Advertisement
ಈಗಾಗಲೇ ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆಂದು ರಾಜ್ಯ ನಾಯಕರು ಯೋಜಿಸಿದ್ದು, ಪುನಾರಚನೆ ಆಗಬೇಕೆಂಬ ಬೇಡಿಕೆಯೂ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ನಾಯಕರಲ್ಲಿ ಗೊಂದಲ ಇರುವುದರಿಂದ ಹೈ ಕಮಾಂಡ್ ಸೂಚನೆ ಮೇರೆಗೆ ಮುಂದಡಿ ಇಡಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಜಾತಿ ಲೆಕ್ಕಾಚಾರದಲ್ಲಿ ಲಿಂಗಾಯತ ಸಮುದಾಯದಲ್ಲಿ ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್ ಅಥವಾ ಬಿ.ಸಿ. ಪಾಟೀಲ್, ಒಕ್ಕಲಿಗ ಸಮುದಾಯದಲ್ಲಿ ಎಂ.ಕೃಷ್ಣಪ್ಪ ಅಥವಾ ಎಸ್.ಟಿ.ಸೋಮಶೇಖರ್, ದಲಿತ ಎಡಗೈ ಸಮುದಾಯದಲ್ಲಿ ರೂಪಕಲಾ ಶಶಿಧರ್ ಅಥವಾ ಆರ್.ಬಿ.ತಿಮ್ಮಾಪುರ ಹೆಸರು ಪಟ್ಟಿಯಲಿವೆ ಎಂದು ಹೇಳಲಾಗುತ್ತಿದೆ.
ಸಂಪುಟ ಪುನಾರಚನೆ ಮಾಡುವುದಾದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರನ್ನು ಕೈ ಬಿಟ್ಟು, ಮಹಿಳಾ ಕೋಟಾದಡಿ ದಲಿತ ಎಡಗೈ ಸಮುದಾಯಕ್ಕೆ ಸೇರಿದ ರೂಪಕಲಾ ಶಶಿಧರ್ ಅವರಿಗೆ ಅವಕಾಶ ದೊರೆಯಬಹುದು ಎಂದು ಹೇಳಲಾಗುತ್ತಿದೆ. ಜಯಮಾಲಾ ಅವರನ್ನು ಸಂಪುಟದಿಂದ ಕೈ ಬಿಡದೇ ಹೋದರೆ, ದಲಿತ ಎಡಗೈ ಸಮುದಾಯದ ಆರ್.ಬಿ.ತಿಮ್ಮಾಪುರ್ಗೆ ಅವಕಾಶ ಒಲಿಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಪರಿಷತ್ ಕೋಟಾದಡಿ ಎಸ್.ಆರ್.ಪಾಟೀಲ್ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Related Articles
Advertisement
ರಾಹುಲ್ ಭೇಟಿ ನಂತರ ಸ್ಪಷ್ಟತೆ:ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಮಾಡಬೇಕೋ, ಬೇಡವೋ ಎನ್ನುವ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರಾಜ್ಯ ನಾಯಕರ ಜೊತೆ ಶುಕ್ರವಾರ ಬೆಳಗ್ಗೆ ಮಾತುಕತೆ ನಡೆಸಿ, ಸಂಪುಟ ವಿಸ್ತರಣೆಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಶುಕ್ರವಾರ ಸಂಜೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಕಾರ್ಯಕ್ರಮವಿದ್ದು, ಅವರು ಶಿಮ್ಲಾದಿಂದ ವಾಪಸ್ಸಾಗಿ ಮಧ್ಯಪ್ರದೇಶ, ಛತ್ತೀಸ್ಗಡ ಹಾಗೂ ರಾಜಸ್ಥಾನ ಸರ್ಕಾರಗಳ ಸಂಪುಟ ವಿಸ್ತರಣೆ ಕುರಿತಂತೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂರು ರಾಜ್ಯಗಳ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ ನಂತರ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ನಿಗಮ ಮಂಡಳಿ, ಕಾರ್ಯದರ್ಶಿ ಹುದ್ದೆಗಳಿಗೂ ಒಪ್ಪಿಗೆ ಸಾಧ್ಯತೆ
ಒಂದೊಮ್ಮೆ ಡಿ. 22ರಂದೇ ಸಂಪುಟ ವಿಸ್ತರಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಪ್ಪಿಗೆ ನೀಡಿದರೆ, ನಿಗಮ- ಮಂಡಳಿ ಅಧ್ಯಕ್ಷರು ಹಾಗೂ ಸಂಸದೀಯ ಕಾರ್ಯದರ್ಶಿ ಹುದ್ದೆಗಳಿಗೂ ನೇಮಕ ಮಾಡುವ ಕುರಿತಂತೆಯೂ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಒಪ್ಪಿಗೆ ದೊರೆತರೂ ಜನವರಿ 9 ರ ನಂತರ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚಿದ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.