Advertisement

ಪರೀಕ್ಷಾ ಕಾಲ ಇಲ್ಲಿದೆ ಶಿಕ್ಷಕರಿಗೆ ಸಲಹೆ

10:43 PM Jan 21, 2020 | mahesh |

ಈಗ ಪೂರ್ವ ಪರೀಕ್ಷಾ ಕಾಲ (ಪ್ರಿಪರೆಟರಿ). ಈ ಕಾಲದಲ್ಲಿ ಯಾರೂ ಮಕ್ಕಳಿಗೆ ನೋವಾಗುವಂತೆ ಮಾತನಾಡಲೇಬಾರದು ಎನ್ನುತಾರೆ ಮನಶ್ಯಾಸ್ತ್ರಜ್ಞರು. ಹೆತ್ತವರು ಎಂದಿಗೂ ಮಕ್ಕಳ ಮನಸ್ಸಿಗೆ ನೋವಾಗದಂತೆ ಮಾತನಾಡಬೇಕೆಂದಿದೆ. ಶಿಕ್ಷಕರು ಮತ್ತಷ್ಟು ಉತ್ಸಾಹ ತುಂಬುವಂತೆ ಮಾತನಾಡಬೇಕಂತೆ. ಗರಿಷ್ಠ ಅಂಕ ತೆಗೆದುಕೊಳ್ಳಲು ಪ್ರಯತ್ನಿಸುವಾಗ ನಿಗದಿತ ಗುರಿಗಿಂತ ಹತ್ತು ಅಂಕ ಕಡಿಮೆಗಳಿಸಿದ್ದಾನೆ ಎಂದಿಟ್ಟುಕೊಳ್ಳಿ. ಆಗ ಶಿಕ್ಷಕರಾದವರು ಹೆತ್ತರನ್ನು ಕರೆಸುವುದು ಸಾಮಾನ್ಯ. ಅದಕ್ಕೆ ಆ ವಿದ್ಯಾರ್ಥಿ ಇನ್ನಷ್ಟು ಕಡಿಮೆ ಅಂಕ ಪಡೆಯಬಾರದೆಂಬ ಕಾಳಜಿಯೂ ಕಾರಣ. ಆದರೆ ಆಗ ಹೇಗೆ ವರ್ತಿಸಬೆೇಕು ಎಂಬುದಕ್ಕೆ ಇಲ್ಲಿದೆ ಕೆಲವು ಸಲಹೆಗಳು.

Advertisement

ಪರೀಕ್ಷಾ ಕಾಲದಲ್ಲಿ ಒಂದು ಸಣ್ಣ ಚುಚ್ಚು ಮಾತೂ ಸಹ ಮಕ್ಕಳ/ವಿದ್ಯಾರ್ಥಿಗಳ ಉತ್ಸಾಹದ ಬಲೂನಿನ ಗಾಳಿಯನ್ನು ತೆಗೆದು ಬಿಡಬಹುದು. ಇದು ಪೋಷಕರು ಮತ್ತು ಶಿಕ್ಷಕರು ಗಮನಿಸಲೇಬೇಕಾದ ವಿಚಾರ. ಶಿಕ್ಷಕರಿಗೆ ಇಲ್ಲಿವೆ ಕೆಲವು ಸಲಹೆಗಳು.

ವಿದ್ಯಾರ್ಥಿ ಯಾರ ಮಾತನ್ನು ಹೆಚ್ಚು ಕೇಳುತ್ತಾನೋ ಆ ಶಿಕ್ಷಕರ ಮೂಲಕವೇ ಅವನ ಸಾಮರ್ಥ್ಯವನ್ನು
ಅವನಿಗೆ ಮನದಟ್ಟು ಮಾಡಿಕೊಡಿ. ಪೋಷಕರಲ್ಲಿಯೂ ಅವನ ಅಂಕ ಕಡಿಮೆ ಯಾದದ್ದನ್ನು ದೊಡ್ಡದು ಮಾಡಬೇಡಿ. ಅದರ ಬದಲಾಗಿ ಅವನಿಗಿರುವ ಅವಕಾಶ ದೊಡ್ಡದು ಮಾಡಿ ತೋರಿಸಿ.

ಉದಾಹರಣೆಗೆ ಅವನ ಬುದ್ಧಿವಂತಿಕೆಗೆ ನೀವು (ಶಿಕ್ಷಕರು) 625 ಕ್ಕೆ 620 ನಿರೀಕ್ಷೆ ಇದ್ದಿರಬಹುದು. ಅವನ ಹಿಂದಿನ ಓದಿನ ಗಂಭೀರತೆಯೂ ಇದಕ್ಕೆ ಕಾರಣವಾಗಿರಬಹುದು. ಆದರೆ ಈ ಪ್ರಿಪರೆಟರಿಯಲ್ಲಿ 600 ಅಥವಾ 590 ಅಂಕ ಗಳಿಸಿದ್ದಾನೆಂದುಕೊಳ್ಳಿ. ಆಗ ಕಡಿಮೆ ಅಂಕ ಗಳಿಸಲು ಕಾರಣವೇನು ಎಂಬುದನ್ನು ಮೆಲ್ಲಗೆ ಪತ್ತೆ ಹಚ್ಚಬೇಕು.

ಅವನನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವನಿಗಿರುವ ಆತಂಕವೇನು? ಬೇರೆ ಏನಾದರೂ ಸಮಸ್ಯೆ ಇದೆಯೇ? ಪರೀಕ್ಷಾ ಭಯ ವೇ? ಇತ್ಯಾದಿ ವಿಷಯಗಳನ್ನು ತಿಳಿದು ಪರಿಹಾರ ಹುಡುಕಬೇಕು. ಏನಾದರೂ ಸಮಸ್ಯೆ ಇದ್ದರೆ ನನ್ನಲ್ಲಿ ಬಂದು ಹೇಳು, ಬಗೆಹರಿಸುವೆ ಎಂದು ಉತ್ಸಾಹ ತುಂಬುವುದು ಒಳಿತು.

Advertisement

ಪೋಷಕರ ಎದುರು, ಘಟಕ ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಪಡೆಯುತ್ತಿದ್ದವನಿಗೆ ಈಗ ಏನಾಗಿದೆ ಪ್ರಾಬ್ಲಿಮ್ಮು? ಹೀಗೆ ನೈಜ ಪರೀಕ್ಷೆಯೇ ಮಾಡಿದರೆ ಡುಮುಕಿಯೇ ಎಂದು ಹೇಳಬೇಡಿ. ಈ ಮಾತನ್ನು ವಿದ್ಯಾರ್ಥಿ ಎದುರೂ ಹೇಳಬೇಡಿ, ಪೋಷಕರಿಗೂ ಹೇಳಬೇಡಿ.

ಯಾಕೆಂದರೆ, ಪೋಷಕರು ನಿಮ್ಮ ಮಾತಿನಿಂದ ಗಲಿಬಿಲಿಗೊಂಡು ಇನ್ನಷ್ಟು ಒತ್ತಡ ಹೇರಲೂ ಬಹುದು, ಬೈಯಲೂ ಬಹುದು. ಹಾಗೆಯೇ ವಿದ್ಯಾರ್ಥಿಯೂ ಫೇಲಾಗುವ ಭಯದಿಂದ ಅತಿರೇಕ ವರ್ತನೆಗೆೆ ತೊಡಗಬಹುದು. ಓದಿನಲ್ಲಿ ಆಸಕ್ತಿಯನ್ನೂ ಕಳೆದುಕೊಳ್ಳಬಹುದು.

ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಯನ್ನು ಹತ್ತಿರ ಕರೆದು, ಘಟಕ ಪರೀಕ್ಷೆಗಳಲ್ಲಿ ಇದ್ಯಾವುದೂ ಕಷ್ಟವೆನಿಸುತ್ತಿರಲಿಲ್ಲ, ಈಗ ಯಾಕೆ ಕಷ್ಟವಾಗುತ್ತಿದೆ? ನೀನು ಹಿಂದೆ 625 ಕ್ಕೆ 620 ಅಂಕ ತೆಗೆದವನು, ಅದೇನು ನಿನಗೆ ಹೊಸದಲ್ಲ. ಈಗ ಏನೋ ಕಡಿಮೆ ಬಂದಿರಬಹುದು, ಮತ್ತೆ ಗಮನವಿಟ್ಟು ಓದು.

ಪೋಷಕರಲ್ಲಿ ನಿಮ್ಮ ಮಗ ಹಾಗಲ್ಲ,  ಚೆನ್ನಾಗಿ ಓದುತ್ತಾನೆ. ಈ ಬಾರಿ  ಕೊಂಚ ಕಡಿಮೆ ಅಂಕ ಬಂದಿದೆ. ನಾನೂ ಗಮನಿಸುತ್ತೇನೆ, ನೀವೂ ಗಮನಿಸಿ, ಅವನ ಸಮಸ್ಯೆಗಳನ್ನು ಕೇಳಿ. ಇಬ್ಬರೂ ಒಟ್ಟಾಗಿ ಬಗೆಹರಿಸುವ ಎಂಬ ಮಾತುಗಳು ಪೋಷಕರ ಆತಂಕವನ್ನೂ ದೂರ ಮಾಡುತ್ತವೆ. ಮಕ್ಕಳ ಬಗ್ಗೆ
ಕೀಳರಿಮೆ ಬಾರದಂತೆ ತಡೆಯುತ್ತದೆ.

ಮಕ್ಕಳಲ್ಲಿ ಒಮ್ಮೆ ತನ್ನಿಂದ ಸಾಧ್ಯವಿಲ್ಲ ಎಂಬುದು ಬಂದುಬಿಟ್ಟರೆ ಅದನ್ನು ಹೋಗಲಾಡಿಸುವುದು ಬಹಳ
ಕಷ್ಟದ ಕೆಲಸ. ಆದ್ದರಿಂದ ಪೋಷ ಕರಷ್ಟೇ ಅಲ್ಲ ; ಶಿಕ್ಷಕರೂ ಸಹ ವಿದ್ಯಾರ್ಥಿಗಳು ಆ ಹಂತವನ್ನು ತಲುಪದಂತೆ ಎಚ್ಚರ ವಹಿಸಲೇಬೇಕು.

ಎಲ್ಲರ ಎದುರು ಅವನನ್ನು ಒಂದು ವಿಷಯದಕಡಿಮೆ ಅಂಕಗಳಿಗೆ ಹೀಗಳೆಯುವುದೂ ಬೇರೆ
ರೀತಿಯ ಪರಿಣಾಮವನ್ನು ಉಂಟು ಮಾಡುತ್ತದೆ. ಅದಾಗದಂತೆಯೂ ಎಚ್ಚರಿಕೆ ವಹಿಸಬೇಕು.

9 ತಿಂಗಳು ಓದಿ ಪರೀಕ್ಷೆಗೆ ಸಿದ್ಧವಾಗಿರುವ ಹೊತ್ತಿ ನಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಹೆಚ್ಚು ಸೂಕ್ಷ್ಮವಾಗಿ ವರ್ತಿಸಬೇಕು. ಪೂರ್ವಸಿದ್ಧತಾ ಪರೀಕ್ಷೆಗಳ ಸಂದರ್ಭದಲ್ಲೂ ಸ್ವಲ್ಪ ಕಡಿಮೆ ಅಂಕ ಗಳಿ ಸಿದ್ದರೆ, ಅವನ ನೈಜ ಸಾಮರ್ಥ್ಯವನ್ನು ಅವನದೇ ಹಿಂದಿನ ಸಾಧನೆಯ ಮೂಲಕ ತಿಳಿಸಿಕೊಟ್ಟು, ಹುರಿ ದುಂಬಿಸಬೇಕು. ಅದು ಧನಾತ್ಮಕ ದೃಷ್ಟಿಕೋನ (ಪಾಸಿಟಿವ್‌). ಯಾವುದೇ ಕಾರಣಕ್ಕೂ ಉತ್ಸಾಹ ಕಳೆಯುವಂತೆ ಮಾತನಾಡಲೇಬಾರದು.
-ಡಾ| ಎಂ.ಎಸ್‌.ತಿಮ್ಮಪ್ಪ, ಹಿರಿಯ ಮನಶಾಸ್ತ್ರಜ್ಞರು, ವಿಶ್ರಾಂತ ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next