಷ: 20 ವರ್ಷಗಳಿಂದ
ಕೃಷಿ ಪ್ರದೇಶ: 15 ಎಕ್ರೆ
ಸಂಪರ್ಕ: 8277352644

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕುಂದಾಪುರ: ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ, ನೇರಳಕಟ್ಟೆ ಸಮೀಪದ, ಬಿಜ್ರಿಯ ಚಂದ್ರಶೇಖರ ಶೆಟ್ಟಿ ಅವರು ಕೃಷಿ ಕಾಯಕದಲ್ಲಿ ಖುಷಿ ಕಂಡ ವ್ಯಕ್ತಿ. ಕೃಷಿ ಕ್ಷೇತ್ರದಲ್ಲಿ ಅದರಲ್ಲೂ ಅಡಿಕೆಯಲ್ಲಿ ವಿವಿಧ ತಳಿಗಳ ಸಸಿಗಳನ್ನು ಬೇರೆ ಬೇರೆ ಕಡೆಯಿಂದ ತಂದು ಅದನ್ನು ಬೆಳೆಸಿ, ಪೋಷಿಸಿ, ಫಸಲು ಪಡೆದ ಪ್ರಯೋಗಶೀಲ ಕೃಷಿಕ. ಇವರು 8 ಎಕ್ರೆಗೂ ಹೆಚ್ಚು ಪ್ರದೇಶದಲ್ಲಿ ಅಡಿಕೆ, ಸುಮಾರು 4 ಎಕರೆ ಭೂಮಿಯಲ್ಲಿ ತೆಂಗು ಹಾಗೂ 4 ಎಕರೆ ಗದ್ದೆಯಲ್ಲಿ ಭತ್ತದ ಕೃಷಿಯೊಂದಿಗೆ ಬಾಳೆ, ಕರಿಮೆಣಸು, ತರಕಾರಿ ಬೆಳೆಯೊಂದಿಗೆ ಬಹು ವಿಧದ ಕೃಷಿ ಮಾಡುತ್ತಿದ್ದಾರೆ. ಹತ್ತಾರು ಎಕರೆ ಪ್ರದೇಶದಲ್ಲಿ ಇರುವಂತಹ ಸೌಲಭ್ಯವನ್ನು ಬಳಸಿಕೊಂಡು ಬೇರೆ ಬೇರೆ ರೀತಿಯ ಬೆಳೆ ಬೆಳೆದು, ಪ್ರಯೋಗಶೀಲರಾಗಿರುವ ಚಂದ್ರಶೇಖರ ಶೆಟ್ಟಿ ಅವರು ಉಳಿದವರಿಗೂ ಮಾದರಿ ಎನಿಸಿಕೊಂಡಿದ್ದಾರೆ.

ವಿವಿಧ ತಳಿ
1998ರಿಂದ ಅಂದರೆ ಸರಿ ಸುಮಾರು 20 ವರ್ಷಗಳಿಗೂ ಹಿಂದಿನಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಅಡಿಕೆ ತೋಟದಲ್ಲಿ ಮಂಗಳಾ, ಇಂಟರ್‌ಮಂಗಳಾದ ಜತೆಗೆ ಮೋಹಿತ್‌ ನಗರ ಎನ್ನುವ ವಿಶಿಷ್ಟ ತಳಿಯನ್ನು ಬೇರೆ ಕಡೆಯಿಂದ ತಂದು ಪೋಷಿಸಿದವರು. ಆದರೆ ಈಗ ಬೇರೆಲ್ಲದಕ್ಕಿಂತ ಇಂಟರ್‌ ಮಂಗಳಾವೇ ಸೂಕ್ತ. ಬೇರೆ ಎಲ್ಲ ಜಾತಿಯ ಅಡಿಕೆ ಮರಕ್ಕಿಂತ ಒಳ್ಳೆಯ ಇಳುವರಿ ಕೂಡ ಇಂಟರ್‌ ಮಂಗಳಾದಲ್ಲೇ ಸಿಗುವುದು ಎನ್ನುವುದು ಚಂದ್ರಶೇಖರ ಶೆಟ್ಟರ ಅಭಿಪ್ರಾಯ.

ಕೊಳೆರೋಗದಿಂದ ನಷ್ಟ
ಈ ಬಾರಿ ಅಡಿಕೆಗೆ ಉತ್ತಮ ಬೆಲೆಯಿದೆಯಾದರೂ ಫಸಲು ಕಡಿಮೆ ಇದ್ದುದರಿಂದ ನಷ್ಟ ಉಂಟಾಗಿದೆ. ಈ ಸಲ ಉತ್ತಮ ದರದಿಂದಾಗಿ ವಾರ್ಷಿಕ ಕನಿಷ್ಠ 20 ಲಕ್ಷ ರೂ. ಗಿಂತಲೂ ಆದಾಯ ಬರುವ ನಿರೀಕ್ಷೆಯಿತ್ತು. ಆದರೆ ಕೊಳೆರೋಗದಿಂದ ಸುಮಾರು 3 ಲಕ್ಷ ರೂ. ಗೂ ಮಿಕ್ಕಿ ಅಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಚಂದ್ರಶೇಖರ್‌.

Advertisement

ಕೃಷಿ ಪ್ರಶಸ್ತಿ
ಚಂದ್ರಶೇಖರ ಶೆಟ್ಟರ ಕೃಷಿ ಕಾಯಕವನ್ನು ಪರಿಗಣಿಸಿ 2017ರಲ್ಲಿ ಸಬ್ಲಾಡಿ ಶೀನಪ್ಪ ಶೆಟ್ಟಿ ಮೆಮೋರಿಯಲ್‌ ಟ್ರಸ್ಟ್‌ನವರು ಕೊಡಮಾಡುವ ಸಾಧಕ ಕೃಷಿಕ ಕೃಷಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಸಾವಯವ ಕೃಷಿಗೆ ಒತ್ತು
ಹಿಂದೆ ಕೃಷಿಯೊಂದಿಗೆ ಹೈನುಗಾರಿಕೆಯೂ ಮಾಡುತ್ತಿದ್ದರು. ಇದಲ್ಲದೆ ಆಡು, ಊರಿನ ಕೋಳಿ ಸಾಕಾಣಿಕೆಯನ್ನು ಕೂಡ ಮಾಡುತ್ತಿದ್ದರು. ಅಡಿಕೆ, ತೆಂಗು, ಭತ್ತದ ಕೃಷಿಗೆ ಹಟ್ಟಿ ಗೊಬ್ಬರವನ್ನೇ ಹೆಚ್ಚಾಗಿ ಬಳಸುವ ಮೂಲಕ ಸಾವಯವ ಕೃಷಿಗೆ ಒತ್ತು ಕೊಟ್ಟಿದ್ದಾರೆ. ರಾಸಾಯನಿಕ ಗೊಬ್ಬರ ಈಗಿನ ಕೃಷಿಗೆ ಅನಿವಾರ್ಯವಾದರೂ, ಹಟ್ಟಿ ಗೊಬ್ಬರ ಅಥವಾ ಸಾವಯವ ಗೊಬ್ಬರ ಹಾಕಿದರೆ ಮಾತ್ರ ಮಣ್ಣಿನ ಫಲವತ್ತತೆ ಕೂಡ ಉಳಿಯಬಹುದು ಎನ್ನುವುದು ಚಂದ್ರಶೇಖರ್‌ ಅವರ ಅಭಿಪ್ರಾಯ.

ಉದ್ಯೋಗ ಸೃಷ್ಟಿಗೆ ಅವಕಾಶ
ದೇಶಾದ್ಯಂತ ಈಗ ವಿದ್ಯಾವಂತರಾದವರು ಕೂಡ ದೊಡ್ಡ ದೊಡ್ಡ ಕೆಲಸ ಬಿಟ್ಟು, ಕೃಷಿಯತ್ತ ಮುಖ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಕೃಷಿ ಉಳಿದರೆ ಮಾತ್ರ ನಮ್ಮ ಸಂಸ್ಕೃತಿಯೂ ಉಳಿಯಬಹುದು. ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ, ತಿನ್ನುವ ಅನ್ನವನ್ನು ಯಂತ್ರದಿಂದ ಸೃಷ್ಟಿಸಲು ಸಾಧ್ಯವಿಲ್ಲ. ಸರಿಯಾದ ರೀತಿಯ ಯೋಜನಾ ಬದ್ಧ ಕೃಷಿಯಿಂದ ನಾವು ಈ ರಂಗದಲ್ಲೂ ಲಾಭ ಗಳಿಸಬಹುದು. ಬೇರೆ ಎಲ್ಲ ಕಂಪೆನಿಗಳು, ಉದ್ದಿಮೆಗಳು ಮುಚ್ಚುತ್ತಿದ್ದು, ಭವಿಷ್ಯದಲ್ಲಿ ಕೃಷಿ ರಂಗದಲ್ಲಿ ಮಾತ್ರ ಉದ್ಯೋಗ ಸೃಷ್ಟಿಗೆ ಅವಕಾಶವಿದೆ. ಯುವಕರು ಇನ್ನಷ್ಟು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು.
– ಚಂದ್ರಶೇಖರ್‌ ಶೆಟ್ಟಿ ಬಿಜ್ರಿ, ಗುಲ್ವಾಡಿ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next