Advertisement

ದಸರಾ ಹಂಗಾಮ: ಗೃಹೋಪಯೋಗಿ ಉತ್ಪನ್ನಗಳ ಉದ್ಯಮ ವಲಯದಲ್ಲೂ ಸಂಭ್ರಮ

07:48 PM Sep 29, 2019 | Sriram |

ಮಾರುಕಟ್ಟೆಯಲ್ಲಿ ಕೊಂಚ ಚೇತರಿಕೆ ಕಂಡುಬಂದಿರುವುದು ಈ ಬಾರಿಯ ದಸರಾ-ದೀಪಾವಳಿಯ ಸಂಭ್ರಮ ಹೆಚ್ಚಿಸಿದೆ. ಆದರಲ್ಲೂ ಕರಾವಳಿಯ ಮಾರುಕಟ್ಟೆಯಲ್ಲಿ ಮರಳು ಕೊರತೆ ಸೇರಿದಂತೆ ಕೆಲವು ಕಾರಣಗಳಿಗೆ ಕೊಂಚ ಮಂದಗತಿಯಲ್ಲಿ ಸಾಗುತ್ತಿತ್ತು. ಈಗ ದಸರಾ ಹಬ್ಬದ ಸಂಭ್ರಮ ಮಾರುಕಟ್ಟೆಗೆ ಹೊಸ ಉತ್ಸಾಹ ತುಂಬಿರುವುದು ಸ್ಪಷ್ಟ. ಆದರ ಲಕ್ಷಣ ಗೃಹೋಪಯೋಗಿ ಉತ್ಪನ್ನ ವಲಯ ಹಾಗೂ ಆಭರಣ ವಲಯದಲ್ಲಿ ಗೋಚರಿಸಿದೆ.

Advertisement

ಮಂಗಳೂರು/ಉಡುಪಿ: ನವರಾತ್ರಿ ಸಡಗರ ಹೆಚ್ಚುತ್ತಿರುವ ಹೊತ್ತಲ್ಲೇ ಮಂದಗತಿಯಲ್ಲಿದ್ದ ಮಾರುಕಟ್ಟೆ ಎಣಿಸಿದ್ದಕ್ಕಿಂತ ಕ್ಷಿಪ್ರಗತಿಯಲ್ಲಿ ಚೇತರಿಸಿ ಕೊಳ್ಳುತ್ತಿರುವುದು ಉದ್ಯಮ ವಲಯದಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ.

ಸಾಮಾನ್ಯವಾಗಿ ದಸರಾದ ಹೊತ್ತಿನಲ್ಲಿ ಹೊಸ ವಾಹನ, ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದು ಪದ್ಧತಿ. ಹೊಸ ವಸ್ತುಗಳ ಖರೀದಿ ಸಮೃದ್ಧಿಯ ಪ್ರತೀಕ ಎಂಬ ನಂಬಿಕೆ ಕೆಲವರದ್ದಾದರೆ, ಹೆಚ್ಚು ಆಫ‌ರ್‌ಗಳು ಸಿಗುತ್ತವೆ ಎಂಬ ಲೆಕ್ಕಾಚಾರ ಹಲವರದ್ದು. ಹೀಗಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಹಕರು ಸಂಭ್ರಮವನ್ನು ತುಂಬಿಕೊಳ್ಳಲು ಸಜ್ಜಾಗಿದ್ದರೆ, ಗೃಹೋಪಯೋಗಿ ಉತ್ಪನ್ನಗಳ ಉದ್ಯಮ ಹೆಚ್ಚು ಆಯ್ಕೆ, ಆಫ‌ರ್‌ಗಳೊಂದಿಗೆ ಸಿದ್ಧವಾಗಿದೆ. ಲಕ್ಕಿ ಕೂಪನ್‌, ರಿಯಾಯಿತಿ ದರ, ಬಂಪರ್‌ ಬಹುಮಾನ-ತರಹೇವಾರಿ ಕೊಡುಗೆಗಳಿವೆ.

ಉಭಯ ಜಿಲ್ಲೆಗಳಲ್ಲದೇ ಹಲವೆಡೆ ಶಾಖೆಗಳನ್ನು ಹೊಂದಿರುವ ಉಡುಪಿ ಮೂಲದ ಹರ್ಷ ಸಂಸ್ಥೆಯ ಮಾರುಕಟ್ಟೆ ನಿರ್ದೇಶಕ ಹರೀಶ್‌, “ಕೊಂಚ ಮಾರುಕಟ್ಟೆ ಚೇತರಿಸಿರುವುದು ಖುಷಿ ತಂದಿದೆ. ಹೆಚ್ಚಿನ ಸಂಖ್ಯೆಯ ಗ್ರಾಹಕರ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಅತ್ಯಾಕರ್ಷಕ ಡಿಸ್ಕೌಂಟ್‌, ಕ್ಯಾಶ್‌ಬ್ಯಾಕ್‌ ಆಫ‌ರ್‌ಗಳನ್ನು ನೀಡಲಾಗುತ್ತಿದೆ. ಸೆ. 28ರಿಂದಲೇ ನಮ್ಮ ಮಳಿಗೆಗಳಲ್ಲಿ ಕೊಡುಗೆ ನೀಡಲಾಗುತ್ತಿದೆ. ಅಧಿಕ ಸಂಖ್ಯೆಯ ಗ್ರಾಹಕರನ್ನು ಸೆಳೆಯಲು ವಿವಿಧ ಕೊಡುಗೆಗಳನ್ನು ಅ. 8ರ ವರೆಗೆ ನೀಡಲಾಗುತ್ತಿದೆ’ ಎನ್ನುತ್ತಾರೆ.

ಮಂಗಳೂರು ಸೇರಿದಂತೆ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಪೈ ಇಂಟರ್‌ನ್ಯಾಶನಲ್‌ನ ಮಂಗಳೂರಿನ ಶಾಖಾಧಿಕಾರಿ ಶರತ್‌ಕುಮಾರ್‌ ಪ್ರಕಾರ, “ಮೆಗಾ ಫೆಸ್ಟಿವಲ್‌ ಸೇಲ್ಸ್‌ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. 7 ಕೋ.ರೂ ಮೊತ್ತದ ಬಹುಮಾನಗಳಿವೆ. 2 ಸಾವಿರ ರೂ.ಗಳಿಗಿಂತ ಅಧಿಕ ಮೌಲ್ಯದ ವಸ್ತುಗಳನ್ನು ಕೊಂಡವರಿಗೆ ಕೂಪನ್‌ಗಳನ್ನು ನೀಡ ಲಾಗುತ್ತಿದೆ. ಇವುಗಳ ಲಕ್ಕಿ ಡ್ರಾದ ಮೂಲಕ ವಿಜೇತರನ್ನು ಆಯ್ಕೆ ಮಾಡುತ್ತೇವೆ’ ಎನ್ನುತ್ತಾರೆ.

Advertisement

ಕರಾವಳಿಯ ಹಲ ವೆಡೆ ಶಾಖೆಗಳನ್ನು ಹೊಂದಿರುವ ಮಲೈಕಾ ಗೃಹೋಪಯೋಗಿ ಉತ್ಪನ್ನಗಳ ಸಂಸ್ಥೆಯಲ್ಲಿ ಎಲ್ಲ ಖರೀದಿಗೂ ಗಿಫ್ಟ್ ಕೂಪನ್‌, ಕೆಲವು ನಿರ್ಧರಿತ ಬ್ರ್ಯಾಂಡ್‌ ಉತ್ಪನ್ನಗಳ ಖರೀದಿಗೆ ಕ್ಯಾಶ್‌ಬ್ಯಾಕ್‌ ಆಫರ್‌ ಇದೆ. ಕೆಲವು ವಸ್ತುಗಳ ಖರೀದಿಗೆ ಮೊಬೈಲ್‌ ಫೋನ್‌ನಂಥ ಕೊಡುಗೆ ಇದೆ ಎನ್ನುತ್ತಾರೆ ಸಂಸ್ಥೆಯ ಆಪರೇಷನ್ಸ್‌ ಹೆಡ್‌ ರೀನಾ ಜೋಶ್‌.

ಅಗರಿ ಎಂಟರ್‌ಪ್ರೈಸಸ್‌ನಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಅತೀ ಹೆಚ್ಚು ಉತ್ಪನ್ನ ಎಂಬುದು ಈ ಹಬ್ಬದ ವಿಶೇಷವಂತೆ. ಆಯ್ದ ಕೆಲವು ವಸ್ತುಗಳ ಮೇಲೆ ಅತಿ ಹೆಚ್ಚಿನ ರಿಯಾಯಿತಿ ಇದೆ. ಬಂಪರ್‌ ಬಹುಮಾನವಾಗಿ ಕಾರುಗಳ ಕೊಡುಗೆಯಿದೆ. ಪ್ರತಿದಿನ ಒಂದು ಬಹುಮಾನ ಯೋಜನೆಯೂ ನಮ್ಮಲ್ಲಿದೆ ಎಂದು ವಿವರಿಸುತ್ತಾರೆ ಸಂಸ್ಥೆಯ ಮಾಲಕರಾದ ರಾಘವೇಂದ್ರ ರಾವ್‌.

“ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದೇ ನಮ್ಮ ಪ್ರಥಮ ಉದ್ದೇಶ. ಆ ಬಗ್ಗೆ ಹೆಚ್ಚಿನ ಕಾಳಜಿ ನೀಡುತ್ತೇವೆ. ಅದರೊಂದಿಗೆ ನಮ್ಮಲ್ಲಿ ಎಲ್ಲ ವಸ್ತುಗಳ ಖರೀದಿಗೆ ವಿಶೇಷ ರಿಯಾಯಿತಿ ಇದೆ. ಶೂನ್ಯ ಬಡ್ಡಿ ದರದಲ್ಲಿ ಫೈನಾನ್ಸ್‌ ಸೌಲಭ್ಯ, ಕ್ಯಾಶ್‌ಬ್ಯಾಕ್‌ ಆಫ‌ರ್‌ಗಳು, ವಿಶೇಷ ಕೊಡುಗೆಗಳಿವೆ. ಈ ದಸರಾ ನಿಜಕ್ಕೂ ನಮಗೆ ಬಹಳ ಪ್ರಮುಖ’ ಎನ್ನುತ್ತಾರೆ ಬ್ರಹ್ಮಾವರ ಮತ್ತು ಸಾಲಿಗ್ರಾಮದಲ್ಲಿ ಶಾಖೆಗಳನ್ನು ಹೊಂದಿರುವ ಮಹೇಶ್‌ ಎಂಟರ್‌ಪ್ರೈಸಸ್‌ನ ಮಾಲಕರಾದ ಮಹೇಶ್‌ ಅಡಿಗ.

ನಿಜ, ಅದರಲ್ಲೂ ಉಡುಪಿಯ ಆರ್ಥಿಕತೆಗೆ ಈ ದಸರಾ-ದೀಪಾವಳಿ ಶಕ್ತಿ ತುಂಬೀತೇ ಎಂಬ ನಿರೀಕ್ಷೆ ಇದೆ. ಯಾಕೆಂದರೆ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಮರಳಿನ ಕೊರತೆ ಹಿನ್ನೆಲೆಯಲ್ಲಿ ಆರ್ಥಿಕತೆ ಕುಸಿದಿತ್ತು. ಈಗ ಮರಳು ಪೂರೈಕೆಯೂ ಆರಂಭವಾಗಿದ್ದು, ಸ್ಥಳೀಯ ಆರ್ಥಿಕತೆ ಮತ್ತೆ ಚೇತರಿಕೆ ಕಾಣುವ ಲಕ್ಷಣಗಳಿವೆ. ಈ ನಿಟ್ಟಿನಲ್ಲಿ ದಸರಾ-ದೀಪಾವಳಿ ಚಿಮ್ಮುಹಲಗೆಯಾಗಿ ಪರಿಣಮಿಸಬಹುದೆಂಬ ಆಶಾವಾದ ಉದ್ಯಮ ವಲಯದ್ದು.

ವಿಶೇಷ ಎಕ್ಸ್‌ಚೇಂಜ್‌ ಆಫ‌ರ್‌
“ಗ್ರಾಹಕರನ್ನು ತಲುಪಲು ಇರುವ ಉತ್ತಮ ಅವಕಾಶವೆಂದರೆ ಇಂಥ ಹಬ್ಬಗಳು. ಹಾಗಾಗಿ ಯಾವಾಗಲೂ ವಿಶೇಷ ರಿಯಾಯಿತಿ, ಕೊಡುಗೆಗಳನ್ನು ಕೊಡುತ್ತೇವೆ. ಈ ವರ್ಷವೂ ಫ‌ರ್ನಿಚರ್‌ ಹಾಗೂ ಹೋಂ ಅಪ್ಲೆ„ಯನ್ಸ್‌ಗಳ ಮೇಲೆ ರಿಯಾಯಿತಿ ಇದೆ. ಇಎಂಐ ಸೌಲಭ್ಯ, ಲಕ್ಕಿಡಿಪ್‌, ಝೀರೋ ಡೌನ್‌ಪೇಮೆಂಟ್‌ ಸೌಲಭ್ಯವಿದೆ. ಫ‌ರ್ನಿಚರ್‌ಗಳು, ಎಲ್‌ಇಡಿ ಟಿವಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ನಾವೂ ಹೆಚ್ಚಿನ ವಹಿವಾಟು ನಿರೀಕ್ಷಿಸುತ್ತಿದ್ದೇವೆ” ಎನ್ನುತ್ತಾರೆ ಉಡುಪಿಯ ಪೃಥ್ವಿ ಏಜೆನ್ಸಿàಸ್‌ನ ಮಾಲಕರಾದ ಪೃಥ್ವೀರಾಜ್‌.

ಮಂಗಳೂರು ಸೇರಿದಂತೆ ವಿವಿಧೆಡೆ ಶಾಖೆಗಳನ್ನು ಹೊಂದಿದ ಗಿರಿಯಾಸ್‌ನಲ್ಲೂ ಹಬ್ಬದ ಸಂಭ್ರ ಮವಿದೆ. ಆಕರ್ಷಕ ಆಫರ್‌ಗಳನ್ನು ನೀಡುತ್ತಿದ್ದೇವೆ. ಕೆಲವು ವಸ್ತುಗಳಿಗೆ ಮತ್ತೂಂದು ವಸ್ತುವಿನ (ಷರತ್ತುಗಳು ಅನ್ವಯ) ಕೊಡುಗೆಯ ಆಫ‌ರ್‌ಗಳೂ ಇವೆ ಎನ್ನುತ್ತಾರೆ ಮಂಗಳೂರು ಶಾಖಾಧಿಕಾರಿ ನಾರಾಯಣ್‌.

“ನಮ್ಮ ವಿ. ಕೆ. ಉತ್ಸವದ ಉದ್ದೇಶ ಗ್ರಾಹಕರನ್ನು ಆಕರ್ಷಿಸಿ ಉತ್ತಮ ಉತ್ಪನ್ನ-ಸೇವೆ ಒದಗಿಸುವುದು. ಫರ್ನಿಚರ್‌, ಎಲೆಕ್ಟ್ರಾನಿಕ್ಸ್‌ ಮತ್ತು ಇನ್ನಿತರ ಗೃಹೋಪಯೋಗಿ ಉಪಕ ರಣಗಳನ್ನು ಖರೀದಿಸಿ ಕೊಡುಗೆ ಪಡೆಯಬಹುದು. ಕೂಪನ್‌ ಪಡೆದು ಬಹುಮಾನ ಗೆಲ್ಲಲೂಬಹುದು’ ಎಂಬುದು ವಿ.ಕೆ. ಫರ್ನಿಚರ್‌/ಎಲೆಕ್ಟ್ರಾನಿಕ್ಸ್‌ ಹಾಗೂ ವಿ.ಕೆ. ಲಿವಿಂಗ್‌ ಕಾನ್ಸೆಪ್ಟ್ನವರ ಅಭಿಪ್ರಾಯ.

“ಪ್ರಸಕ್ತ ಮಾರುಕಟ್ಟೆಗೆ ಹಬ್ಬದ ಮೂಡ್‌ ಬಂದಿದೆ. ಹೀಗಾಗಿ ನಮಗೂ ಖುಷಿ ತಂದಿದೆ. ನಮ್ಮಲ್ಲೂ ವಿಶೇಷ ರಿಯಾಯಿತಿ, ಆಫ‌ರ್‌ಗಳನ್ನು ನೀಡುತ್ತಿದ್ದೇವೆ’ ಎನ್ನುತ್ತಾರೆ ಗುಡ್‌ಲೈಫ್‌ ಫರ್ನಿಚರ್‌ ಮಾಲಕ ಸುಂದರ್‌.

ವಿವಿಧೆಡೆ ಶಾಖೆಗಳನ್ನು ಹೊಂದಿರುವ ರಿಲಯನ್ಸ್‌ ಎಲೆಕ್ಟ್ರಾನಿಕ್ಸ್‌, ಸಂಗೀತಾ, ಪೂರ್ವಿಕ, ವೀನು ಎಂಟರ್‌ಪ್ರೈಸಸ್‌, ಎಲೆಕ್ಟ್ರಿಕಲ್‌ ಪಾಯಿಂಟ್‌ ಸೇರಿದಂತೆ ಹಲವೆಡೆ ಹಬ್ಬದ ಭರಾಟೆ ಶುರುವಾಗಿರುವುದು ಉದ್ಯಮ ವಲಯದ ಹರ್ಷ ಹೆಚ್ಚಿಸಿದೆ.

ದೀಪಾವಳಿಗೆ ಧಮಾಕಾ
ದಸರಾ ಹಬ್ಬಕ್ಕೆ ಹೆಚ್ಚಿನ ಕೊಡುಗೆ ನೀಡಿ ಆಕರ್ಷಿಸುತ್ತಿರುವುದಕ್ಕೆ ಇನ್ನೂ ಒಂದು ಕಾರಣವಿದೆ. ಆರ್ಥಿಕ ಹಿಂಜರಿತ ಮತ್ತಿತರ ಕಾರಣಗಳಿಂದ ಕೊಂಚ ನಿಧಾನಗತಿಯಲ್ಲಿದ್ದ ಮಾರುಕಟ್ಟೆಗೆ ಹೊಸ ವೇಗ ತುಂಬುವುದು ಎಲ್ಲರ ಉದ್ದೇಶ. ಹಾಗಾಗಿ ದಸರಾಕ್ಕೆ ಸ್ವಲ್ಪ ಆಫ‌ರ್‌ಗಳನ್ನು ನೀಡಿದರೆ ಜನರು ಮಾರುಕಟ್ಟೆಗೆ ಬರಬಹುದು. ಒಂದುವೇಳೆ ಕೆಲವರು ಈ ಬಾರಿ ಖರೀದಿಸಲು ಹಿಂಜರಿದರೂ ದೀಪಾವಳಿಗೆ ಬಂದೇ ಬರುತ್ತಾರೆ ಎಂಬ ಲೆಕ್ಕಾಚಾರ ಉದ್ಯಮ ವಲಯದ್ದು.

Advertisement

Udayavani is now on Telegram. Click here to join our channel and stay updated with the latest news.

Next