Advertisement

ಸುಂದರ ಪುರಾಣಿಕ ಪ್ರೌಢಶಾಲೆಯಲ್ಲಿ  ಎಲ್ಲವೂ ಸ್ವತ್ಛ, ಸುಂದರ

08:55 AM Aug 30, 2017 | Harsha Rao |

ಕಾರ್ಕಳ: ಸ್ವತ್ಛತೆಗೆ ಇಲ್ಲಿ ನಿತ್ಯ ಪೂಜೆ, ಶಾಲಾ ವಠಾರದಲ್ಲಿ ಕಾಲಿರಿಸಿದರೆ ಸಾಕು, ಅಲ್ಲಿ ಕಸದ ಸುಳಿವೇ ಇಲ್ಲ. ಸ್ವತ್ಛ ಶಾಲೆ – ಸುಂದರ ಶಾಲೆ ಎನ್ನುವ ಘೋಷವಾಕ್ಯ ಇಲ್ಲಿ ಬರೀ ಘೋಷ ವಾಕ್ಯವಾಗಿ ಉಳಿದಿಲ್ಲ. ಅದು ಈ ಶಾಲೆಯ ಇಂಚಿಂಚೂ ಕಾಣಿಸುತ್ತದೆ. ಸ್ವತ್ಛ ಶಾಲೆ ಸುಂದರ ಶಾಲೆಯಾಗಿ ಮೊನ್ನೆಯಷ್ಟೇ ಸ್ವತ್ಛ ವಿದ್ಯಾಲಯ್‌ ಎಂದು ಕೇಂದ್ರ ಸರಕಾರದಿಂದ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆದ ಕಾರ್ಕಳ ಸರಕಾರಿ ಸುಂದರ ಪುರಾಣಿಕ ಪ್ರೌಢಶಾಲೆಯ ಸ್ವತ್ಛತೆಯ ಕತೆ ಇದು. ಸ್ವತ್ಛತೆಗೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸುವ ಮೂಲಕ ಸುಂದರ ಪುರಾಣಿಕ ಶಾಲೆ ದೇಶಕ್ಕೆ ಮಾದರಿ ಶಾಲೆಯಾಗಿ ಗಮನ ಸೆಳೆದಿದೆ.

Advertisement

ಪ್ರಶಸ್ತಿಯ ಆಚೆ ಈಚೆ
ಭಾರತ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯವು ಕೊಡಮಾಡುವ “ಸ್ವತ್ಛ ವಿದ್ಯಾಲಯ್‌ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಳ್ಳಲು ನೂರಾರು ಶಾಲೆಗಳು ಪೈಪೋಟಿ ನೀಡಿದ್ದವು. ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಆಯ್ಕೆಗೊಂಡ 172 ಶಾಲೆಗಳಲ್ಲಿ ಸುಂದರ ಪುರಾಣಿಕ ಪ್ರೌಢಶಾಲೆಯೂ ಒಂದಾಗಿದೆ.

ರಾಜ್ಯದಿಂದ ಒಟ್ಟು ಎಂಟು ಶಾಲೆಗಳು ಸ್ವತ್ಛವಿದ್ಯಾಲಯ್‌ ಪ್ರಶಸ್ತಿಗೆ ಆಯ್ಕೆಗೊಂಡರೆ, ಉಡುಪಿ ಜಿಲ್ಲೆಯಲ್ಲಿ  ನಗರ ಶಾಲೆಗಳಡಿ ಕಾರ್ಕಳ ಸರಕಾರಿ ಸುಂದರ ಪುರಾಣಿಕ ಪ್ರೌಢಶಾಲೆ ಹಾಗೂ ಗ್ರಾಮೀಣ ಭಾಗದಿಂದ ತಾಲೂಕಿನ ಸೂಡಾ ಸರಕಾರಿ ಶಾಲೆ ಸ್ವತ್ಛ ವಿದ್ಯಾಲಯ್‌ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಇದೇ ಸೆ. 1ರಂದು ದಿಲ್ಲಿಯ ರಾಜಭವನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಲಾ ಮುಖ್ಯಶಿಕ್ಷಕಿ  ಕೆ. ಹರ್ಷಿಣಿ ಮತ್ತು ಶಾಲಾ ನಾಯಕಿ ಅಭಿಜ್ಞಾ ಜೈನ್‌ ಭಾಗವಹಿಸಿ ರೂ. 50,000 ನಗದು ಬಹುಮಾನ, ಪ್ರಶಸ್ತಿ, ಫಲಕ ಹಾಗೂ ಗೌರವವನ್ನು ಸ್ವೀಕರಿಸಲಿದ್ದಾರೆ.

ಸ್ವತ್ಛ ಶಾಲೆ, ಸುಂದರ ಶಾಲೆ
ಈ ಶಾಲೆಯಲ್ಲಿ ಅಪ್ಪಿ ತಪ್ಪಿ ಒಂದಿಂಚು ಕಸ ಕಾಣಿಸೋದಕ್ಕೂ ಇಲ್ಲಿನ ವಿದ್ಯಾರ್ಥಿಗಳು ಅವಕಾಶ ಕೊಡುವುದಿಲ್ಲ. ಚಪ್ಪಲಿ ಹಾಕಿ ಶಾಲೆಯ ಒಳಗೇ ಇಲ್ಲಿ ಯಾರೂ ಕಾಲಿರಿಸುವುದಿಲ್ಲ, ಚಪ್ಪಲಿ ಹಾಕಬೇಡಿ ಅಂತ ಬೋಡೇìನೂ ಇಲ್ಲಿಲ್ಲ ,ಆದರೂ ಯಾರಿಗೂ ಚಪ್ಪಲಿ ಹಾಕಿ ಶಾಲೆಯ ಒಳಹೊಕ್ಕಲು ಮನಸ್ಸೇ ಬರಲಾರದು ಅಷ್ಟು ಒಪ್ಪ ಓರಣವಾಗಿದೆ ಶಾಲೆಯ ಪರಿಸರ.

Advertisement

ಶಿಸ್ತುಬದ್ಧ ಶಿಕ್ಷಣ ಸ್ವಸ್ಥ ಸಮಾಜ ನಿರ್ಮಾಣ ಎನ್ನುವ ಧ್ಯೇಯ ವಾಕ್ಯವನ್ನೊಳಗೊಂಡ ಈ ಶಾಲೆಯಲ್ಲಿ  ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಬರುವ 356 ವಿದ್ಯಾರ್ಥಿಗಳು ಅಕ್ಷರ ಕಲಿಯುತ್ತಿದ್ದಾರೆ. ಸರಕಾರಿ ಶಾಲೆ ಎಂದರೆ  ಮೂಗು ಮುರಿಯುವ ಈಗಿನ ಮಂದಿಗೆ ಈ ಶಾಲೆಯ ಶಿಕ್ಷಣದ ಗುಣಮಟ್ಟ ಹಾಗೂ ಸ್ವತ್ಛತೆ ನೋಡಿ ಬೆರಗಾಗುವುದು ಸಹಜ.

ಸ್ವತ್ಛತೆಯ ಬಗ್ಗೆ ನಿರಂತರ ಪಾಠ
ಇಲ್ಲಿ ಸ್ವತ್ಛತೆ ಬರೀ ಆಡಂಭರ ಹಾಗೂ ಪ್ರದರ್ಶನಕ್ಕಲ್ಲ. ಮಕ್ಕಳಲ್ಲಿ ಸ್ವತ್ಛತೆ ಬಗ್ಗೆ ಅಪಾರ ಕಾಳಜಿ ಮೂಡಿಸಲಾಗುತ್ತದೆ. ಮಕ್ಕಳು ತಮ್ಮದೇ ಮನೆ ಎಂಬಂತೆ ಶಾಲೆಯನ್ನು ಒಪ್ಪ ಓರಣವಾಗಿ ಇಡುತ್ತಾರೆ.

ಅತ್ಯುತ್ತಮ ಶಾಲಾ ಪ್ರಶಸ್ತಿ
ಕಳೆದ ಶೈಕ್ಷಣಿಕ ಸಾಲಿನಲ್ಲಿ ಶಾಲೆಗೆ ಉಡುಪಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ,. ಕಲಿಕೆಯಲ್ಲಿ ಸತತವಾಗಿ ಶೇ. 90ಕ್ಕಿಂತ ಹೆಚ್ಚು ಸಾಧನೆಗೆ ಅತ್ಯುತ್ತಮ ಶಾಲಾ ಪ್ರಶಸ್ತಿ ದೊರೆತಿದೆ.

ಸ್ವತ್ಛತೆಯ ಕುರಿತು ಪ್ರಾರ್ಥನಾ ಅವಧಿಯಲ್ಲಿ, ತರಗತಿಗಳಲ್ಲಿ ಶಿಕ್ಷಕರು ಜಾಗƒತಿ ಮೂಡಿಸುತ್ತಾರೆ. ಸಂಪನ್ಮೂಲ ವ್ಯಕ್ತಿಗಳಿಂದ ಸ್ವತ್ಛತೆಯ ಕುರಿತ ಕಾಳಜಿಯನ್ನು ನೀಡಲಾಗುತ್ತದೆ.

ನಿರಂತರ ಸ್ವತ್ಛತೆಯ ಪಾಠ
ಶಾಲೆ ಮತ್ತು ಪರಿಸರದ ಸ್ವತ್ಛತೆ, ಕುಡಿಯುವ ನೀರಿನ ನಿರ್ವಹಣೆ, ಅಡುಗೆ ಮನೆ ಸ್ವತ್ಛತೆ, ನೀರಿನ ಮಿತವಾದ ಬಳಕೆ, ಕೈ ತೊಳೆಯುವ ಬಗ್ಗೆ, ತ್ಯಾಜ್ಯ ವಿಲೇವಾರಿ, ಶೌಚಾಲಯ ನಿರ್ವಹಣೆ, ಕೈತೋಟ ನಿರ್ವಹಣೆ, ಪೈಪ್‌ ಕಾಂಪೋಸ್ಟ್‌ ಗೊಬ್ಬರ ತಯಾರಿಕೆ ಕುರಿತು ತರಬೇತಿ ನೀಡಲಾಗುತ್ತದೆ. ಒಟ್ಟಾರೆ ಸುಂದರ ಪುರಾಣಿಕ ಶಾಲೆಯ ನಿರಂತರ ಸ್ವತ್ಛತೆಯ ಪಾಠ ಇದೀಗ ರಾಷ್ಟ್ರದ ಇತರ ಶಾಲೆಗಳಿಗೂ ಅನುಕರಣೀಯವಾಗಿರುವುದು ಸಂತಸದ ಸಂಗತಿ.

ಶಿಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಕ್ಲಬ್‌ ಕಾರ್ಕಳ, ಮಕ್ಕಳ ಹೆತ್ತವರು, ದಾನಿಗಳು, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ರಾಷ್ಟ್ರಮಟ್ಟದ ಪ್ರಶಸ್ತಿ ಶಾಲೆಗೆ ದೊರಕಿದೆ. ನಮ್ಮ ಶಾಲೆಯಲ್ಲಿ ಸ್ವತ್ಛತೆಯನ್ನು ಮಕ್ಕಳು ನಿಯಮವೆಂಬಂತೆ ಆಚರಿಸುವುದಿಲ್ಲ. ಸಾಂಪ್ರದಾಯದಂತೆ ಆಚರಿಸುತ್ತಿದ್ದಾರೆ. ಈ ಪ್ರಶಸ್ತಿಯ ಹಿಂದೆ ಅವರ ಶ್ರಮ ಸಾಕಷ್ಟಿದೆ.
– ಹರ್ಷಿಣಿ ಕೆ., ಶಾಲಾ ಮುಖ್ಯ ಶಿಕ್ಷಕಿ

– ಪ್ರಸಾದ್‌ ಶೆಣೈ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next