Advertisement

ಪರೀಕ್ಷಾ ತಯಾರಿಗೆ ಕೆಲವೊಂದು ಕಿವಿಮಾತು

09:14 AM Mar 05, 2020 | mahesh |

ದೇವರು, ವಿದ್ಯೆ ಎರಡೂ ಸಮಾನ ಸ್ಥಾನಮಾನವಿರುವ ಪದ. ಶಾಲೆಗೆ ಹೋಗವ ಭಾಗ್ಯ ಎಲ್ಲರಿಗೂ ಸಿಗದು. ಎಷ್ಟೋ ಜನ ಆ ಭಾಗ್ಯ ಸಿಗದೆ ಕ್ಯಾಂಟಿನ್‌ನಲ್ಲಿ, ಗ್ಯಾರೇಜಿನಲ್ಲಿ ಕಲಿಯುವ ವಯಸ್ಸಿನಲ್ಲಿ ಕೆಲಸ ಮಾಡುವುದನ್ನು ನೋಡುತ್ತೇವೆ. ನಮಗೆ ಶಾಲೆ ಕಲಿಯಲು ದೊರಕಿರುವ ಅದ್ಭುತ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

Advertisement

ಇನ್ನೇನು ಕೆಲವೇ ವಾರಗಳಲ್ಲಿ ಪರೀಕ್ಷೆಗಳು ಆರಂಭವಾಗಲಿವೆ. ಇದಕ್ಕಾಗಿ ಅಧ್ಯಯನಗಳು ವಿಶೇಷ ಅಧ್ಯಯನಗಳು ಈಗಾಗಲೇ ನಡೆಯುತ್ತಿವೆ. ಪರೀಕ್ಷಾ ತಯಾರಿಯ ಸಂದರ್ಭ ಮಕ್ಕಳ ಚಿತ್ತ ಬಾಹ್ಯ ವಿಷಯದತ್ತ ಹೊರಲದಂತೆ ಎಚ್ಚರ ವಹಿಸಿಬೇಕು. ಸರಿಯಾಗಿ ಪರೀಕ್ಷಾ ತಯಾರಿ ನಡೆಸಿದ್ದೇ ಆದರೆ ಳ್ಳೆಯ ಓದು ನಿಮ್ಮದಾಗಿ, ಉತ್ತಮ ಅಂಕವೂ ಸಂಪಾದನೆಯಾಗುತ್ತದೆ.

ಮೇಡಂ “ನಾವು ಕಲಿತದ್ದು ಪರೀಕ್ಷೆ ಸಂದರ್ಭ ನೆನಪಾಗಲೇ ಇಲ್ಲ’ ಎಂದು ಕೆಲವು ವಿದ್ಯಾರ್ಥಿಗಳು ಬಹಳಷ್ಟು ಸಂದರ್ಭ ಹೇಳುವುದಿದೆ. ಹಾಗಾದರೆ ನಾವು ಒಂದು ಸಿನಿಮಾದಲ್ಲಿ ಬರುವ ಹಾಡನ್ನು ತಪ್ಪಿಲ್ಲದೆ ಹಾಡಲು ಹೇಗೆ ಸಾಧ್ಯ? ಯಾಕೆಂದರೆ ಅದರ ಮೇಲಿನ ಆಸಕ್ತಿ. ಅದೇ ರೀತಿ ಕಲಿಕೆಯ ಮೇಲೆ ಆಸಕ್ತಿ ತೋರಿಸಿ, ಪ್ರಯತ್ನ ಮಾಡಿ ಓದಿದರೆ ಕಷ್ಟವಾಗುವುದಿಲ್ಲ. ಅಧ್ಯಾಪಕರು ಕಲಿಸಿದ ವಿಷಯವನ್ನು ಪ್ರತಿದಿನ ಓದಿದರೆ ಪರೀಕ್ಷಾ ಸಮಯದಲ್ಲಿ ಸುಲಭವಾಗುತ್ತದೆ.

ಕಷ್ಟದ ವಿಷಯಕ್ಕೆ ಒತ್ತು ಕೊಡಿ
ಅಂದಿನ ಪಾಠಗಳನ್ನು ಅದೇ ದಿನ ಓದುವ ಅಭ್ಯಾಸ ಮಾಡಿದರೆ ಪರೀಕ್ಷೆ ಬರೆಯುವಾಗ ವಿಷಯಗಳು ಬೇಗನೇ ನೆನಪಿಗೆ ಬರುತ್ತದೆ. ಕೆಲವು ವಿದ್ಯಾರ್ಥಿಗಳು ಅವರಿಗೆ ತುಂಬಾ ಇಷ್ಟವಿರುವ ವಿಷಯವನ್ನು ಚೆನ್ನಾಗಿ ಅಭ್ಯಾಸ ಮಾಡುತ್ತಾರೆ. ಅದನ್ನೇ ಜಾಸ್ತಿ ಓದಿ ಕಷ್ಟದ ವಿಷಯಗಳನ್ನು ಒದಲು ಹೋಗುವುದಿಲ್ಲ. ವಿದ್ಯಾರ್ಥಿಗಳು ಕಷ್ಟದ ವಿಷಯಗಳಿಗೆ ಹೆಚ್ಚು ಸಮಯ ನೀಡಿ ಅದನ್ನು ಹೆಚ್ಚು ಒತ್ತು ಕೊಟ್ಟು ಓದಬೇಕು. ಕೆಲವೊಮ್ಮೆ ಎಲ್ಲ ವಿಷಯದಲ್ಲಿ ಉತ್ತೀರ್ಣರಾಗಿ, ಕಷ್ಟದ ವಿಷಯದಲ್ಲಿ ಅನುತ್ತೀರ್ಣವಾಗಲು ಇದುವೇ ಕಾರಣ.

ನೋಟ್‌ ಮಾಡಿಕೊಳ್ಳಿ
ಆದಷ್ಟು ತರಗತಿಯಲ್ಲಿ ಅಧ್ಯಾಪಕರು ಪಾಠ ಮಾಡುವಾಗ ನೋಟ್ಸ್‌ ಬರೆದಿಟ್ಟುಕೊಳ್ಳಬೇಕು. ಕೆಲವೊಮ್ಮೆ ಪಾಠ ಪುಸ್ತಕ ತೆರೆಯುವಾಗ ಅದನ್ನು ನೋಡಿಯೇ ತಲೆನೋವಾಗಿ ಓದದೇ ಇರುತ್ತೇವೆ. ನೋಟ್ಸ್‌ ನಿಮ್ಮದೇ ಕೈ ಬರಹವಾಗಿರುವುದರಿಂದ ಓದಲು ಆಸಕ್ತಿ ಉಂಟಾಗಿ, ಕಲಿಯಲು ಸುಲಭವಾಗುತ್ತದೆ.

Advertisement

ಆಹಾರ ಹೇಗಿರಲಿ
ಪರೀಕ್ಷೆಗೆ ಹೊರಡುವ ಮುನ್ನ ಹೊಟ್ಟೆ ತುಂಬಾ ತಿನ್ನಬೇಕು. ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನಾಪತ್ರಿಕೆ ಸಿಕ್ಕಿದ ಬಳಿಕ ಪ್ರಶ್ನೆಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ. ಒಂದೊಂದು ಪ್ರಶ್ನೆಗಳಿಗೆ ಸಮಯ ನಿಗದಿ ಮಾಡಬೇಕು.

ಗಣಿತ ಕಷ್ಟ ಅಲ್ಲ
ಗಣಿತ (ಲೆಕ್ಕ ) ವಿಷಯ ಕಷ್ಟ ಎಂದು ತೀರ್ಮಾನ ಮಾಡಿ ಅದನ್ನು ದೂರ ಮಾಡಿದರೆ ಅದು ಅರ್ಥವೇ ಆಗಲು ಸಾದ್ಯವಿಲ್ಲ. ಓದಿಗಾಗಿ ಒಂದು ವೇಳಾಪಟ್ಟಿ ತಯಾರಿಸಿ, ಒಂದೊಂದು ವಿಷಯಕ್ಕೆ ಸಮಯ ನಿಗದಿ ಮಾಡಬೇಕು. ಅದರಲ್ಲಿ ಸ್ವಲ್ಪ ವಿಶ್ರಾಂತಿಗೂ ಅವಧಿ ಮೀಸಲಿಡಿ. ಕಲಿತ ವಿಷಯಗಳ ಕುರಿತು ನಿಮ್ಮ ಸ್ನೇಹಿತರೊಂದಿಗೆ ಚರ್ಚೆ ಮಾಡಿಕೊಳ್ಳಿ. ಇದರಿಂದ ಬೇರೊಬ್ಬರಿಗೆ ವಿವರಿಸುವಾಗ ನಮ್ಮಲ್ಲಿ ನೆನಪಿನ ಶಕ್ತಿ ಹೆಚ್ಚುತ್ತದೆ. ವಿಷಯವನ್ನು ಅರ್ಥ ಮಾಡಿ ಓದಿದರೆ ಪರೀಕ್ಷೆ ಸಂದರ್ಭ ಸ್ವಂತ ವಾಕ್ಯದಲ್ಲಿ ಬರೆಯಬಹುದು.

ಅಲರಾಂ ಇಟ್ಟು ಮಲಗಿ
ರಾತ್ರಿ ಅಲರಾಂ ಇಟ್ಟು ಮಲಗಿ ಬೆಳಗ್ಗೆ ಬೇಗ ಎದ್ದು ಓದುವುದು ಹೆಚ್ಚು ಪರಿಣಾಮಕಾರಿ. ಅಲರಾಂ ಇಡದೇ ಇದ್ದರೆ ರಾತ್ರಿ ಸರಿ ನಿದ್ದೆ ಬಾರದೆ, ಕಷ್ಟವಾಗಬಹುದು. ಇಡೀ ರಾತ್ರಿ ಬೆಳಗ್ಗೆಯಾಯಿತು ಎನ್ನುವ ಆಲೋಚನೆಯಿಂದ ಪದೇ ಪದೇ ಎಚ್ಚರವಾಗುತ್ತದೆ. ಪರೀಕ್ಷೆಯಲ್ಲಿ ಒಮ್ಮೆ ಅನುತ್ತೀರ್ಣರಾದರೆ ಮತ್ತೆ ಪಾಸ್‌ ಆಗಲು ಪುನಃ ಅಧ್ಯಯನ ನಡೆಸಬೇಕು. ಆದಷ್ಟು ಮೊಬೈಲನ್ನು ದೂರವಿಡುವುದು ಉತ್ತಮ.

ಪರೀಕ್ಷೆಯ ಹಿಂದಿನ ದಿನ ಓದು ಹೇಗೆ?
ಪರೀಕ್ಷೆಯ ಹಿಂದಿನ ದಿನ ರಾತ್ರಿಯಿಡಿ ಓದಬಾರದು. ಇದರಿಂದ ಮರುದಿನ ಪರೀಕ್ಷೆ ಬರೆಯಲು ಆಗುವುದಿಲ್ಲ . ಪಿತ್ತದಿಂದ ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೆಲವೊಮ್ಮೆ ಕಲಿತ ಎಲ್ಲಾ ವಿಷಯಗಳೂ ಮರೆತು ಹೋಗಿ ಕಣ್ಣು ಕತ್ತಲೆಯಾಗುತ್ತದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ನಿದ್ದೆಗೆ ಪ್ರಧಾನ ಸ್ಥಾನ ನೀಡಬೇಕು. ರಾತ್ರಿ ಚೆನ್ನಾಗಿ ನಿದ್ರಿಸಬೇಕು.

ಪ್ರಶ್ನೆ ಪತ್ರಿಕೆ ತಯಾರಿ
ಪರೀಕ್ಷೆಯ ತಯಾರಿ ಮಾಡುವಾಗ ಹಳೆಯ ಪ್ರಶ್ನಾಪತ್ರಿಕೆಗಳನ್ನು ಗಮನಿಸಬೇಕು. 5-6 ವರ್ಷದ ಪ್ರಶ್ನೆ ಪತ್ರಿಕೆಗಳನ್ನು ನೋಡಿದಾಗ ಪ್ರಶ್ನೆ ಪತ್ರಿಕೆಯ ಮಾದರಿಯ ಅರಿವಾಯುತ್ತದೆ. ಕೆಲವೊಂದು ಪ್ರಶ್ನೆಗಳು ಪ್ರತಿ ವರ್ಷ ಪುನರಾವರ್ತನೆಯಾಗುತ್ತಿರುತ್ತದೆ. ಅಂತಹ ಪ್ರಶ್ನೆಗಳಿಗೆ ಗಮನಕೊಟ್ಟು ಓದಬೇಕು. ಪ್ರಾಕ್ಟಿಕಲ್‌ ವಿಷಯಗಳನ್ನು ಬರೆದು ಕಲಿಯಬೇಕು. ಇದು ಪರೀಕ್ಷೆಯ ಸಮಯದಲ್ಲಿ ನೆನಪಿಗೆ ಬಂರುತ್ತದೆ.
ತಣ್ಣೀರಿನಿಂದ ಮುಖ ತೊಳೆಯಿರಿ

ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಓದಿ, ಮಧ್ಯಾಹ್ನದ ಊಟ ಆದ ಬಳಿಕ ಪುಸ್ತಕ ನೋಡುವಾಗ ನಿದ್ದೆ ಬರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ರಾತ್ರಿ ಮಾತ್ರ ಮಲಗುವುದು ಉತ್ತಮ. ಮಧ್ಯಾಹ್ನದ ಹೊತ್ತಿನಲ್ಲಿ ವಿದ್ಯಾರ್ಥಿಗಳು ತಮಗೆ ಸುಲಭವಾಗಿ ವಿಷಯವನ್ನು ಆರಿಸಿ ಓದಬೇಕು. ತಣ್ಣೀರಿನಿಂದ ಮುಖ ತೊಳೆದು ಓದಬೇಕು. ಒಂದೊಂದು ಪಾಠಕ್ಕೆ ಸಮಯ ನಿಗದಿ ಮಾಡಿ ಓದಬೇಕು. ರಾತ್ರಿ 10.30 ವರೆಗೆ ಓದಿ ಚೆನ್ನಾಗಿ ನಿದ್ದೆ ಮಾಡಬೇಕು.

ಅಂಕಕ್ಕೆ ತಕ್ಕಂತೆ ಬರೆಯಿರಿ
2 ಅಂಕದ ಪ್ರಶ್ನೆಗೆ ಒಂದು ಪುಟದ ಉತ್ತರದ ಅಗತ್ಯವಿಲ್ಲ. ಎಷ್ಟು ಅಗತ್ಯ ಅಷ್ಟು ಬರೆದರೆ ಸೂಕ್ತ. ಇಲ್ಲದಿದ್ದರೆ ಸಮಯ ವ್ಯರ್ಥವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಮಯ ಸಿಗುವುದಿಲ್ಲ. ಯಾವ ಪ್ರಶ್ನೆಗೆ ಉತ್ತರ ಸರಿಯಾಗಿ ಗೊತ್ತಿದೆಯೋ ಅದನ್ನು ಮೊದಲಿಗೆ ಬರೆಯಿರಿ. ಪರೀಕ್ಷೆಗೆ ತೆರಳುವಾಗ ಎಕ್ಟ್ರಾ ಪೆನ್ನಿರಲಿ.

ಮರು ಪರಿಶೀಲನೆ
ನಾನು ಪಿಯುಸಿಯಲ್ಲಿರಬೇಕಾದರೆ ಇಂಗ್ಲಿಷ್‌ ವಿಷಯದಲ್ಲಿ 81 ಆಗಬೇಕಿದ್ದ ಅಂಕದ ಬದಲು 18 ಆಗಿತ್ತು. ಫ‌ಲಿತಾಂಶ ಅನುತ್ತೀರ್ಣವಾಗಿತ್ತು. ಆಘಾತ, ದುಃಖವಾಗಿ ಧೈರ್ಯವನ್ನೂ ಕಳೆದುಕೊಂಡೆ. ಆದರೆ ನನ್ನ ಶಿಕ್ಷಕರು ನನಗೆವ ಧೈರ್ಯ ತುಂಬಿ ಫ‌ಲಿತಾಂಶವನ್ನು ಮರುಪರಿಶೀಲನೆಗೆ ಹಾಕಿದರು. ತಪ್ಪಾಗಿ ಬಂದಿದ್ದ ಫ‌ಲಿತಾಂಶ ಹತ್ತೇ ದಿನದಲ್ಲಿ ಸರಿಯಾಯಿತು. ಅಂದು ತಪ್ಪು ನಿರ್ಧಾರ ತೆಗೆದಿದ್ದರೆ ಇಂದಿನ ಸುಂದರ ಜೀವನದಿಂದ ವಂಚಿತಲಾಗುತ್ತಿದೆ.

ಒತ್ತಾಯ ಮಾಡಬೇಡಿ
ಕಲಿಯವ ವಿಷಯದಲ್ಲಿ ಮಕ್ಕಳಿಗೆ ಒತ್ತಡ ಹೇರಬಾರದು. ಹೆಚ್ಚು ಅಂಕ ಪಡೆಯಲೇಬೇಕೆಂದು ಬೇರೆ ಮಕ್ಕಳ ಜತೆ ಹೋಲಿಕೆಯೂ ಮಾಡಬಾರದು. ಕಲಿಯಲು ಉತ್ತೇಜನ ನೀಡಿ. ಗಿಡ ನೆಟ್ಟು ನೀರು, ಗೊಬ್ಬರ ಹಾಕಿ ಬೆಳೆಸುವುದಷ್ಟೇ ನಮ್ಮ ಕರ್ತವ್ಯ. ಅದರ ಫ‌ಲದ ಫ‌ಲಿತಾಂಶ ನಮ್ಮ ಕೈಯಲಿಲ್ಲ. ಒಳ್ಳೆ ಫ‌ಲ ನೀಡುತ್ತದೆ ಎಂಬ ನಂಬಿಕೆಯಿಂದ ಕೆಲಸ ಮಾಡಬೇಕು.

ಪರೀಕ್ಷಾ ಅಕ್ರಮ ಬೇಡ
ಪರೀಕ್ಷೆಯಲ್ಲಿ ನಕಲು ಮಾಡುವಂತಹ ಆಲೋಚನೆ ಮಾಡಬಾರದು. ಯಾವುದೇ ಆಗಿರಲಿ ಅದು ನೇರ ದಾರಿಯಿಂದ ನಮಗೆ ಸಿಕ್ಕಿದರೆ ಮಾತ್ರ ಶಾಶ್ವತ. ಪರೀಕ್ಷೆ ಬರೆಯುವಾಗ ಬೇರೆಯವರು ಎಷ್ಟು ಹೆಚ್ಚುವರಿ ಪೇಪರ್‌ ತೆಗೆದುಕೊಂಡಿದ್ದಾರೆ? ಎಷ್ಟು ಬರೆಯುತ್ತಾರೆ ಅದರ ಬಗ್ಗೆ ಚಿಂತಿಸಬಾರದು. ಅದು ನಮ್ಮ ಏಕಾಗ್ರತೆಯನ್ನು ಹಾಳು ಮಾಡುತ್ತದೆ.

ಎಲ್ಲರೂ ಧೈರ್ಯದಿಂದ, ಉಲ್ಲಾಸದಿಂದ ಪರೀಕ್ಷೆಗೆ ಹಾಜರಾಗಿ ಒಳ್ಳೆಯ ಫ‌ಲಿತಾಂಶವನ್ನು ಪಡೆಯಿರಿ. ಮನಸಿಟ್ಟು ಓದಿ, ಪುಸ್ತಕವನ್ನು ಪ್ರೀತಿಸಿ, ಯಾರೂ ಕೈ ಬಿಟ್ಟರೂ ನೀವು ಕಲಿತ ವಿದ್ಯೆ ನಿಮ್ಮ ಕೈ ಬಿಡದು. ನಿಮಗೂ ಅನ್ನ ಹಾಕುತ್ತದೆ, ನೀವು ಇನ್ನೊಬ್ಬರಿಗೆ ಅನ್ನ ಹಾಕುವ ಸಾಮರ್ಥ್ಯವನ್ನು ನೀಡುತ್ತದೆ.

ಆರ್‌. ದುರ್ಗಾ ಮೆನನ್‌,
ಉಪನ್ಯಾಸಕರು, ಮಂಗಳೂರು ವಿ.ವಿ. ಹಂಪನಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next