Advertisement

ಮಹಿಳೆಯರಿಂದಲೂ ಅತ್ಯುತ್ತಮ ಸಾಧನೆ

02:53 PM Mar 12, 2020 | Suhan S |

ಹುಬ್ಬಳ್ಳಿ: ಮಹಿಳೆಯರಿಗೆ ಅವಕಾಶಗಳು ದೊರೆತಲ್ಲಿ ಅವರು ಅತ್ಯುತ್ತಮ ಸಾಧನೆ ಮಾಡಬಲ್ಲರು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ, ಪ್ರೋತ್ಸಾಹ ಅವಶ್ಯವಾಗಿದೆ ಎಂದು ರಾಜ್ಯ ಕೌಶಲಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಹೇಳಿದರು.

Advertisement

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಬುಧವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರು ಕಡಿಮೆ ಇಲ್ಲ. ಅವರಿಗೆ ಅವಕಾಶಗಳು ಸಿಗಬೇಕಷ್ಟೇ ಎಂದರು.

ಉದ್ಯಮ ರಂಗಕ್ಕೆ ಬೇಕಾದ ರೀತಿಯಲ್ಲಿ ಕೌಶಲಯುತ ಸಿಬ್ಬಂದಿ ತಯಾರುಗೊಳಿಸಲು ಉದ್ಯಮ ವಲಯದೊಂದಿಗೆ ಚರ್ಚಿಸಲಾಗುತ್ತಿದೆ. ಅದೇ ರೀತಿ ಜವಳಿ ಉದ್ಯಮದಲ್ಲಿ ಸುಮಾರು 5,000ದಷ್ಟು ಉದ್ಯೋಗಿಗಳ ಬೇಡಿಕೆ ಇದ್ದು, ಕೇವಲ 1,000 ಉದ್ಯೋಗಿಗಳ ಮಾತ್ರ ಲಭ್ಯವಿದ್ದಾರೆ. ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಕೌಶಲಾಭಿವೃದ್ಧಿಗೆ ಬಳಕೆ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಯೋಜನೆಗಳನ್ನು ರೂಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹುಬ್ಬಳ್ಳಿ ಮಾದರಿ: ಕಿರಿಯ ತಾಂತ್ರಿಕ ತರಬೇತಿ ಶಾಲೆ ಮೂಲಕ 8ನೇ ತರಗತಿಯಿಂದಲೇ ಮಕ್ಕಳಿಗೆ ವಿವಿಧ ತಾಂತ್ರಿಕ ತರಬೇತಿ ನೀಡುವ ಕಾರ್ಯ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. 1950ರಲ್ಲಿ ಹುಬ್ಬಳ್ಳಿಯಲ್ಲಿ ಆರಂಭವಾದ ಈ ಶಾಲೆ ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

18 ವರ್ಷ ವಯೋಮಾನದವರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಆದರೆ, ಕಿರಿಯ ತಾಂತ್ರಿಕ ತರಬೇತಿ ಶಾಲೆಯಲ್ಲಿ 14 ವರ್ಷದಿಂದಲೇ ಇಂತಹ ತರಬೇತಿ ಆರಂಭಿಸಲಾಗುತ್ತಿದ್ದು, ಕೌಶಲಾ ಭಿವೃದ್ಧಿ ತರಬೇತಿಯನ್ನು ಕನಿಷ್ಠ 16 ವರ್ಷ ವಯೋಮಿತಿ ಯಿಂದಲಾದರೂ ಆರಂಭಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಿಂದ ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ಸಂಖ್ಯೆ ಇಲ್ಲವಾಗಲಿದೆ. ವಿಶೇಷವಾಗಿ ಶೇ.30ರಷ್ಟು ಹೆಣ್ಣು ಮಕ್ಕಳು ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಅಂತಹವರಿಗೆ ಇಂತಹ ತರಬೇತಿ ಸಹಕಾರಿ ಆಗಲಿದೆ ಎಂದರು.

Advertisement

ಆಯುಕ್ತರ ಪ್ರಸ್ತಾವನೆ: ಹದಿಹರೆಯದವರ ಮನದಲ್ಲಿ ಅಪರಾಧ ಮನೋಭಾವ ತಡೆಯುವ ನಿಟ್ಟಿನಲ್ಲಿ 14 ವರ್ಷ ವಯೋಮಾನದವರಿಗೆ ಅಗತ್ಯ ತರಬೇತಿ ನೀಡುವ ಕುರಿತಾಗಿ ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಆರ್‌.ದಿಲೀಪ್‌ ಅವರು ಪ್ರಸ್ತಾಪಿಸಿದ್ದು, ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲು ಹೇಳಿದ್ದು, ಅಂತಹ ತರಬೇತಿಗೆ ಪ್ರಾಧಿಕಾರ ಸಹಕಾರ ನೀಡಲಿದೆ ಎಂದರು. ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರಾದ ಸೌಭಾಗ್ಯ ಯಲಿಗಾರ, ಸುಲೇಖಾನ್‌ ಶೇಖ್‌, ರೂಪಾಲಿ ಜಾಧವ ಅವರನ್ನು ಸನ್ಮಾನಿಸಲಾಯಿತು. ಕೆಸಿಸಿಐನ ವಸಂತ ಲದವಾ, ಸಿದ್ದೇಶ್ವರ ಕಮ್ಮಾರ, ಅಶೋಕ ಗಡಾದ ಹಾಗೂ ವಿವಿಧ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next